Wednesday, May 23, 2018

ಅವನು, ಅವಳು ಮತ್ತು ಅವರು

ಮೊನ್ನೆ ಯಾವುದೋ ಲೇಖನವನ್ನು ಬರೆದು ಗೆಳೆಯ ಅನಂತುವಿಗೆ ಓದಲು ಕೊಟ್ಟೆ. ಪ್ರಕಟಣೆಗೆ ಮುನ್ನವೇ ಒಮ್ಮೆ ಲೇಖನದ ಪರೀಕ್ಷೆ ಮಾಡುವುದು ನನ್ನ ಚಾಳಿ. ಸಾಮಾನ್ಯವಾಗಿ ಲೇಖನವನ್ನು ಮೆಚ್ಚುವವರಿಗೆ, ಅಂದರೆ ಹೆಂಡತಿಯನ್ನು ಬಿಟ್ಟು ಉಳಿದವರಿಗೆ, ಕೊಡುವುದು ಪರಿಪಾಠ. ಹಾಗೆಯೇ ಅನಂತುವಿಗೆ ಲೇಖನವನ್ನು ಕೊಟ್ಟೆ. "ಚೆನ್ನಾಗಿದೆ ಸರ್" ಎಂದು ನಾನು ಬಯಸಿದ್ದನ್ನೇ ಹೇಳಿದ. ಜೊತೆಗೇ " ಆದರೂ ಸರ್, 'ಡಾರ್ವಿನ್ ಹೀಗೆ ಹೇಳಿದ' ಅಂತ ಬರೆದಿದ್ದೀರಲ್ಲ? ಡಾರ್ವಿನ್ ಹೀಗೆ ಹೇಳಿದರು,' ಅಂತ ಬರೆಯಬೇಕಲ್ಲವಾ? ಅವರು ಹೇಗಿದ್ದರೂ ಹಿರಿಯರಲ್ಲವಾ? ಏಕವಚನ ಬಳಸುವುದು ಸರಿಯೋ?" ಎಂದು ಪ್ರಶ್ನೆ ಹಾಕಿದ. ಏನೋ ಸಮಝಾಯಿಷಿ ಕೊಟ್ಟು ಸುಮ್ಮನಾಗಿಸಿದೆನಾದರೂ, ಪ್ರತಿ ಲೇಖನ ಬರೆವಾಗಲೂ ಅವನ ಮಾತು ಮನಸ್ಸನ್ನು ಕೊರೆಯುತ್ತಲೇ ಇತ್ತು. ಹೌದು. ಅವನು, ಅವಳು ಮತ್ತು ಅವರು ಎನ್ನುವ ಪದಗಳನ್ನು ಯಾವಾಗ, ಹೇಗೆ ಬಳಸುತ್ತೇವೆ? ಏಕೆ ಬಳಸುತ್ತೇವೆ ಎಂದು ಯೋಚಿಸುತ್ತಲೇ ಹೋದೆ.
ಕನ್ನಡ ತರಗತಿಯಲ್ಲಿ ನನಗೆ ಪಾಠ ಹೇಳಿಕೊಟ್ಟವರು ಹೇಳಿದ್ದು ಇಷ್ಟೆ. ಅವನು - ಏಕವಚನ ಪುಲ್ಲಿಂಗ, ಅವಳು - ಏಕವಚನ ಸ್ತ್ರೀಲಿಂಗ, ಅವರು - ಬಹುವಚನ ಪುಲ್ಲಿಂಗ ಹಾಗೂ ಸ್ತ್ರೀಲಿಂಗ. ಆದರೂ ರೂಢಿಯಲ್ಲಿ ಅಮ್ಮ - ಅಪ್ಪ ಹಾಕಿಕೊಟ್ಟ  ಇನ್ನೂ ಕೆಲವು ನಿಯಮಗಳನ್ನು ಬಳಸುತ್ತಿದ್ದೆ. ಯಾರನ್ನಾದರೂ ಸಂಬೋಧಿಸಬೇಕಾದರೆ,  ಹಿರಿಯರಾದವರಿಗೆ ಬಹುವಚನ, ಕಿರಿಯರಾದವರಿಗೆ, ಆಪ್ತರಿಗೆ ಏಕವಚನ ಬಳಸಬೇಕು. ಇಲ್ಲಿಯೂ ಅಪವಾದಗಳೇ, ಅಪವಾದಗಳು.  ನನಗೆ ಆರೇಳು ವರ್ಷವಷ್ಟೆ ಹಿರಿಯರಾದ ಅತ್ತೆಯ ಮಕ್ಕಳನ್ನು ಬಹುವಚನದಲ್ಲಿಯೂ, ಹತ್ತು ವರ್ಷ ಹಿರಿಯಳಾದ ಅಕ್ಕನನ್ನು ಏಕವಚನದಲ್ಲಿಯೂ ಸಂಬೋಧಿಸುತ್ತಿದ್ದೆ. ಇವೆಲ್ಲವೂ ಯಾವುದೇ ವಿಚಾರ, ವಿಮರ್ಶೆಗಳನ್ನೂ ಮಾಡದೆಯೇ ನಡೆಯುತ್ತಿದ್ದ ರೂಢಿಗತ ಸಂಗತಿಗಳು. ಅನಂತನ ಮಾತು ಇವೆಲ್ಲವನ್ನು ಮನದಾಳದಿಂದ, ಮುಂದಕ್ಕೆ ತಂದು ಧುತ್ತೆಂದು ನಿಲ್ಲಿಸಿಬಿಟ್ಟಿತು.

ಹೇಗೆ ಕರೆದರೇನಂತೆ? ವ್ಯಕ್ತಿ ಗೌರವ ಮುಖ್ಯವಾದದ್ದು ಎಂದು ಸಮಾಧಾನ ಹೇಳಿಕೊಂಡು ಆರಾಮವಾಗಿದ್ದೆ. ಆದರೆ ಮೊನ್ನೆ ಯಾವುದೋ ಸಮಾರಂಭಕ್ಕೆ ಹೋಗಿದ್ದೆ. ಆಗ ಒಂದು ಪುಟ್ಟ ಮಗು ಟಾಟಾ ಬಂತು ಎಂದು ಹೇಳಿತು. ನಮ್ಮಲ್ಲಿ ಮಗುವಿಗೆ ನಪುಂಸಕ ಲಿಂಗ ಹಾಗೂ ಏಕವಚನ ಬಳಸುವುದು ವಾಡಿಕೆ. ಆದರೆ ನರೆತ ಕೂದಲಿನವರಿಗೆ? ಸ್ವಲ್ಪ ಕಸಿವಿಸಿ ಆಯಿತಾದರೂ, ಇದು ಕೆಲವರ ಮನೆಯಲ್ಲಿನ ಅಭ್ಯಾಸ ಎಂದು ಗೊತ್ತಾಯಿತು. ಏಕವಚನ ಎಂದರೆ ಆತ್ಮೀಯತೆ ಇರಬಹುದು. ಅದಕ್ಕೆ ಮಕ್ಕಳು ಅಪ್ಪ ಬಂತು. ಅಮ್ಮ ಬಂತು ಎಂದು ಮೊದಲಿಗೆ ಆರಂಭಿಸುತ್ತವೆ. ಕ್ರಮೇಣ ವ್ಯಾಕರಣ ಕಲಿತದ್ದಾಗಿಯೂ, ಬೆಳೆಯುತ್ತಿದ್ದಂತೆ ಆತ್ಮೀಯತೆ ಕಡಿಮೆ ಆಗಿದ್ದಕ್ಕೆಯೋ ಏಕವಚನಕ್ಕೆ ಇಳಿದು ಬಿಡುತ್ತವೆ. ನಮಗಿಂತ ಕಿರಿಯರನ್ನು ಏಕವಚನದಲ್ಲಿ ಸಂಭೋದಿಸುವುದು ಅದಕ್ಕೆ ಏನೋ.

ಕೃಷ್ಣನನ್ನು ಬಾ ಎನ್ನುತ್ತೇವೆ. ಶಿವ ಕಾಯುತ್ತಾನೆ ಎನ್ನುತ್ತೇವೆ. ಕಾಯುತ್ತಾರೆ ಅಂತಲ್ಲ. ಅಕ್ಕನಂತವರು ಚನ್ನಮಲ್ಲಿಕಾರ್ಜುನನನ್ನ ಏಕವಚನದಿಂದಲೇ ಹಾದಿ ಹೊಗಳಿದ್ದರಲ್ಲವೇ ? ಹಾಗಿದ್ದರೆ ದೊಡ್ಡವರೊ ಚಿಕ್ಕವರೊ ಆತ್ಮೀಯತೆ, ಭಕ್ತಿ  ಇದ್ದರೇ  ಏಕವಚನ ಬಳಸಬಹುದು.  ಇವೆರಡೂ ಇಲ್ಲದೆ ಬರಿಯ ಅಧಿಕಾರದ ಸಂಬಂಧವಷ್ಟೇ ಎಂದರೆ ರಾಜರ ಆಸ್ಥಾನದಲ್ಲಿ ಹೇಳುವ ಹಾಗೆ, ಸರ್ವಂ ಬಹುವಚನಮಯಂ ಎಂದಾಯಿತು ಎಂದುಕೊಂಡೆ. ಮದುವೆಗೂ ಮುನ್ನ ಬಾರೋ ಹೋಗೋ ಎನ್ನುತ್ತಿದ್ದ ಪ್ರೇಯಸಿ, ತಾಳಿ ಕೊರಳಿಗೆ ಬಿದ್ದ ಮೇಲೆ ಬನ್ನಿ ಹೋಗಿ ಎನ್ನುವುದು ಇದಕ್ಕೆ ಇರಬಹುದು ಅಲ್ಲವೇ?  ಆದರೆ ಇತ್ತೀಚಿಗೆ ಈ ನಿಯಮವೂ ಸರಿಯಿಲ್ಲ ಎನ್ನಿಸುತ್ತದೆ.


ಇತ್ತೀಚಿಗೆ ಫೇಸ್ಬುಕ್, ಟ್ವಿಟ್ಟರ್, ವಾಟ್ಸಪ್ಪುಗಳಲ್ಲಿ ಬರುವ ಸಂದೇಶಗಳನ್ನು ಗಮನಿಸಿದಾಗ ಈ ಸಂದೇಹ ಇನ್ನೂ  ಹೆಚ್ಚಾಯಿತು.  ಗಮನಿಸಿ. ನಿಮ್ಮ ಪಕ್ಷಕ್ಕೆ ಸೇರದ ಹಿರಿಯರಿಗೆ ಬಹುವಚನ ಬೇಕಿಲ್ಲ. ಬೇರೆ ಪಕ್ಷದ ಹಾಗೂ ನಿಮ್ಮ ಧರ್ಮದವರಿಗೆ ಬಹುವಚನ ಬಳಸಬಹುದು. ಆದರೆ ಬೇರೆ ಧರ್ಮದವರಾದರೆ ಈ ವಿನಾಯಿತಿಯೂ ಬೇಕಿಲ್ಲ. ಇನ್ನು ಅವರು ನಿಮಗೆ ಬೇಡದವರೋ, ಪ್ರಧಾನ ಮಂತ್ರಿ ಆದರೂ, ಮುಖ್ಯ ಮಂತ್ರಿ ಆದರೂ ಚಿಂತೆ ಇಲ್ಲ. ಏಕವಚನ ಸಾಕು.

ಕನ್ನಡ ವ್ಯಾಕರಣದಲ್ಲಿ ನಿಯಮಗಳಿಗಿಂತಲೂ ಅಪವಾದಾಗಲೇ ಹೆಚ್ಚು ಎಂದು ನನಗೆ ಅನ್ನಿಸಿದಂತೆ ನಿಮಗೂ ಅನ್ನಿಸಿದರೆ ಅದು ನನ್ನ ತಪ್ಪಲ್ಲ. ಈಗ ಜಾಣತನದಿಂದ ಬರೆಯೋದು ಕಲಿತಿದ್ದೀನಿ. ಅವರು ಅಂತಲೋ, ಅವನು-ಅವಳು ಅಂತಲೋ ಬರೆಯುವುದೇ ಇಲ್ಲ.  ಆತ ಎನ್ನುತ್ತೇನೆ. ಆತ ಬಂದ ಎನ್ನುತ್ತೇನೆ. ಆತ ಯಾವ ವಚನವೋ. ಬಂದ ಎನ್ನುವ ಏಕವಚನವನ್ನು ಸರಿದೂಗಿಸಿ ಬಿಡುತ್ತದೆ.

ಏನನ್ನುತ್ತೀ ...ರಿ ?

Sunday, August 27, 2017

ಅಪ್ಪ ಅಪ್ಪನೇ!

ಮೊನ್ನೆ ದೂರದ ಊರಿನಲ್ಲಿ ಓದುತ್ತಿರುವ ಮಗ ಚತುರ್ಥಿ ರಜೆಗೆ ಮನೆಗೆ ಬಂದಾಗ ಜೊತೆಗೆ ಅವನ ಬಳಿ ಇದ್ದ ಒಂದು ಫೋನು ಹಾಗೂ ಸ್ಪೀಕರು ಕೊಂಡು ತಂದಿದ್ದ. “ಅಪ್ಪಾ. ಇದು ಛಾರ್ಜು ಆಗುತ್ತಿಲ್ಲ. ಫೋನು ಸಿಮ್ಮನ್ನು ಗುರುತಿಸುತ್ತಿಲ್ಲ” ಎಂದು ದೂರಿತ್ತ. ಎರಡನ್ನೂ ಸಮೀಪದಲ್ಲಿದ್ದ ಅಂಗಡಿಗೆ ಕೊಂಡೊಯ್ದು ರಿಪೇರಿ ಮಾಡಿಕೊಡಿ ಎಂದರೆ “ಇವೆಲ್ಲ ರಿಪೇರಿ ಆಗುವ ಸಾಧನಗಳಲ್ಲ ಸರ್. ಹೊಸತು ತೆಗೆದುಕೊಳ್ಳಿ. ಬಯ್ ಬ್ಯಾಕ್, ಮಾಡ್ತೇವೆ. ಒಂದು ಐದು ನೂರು ರೂಪಾಯಿ ಡಿಸ್ಕೌಂಟ್ ಸಿಗುತ್ತೆ.” ಎಂದು ಉತ್ತರ ಬಂತು. ಮನಸ್ಸಿನಲ್ಲೇ ಕೊಳ್ಳುಬಾಕತನದ ಬಗ್ಗೆ ಬೈದು ಕೊಳ್ಳುತ್ತಾ ಮನೆಗೆ ಬಂದೆವು.
ಮನೆಯ ಪಾರ್ಲಿಮೆಂಟಿನಲ್ಲಿ ಇದರ ಚರ್ಚೆಯೂ ಆಯಿತು.  “ಬೇರೆ ತೆಗೆದುಕೊಡುತ್ತೇನೆ. ಇದನ್ನು ಇಲ್ಲೇ ಇಟ್ಟು ಹೋಗು.” ಎಂಬ ಪ್ರಸ್ತಾಪ ಮುಂದಿಟ್ಟೆ. ಮಡದಿಯದ್ದು ಒಂದೇ ವಿರೋಧ. “ಪ್ರತಿ ಬಾರಿ ಏನಾದರೂ ಹಾಳು ಮಾಡಿಕೊಂಡು ಬರುತ್ತಾನೆ. ಅದನ್ನು ರಿಪೇರಿ ಮಾಡಿ ಕೊಡವುದೋ, ಹಾಳಾಗದಂತೆ ಜಾಗ್ರತೆಯಿಂದ ಉಪಯೋಗಿಸು ಅಂತ ನೀವು ಯಾವತ್ತು ಹೇಳುವುದದಿಲ್ಲ. ಮಕ್ಕಳು ಕೇಳಿದ್ದನ್ನೆಲ್ಲ ಹೀಗೆ ಕೊಡಿಸುತ್ತಾ ಇದ್ದರೆ ಅವರು ಬದುಕನ್ನು ಕಲಿಯುವುದಾದರೂ ಹೇಗೆ?”

ನಿಜ. ಮಕ್ಕಳ ಮೇಲಿನ ಪ್ರೀತಿಯೋ, ನಮ್ಮ ಪ್ರತಿಷ್ಠೆಯೋ ಒಟ್ಟಾರೆ ಮಕ್ಕಳ ಬೇಡಿಕೆಗೆ ಇಲ್ಲ ಎನ್ನುವುದು ಕಷ್ಟವೇ. ನಾನಂತೂ ಇದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ತನ್ನ ಖಾತೆಯಲ್ಲಿಯೇ ಸಾಕಷ್ಟು ಹಣವಿದ್ದರೂ, ಅದನ್ನು ಖರ್ಚು ಮಾಡದೆ ನಮ್ಮ ಬಳಿ ಬಂದು ಒಪ್ಪಿಸಿದ್ದಾನಲ್ಲ ಮಗ. ಇದು ಹಣಕಾಸು ವ್ಯವಹಾರದಲ್ಲಿ ಅವನಿಗೆ ಜವಾಬುದಾರಿ ಇದೆ ಎನ್ನುವುದರ ಕುರುಹು ಎನ್ನುವ ವಾದದ ಜೊತೆಗೇ ಅವನು ಈಗ ಕೇಳುತ್ತಿರುವ ವಸ್ತುಗಳ ಒಟ್ಟು ಮೊತ್ತ ನನ್ನ ಮಾಸಿಕ ಆದಾಯದ ಒಂದೋ, ಎರಡೋ ಪರ್ಸೆಂಟಿನಷ್ಟು ಅಷ್ಟೆ!  ನಾವು ನಿತ್ಯ ಗಂಟೆಗಟ್ಟಲೆ ಮಾತನಾಡುವ ಫೋನು ಬಿಲ್ಲು ಅದಕ್ಕಿಂತ ಹೆಚ್ಚಾಗುತ್ತದೆ ಎಂದು ಮಡದಿಯ ಬಾಯಿ ಮುಚ್ಚಿಸಲು ನೋಡುತ್ತೇನೆ.

ಹಾಗೆ ಮಾಡಿದಾಗಲೆಲ್ಲ ಈ ಅಪ್ಪಂದಿರ ಕಥೆಯೇ ಹೀಗೋ ಎನ್ನಿಸುತ್ತದೆ. ನನ್ನ ಗೆಳೆಯರೊಬ್ಬರು ತಮ್ಮ ಮಗನಿಗೆ ಕಾರು ಕೊಡಿಸಲು ಮಡದಿಯ ಬಳಿ ಒಂದು ಕಾದಂಬರಿಗೆ ಸಾಕಾಗುವಷ್ಟು ಕಥೆ,ಪುರಾಣ ಒಪ್ಪಿಸಿದ್ದರು. ಅಪ್ಪಂದಿರು ಹೀಗೇಕೆ? ಈ ಪ್ರಶ್ನೆ ನನ್ನನ್ನು ಯಾವಾಗಲೂ ಕಾಡುತ್ತದೆ. ನನ್ನ ಅಪ್ಪನೂ ಇದಕ್ಕೆ ಹೊರತಾಗಿರಲಿಲ್ಲ. ಹಾಗಂತ ನನ್ನ ಅಪ್ಪ ಧಂಡಿಯಾಗಿ ದುಡಿದು ತರುತ್ತಿದ್ದ ವೈಟ್ ಕಾಲರ್ ಅಧಿಕಾರಿಯಾಗಿರಲಿಲ್ಲ. ನಿತ್ಯ ಕೆಲಸ ಮಾಡಿದರಷ್ಟೆ ಕೈಗೆ ಕಾಸು. ಅದೂ ಎಂಟು ಮಂದಿಯ ಸಂಸಾರ ಸಾಗಿಸಲು ಪ್ರತಿ ದಿನಕ್ಕೆ ಹತ್ತು ರೂಪಾಯಿಯ ಆದಾಯ ಇರುತ್ತಿತ್ತು. ನಿಜ. ಅರವತ್ತು ಎಪ್ಪತ್ತರ ದಶಕದ ಅಂದಿನ ಕಾಲದಲ್ಲಿ ಆಹಾರ ಪದಾರ್ಥಗಳ ಬೆಲೆಯೂ ಹಾಗೆಯೇ ಇತ್ತು. ಎಂಟಾಣೆಗೆ ಕೇಜಿ ಅಕ್ಕಿ. ಐದು ಪೈಸೆಗೆ ಐದು ಬಿಲ್ಲೆ ಕಾಫಿ ಬಿಲ್ಲೆ. ಐದು ಪೈಸೆಗೆ ಲಿಪ್ಟನ್ ಚಹಾದ ಪುಟ್ಟ ಪೊಟ್ಟಣ. ಅತಿ ದುಂದಿನ ವೆಚ್ಚ ಎಂದರೆ ಬಾಡಿಗೆ, ಸೀಮೆಣ್ಣೆ, ಸಕ್ಕರೆ ಹಾಗೂ ಬೇಕರಿ ಪದಾರ್ಥಗಳು. 

ನನಗೆ ನೆನಪಿರುವ ಹಾಗೆ ಆ ಕಾಲದಲ್ಲಿಯೂ ಅಪ್ಪ ತನ್ನ ವರಮಾನದ ಶೇಕಡ ಹತ್ತರಷ್ಟು ಅಂದರೆ ದಿನಕ್ಕೆ ಒಂದು ರೂಪಾಯಿಯಷ್ಟು ಬಾಡಿಗೆಯನ್ನು ನೀಡುತ್ತಿದ್ದರು. ಸೀಮೆಣ್ಣೆ ಬೆಲೆ 75 ಪೈಸೆ ಇರುತ್ತಿತ್ತು. ಸಕ್ಕರೆಯ ಬೆಲೆ ಒಂದು ಕಿಲೋಗೆ ಒಂದು ರೂಪಾಯಿಯೇನೋ ಇರುತ್ತಿತ್ತು. ಅದೂ ಅಂಗಡಿಗಳಲ್ಲಿ ಸಿಕ್ಕುತ್ತಿರಲಿಲ್ಲ. ಮಾಸಿಕ ರೇಶನ್ ಕೊಂಡು ತಂದರಷ್ಟೆ ಸಕ್ಕರೆ ಅಮ್ಮನೂ ತನ್ನ ಜಾಣತನವನ್ನೆಲ್ಲ ಬಳಸಿ ಇದ್ದಷ್ಟರಲ್ಲಿ ವ್ಯವಹಾರ ಹೊಂದಿಸಿಕೊಂಡು ಹೋಗುತ್ತಿದ್ದಳು. ಪಕ್ಕದ ಮನೆಗೆ ಕೆಲಸಕ್ಕೆ ಬರುತ್ತಿದ್ದವಳ ರೇಶನ್ ಕಾರ್ಡಿನಲ್ಲಿ ಸಿಗುತ್ತಿದ್ದ ಸಕ್ಕರೆಯನ್ನು ತಾನು ಖರೀದಿಸಿ ಅವಳಿಗೆ ಬೆಲ್ಲ ಕೊಡುತ್ತಿದ್ದಳು. ಆಗ ಎಲ್ಲರ ಮನೆಯಲ್ಲೂ ಕಾಫಿ ಸಾಮಾನ್ಯವಾಗಿರಲಿಲ್ಲ. ಚಹಾ ಕೂಡ. ಹಾಲು ಕೂಡ ಸುಲಭವಾಗಿ ಸಿಗುವ ವಸ್ತುವಾಗಿರಲಿಲ್ಲ.
ಅಂತಹ ದಿನಗಳಲ್ಲೂ ಅಪ್ಪ ಒಮ್ಮೊಮ್ಮೆ ಮನೆಗೆ ಬರುವಾಗ ಜೇಬಿನಲ್ಲಿ ನಮ್ಮ ಮನೆಯಲ್ಲಿದ್ದ ಟಾಮಿಗೆಂದು ಬೇಕರಿಯ ಬನ್ನು ತರುತ್ತಿದ್ದದ್ದು ಇಂದಿಗೆ ವಿಚಿತ್ರ ಎನ್ನಿಸುತ್ತದೆ. ಹಾಗೆಯೇ ಬೆಂಗಳೂರಿಗೋ, ಮೈಸೂರಿಗೋ ಕಾರ್ಯನಿಮಿತ್ತ ಹೋದರೆ ಬರಿಗೈಯಲ್ಲಿ ಬರುತ್ತಲೇ ಇರುತ್ತಿರಲಿಲ್ಲ. ಅಲ್ಲಿಂದ ರಸ್ಕು ಮತ್ತು ಆಟದ ಸಾಮಾನುಗಳನ್ನೋ ಗೊಂಬೆಗಳನ್ನೋ ಹೊತ್ತು ತರುತ್ತಿದ್ದರು.

ಹೌದು. ಅಂದಿನ ಕಾಲದಲ್ಲಿಯೂ 50 ಪೈಸೆ ದುಬಾರಿ ಬೆಲೆ ಕೊಟ್ಟು ಮನೆಗೆ ಸುಧಾ ತರಿಸುತ್ತಿದ್ದೆವು. ಪ್ರಜಾಮತ ಬರುತ್ತಿತ್ತು. ಇವೆರಡೂ ಪತ್ರಿಕೆಗಳೂ ಅರ್ಧ ಕಿಲೋಮಿಟರು ದೂರವಿದ್ದ ಆ ರಸ್ತೆಯಲ್ಲಿ ಓದಿದ್ದ ಎಲ್ಲ ಹೆಣ್ಣುಮಕ್ಕಳ ಬಳಿಯೂ ಸುತ್ತಾಡುತ್ತಿತ್ತು. ಕನ್ನಡದವಳಲ್ಲದ ಅಮ್ಮನೂ ಕನ್ನಡ ಕಲಿತು ಪತ್ರಿಕೆಗಳನ್ನು ಓದಿ ನಮಗೆ ಕಲಿಸುತ್ತಿದ್ದರು. ಅಪ್ಪ-ಅಮ್ಮರಿಬ್ಬರೂ ಅಕ್ಷರವಂತರಷ್ಟೆ ಹೊರತು ಪದವೀಧರರಲ್ಲ. ಆದರೂ ಎಲ್ಲ ಬ್ರಾಹ್ಮಣ ಮನೆತನದವರಂತೆ ತಮ್ಮ ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗ ಸಂಪಾದಿಸಬೇಕು ಎನ್ನುವ ಹಂಬಲ ಇಬ್ಬರಲ್ಲೂ ಇತ್ತು. ಅಮ್ಮ ಕಲಿತದ್ದು ಮಲೆಯಾಳಂ ಆದರೂ ನಮಗಾಗಿ ಕನ್ನಡವನ್ನೂ, ಇಂಗ್ಲೀಷನ್ನೂ ಕಲಿತು ಪಾಠ ಹೇಳುತ್ತಿದ್ದರು. ನಮಗಷ್ಟೆ ಅಲ್ಲ. ಬೀದಿಯಲ್ಲಿದ್ದ ಹತ್ತಾರು ಹೆಣ್ಣು ಮಕ್ಕಳಿಗೆ ಅಕ್ಕಂದಿರ ಜೊತೆಗೆ ಉಚಿತ ಮನೆಪಾಠವೂ ನಡೆಯುತ್ತಿತ್ತು. ನಾನೂ ಮಧ್ಯೆ ಸೇರಿ ಕೇಳಿ, ಕೇಳಿಯೇ ಇಂಗ್ಲೀಷು ಕಲಿತೆ. 

ಈಗ ಕನ್ನಡ, ಇಂಗ್ಲೀಷು ಮಾಧ್ಯಮಗಳ ಬಗ್ಗೆ ಚರ್ಚೆ ನಡೆಯುವಾಗೆಲ್ಲ ಈ ಎರಡು ಚೇತನಗಳ ಸಾಧನೆ ಕಡಿಮೆಯೇನಲ್ಲ ಎನ್ನಿಸುತ್ತದೆ. ಹಾಗೆಯೇ ಮಡದಿಯ ಶಾಲೆಯಲ್ಲಿ ಪೋಷಕರು "ಶಾಲೆ ಇರುವುದು ಏತಕ್ಕೆ? ನಾವು ಏಕೆ ಮಕ್ಕಳಿಗೆ ಕಲಿಸಬೇಕು?" ಎಂಬ ದೂರಿದರು ಎಂದು ತಿಳಿದಾಗಲೆಲ್ಲ ಪೋಷಕರೂ ಹೀಗೂ ಇರಬಹುದೇ ಎನ್ನಿಸದಿರದು.
1976ರಲ್ಲಿ ನಾನು ಎಸ್ಸೆಸ್ಸೆಲ್ಸಿ ಪಾಸು ಮಾಡಿದ್ದೆ. ಪೀಯೂಸಿಗೆ ಸೇರಿದ ಹೊಸತು. ಅಪ್ಪ ಒಮ್ಮೆ ಬೆಂಗಳೂರಿಗೆ ಹೋಗಿದ್ದವರು ಮನೆಗೆ ಮರಳುವಾಗ ರೂಬಿಕ್ ಕ್ಯೂಬ್ ತಂದಿದ್ದರು. ರೂಬಿಕ್ ಕ್ಯೂಬ್ ಪ್ರಪಂಚಕ್ಕೆ ಪರಿಚಿತವಾದ ಹೊಸ ಆಟಿಕೆ. ಅದನ್ನು ಕಲಿತವರೂ ಕಡಿಮೆ. ಅದರ ಬಗ್ಗೆ ಆಸಕ್ತಿ ಇದ್ದವರೂ ಕಡಿಮೆ. ಅಂತಹ ದಿನಗಳು ಅವು. ಎಪ್ಪತ್ತೈದು ರೂಪಾಯಿ ಕೊಟ್ಟು ತಂದಿದ್ದರೆಂದು ನೆನಪು. ಅದು ಅವರ ತಿಂಗಳ ವರಮಾನದ ಕಾಲು ಭಾಗದಷ್ಟು. ಈ ಲೆಕ್ಕಾಚಾರವೆಲ್ಲ ನನಗೆ ಆಗ ಬರುತ್ತಿರಲಿಲ್ಲವೆನ್ನಿ. ಅದನ್ನು ತಿಳಿಯುವ ವಯಸ್ಸೂ ಆಗಿರಲಿಲ್ಲ. ನೆನಪಿರುವುದಿಷ್ಟೆ. ರೂಬಿಕ್ ಕ್ಯೂಬನ್ನು ಅದರ ಮೊದಲ ವಿನ್ಯಾಸಕ್ಕೆ ಮರಳಿಸುವ ವಿಫಲ ಪ್ರಯತ್ನದಲ್ಲಿ ನನಗೆ ಅಪ್ಪನೂ ಜೊತೆಯಾಗಿರುತ್ತಿದ್ದರು. ಎಷ್ಟೋ ಬಾರಿ ಗಂಟೆಗಟ್ಟಲೆ ಅದನ್ನು ಮಾಡಲಾಗದೇ ಕೊನೆಗೆ ಸ್ಕ್ರೂ ಡ್ರೈವರಿನಿಂದ ಎಲ್ಲವನ್ನೂ ಬಿಚ್ಚಿ ಮತ್ತೆ ಜೋಡಿಸಿ ಬಿಡುತ್ತಿದ್ದೆವು.

ಚೆಸ್, ವಿವಿಧ ವಿನ್ಯಾಸಗಳನ್ನು ಜೋಡಿಸಬಹುದಾದ ಮೆಕ್ಯಾನೋ ಸೆಟ್ಟುಗಳು (ಇಂದಿನ ಲೀಗೋ ಸೆಟ್ಟುಗಳ ಹಾಗೆ) ಸದ್ದು ಮಾಡುವ ಗೊಂಬೆ, ಮಲಗಿಸಿದರೆ ಕಣ್ಣು ಮುಚ್ಚಿಕೊಳ್ಳುವ ಗೊಂಬೆ ಹೀಗೆ ಎಲ್ಲರಿಗೂ ಆಟದ ಸಾಮಾನುಗಳನ್ನು ಕೊಡಿಸುವುದರಲ್ಲಿ ಅಪ್ಪ ಎಂದಿಗೂ ಹಿಂದೆ ಬಿದ್ದಿರಲಿಲ್ಲ. ವೃತ್ತಿಯಿಂದ ಮೆಕ್ಯಾನಿಕ್ ಆಗಿದ್ದ ಅವರಿಗೆ ಮನೆಯಲ್ಲಿ ಇದ್ದ ಗಡಿಯಾರ, ರೇಡಿಯೊ, ಸೈಕಲ್ಲು ಇತ್ಯಾದಿಗಳನ್ನೆಲ್ಲ ತಾವೇ ಬಿಚ್ಚಿ ಮತ್ತೆ ಜೋಡಿಸುವುದೆಂದರೆ ಬಲು ಇಷ್ಟ. ರಜೆಯ ದಿನಗಳನ್ನೆಲ್ಲ ಹೀಗೇ ಕಳೆಯುತ್ತಿದ್ದರು. ನಾನೂ ಅವರ ಜೊತೆಗೆ ಸ್ಕ್ರೂಡ್ರೈವರ್ರು ಕೊಡುವುದೋ, ವಿದ್ಯುತ್ ತಂತಿಗೆ ಇನ್ಸುಲೇಟರು ಹಚ್ಚುವುದೋ ಮಾಡುತ್ತಿದ್ದೆ. ಈಗಲೂ ಮನೆಯಲ್ಲಿ ವಿದ್ಯುತ್ ಏನಾದರೂ ಹೆಚ್ಚು ಕಡಿಮೆಯಾದರೆ ನಮ್ಮ ಅಕ್ಕಂದಿರು ತಾವೇ ಅದನ್ನು ಸರಿ ಪಡಿಸಲು ಹೋಗುವುದು ಬಹುಶಃ ಅಪ್ಪನ ತರಬೇತಿಯಿಂದಲೇ ಇರಬೇಕು. ಇವನ್ನೆಲ್ಲ ಶಿಕ್ಷಣವೆನ್ನಲೋ, ಕೌಶಲ್ಯವೆನ್ನಲೋ ಗೊತ್ತಿಲ್ಲ.

ಇತ್ತೀಚೆಗೆ ಮಗ ರೂಬಿಕ್ ಕ್ಯೂಬನ್ನು ಇಷ್ಟ ಪಟ್ಟಾಗಲೇ ಗೊತ್ತಾಗಿದ್ದು ಅಪ್ಪನ ಅಂದಿನ ತ್ಯಾಗ. ದೇಶದಲ್ಲಿ ತಯಾರಾಗದೇ ಇರುವ ಆಮದು ಮಾಡಿಕೊಳ್ಳಬೇಕಾದಂತಹ ಆಟಿಕೆಗಳನ್ನು ಅವು ದುಬಾರಿಯಾದರೂ ಹಿಂಜರಿಯದೆ ನಮಗೆ ತಂದು ಕೊಟ್ಟಿದ್ದರೆನ್ನುವುದು ನಂಬಲಾಗದ ಸಂಗತಿ. ಇಂದು ಮಗನ ಬಳಿ ಕನಿಷ್ಟ ನಲವತ್ತು ಬಗೆಯದಾದರೂ ರೂಬಿಕ್ ಕ್ಯೂಬುಗಳಿವೆ. ನನಗೆ ಅವುಗಳನ್ನು ಮರುಜೋಡಿಸುವುದು ಆಗುವುದಿಲ್ಲ ಎನ್ನುವುದು ಅವನಿಗೆ ತಮಾಷೆ ಎನ್ನಿಸುತ್ತದೆ. ಕೆಲವೇ ಸೆಕೆಂಡುಗಳಲ್ಲಿ ತಾನು ಸಾಧಿಸುವ ಕೆಲಸವನ್ನು ಅಪ್ಪನಿಗೆ ಯಾಕೆ ಸಾಧಿಸಲಾಗುತ್ತಿಲ್ಲ ಎಂದು ಅವನು ಯೋಚಿಸುತ್ತಿರಲೂ ಬಹುದು.

ಅದೇನೇ ಇರಲಿ. ಇಂದು ಮೊಮ್ಮಗ ರೂಬಿಕ್ ಕ್ಯೂಬನ್ನು ಹಿಡಿದು ಕುಳಿತಾಗಲೆಲ್ಲ ತೊಂಭತ್ತರ ಅಮ್ಮ ಅಪ್ಪನನ್ನು ನೆನಪಿಸಿಕೊಳ್ಳುತ್ತಾಳೆ. ಅರ್ಧ ಶತಮಾನದ ಮೊದಲು ಅವನ ಅಜ್ಜ ತನ್ನ ಸಂಬಳದ ಬಹುಪಾಲು ವೆಚ್ಚ ಮಾಡಿ ತಂದಿದ್ದಾಗ ಅವರಿಬ್ಬರ ನಡುವೆಯೂ ವಾಗ್ವಾದವಾಗಿರಬಹುದೇ? ಖಂಡಿತವಾಗಿ ಆಗಿರುತ್ತದೆ. ನಮ್ಮ ಆದಾಯದ ಒಂದು ಪರ್ಸೆಂಟಿನಷ್ಟನ್ನು ನಾವು ಬಹಳ ಜತನದಿಂದ ಲೆಕ್ಕ ಹಾಕುವಾಗ ಕಾಲು ಭಾಗದ ಆದಾಯವನ್ನು ಆಹಾರಕ್ಕಲ್ಲದೆ ಆಟಕ್ಕೆ ವೆಚ್ಚ ಮಾಡಿದ ಗಂಡನನ್ನು ತರಾಟೆಗೆ ತೆಗೆದುಕೊಳ್ಳದೇ ಇದ್ದಳೇ? ಆಕೆಯ ದೂರುಗಳಿಗೆ ಬೆದರಿ ಅಪ್ಪ ಇವನ್ನೆಲ್ಲ ನಮಗೆ ಕೊಡಿಸದೇ ಇದ್ದಿದ್ದರೆ ನಾನು ಹೇಗಿರುತ್ತಿದ್ದೆ ಎಂದು ಆಲೋಚಿಸಲೂ ಭಯವಾಗುತ್ತದೆ.


ಅಪ್ಪ ಅಪ್ಪನೇ! ಅಮ್ಮ ಅಮ್ಮನೇ!

Monday, August 14, 2017

ಮನೆಯಲ್ಲಿ ಶೆರ್ಲಾಕ್ ಹೋಮ್ಸ

ನಂಬಿದರೆ ನಂಬಿ ಬಿಟ್ಟರೆ ಬಿಡಿ. ನಮ್ಮ ಮನೆಯಲ್ಲಿ ಶೆರ್ಲಾಕ್ ಹೋಮ್ಸನ ಪ್ರೇತ ಬಂದು ಸೇರಿಕೊಂಡಿದೆ. ಇಲ್ಲದಿದ್ದರೆ ನಾನು ಎಷ್ಟೇ ಗುಟ್ಟು ಮಾಡಿದರ ವಿಷಯವೂ ನನ್ನವಳಿಗೆ ಗೊತ್ತಾಗುವುದು ಹೇಗೆ? ನೀವೇ ಹೇಳಿ.
ಒಂದು ಉದಾಹರಣೆ. ಮೊನ್ನೆ ಕಾವೇರಿ ನೀರಿನ ಗಲಾಟೆ ಅಂತ ಬಂದ್ ಆಯಿತಲ್ಲ! ಅವತ್ತೂ ರಾಜ್ಯವೂ ಬಂದ್, ನನ್ನ ರಜಾ ನಿದ್ರೆಯೂ ಬಂದ್. ರಜೆಯ ದಿನವಾದರೂ ನಿಧಾನವಾಗಿ ಏಳೋಣ ಅಂತಿದ್ದೆ. ಆದರೆ ಮಡದಿ ಬಿಡಬೇಕಲ್ಲ. ಹೊದ್ದಿಗೆ ಎಳೆದು ಹೋಗಿ ತರಕಾರಿ ತನ್ನಿ ಅಂತ ಆದೇಶಿಸಿಯೇ ಬಿಟ್ಟಳು. ಈವತ್ತು ಬಂದ್ ಏನೂ ಇರೋದಿಲ್ಲ ಅಂದರೂ ಕೇಳಲಿಲ್ಲ. “ಬೆಳಗ್ಗೆ ಐದು ಗಂಟೆಗೆ ಆಟೋ ಸದ್ದು ಕೇಳಿಸ್ತಿತ್ತು. ತರಕಾರಿ ಮಾರೋವರು ಬಂದಿರ್ತಾರೆ ಹೋಗ್ರಿ ಸೋಮಾರಿ,” ಅನ್ನೋದೇ? ಅಲ್ಲ. ಆಟೋ ಸದ್ದಿನಿಂದಲೇ ತರಕಾರಿ ಮಾರ್ಕೆಟ್ಟು ತೆರೆದಿದೆ ಅಂತ ಊಹಿಸೋದೇನು ಸುಮ್ಮನೇನಾ? ಅದಿಕ್ಕೆ ಹೇಳಿದ್ದು ನಮ್ಮ ಮನೇಲಿ ಶೆರ್ಲಾಕ್ ಹೋಮ್ಸನ ಪ್ರೇತ ಇರಬೇಕು ಅಂತ.
ಇದು ಕಾಕತಾಳೀಯ ಇದ್ದಿರಬಹುದು ಅಂದಿರಾ? ಅಯ್ಯೋ ಸ್ವಾಮಿ. ಇದು ಮೊದಲನೆ ಘಟನೆ ಅಲ್ಲ ಸ್ವಾಮಿ. ಅಪರಾಧ ಪತ್ತೆಯಲ್ಲಿ ಆಕ್ಸಿಡೆಂಟ್ ಅನ್ನುವ ಪದ ಇಲ್ಲ ಅನ್ನೋದು ಶೆರ್ಲಾಕ್ ಹೋಮ್ಸ ನಿಯಮ.
ನಿತ್ಯ ಬೆಳಗ್ಗೆ ಎದ್ದು ತರಕಾರಿ ತರೋದು ನನ್ನದೇ ಕೆಲಸ. ಬೆಳಗ್ಗೆ ಎದ್ದು ಚೌಕಾಸಿ ಯಾರು ಮಾಡ್ತಾರೆ ಅಂತ ಕೇಳಿದ ರೇಟಿನ ದುಡ್ಡು ಕೊಟ್ಟು ಬರ್ತೀನಿ. ಮನೆಗೆ ಬಂದ ಮೇಲೆ ಲೆಕ್ಕ ಬೇರೆ ಕೊಡಬೇಕು. ಅದರಲ್ಲೇನು ತಪ್ಪು ಅಂದಿರಾ? ಅಲ್ಲೇ ಇರೋದು ಸ್ವಾಮಿ. “ಅಲ್ರೀ. ಟೊಮ್ಯಾಟೋಗೆ ಹದಿನೈದು ರೂಪಾಯಿ ಕೊಟ್ಟಿದ್ದೀರಲ್ಲ? ಹದಿನೈದಕ್ಕೆ ಎರಡು ಕೇಜಿ ಬರ್ತಿತ್ತಂತೆ,” ಅನ್ನೋ ಮಾತು ಖಂಡಿತ. ರೇಡಿಯೋ ಇಲ್ಲ. ಮಾರ್ಕೆಟ್ ಮುಖ ನೋಡಿಲ್ಲ. ಮಹರಾಯಿತಿಗೆ ಅದು ಹೇಗೆ ಗೊತ್ತಾಗುತ್ತೋ? ಕೇಳಿದ್ರೆ, “ನಾನೇನು ನಿಮ್ಮ ಹಾಗೆ ಪೆದ್ದಲ್ಲ,” ಅನ್ನುವ ಉತ್ತರ ಗ್ಯಾರಂಟಿ. ವಾಟ್ಸನ್ನನಿಗೂ ಶೆರ್ಲಾಕ್ ಹೋಮ್ಸ್ ಹೀಗೇ ಹೇಳುತ್ತಿದ್ದ ಅಂತ ಎಲ್ಲೋ ಓದಿದ್ದ ನೆನಪು. “ಎಲಿಮೆಂಟರಿ ವಾಟ್ಸನ್.”
ಅವತ್ತು ಇನ್ನೊಂದು ವಿಷಯ ಆಯ್ತು. ತರಕಾರಿ ತರುವಾಗಲೇ, ಕೊಟ್ಟ ಬೆಲೆಗಿಂತ ಕಡಿಮೆ ಹೇಳೋದು ಅಂತ ತೀರ್ಮಾನಿಸಿ ಬಂದಿದ್ದೆ. ಅಲ್ಲಿ ಹದಿನೈದು ಕೊಟ್ಟು ಬಂದಿದ್ದರೂ, ಮನೆಯಲ್ಲಿ ಹತ್ತು ರೂಪಾಯಿಯಷ್ಟೆ ಕೊಟ್ಟಿದ್ದು ಅಂತ ಹೇಳಿ ಶಭಾಸ್ ಗಿರಿ ಪಡೆಯೋ ಪ್ಲಾನ್ ಮಾಡಿ ಬಂದೆ. ಏನಾಯ್ತು ಅಂತೀರಿ? ಕಾಲರ್ ತಿರುವಿಕೊಂಡು (ಮೀಸೆ ಬಿಟ್ಟಿಲ್ಲದ್ದರಿಂದ ಅದನ್ನ ತಿರುವಕ್ಕೆ ಆಗಲ್ಲ) “ನೋಡು ಹ್ಯಾಗೆ ಚೌಕಾಶಿ ಮಾಡಿ ಹತ್ತು ರೂಪಾಯಿಗೇ ತಂದಿದ್ದೀನಿ.” ಅಂದೆ. ಬಿಡಿ ನಂಗೆ ಗೊತ್ತಿಲ್ಲವಾ? ಬೆಲೆ ಕಡಿಮೆ ಮಾಡಿ ಹೇಳ್ತಿದ್ದೀರಾ ಅನ್ನೋದೇ! ಅಲ್ಲಾ ಅಷ್ಟೆಲ್ಲಾ ಪ್ಲಾನು ಮಾಡಿಕೊಂಡು ಬಂದರೂ ಅದು ಹೇಗೆ ಇವಳಿಗೆ ಗೊತ್ತಾಯ್ತೋ? ವಿವರಣೆ ಕೇಳಕ್ಕೆ ಹೋಗಲಿಲ್ಲ ಬಿಡಿ. ಯಾಕಂದ್ರೆ ಶೆರ್ಲಾಕ್ ಹೋಮ್ಸನ ಪ್ರೇತ ಬೀಡು ಬಿಟ್ಟಿರೋದು ಖಾತ್ರಿ.
ಪತ್ತೇದಾರರಿಗೆ ನಾಯಿ ಮೂಗು, ಹದ್ದಿನ ಕಣ್ಣು, ಬಾವಲಿಯ ಕಿವಿ ಇರಬೇಕು ಅಂತಾರೆ. ನನ್ನವಳಿಗೆ ಮೈಯೆಲ್ಲಾ ಕಣ್ಣೋ ಏನೋ? ಸಂಜೆ ಆಫೀಸಿನಲ್ಲಿ ಓಸಿ ಹೊಡೆದು ಗೆಳೆಯರ ಜೊತೆ ಎನ್ಟಿಆರ್ ನಲ್ಲಿ ಮಸಾಲೆ ದೋಸೆ ಪಾರ್ಟಿ ಮಾಡಿ ಬಂದಿದ್ದೆ ಅನ್ನಿ. ನಿತ್ಯದ ಸಮಯಕ್ಕೇ ಮನೆಗೆ ಮರಳಿದ್ದರೂ ಅದು ಹೇಗೋ ಇವಳಿಗೆ ಗೊತ್ತಾಗಿಬಿಡುತ್ತೆ. ಅವಳು ಕೊಟ್ಟ ಟೀ ಕುಡಿದು ಮುಗಿಸ್ತಾ ಇದ್ದ ಹಾಗೆ, “ಏನು ಇವತ್ತು ಪಾರ್ಟೀನಾ?” ಅಂತ ಕೇಳೇ ಬಿಡ್ತಾಳೆ. ಹ್ಹೆ. ಹ್ಹೆ. ಅನ್ನಬೇಕಷ್ಟೆ. “ನಿಂಗೆ ಹ್ಯಾಗೆ ಗೊತ್ತಾಯ್ತೇ?” ಅಂದ್ರೆ ನೀವು ಕೊಟ್ಟ ಟೀಯನ್ನ ನೋಡದೆಯೇ ಕುಡಿದ್ರಲ್ಲ. ಆಗಲೇ ಗೊತ್ತಾಯ್ತುಅಂತಾಳೆ. ಇದು ಶೆರ್ಲಾಕ್ ಹೋಮ್ಸನ ತಂತ್ರದ ಥರಾನೇ ಇಲ್ಲವಾ?
ರಾತ್ರಿ ನಿದ್ರೆ ಬರದೇ ಇದ್ದಾಗ, “ಸ್ವಲ್ಪ ಅರ್ಜೆಂಟು ಕೆಲಸ ಇದೆಅಂತ ಸಬೂಬು ಹೇಳಿ ಕಂಪ್ಯೂಟರು ಮುಂದೆ ಕೂತೆ ಅನ್ನಿ. ಅರ್ದ ಗಂಟೆ ಕಳೆದ ಮೇಲೆ ಕಮೆಂಟು ಬರುತ್ತೆ. “ಆಯ್ತೇನ್ರೀ ಕಥೆ ಪುಸ್ತಕ ಓದಿದ್ದು. ಲೈಟ್ ಆರಿಸಿ ಮಲಕ್ಕೊಳ್ಳಿ. ನಾಳೆ ಆಫೀಸು ಇದೆ. ಆಮೇಲೆ ಆಫೀಸಲ್ಲಿ ನಿದ್ರೆ ಮಾಡಬೇಕಾಗುತ್ತೆ.” ಅಲ್ರೀ. ಮೂರು ಕೋಣೆ ಆಚೆ ಇರೋ ಕಂಪ್ಯೂಟರಿನಲ್ಲಿ ನಾನು ಏನು ಮಾಡ್ತಿದ್ದೀನಿ ಅಂತ ಇವಳಿಗೆ ಹೇಗೆ ಗೊತ್ತಾಗುತ್ತೆ ಅಂತ. ಬಾವಲಿ ಕಿವಿಯೋ, ಸಿಕ್ಸ್ತ್ ಸೆನ್ಸೋ ಇರಬೇಕು ಅಲ್ಲವಾ? ಅಥವಾ ಶೆರ್ಲಾಕ್ ಹೋಮ್ಸನ ಪ್ರೇತ
ಇವೆಲ್ಲ ಬಿಡಿ. ಮೊನ್ನೆ ಇನ್ನೊಂದು ವಿಷಯ ಆಯ್ತು ಗೊತ್ತಾ? ರಾಮಣ್ಣನ ಮಗನ ಮದುವೆಗೆ ಹೋಗಬೇಕಿತ್ತು. ವಾರದ ದಿನವೇ ಆದ್ದರಿಂದ ಊಟದ ಸಮಯಕ್ಕೆ ಹೋಗಿ ವಾಪಸ್ ಬರೋದು ಅಂತಿ ತೀರ್ಮಾನಿಸಿ ಹೋಗಿದ್ದೆವು. ಮೈಲುದ್ದದ ಕ್ಯೂನಲ್ಲಿ ನಿಂತು ವಧೂ ವರರನ್ನ ಹರಸುವುದೆಂದರೆ ಮರುದಿನ ಬೆಳಗಾಗುತ್ತದೇನೋ ಅನ್ನಿಸಿ, ನೇರವಾಗಿ ಊಟ ಮುಗಿಸಿಕೊಂಡು ವಾಪಸ್ ಬಂದೆವು. ಮನೆಗೆ ಬಂದ ಮೇಲೆ ಇವಳು ಏನಂದಳು ಗೊತ್ತಾ? “ಅಲ್ಲರೀ. ಹುಡುಗನ ಕಡೆಯವರು ತುಂಬಾ ಜಿಪುಣರು ಕಣ್ರೀಅನ್ನೋದೇ. ಅವರ ಆಸ್ತಿ-ಪಾಸ್ತಿ, ವ್ಯವಹಾರವೆಲ್ಲ ಕ್ಷಣಮಾತ್ರದಲ್ಲಿ ಇವಳಿಗೆ ಹೇಗೆ ಗೊತ್ತಾಯಿತು ಅಂತ ಅಚ್ಚರಿ ಆಗಿದ್ದಂತೂ ನಿಜ. “ನೋಡ್ರೀ. ವರ ಹಾಕ್ಕೊಂಡಿರೋ ವಾಚು ನೋಡಿದ್ರಾ? ಲೆದರ್ ಸ್ಟ್ರಾಪ್. ಆದರೆ ಕಾರು ಮಾತ್ರ ಆಡಿ ಕಾರು,” ಅಂತ ಆಡಿಕೊಂಡಳು. ನಿಜ. ಅದೆಲ್ಲ ನನ್ನ ಕಣ್ಣಿಗೆ ಬಿದ್ದೇ ಇರಲಿಲ್ಲ. ಇವಳಿಗೆ ಮಾತ್ರ ಹೇಗೆ ಕಂಡಿತೋ?
ಒಮ್ಮೆ ಶೆರ್ಲಾಕ್ ಹೋಮ್ಸ ಮನೆಗೆ ಒಬ್ಬ ಮುದುಕ ಬಂದನಂತೆ. ಅವನನ್ನ ನೋಡಿದ ಕೂಡಲೇ ನೀನು ಯುದ್ಧದಲ್ಲಿ ಹೋರಾಡಿದ್ದೆ. ಇಂತಹ ದೇಶದಲ್ಲಿ ಅಂತೆಲ್ಲ ಹೋಮ್ಸ ಹೇಳಿದನಂತೆ. ಆ ಮುದುಕನಿಗೆ ಆಶ್ಚರ್ಯ ಆಗದೇ ಇರುತ್ಯೆ. ಆಮೇಲೆ ವಾಟ್ಸನ್ ಹೇಳಿದನಂತೆ. ಅವನ ಶೂನಲ್ಲಿ ಒಂದು ಹೆಚ್ಚು ಸವೆದಿತ್ತು. ಇನ್ನೊಂದು ಕಡಿಮೆ. ಹೀಗಾಗಿ ಅವನ ಕಾಲು ಕುಂಟಾಗಿರಬೇಕು. ಅದು ಹುಟ್ಟಿನಿಂದ ಬಂದದ್ದಲ್ಲ ಅಂದ ಮೇಲೆ ಗಾಯವಷ್ಟೆ. ಶಿಸ್ತು ನೋಡಿದರೆ ಮಿಲಿಟರಿ ಅನ್ನಿಸ್ತು. ಅಂತ ವಾಟ್ಸನ್ ಗೆ ವಿವರಿಸ್ತಾನೆ. ನಮ್ಮವಳೇನು ಕಮ್ಮಿ ಅಲ್ಲವಾ? ವಾಚ್ ಸ್ಟ್ರಾಪ್ ನೋಡಿಯೇ ಅಂತಸ್ತು ನಿರ್ಧರಿಸೋವ್ರನ್ನ ಶೆರ್ಲಾಕ್ ಹೋಮ್ಸ ಅನ್ನದೆ ಇನ್ನೇನು ಹೇಳಕ್ಕೆ ಆಗತ್ತೆ. ನೀವೇ ಹೇಳಿ.
ಅಷ್ಟೇ ಅಲ್ಲ. ಮದುವೆ ಮನೆಯಲ್ಲಿ ಅವಳ ಪಕ್ಕ ಊಟಕ್ಕೆ ಕುಳಿತಿದ್ದ ಬೆಂಗಳೂರಿನ ಆಂಟಿಯ ಮಗ, ಮಗಳು, ಸೊಸೆ ಎಲ್ಲರ ವೃತ್ತಾಂತವನ್ನೂ ಸವಿಸ್ತಾರವಾಗಿ ತಿಳಿಸಿದಳು. ಮಗನಿಗೆ ಹೆಣ್ಣು ಹುಡುಕುತ್ತಿರುವ ವಿಚಾರ. ಮಗಳ ಜಾತಕ ದೋಷ. ಅದಕ್ಕೆ ಪರಿಹಾರ ಎಲ್ಲವನ್ನೂ ಒಂದು ಊಟ ಮಾಡಿ ಮುಗಿಸುವಷ್ಟರಲ್ಲಿ ಸಂಗ್ರಹಿಸಿಯಾಗಿತ್ತು. ಮದುವೆ ಮನೆಯಲ್ಲಿ ಊಟಕ್ಕೆ ಎಷ್ಟು ಹೊತ್ತು ಬೇಕು ಹೇಳಿ? ಅಷ್ಟು ವೇಳೆಗೇ ಇಷ್ಟೆಲ್ಲ ಮಾಹಿತಿಯನ್ನು ಗಮನಿಸೋದು ಅಂದರೆ ಸುಮ್ಮನೇನಾ? ಖಂಡಿತ ಶೆರ್ಲಾಕ್ ಹೋಮ್ಸನ ಪ್ರೇತವಿರಬೇಕು. ಏನಂತೀರಿ?
ಸಿನಿಮಾದಲ್ಲಿ ನೋಡಿದ್ದೇನೆ. ಶರ್ಟನಲ್ಲಿ ಲಿಪ್ ಸ್ಟಿಕ್. ಕಾಲರ್ ನಲ್ಲಿ ಕೂದಲು ನೋಡಿ ಮನೆಯಲ್ಲಿ ರಾದ್ಧಾಂತ ಆಗುತ್ತೆ. ಸದ್ಯಕ್ಕೆ ನನಗೆ ಅಂತಹ ಸಂದರ್ಭ ಬಂದಿಲ್ಲ. ಆದರೂ ಅದನ್ನೆಲ್ಲ ಗಮನಿಸುವಷ್ಟು ಸೂಕ್ಷ್ಮದೃಷ್ಟಿ ಪತ್ತೇದಾರರಿಗೆ ಇರಲೇ ಬೇಕು. ಅದೂ ಹುಟ್ಟಿನಿಂದ ಬರಲ್ಲ ಅನ್ನಿ. ನಿಜವಾಗಿ ಕಲಿತ ಕೌಶಲ್ಯ. ಅವತ್ತು ಯಾವತ್ತೋ ಹೀಗೇ ಆಯಿತು. ಗೆಳೆಯನೊಬ್ಬ ಫೋನ್ ಮಾಡಿ ಅರ್ಜೆಂಟು ದುಡ್ಡು ಕೇಳಿದ. ಆ ಹಿಂದೆ ಒಮ್ಮೆ ಅವನಿಗೆ ಸಾಲ ಕೊಟ್ಟು ಕೈ ಸುಟ್ಟುಕೊಂಡಿದ್ದೆ. ಆದರೂಎ ಫ್ರೆಂಡ್ ಇನ್ ನೀಡ್ ಈಸ್ ಫ್ರೆಂಡ್ ಇನ್ ನೀಡ್,’ ಅಲ್ಲವೇ. ಆಕಡೆಯಿಂದ ಅವನ ಮಾತನ್ನಷ್ಟೆ ಕೇಳಿಸಂಜೆ ಸಿಗೋಣಅಂದಷ್ಟೆ ಹೇಳಿ ಫೋನಿಟ್ಟೆ. ಸಂಜೆ ಮನೆಗೆ ಬಂದ ಕೂಡಲೆಎಷ್ಟು ಸಾಲ ಕೊಟ್ಟಿರಿ?” ಎನ್ನುವ ಪ್ರಶ್ನೆ ಕೇಳಿ ಅವಾಕ್ಕಾದೆ.
ಫೋನು ಯಾರು ಮಾಡಿದ್ದು? ಏನು ಕಾರಣ? ನಾನು ಏಕೆ ಸಂಜೆ ಸಿಗೋಣ ಎಂದು ಹೇಳಿದೆ? ಇದು ಯಾವುದೂ ಗೊತ್ತಾಗದೆ ಅದು ಹೇಗೆ ಇಂಥವರನ್ನ, ಇದೇ ಕಾರಣಕ್ಕೇ ಭೇಟಿ ಮಾಡಲು ಹೋಗುತ್ತಿದ್ದೇನೆ ಎನ್ನುವುದನ್ನು ಕಂಡುಕೊಂಡಳಲ್ಲ. ಸಾಲ ಕೊಟ್ಟದ್ದನ್ನು ಒಪ್ಪಿಕೊಳ್ಳಲೇ ಬೇಕಾಯಿತು. ಆಗ ಗೊತ್ತಾಯಿತು ನೋಡಿ ನನ್ನವಳ ಶೆರ್ಲಾಕ್ ಹೋಮ್ಸ ಬುದ್ಧಿ. “ಸ್ಕೂಟರ್ ಕೀ ಎಲ್ಲಿದೆ ಅಂತ ದಿನಾನೂ ಕೇಳೋರು, ಚೆಕ್ ಬುಕ್ ಹುಡುಕಿ ಹುಡುಕಿ ಬ್ಯಾಗಿಗೆ ಹಾಕಿಕೊಂಡಾಗಲೇ ಗೊತ್ತು. ಯಾರಿಗೋ ಸಾಲ ಕೊಡಕ್ಕೆ ಹೊರಟಿದ್ದೀರಿ ಅಂತ. ನಿಮ್ಮ ಹತ್ರ ಸಾಲ ಕೇಳೋವ್ರು ಇನ್ಯಾರು ಇದ್ದಾರೆ. ಅವನೇ ತಾನೇ?” ಅಂತ ಪೋಸ್ಟ್ ಮಾರ್ಟಮ್ ವಿವರದ ಹಾಗೆ ವಿವರವಾಗಿ ಹೇಳಿದಳು. ಶೆರ್ಲಾಕ್ ಹೋಮ್ಸ ಹೇಳುತ್ತಿದ್ದನಂತೆ. “ಪ್ರತಿಯೊಬ್ಬ ಅಪರಾಧಿಯೂ ಏನಾದರೂ ಸುಳಿವು ಬಿಟ್ಟು ಕೊಟ್ಟೇ ಇರುತ್ತಾನೆ. ಅದನ್ನ ಗಮನಿಸುವ ದೃಷ್ಟಿ ಇರಬೇಕು ಅಷ್ಟೆ,” ಅಂತ. ನಾನೆಷ್ಟು ಜಾಗರೂಕತೆ ವಹಿಸಿದರೂ, ನನ್ನವಳ ಕಣ್ಣು ತಪ್ಪಿಸೋದಿಕ್ಕೆ ಸಾಧ್ಯವೇ ಆಗಿಲ್ಲ. ಅಂದ ಮೇಲೆ ಶೆರ್ಲಾಕ್ ಹೋಮ್ಸ ಪ್ರೇತ ಮನೆಯಲ್ಲಿದೆ ಅಂತ ತಾನೇ?
ಇನ್ನು ಮನೆಯಲ್ಲಿ ಕಳೆದು ಹೋಗಿರುವ ವಸ್ತುವನ್ನು ಹುಡುಕಿ ತೆಗೆಯುವುದರಲ್ಲಿ ನನ್ನವಳನ್ನು ಮೀರಿಸುವವರಿಲ್ಲ. ಮೊನ್ನೆ ಟೂರಿಗೆ ಹೋಗುವ ಸಂದರ್ಭದಲ್ಲಿ ಯಾವಾಗಲೂ ನನ್ನ ಬ್ಯಾಗಿನಲ್ಲೇ ಇರುತ್ತಿದ್ದ ಲೇಸರ್ ಪಾಯಿಂಟರ್ ಕಾಣಿಸಲಿಲ್ಲ. ಮೂರು ಗಂಟೆ ಕಾಲ ಹುಡುಕಿ ಕೈಚೆಲ್ಲಿ ಕುಳಿತೆ. ಈ ಹಿಂದೆ ಯಾವ ಕಾರ್ಯಕ್ರಮಕ್ಕೆ ಹೋಗಿದ್ದೆ ಎನ್ನುವ ವಿಶ್ಲೇಷಣೆಯನ್ನೂ ಮಾಡಿದ್ದಾಯಿತು. ಮರೆತು ಆಫೀಸಿನಲ್ಲೇ ಬಿಟ್ಟಿರಬಹುದೇ ಎಂದೂ ಚಿಂತಿಸಿದೆ. ಕೊನೆಗೆ ನನ್ನವಳಿಗೆ ಹೇಳಿದೆ. “ಅಯ್ಯೋ ಅದು ಅಲ್ಲೇ ನಿಮ್ಮ ಬ್ಯಾಗಿನಲ್ಲೇ ಇರಬೇಕು ನೋಡಿ,” ಎಂದಳು. ಮತ್ತೆ ಹುಡುಕಿದೆ ಸಿಗಲಿಲ್ಲ. ಅವಳೇ ಬಂದು ಅದೇ ಬ್ಯಾಗಿನಿಂದ ಎರಡೇ ನಿಮಿಷದಲ್ಲಿ ಅದನ್ನು ಹುಡುಕಿ ಕೊಟ್ಟಳಲ್ಲ! ಪತ್ತೇದಾರಿಣಿ ತಾನೇ? ನನಗೆ ಮರೆವು ಇತ್ತೇನೋ ನಿಜ. ಆದರೆ ಆ ಬ್ಯಾಗಿನಲ್ಲಿ ನಾನೂ ಹುಡುಕಿದ್ದೆನಲ್ಲ? “ಬರೇ ಸುಳಿವನ್ನು ಹುಡುಕಿದರೆ ಸಾಕಾಗುವುದಿಲ್ಲ. ಎಂತಹ ಸುಳಿವು ಅನ್ನುವುದನ್ನೂ ಮೊದಲೇ ಊಹಿಸಿರಬೇಕು,” ಅನ್ನೋದು ಶೆರ್ಲಾಕ್ ನಿಯಮ. ಮನೆಯವಳಿಗೆ ಇದು ಗೊತ್ತು ಅನ್ನುವ ಅನುಮಾನ ನನಗೆ.

ಇದು ಬೇರೆ ಪ್ರೇತವೂ ಆಗಿರಬಹುದು ಅಂದಿರಾ? ಖಂಡಿತ ಇಲ್ಲ. ಇದು ಶೆರ್ಲಾಕ್ ಹೋಮ್ಸನದ್ದೇ ಇದು ಅಂತ ನನಗೆ ನಂಬಿಕೆ. ಯಾಕೆ ಅಂದರೆ ಮೊನ್ನೆ ಭಾನುವಾರ ಏನೂ ಕೆಲಸ ಇಲ್ಲದಿದ್ದಾಗಛೇ ಒಂದು ಕಪ್ ಬಿಸಿ ಟೀ ಇದ್ದರೆ ಹೇಗಿರುತ್ತಿತ್ತು,” ಅಂತ ಯೋಚಿಸ್ತಾ ಇದ್ದೆ ಅಷ್ಟೆ. ಬಿಸಿ, ಬಿಸಿ ಚಹಾ ಹಿಡಿದ ಹೆಂಡತಿ ಪ್ರತ್ಯಕ್ಷ. “ಅಲ್ಲ. ಅದು ಹೇಗೆ ನನ್ನ ಮನಸ್ಸಿನಲ್ಲಿದ್ದದ್ದು ನಿಂಗೆ ಗೊತ್ತಾಯಿತು,” ಅಂದೆ ಒಂದು ಹುಸಿ ನಗು ನಕ್ಕಳು. “ಎಲಿಮೆಂಟರಿ ವ್ಯಾಟ್ಸನ್,” ಅನ್ನೋ ಥರ. ಖಂಡಿತ ಇದು ಸಿಕ್ಸ್ತ್ ಸೆನ್ಸ್ ಅಲ್ಲವಾ. ಅದಿಕ್ಕೆ ನನಗೆ ಖಾತ್ರಿ ನಮ್ಮ ಮನೆಯಲ್ಲೊಂದು ಶೆರ್ಲಾಕ್ ಹೋಮ್ಸನ ಪ್ರೇತ ಸೇರಿಕೊಂಡಿರಬೇಕು ಅಂತ.

Friday, August 11, 2017

ಹಕ್ಕಿ ಹಾರಿತು

ಎರಡು ತಿಂಗಳು ಪ್ರವಾಸ ಮುಗಿಸಿ ಮನೆಗೆ ಮರಳುವ ಮೊದಲು ಅಕ್ಕನಿಗೆ ಫೋನ್ ಮಾಡಿದೆ. ಬೀಗ ಹಾಕಿದ ಮನೆಯನ್ನು ಆಗಾಗ್ಗೆ ಗಮನಿಸಿಕೊಳ್ಳಲು ತಿಳಿಸಿದ್ದೇನಲ್ಲ! ಜೊತೆಗೆ. ಮನೆಗೆ ಮರಳಿದಾಗ ಕುಡಿಯಲು ನೀರಾದರೂ ಇರಬೇಡವೇ? ಹೀಗಾಗಿ ಮುನ್ಸೂಚನೆ ನೀಡಲು ಕರೆ ಮಾಡಿದೆ.

 'ನಿಮ್ಮ ಮನೆಗೆ ಕಳ್ಳರು ಹೊಕ್ಕಿದ್ದಾರೆ.' ಎಂದಳು. ಮನೆಯಲ್ಲಿ ಬೆಲೆ ಬಾಳುವ ವಸ್ತುಗಳು ಇಲ್ಲದಿದ್ದರೂ ತುಸು ಗಾಭರಿ ಆಯಿತು. 'ಪೋಲೀಸ್ ಗೆ ಹೇಳಿದಿರಾ?' ಎಂದೆ. ನಮ್ಮ ಅನುಪಸ್ಥಿತಿಯಲ್ಲಿ ಮನೆ ಕಾವಲಿನ ಜವಾಬುದಾರಿಯನ್ನು ಹೊರಿಸಿದ್ದೆನಲ್ಲ? ಎನ್ನುವ ದೂರು ನನ್ನ ದನಿಯಲ್ಲಿ ಇತ್ತು. ಉತ್ತರವಾಗಿ 'ರೆಕ್ಕೆ-ಪುಕ್ಕದ ಕಳ್ಳರು ಹೊಕ್ಕು ಗೂಡು ಕಟ್ಟಿದ್ದಾರೆ', ಅಂತ ಅಕ್ಕ ಜೋರಾಗಿ ನಕ್ಕಳು.

ನಾನು ನಗಲಿಲ್ಲ. ಹಕ್ಕಿ ಮನೆ ಹೊಕ್ಕು ಗೂಡು ಕಟ್ಟಿದೆ ಎಂದರೆ ಎರಡು ತಿಂಗಳ ದೂಳು, ಕಸದ ಜೊತೆಗೆ ರೆಕ್ಕೆ, ಹಿಕ್ಕೆಗಳನ್ನೂ ಸಾರಿಸುವ ಕೆಲಸ ಬಿತ್ತು ಅಂತ ಗೊಣಗಿಕೊಂಡೆ. ಬೀಗ ಹಾಕುವ ಮುನ್ನ ಎಲ್ಲ ಕಿಟಕಿ, ಬಾಗಿಲುಗಳನ್ನೂ ಸರಿಯಾಗಿ ಹಾಕಿದ್ದೆನೋ, ಇಲ್ಲವೋ ಅಂತ ಮಡದಿ ನಾಲ್ಕು ಬಾರಿ ಪರಿಶೀಲಿಸಿದ್ದಳಲ್ಲ? ಇನ್ನೆಲ್ಲಿಂದ ಹಕ್ಕಿ ಹೊಕ್ಕಿತೋ?

ಮನೆಗೆ ಬಂದು ಬೀಗ ತೆಗೆದವನಿಗೆ ಅಚ್ಚರಿ ಕಾದಿತ್ತು. ಮನೆಯಲ್ಲಿ ದೂಳು, ಕಸ ಇತ್ತು, ಆದರೆ ರೆಕ್ಕೆ, ಹಿಕ್ಕೆ ಇರಲಿಲ್ಲ. ಹಕ್ಕಿಗಳು ಹಾರಿ ಹೋಗಿರಬೇಕು ಎಂದುಕೊಂಡು ಮಲಗುವ ಕೋಣೆಯತ್ತ ನಡೆದೆ.  ಬಾಗಿಲ ಕಡೆಗೆ ಸಾಗಿದೆನಷ್ಟೇ, ರಿಮೋಟ್ ಅಲಾರಂ ಹೊಡೆದ ಹಾಗೆ ಕೀಚ್, ಕೀಚ್ ಎಂದು ತಲೆ ಚಿಟ್ಟಾಗುವಷ್ಟು ಸದ್ದು ಮಾಡುತ್ತಾ ಎರಡು ಹಕ್ಕಿಗಳು ನನ್ನ ಸುತ್ತಲೂ ಹಾರಾಡಲು ಆರಂಭಿಸಿದವು. ಈ ರೆಕ್ಕೆ-ಪುಕ್ಕದ ಜೋಡಿಯೇ ಅಕ್ಕ ಹೇಳಿದ ಕಳ್ಳರು ಅಂತ ಅರ್ಥವಾಯಿತು.

ಮಲಗುವ ಕೋಣೆಯ ಬಾಗಿಲ ಮುಂಗಟ್ಟಿನ ಮೇಲೆ ಪುಟ್ಟ ಗೂಡು ಕಟ್ಟಿದ್ದುವು.  ಮನೆಯ ಎದುರಿನ ವಿದ್ಯುತ್ ತಂತಿಯ ಮೇಲೆ ನಿತ್ಯವೂ ಈ ಹಕ್ಕಿಗಳು ಬಂದು ಕೂರುವುದನ್ನು ಕಂಡಿದ್ದೆ.  ವ್ಯರ್ಥವಾಗಿ ಮನೆ ಖಾಲಿ ಇಡುವ ಮನುಷ್ಯರ ಸ್ವಾರ್ಥ ಅವಕ್ಕೆ ಅರ್ಥವಾಗಲಿಲ್ಲವೋ ಏನೋ?  ಗವಾಕ್ಷಿಯಿಂದ ಬಂದು ಖಾಲಿ ಇದ್ದ ಮನೆ ತುಂಬಿದ್ದುವು. ಏಷ್ಟು ದಿನಗಳ ಹಿಂದೆ 'ಗೃಹ ಪ್ರವೇಶ' ನಡೆದಿತ್ತೋ ಗೊತ್ತಿಲ್ಲ. ಆದರೆ ಎಲ್ಲಿಯೂ ಒಂದಿಷ್ಟೂ ಹಿಕ್ಕೆ ಇರಲಿಲ್ಲ. ಬಾಡಿಗೆದಾರರಿಗಿಂತ ಪ್ರಜ್ಞಾವಂತ ಪಕ್ಷಿಗಳು, ಮನೆಯನ್ನು ಗಲೀಜು ಮಾಡಿರಲಿಲ್ಲ.  ಗೂಡು ಕಟ್ಟಿ ಬಹಳ ದಿನಗಳಾಗಿರಲಿಲ್ಲ. ಕಿತ್ತು ಬಿಸಾಡಿದರೆ, ಬೇರೆಲ್ಲಿಯಾದರೂ ಹೋಗಿ ನೆಲೆಯಾದಾವು ಎಂದು ಗೂಡಿಗೆ ಕೈ ಹಾಕುವವನಿದ್ದೆ. ಅಷ್ಟರಲ್ಲಿ ಗೂಡಿನೊಳಗಿಂದ ಪುಟ್ಟ, ಗುಲಾಬಿ ಬಣ್ಣದ ಕೊಕ್ಕು ಕಾಣಿಸಿತು. ಮೊಟ್ಟೆ ಮರಿಯಾಗಿತ್ತು. ಗೂಡನ್ನು ಹಾಗೇ ಬಿಟ್ಟೆ. ಗೂಡಿನೊಳಗಿನ ಚಟುವಟಿಕೆಯನ್ನು ನೋಡುವುದು ನಿತ್ಯಕರ್ಮಗಳಲ್ಲಿ ಸೇರಿಕೊಂಡಿತು.

ಕೋಣೆಯ ಸಮೀಪ ಬಂದ ಕೂಡಲೇ ಮರಿಗೆ ಕಾವು ಕೊಡುತ್ತಿದ್ದ ಹಕ್ಕಿ ಸೂರು ಬಿದ್ದ ಹಾಗೆ ಬೆದರಿ ಗಲಾಟೆ ಮಾಡುತ್ತಿತ್ತು. ಅದರ ರಂಪಾಟ ನೋಡಲಾರದೆ ಆದಷ್ಟೂ ಆ ಜಾಗೆಯಿಂದ ದೂರ ಇರುವುದನ್ನ ಕಲಿತುಕೊಂಡೆವು. ರಾತಿ ಮಲಗಲು ಅಷ್ಟೇ ಕೋಣೆಗೆ ಪ್ರವೇಶ ಎನ್ನುವುದು ತೀರ್ಮಾನವಾಯಿತು. ಅದು ಯಾವ ಪಕ್ಷಿ ಅಂತಲೂ  ಗೊತ್ತಿಲ್ಲ, ಕಾವು ಕೊಡುತ್ತಿದ್ದದ್ದು ಗಂಡೋ, ಹೆಣ್ಣೋ ತಿಳಿಯಲಿಲ್ಲ. ಅಂತೂ ಒಂದು ದಿನ ಹಕ್ಕಿಗಳ ಸದ್ದು ಕಡಿಮೆ ಆದಂತೆ ಕಂಡಿತು. ನೋಡಿದರೆ, ಪುಟ್ಟ ಮರಿಗಳು ಗೂಡಿಂದ ಹಾರಿ, ಕಿಟಕಿಗೆ ಮತ್ತೆ ಅಲ್ಲಿಂದ ಮರಳಿ ಗೂಡಿಗೆ ಹಾರುತ್ತಿದ್ದವು. ದೂರದಲ್ಲಿ ತಾಯಿ ಕುಳಿತು ಕಾಯುತ್ತಿತ್ತು. ನಾವು ಯಾರಾದರೂ ಬಳಿ ಸಾರಿದರೆ ಕೂಡಲೇ ಕಿರುಚಾಡಿ ಮಕ್ಕಳನ್ನು ಎಚ್ಚರಿಸುತ್ತಿತ್ತು.

ಪಕ್ಷಿ, ಪ್ರಾಣಿಗಳಲ್ಲಿ ಮಾನವ ಭಾವನೆಗಳನ್ನು ಕಾಣುವ ನಮ್ಮ ಪ್ರವೃತ್ತಿ ಸಹಜವಾದುದೇ. ಹೀಗಾಗಿ ಇದು ಇನ್ನು ಮುಂದೇನು ಮಾಡುತ್ತದೆ ಎಂದು ವೀಕ್ಷಿಸುವುದು ನಮ್ಮ ನಿತ್ಯ ಕರ್ಮ ವಾಯಿತು.

 ಒಂದು ದಿನ ಬೆಳಗ್ಗೆ ಸೂರ್ಯೋದಯವಾದರೂ ಚಿಲಿಪಿಲಿ ಸದ್ದಿಲ್ಲ. ಬಂದು ನೋಡಿದರೆ ತಾಯಿಯೂ ಇಲ್ಲ, ಮಕ್ಕಳೂ ಇಲ್ಲ. ಮರುದಿನವೂ ಸುದ್ದಿ ಇಲ್ಲ. ದಿನವೂ ನಾವು ಕಾದದ್ದೇ ಬಂತು. ನಮ್ಮ ಮನೆಯ 'ಕಳ್ಳ ಬಾಡಿಗೆದಾರರು' ಮರಳಲೇ ಇಲ್ಲ.
 ಇದಾಗಿ ಸುಮಾರು ಆರು ತಿಂಗಳು ಕಳೆದಿರಬಹುದು. ಪೋಸ್ಟ್ ಬಂದಿದೆಯಾ ಎಂದು ಅಂಚೆ ಪೆಟ್ಟಿಗೆ ತೆಗೆದರೆ, ಅಲ್ಲೊಂದು ಗೂಡು. ನಾಲ್ಕು ಮೊಟ್ಟೆಗಳು. ಅಂದಿನಿಂದ ಪೋಸ್ಟ್ ಮನ್‍ ಬರುವ ಹಾದಿ ಕಾಯುವುದು ಇನ್ನೊಂದು ಕೆಲಸ  ಆಯಿತು. ನಾವು ತರಿಸುವ ದಪ್ಪ ಪುಸ್ತಕಗಳನ್ನ ಅಂಚೆಯವ  ಜೋರಾಗಿ ಡಬ್ಬದೊಳಗೆ ತುರುಕಿದರೆ? ಮೊಟ್ಟೆಗಳಿಗೆ ಏಟು ಬಿದ್ದರೆ?

ಈಗ ನಮ್ಮ ಮನೆಯ ಪೋಸ್ಟ್ ಬಾಕ್ಸ್ ಖಾಯಂ ಹಕ್ಕಿ ಮನೆ. ಒಂದು ಹಾರಿ ಹೋಗಿ ಕೆಲವು ದಿನ ಕಳೆಯುವುದರೊಳಗೆ ಇನ್ನೊಂದು ಬಂದು ಮೊಟ್ಟೆ ಇಡುತ್ತದೆ. ಅವು ಒಂದೇ ವಂಶಜರೋ? ಬೇರೆ ಬೇರೆ ಕುಟುಂಬದವೋ? ಗೊತ್ತಿಲ್ಲ.  ಒಟ್ಟಾರೆ ನಮ್ಮ ನೆರೆಯವರಿಗಿಂತಲೂ ಆತ್ಮೀಯವಾಗಿ ಇವೆ ಅನ್ನುವುದಷ್ಟೆ ನಮಗೆ ಗೊತ್ತು. ಅಂಚೆಯವನೂ ಈಗೀಗ ಹೊಸ್ತಿಲಿಗೆ ಪುಸ್ತಕ ಬಿಸಾಡಿ ಹೋಗುತ್ತಾನೆ. ನಮ್ಮ ಬಾಡಿಗೆದಾರರ ಭಯ ಇರಬೇಕು.

Saturday, June 17, 2017

ಹೊದಿಕೆಯನ್ನೂ ತೆರೆಯದ ಪತ್ರಿಕೆ ಮೇಜಿನ ಮೇಲೆ ಇರುವುದು ಓದುವುದು ನಿಂತಿದೆ ಅಂತಲ್ಲ. ಇ-ಓದು ಪತ್ರಿಕೆಗಳಿಗೆ ಈ ಗತಿ ತಂದಿದೆ. ಪತ್ರಿಕೆ ಕೈ ಸೇರುವ ಮುನ್ನವೇ ಸೈಬರ್ಲೋಕದಲ್ಲಿ ಅದನ್ನೋದಿ, ಚರ್ಚಿಸಿ, ಜೀರ್ಣಿಸಿಯೂ ಆಗಿರುವುದರಿಂದ ನಮ್ಮ ಮನೆಯಲ್ಲಿ ಇವೆಲ್ಲವೂ ಹಾಗೇ ಇರುತ್ತವೆ. ಇವನ್ನು ಕಂಡಾಗೆಲ್ಲ ಸಾಯಿಬ್ ಸಿಂಗ್ ನೆನಪಾಗುತ್ತಾನೆ.

ಅವನ ಹೆಸರು ಅದೇ ಇರಬೇಕು. ನೆನಪಾಗುತ್ತಿಲ್ಲ. ನೆನಪಿನಲ್ಲಿ ಉಳಿದಿರುವುದು ಕೆಂಪು ಅಥವಾ ನೀಲಿ ಮಫ್ಲರ್ ಸುತ್ತಿದ ಮುಖ, ಕುಂಟ ನಡೆ, 'ತ' ವೆಲ್ಲ ದವನ್ನಾಗಿಸಿದ ತೊದಲು ನುಡಿ. ನಾವೆಲ್ಲ ಅವನನ್ನು ಮ್ಯಾಗಜೀನ್ ಮ್ಯಾನ್ ಎನ್ನುತ್ತಿದ್ದೆವು.

ಎಲ್ಲ ಪತ್ರಿಕೆಗಳನ್ನೂ ಓದುವ ಹಂಬಲ, ಅವನ್ನು ಕೊಳ್ಳಲಾಗದ ಹತಾಶೆಯೇ ಜೇಬು ತುಂಬಿರುತ್ತಿದ್ದ ಕಾಲ ಅದು. ಕಛೇರಿಯಲ್ಲಿ ನಾವು ಕೆಲವರು ಒಟ್ಟಾಗಿ ಮ್ಯಾಗಜೀನ್ ಕ್ಲಬ್ ನಡೆಸುತ್ತಿದ್ದೆವು. ಎಲ್ಲರ ಚಂದಾವೂ ಒಟ್ಟಾಗಿ ಹತ್ತಾರು ದುಬಾರಿ ಬೆಲೆಯ ಪತ್ರಿಕೆಗಳನ್ನು ಕೊಳ್ಳುತ್ತಿದ್ದೆವು. ದಿನಕ್ಕೆ ಎರಡು ಮ್ಯಾಗಜೀನ್ ಕೊಂಡೊಯ್ದು ಓದಿ ವಾಪಸು ತರಬೇಕೆನ್ನುವುದು ನಿಯಮ. ನಾಲ್ಕು ಕಾಫಿಗೆ ಕೊಡುವ ಕಾಸಿನಲ್ಲಿ ಇಷ್ಟೊಂದು ಓದು ಸಿಗುವದು ಎಲ್ಲರಿಗೂ ಬೇಕಿತ್ತು. ಕೆಲಸಕ್ಕೆ ಆಗ ತಾನೇ ಸೇರಿದ್ದ ನಾನು ಕ್ಲಬ್ಬಿನ ಕಿರಿಯ ಸದಸ್ಯ.
ಕ್ಲಬ್ಬುನ ನಿರ್ವಾಹಕ ಸಾಯಿಬ್ ಸಿಂಗ್.

ಬಹುಶಃ ಅಷ್ಟಾವಕ್ರನ ರೂಪವನ್ನು ಸಾಯಿಬ್ ಸಿಂಗನನ್ನೇ ನೋಡಿ ವರ್ಣಿಸಿದ್ದಿರಬೇಕು. ಅಚ್ಚಗಪ್ಪು ಬಣ್ಣ, ಜೋಲು ತುಟಿಗಳು, ಅಡ್ಡಾದಿಡ್ಡಿ ಬೆಳೆದ ಹಲ್ಲುಗಳು, ಅಸ್ಪಷ್ಟ ಮಾತುಗಳು, ನಕ್ಕರೂ ಕ್ರೂರವಾಗಿ ಕಾಣುತ್ತಿದ್ದ ಚಹರೆ. ಜಾಠರ ಕುಲದವನಾಗಿದ್ದರೂ ಬಲು ಕುಳ್ಳು. ಕುಂಟು ನಡೆ ಬೇರೆ. ಮಕ್ಕಳನ್ನು ಬೆದರಿಸಿಡಲು ಅವನನ್ನು ತೋರಿಸಿದರೆ ಸಾಕಿತ್ತು.

ನಮ್ಮಲ್ಲಿ ಕೆಲವರು ಅವನನ್ನು ಡೈನೋಸಾರು ಎಂದೂ ಎನ್ನುತ್ತಿದ್ದೆವು. ಏಕೆಂದರೆ ನಾನೂರು ಜನರಿದ್ದ ಸಂಸ್ಥೆ ಯಲ್ಲಿ ಅತಿ ವಯಸ್ಸಾದವನೆಂದರೆ ಅವನೇ! ಅವನ ವಯಸ್ಸೆಷ್ಟು ಅಂತ ಸ್ವತಃ ಅವನಿಗೇ ತಿಳಿದಿರಲಿಲ್ಲ. ಸಂಸ್ಥೆಯಲ್ಲು ದಾಖಲೆಗಳಿರಲಿಲ್ಲ. ಸಂಸ್ಥೆ ಸ್ಥಾಪನೆಯಾದ ಅಲ್ಪ ಕಾಲದಲ್ಲೇ ಯಾರೋ ಕರುಣೆಯಿಂದ ಕೆಲಸ ನೀಡಿದ್ದರು. ಸೇರಿದ ಉದ್ಯೋಗದಲ್ಲೇ ಮೇಲೂ ಏರದೆ, ಕೆಳಗೂ ಇಳಿಯದೆ ಇದ್ದ.

ಸ್ವತಃ ಎರಡಕ್ಷರ ಓದಲು ಬಾರದ ಈ ಜೀವ ನಮ್ಮೆಲ್ಲರಿಗೂ ಓದಲು ಸಾಮಗ್ರಿಯನ್ನು ಬಡಿಸುತ್ತಿತ್ತೆಂದರೆ ಎಂತಹ ವಿಪರ್ಯಾಸ. ವಯಸ್ಸಾಗಿದ್ದರಿಂದಲೂ, ಓದು-ಬರೆಹ ಬಾರದ್ದರಿಂದಲೂ ಅವನಿಗೆ ತಿಂಡಿ ತಿನಿಸು ತರುವ, ಮ್ಯಾಗಜೀನ್ ಕ್ಲಬ್ಬಿನ ಪುಸ್ತಕಗಳನ್ನು ಹಂಚುವ ಕೆಲಸವಷ್ಟೆ ಹಚ್ಚಿದ್ದರು.  ಕಾರ್ಪೊರೇಟು ಜಗತ್ತಿನಲ್ಲಿ ಇಂತಹ ವಿಚಿತ್ರಗಳು ಸಿಗಲಿಕ್ಕಿಲ್ಲ.

ಈ ಡೈನೊಸಾರು ಜೀವಿ ತನಗೊಪ್ಪಿಸಿದ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿದ್ದ ನೀಯತ್ತು ಕಂಡರೆ ಅಚ್ಚರಿಯಾಗುತ್ತಿತ್ತು. ಒಬ್ಬರಿಗೆ ಒಮ್ಮೆಗೆ ಎರಡೇ ಮ್ಯಾಗಜೀನು. ಜಪ್ಪಯ್ಯ ಎಂದರೂ ಇನ್ನೊಂದು ಹೆಚ್ಚಿಗೆ ಕೊಡುತ್ತಿರಲಿಲ್ಲ. ಎರಡು ದಿನ ಕಳೆದ ಕೂಡಲೆ ತಪ್ಪದೆ ಹಾಜರು. 'ಸಾಬ್ ಕಿತಾಬ್' ಎನ್ನುತ್ತಿದ್ದ. ಅಯ್ಯೋ ತರಲು ಮರೆತೆ ಎಂದರೆ ತಲೆ ಕೊಡವಿ ಹೊರಟು ಬಿಡುತ್ತಿದ್ದ. ಮರು ದಿನ ಮತ್ತೆ ಹಾಜರು. ತಂದು ಕೊಡುವವರೆಗೂ ಮತ್ತೊಂದು ಪತ್ರಿಕೆ ಕೊಡುತ್ತಿರಲಿಲ್ಲ. ಮುಂಜಾನೆ ಬಂದು ಎದುರು ನಿಲ್ಲುವುದನ್ನು ತಪ್ಪಿಸುತ್ತಿರಲಿಲ್ಲ.

ಯಾರ್ಯಾರಿಗೆ ಯಾವ್ಯಾವ ಮ್ಯಾಗಜೀನು ಇಷ್ಟ ಎನ್ನುವುದರ ಡಾಟಾದಲ್ಕು ಮಾತ್ರ ಪಕ್ಕ. ಮ್ಯಾಗಜೀನು ಹಿಂದಿರುಗಿಲ್ಲವಾದರೆ ಆ ಮೆಚ್ಚಿನ ಪತ್ರಿಕೆಯ ಹೊಸ ಸಂಚಿಕೆ ತಂದು ತೋರಿಸಿ ಪುಸಲಾಯಿಸುತ್ತಿದ್ದ. ಅತಿ ಕಿರಿಯವನು ಅಂತಲೋ, ಡೆಬೊನೇರ್, ಕಾಸ್ಮೊಪಾಲಿಟನ್ ನಂತಹ ಬೇಡಿಕೆ ಹೆಚ್ಚಿದ್ದ ಪತ್ರಿಕೆಗಳ ಬದಲಿಗೆ ಮಿರರ್, ಕ್ಯಾರಾವಾನ್, ಔಟ್ಲುಕ್ ಗಳನ್ನು ಓದುತ್ತಿದ್ದುದಕ್ಕೋ, ಅತಿ ಕಿರಿಯವನು ಎನ್ನುವ ಪ್ರೀತಿಗೋ ನನಗಿಷ್ಟವಾದ ಪತ್ರಿಕೆ ಬಂದ ಕೂಡಲೆ ಸೂಚನೆ ಕೊಟ್ಟು ಹೋಗುತ್ತಿದ್ದ. ಮೊದಲು ಓದಲು ನನಗೇ ಸಿಗುವಂತೆ ನೋಡಿಕೊಳ್ಳುತ್ತಿದ್ದ.

ಅವನ ಮಕ್ಕಳು ಬೆಳೆದು ಮೊಮ್ಮಕ್ಕಳೂ ಆಗಿದ್ದರೂ ಇವನ ಕಾಯಕಕ್ಕೆ ಕೊನೆ ಬಂದಿರಲಿಲ್ಲ. ಮನೆ ರಾಜಕೀಯದಲ್ಲಿ ಒಬ್ಬಂಟಿಯಾಗಿದ್ದ ಕಛೇರಿಯಲ್ಲಿಯೂ ಅವನ ಹುಟ್ಟಿದ ದಿನದ ದಾಖಲೆಗಳು ಇಲ್ಲದ ಕಾರಣ ನಿವೃತ್ತಿ ಮಾಡುವುದು ಹೇಗೆಂದು ಜಿಜ್ಞಾಸೆ ನಡೆದಿತ್ತು. ಏಳು ವರ್ಷ ನಮ್ಮ ಒಡನಾಟ. ಕೊನೆಗೆ ನಾನು ಕರ್ನಾಟಕಕ್ಕೆ ಮರಳುವ ದಿನಗಳು ಸನಿಹವಾದಾಗ "ಅಬ್ ಯೇ ಕೌನ್ ಪಡೇಗಾ ಸಾಬ್" ಎಂದು ನಿರಾಸೆಯಲ್ಲಿ ತೊದಲಿದ್ದ. ಅವನ ಹೊಣೆಯನ್ನು ಪೂರ್ಣವಾಗಿ ನಿರ್ವಹಿಸಲಾಗದ್ದರಿಂದಲೋ, ನನ್ನ ಮೇಲಿನ ಪ್ರೀತಿಯಿಂದಲೋ ಗೊತ್ತಿಲ್ಲ.

ಅಷ್ಟು ದೀರ್ಘ ಕಾಲದಲ್ಲಿ ನಮ್ಮ ನಡುವೆ ನಡೆದ ಸಂಭಾಷಣೆ ಬಹುಶಃ ಈ ಪೋಸ್ಟಿಗಿಂತಲೂ ಪುಟ್ಟದಾದೀತು. ಆದರೆ ಈ ಪ್ಲಾಸ್ಟಿಕ್ ಕವರಿನ ಹಾಗೆಯೇ ಸ್ವತಃ ಅನಕ್ಷರಸ್ಥ ನಾದರೂಬ ಅವರವರಿಗಿಷ್ಟವಾದ ಜ್ಞಾನವನ್ನು ಕೊಂಡೊಯ್ಯುತ್ತಿದ್ದ ಸಾಯಿಬ್ ಸಿಂಗ್.

ನಾನು ಬಂದ ಹತ್ತು ವರ್ಷಗಳ ನಂತರ ಅವನಿಗೆ ಕೊನೆಗೂ ನಲವತ್ತೊಂಬತ್ತು ವರ್ಷಗಳ ಸೇವೆಯಾಯಿತಾದ್ದರಿಂದ ವಯಸ್ಸಾಯಿತೆಂದು ಲೆಕ್ಕ ಹಾಕಿ ನಿವೃತ್ತಿ ಮಾಡಿದರಂತೆ!

Monday, November 28, 2016

ಅರೆ ಘಂಟೆಯ ಕುರುಡು

ದಾರಿಯಲ್ಲಿ ಯಾರಾದರೂ ದೃಷ್ಟಿಹೀನರು ಬಂದರೆ ಬಹುಶಃ ಹಾಗೇ ಕನಿಕರದಿಂದ ನೋಡಿ ದಾರಿ ಬಿಟ್ಟು ನಿಲ್ಲುತ್ತಿದ್ದೆ. ಜಗತ್ತನ್ನು ಕಾಣಲಾಗದವರ ಸಹವಾಸ ನನಗೆ ಇಲ್ಲವೆಂದೇನಲ್ಲ. ನನಗೆ ಸಂಗೀತ ಹೇಳಿಕೊಡಲು ಪ್ರಯತ್ನಿಸಿದ ಮಾಸ್ಟರಿಗೆ ಕಣ್ಣು ಕಾಣುತ್ತಿರಲಿಲ್ಲ. ಪಂಚಾಕ್ಷರಿ ಗವಾಯಿಗಳ ಹಾಗೆ ಕಂಠ ಮಾತ್ರ ಮಧುರವಾಗಿತ್ತು. ಹಾಡುವುದಿರಲಿ, ಪಿಟೀಲನ್ನು ಲೀಲಾಜಾಲವಾಗಿ ಶ್ರುತಿ ಹಿಡಿದು ಅವರು ನುಡಿಸುವಾಗ ನಾನು ಕಣ್ಣು, ಬಾಯಿ ಬಿಟ್ಟು ಕೂರುತ್ತಿದ್ದೆ. ಏಕೆಂದರೆ ಕಣ್ಣು ಇದ್ದರೂ ನನಗೆ ಅವರಂತೆ ಕೀ ಬೋರ್ಡಿನಲ್ಲಿ ಸಂಗೀತ ನುಡಿಸಲಾಗುತ್ತಿರಲಿಲ್ಲ. ಕೀ ಗಳನ್ನು ಹುಡುಕಿ, ಹುಡುಕಿ ಒತ್ತುತ್ತಿದ್ದೆ.

ಮೊನ್ನೆ ಕಣ್ಣು ಪರೀಕ್ಷೆಗೆಂದು ಆಸ್ಪತ್ರೆಗೆ ಹೋದಾಗಲೇ ಅದೆಂತಹ ಅದ್ಭುತ ಅನ್ನುವುದು ಗೊತ್ತಾಗಿದ್ದು. ರಾತ್ರಿ ಪ್ರಖರವಾದ ಬೆಳಕಿಗೆದುರಾದಾಗ ಕಣ್ಣು ಸ್ವಲ್ಪ ಹೆಚ್ಚು ಕಾಲವೇ ಕತ್ತಲೆಗಟ್ಟಿಕೊಳ್ಳುತ್ತಿತ್ತು. ವಯೋಸಹಜವಾಗಿ ಪೊರೆ ಕಟ್ಟುತ್ತಿರಬಹುದು ಅಂತ ಪರೀಕ್ಷೆಗೆ ಹೋದೆ. ಅ, ಆ, ಇ. ಈ ಓದಿಸಿದ ಮೇಲೆ ಕಣ್ಣಿಗೆ ಏನೋ ದ್ರವ ಹಾಕಿ ಕಣ್ಣು ಮುಚ್ಚಿಕೊಂಡಿರಿ ಅಂದಳು ನರ್ಸಮ್ಮ. ಎಷ್ಟು ಹೊತ್ತು ಎಂದೆ. ನಲವತ್ತೈದು ನಿಮಿಷವಾದರೂ ಬೇಕಾಗುತ್ತದೆ ಎಂದಳು.

ಕಾಯುವ ಕೆಲಸವೇ ಬೇಜಾರು. ಮದುವೆಯಲ್ಲೋ, ದೇವಸ್ಥಾನದಲ್ಲೋ, ಬಿಲ್ಲು ಕಟ್ಟುವ ಕ್ಯೂನಲ್ಲೋ (ಈಗೀಗ ಎಟಿಎಂ ಮುಂದೆಯೂ)  ಕಾಯಬೇಕಾದ ಸಂದರ್ಭ ಬಂದಾಗ ಸ್ಮಾರ್ಟ್ ಫೋನ್ ಹಿಡಿದು ಗೆಳೆಯರ ಜೊತೆ ಚಾಟಿಸುತ್ತೇನೆ. ಅಥವಾ ಅದರಲ್ಲಿರುವ ಯಾವುದಾದರೂ ಪುಸಗತಕ ಓದುತ್ತಿರುತ್ತೇನೆ. ಇದೆಲ್ಲ ತೋರಿಕೆ ಅಂತಾಳೆ ನನ್ನವಳು. ಆದರೂ ಸ್ಮಾರ್ಟ್ ಫೋನ್ ಇದ್ದರೆ ಟೈಂ ಪಾಸ್ ಸುಲಭ ಅಂತ ನನ್ನ ಅನಿಸಿಕೆ.

ಇದು ಸಾರ್ವಕಾಲಿಕ ಸತ್ಯವಲ್ಲ ಅಂತ ಕಣ್ಣಾಸ್ಪತ್ರೆಯ ಅನುಭವ ಕಣ್ತೆರೆಸಿತು. ಕಣ್ಣಿಗೆ ಹಾಕಿದ ದ್ರವ ಮೂಗಿನಿಂದ ಗಂಟಲಿಗೆ ಇಳಿದು ಕಿರಿಕಿರಿಯಾದಾಗ ಸುಮ್ಮನಿರಲಾಗಲಿಲ್ಲ. ಕಣ್ಣು ಮುಚ್ಚಿದ ಮಾತ್ರಕ್ಕೆ ನಿದ್ರೆ ಬಂತೆಂದೇನಾಗುವುದಿಲ್ಲವಷ್ಟೆ. ಚಡಪಡಿಸಿದೆ. ಹಾಗೇ ಚಾಟಿಸಲು ಪ್ರಯತ್ನಿಸಿದೆ. ಸ್ಮಾರ್ಟ್ ಫೋನ್ ಬದಲಿಗೆ ಹಳೆಯ ಕೀ ಫೋನು ಇದ್ದಿದ್ದರೆ ಯಾವ ಕೀ ಎಲ್ಲಿದೆ ಎಂದು ತಡಕಾಡಬಹುದಿತ್ತು. ಲಲನೆಯ ಕೆನ್ನೆಯಂತೆ ನಯವಾದ ಸ್ಮಾರ್ಟ್ ಫೋನಿನಲ್ಲಿ ಯಾವ ಅಕ್ಷರ ಎಲ್ಲಿದೆ ಎಂದು ತಿಳಿಯುವುದೂ ಕಷ್ಟ.

ಕೀ ಒತ್ತಿದಾಗ ಶಬ್ದ ಮಾಡುತ್ತದೆ ನಿಜ. ಆದರೆ ಎಲ್ಲ ಕೀಗಳ ಶಬ್ದವೂ ನನ್ನ ಸಂಗೀತದಂತೆಯೇ ಒಂದೇ ಶ್ರುತಿ. ಸದ್ದು. ಹೇಗೆ ಉಪಯೋಗಕ್ಕೆ ಬಂದೀತು? ಆಗಲೇ ನನಗೆ ನಮ್ಮ ಮೇಸ್ಟರ ಅದ್ಭುತ ಸಿದ್ಧಿಯ ಅರಿವಾಗಿದ್ದು. ಕೀ ಬೋರ್ಡಿನಲ್ಲಿ ಕೀಗಳಿರುವ ಸ್ಥಾನವನ್ನು ನೆನಪಿಟ್ಟುಕೊಂಡು ಶ್ರುತಿ ತಪ್ಪದಂತೆ ನುಡಿಸುವುದು ಸುಲಭವಲ್ಲ.

ಅರ್ಧ ಗಂಟೆ ಕತ್ತಲಲ್ಲಿ ಬದುಕುವುದೇ ಅಸಹನೀಯವೆನ್ನಿಸಿದಾಗ ಕತ್ತಲೇ ಬದುಕಾದವರ ಕಥೆ ಹೇಗಿದ್ದಿರಬೇಕು? ಕಣ್ಣು ಮುಚ್ಚಿಕೊಂಡು ಹೀಗೆಲ್ಲ ತಲೆ ಕೆಡಿಸಿಕೊಳ್ಳುವಾಗ ಮೇಸ್ಟರು ಒಮ್ಮೆ ಮಾಡಿದ್ದ ವಿನಂತಿ ನೆನಪಿಗೆ ಬಂತು. ಅವರ ಮನೆಯಲ್ಲಿ ಒಂದು ವರ್ಲ್ಡ್ ಸ್ಪೇಸ್ (ರೇಡಿಯೊ) ಇತ್ತು. ಉಪಗ್ರಹಗಳ ಮೂಲಕ ಸಂಗೀತ ಪ್ರಸಾರ ಮಾಡುವ ಚಾನೆಲ್ಗಳನ್ನು ಈ ರೇಡಿಯೋ ಮೂಲಕ ಕೇಳಬಹುದಿತ್ತು. ದಿನದ ಇಪ್ಪತ್ತನಾಲ್ಕು ಗಂಟೆಯೂ ಅದು ಲಭ್ಯವಿತ್ತು.

ಮೇಸ್ಟರಿಗೆ ಬಲು ಅನುಕೂಲವಾಗಿತ್ತು. ರಿಮೋಟಿನ ಎರಡು ಬಟನುಗಳನ್ನು ಬಳಸಿದರೆ ರೇಡಿಯೋ ಕೇಳಬಹುದಿತ್ತು. ಬೇಕೆಂದ ಚಾನೆಲ್ ಹುಡುಕಬಹುದಿತ್ತು. ಆದರೆ ಅದು ತುಸು ದುಬಾರಿಯಾಗಿತ್ತು ಅನ್ನುವುದೂ ನಿಜ. ತಿಂಗಳ ಚಂದಾ ಜೊತೆಗೆ ಉಪಗ್ರಹ ಸಂಪರ್ಕಕ್ಕೆ ದುಬಾರಿ ಆಂಟೆನಾ ಬೇಕಿತ್ತು.

ಮೇಸ್ಟರು ಅದನ್ನು ಕೊಂಡು ಏಳೆಂಟು ತಿಂಗಳಾಗಿರಬಹುದು. ತಂತ್ರಜ್ಞಾನ ಬದಲಾಯಿತು. ಎಫ್ ಎಮ್ ರೇಡಿಯೋ ನಿಲಯಗಳು ಊರಿಗೆ ಹತ್ತರಂತೆ ತಲೆಯೆತ್ತಿದುವು. ಅದಕ್ಕೆ ತಕ್ಕಂತೆ ಪುಟ್ಟ, ಅಗ್ಗದ ರೇಡಿಯೊ ಬಂತು. ಇಂಟರ್ನೆಟ್ ಎಲ್ಲೆಡೆ ತನ್ನ ಜಾಲ ಹರಡಿತು. ವರ್ಲ್ಡ್ ಸ್ಪೇಸ್ ಗೆ ಚಂದಾ ಕೊಡುವವರು ಕಡಿಮೆಯಾದರು. ಕಂಪೆನಿ ಮುಚ್ಚಿತು.

ತೊಂದರೆಯಾಗಿದ್ದು ಮೇಸ್ಟರಿಗೆ. ಎಫ್ ಎಮ್ ನಲ್ಲಿ ಅವರಿಗೆ ಹಿತವಾಗಿದ್ದ ಕರ್ನಾಟಕ ಸಂಗೀತ ಆಗೊಮ್ಮೆ ಈಗೊಮ್ಮೆ ಪ್ರಸಾರವಾಗುತ್ತಿತ್ತೇ ಹೊರತು ವರ್ಲ್ಡ ಸ್ಪೇಸ್ ನಲ್ಲಿ ಆಗುತ್ತಿದ್ದಂತೆ ದಿನಪೂರ್ತಿಯಲ್ಲ. ಟೀವಿ ಅವರಿಗೆ ಒಗ್ಗದ ಮನರಂಜನೆ. ಹೀಗಾಗಿ ನಿಮಗೆ ಗೊತ್ತಿರುವವರು ಯಾರಾದರೂ ಇದ್ದರೆ ಅವರಿಗೆ ಹೇಳಿ ಆ ಕಂಪೆನಿ ಮುಚ್ಚದಂತೆ ನೋಡಿ ಎನ್ನುವುದು ಅವರ ವಿನಂತಿ.

ನಾನೂ ನನ್ನ ಟೆಕ್ ಜ಼್ಾನದ ಸಲಹೆಗಳನ್ನು ಕೊಟ್ಟಿದ್ದೆ. ಇಂಟರ್ನೆಟ್ ರೇಡಿಯೊ ಬಳಸಿ. ಐ-ಪಾಡ್ ತೆಗೆದುಕೊಳ್ಳಿ ಅಂತೆಲ್ಲ. ಅವೆಲ್ಲ ಆಗಲ್ ಬಿಡಿ ಎಂದು ಹೇಳಿಬಿಟ್ಟಿದ್ದರು.

ಯಾಕೆ ಅಂತ ಅರ್ಥವಾಗಿದ್ದು ಕಣ್ಣು ಮುಚ್ಚಿ ಕುಳಿತುಕೊಳ್ಳಬೇಕಾದಾಗ. ಸ್ಮಾರ್ಟ್ ಫೋನ್ ಅಸ್ಭುತ ಸಾಧನವೇ ಆಗಿದ್ದರೂ ಅದನ್ನು ಬಳಸಲು ಬೇರೊಬ್ಬರ ನೆರವು ಬೇಕಿತ್ತು. ಬಹುಶಃ ಸ್ವಾವಲಂಬನೆಯಿಂದ ಪರಾವಕಂಬನೆಗೆ ಮರಳಬೇಕಾಗಬಹುದು ಎಂದು ಅವರು ಹೊಸ ತಂತ್ರಜ್ಞಾನವನ್ನು ನಿರಾಕರಿಸಿದರೆ?

ಏನೇ ಇರಲಿ. ಜಾಗತೀಕರಣ ತಂದ ಸವಲತ್ತುಗಳು ಇಂತಹ ಎಷ್ಟು ಜೀವಗಳ ಖುಷಿಗೆ ಅಡ್ಡಿಯಾಗಿವೆಯೋ ಯಾರಿಗೆ ಗೊತ್ತು? ಎಲ್ಲವೂ ಡಿಜಿಟಲೀಕರಣಗೊಳ್ಳಲಿ ಎನ್ನುವಾಗ ನಮ್ಮ ಮೇಸ್ಟರಂತವರನ್ನು ನಾವು ನೆನಪಿಸಿಕೊಳ್ಳುವುದು ಒಳ್ಳೆಯದು.

Friday, November 11, 2016

ಅಪಮೌಲ್ಯದ ದಿನ

ಮೊನ್ನೆ ಸಂಜೆ ಚಹಾ ಕುಡಿಯುತ್ತ ಸುದ್ದಿ ಸವಿಯುತ್ತಿದ್ದಾಗ ದಿಢೀರನೆ 500 ಹಾಗೂ 1000 ರೂಪಾಯಿ ನೋಟುಗಳ ಅಪಮೌಲ್ಯದ ಸುದ್ದಿ ಚಹಾಗಿಂತಲೂ ಚುರುಕಾಗಿ ನಿದ್ರೆಯನ್ನೋಡಿಸಿತು. ಇನ್ನು ಮುಂದಿನ ಎರಡು ದಿನಗಳ ವ್ಯವಹಾರಗಳು ಹೇಗೆ ನಡೆಸುವುದು ಎನ್ನುವ ಚಿಂತೆ ಮೊದಲು ಬಂತು.
ತಕ್ಷಣ ಮಡದಿಗೆ ಕೇಳಿದೆ. "ನಿನ್ನ ಪರ್ಸಿನಲ್ಲಿ ಇರೋ ದುಡ್ಡೆಲ್ಲ ತೆಗೆದಿಡು."

ಈ ಪ್ರಶ್ನೆ ಕೇಳುವುದಕ್ಕೆ ಕಾರಣವಿದೆ.  ವ್ಯಾಪಾರಕ್ಕೆ ಇಬ್ಬರೂ ಒಟ್ಟಿಗೆ ಹೋಗುವುದು ಸಾಮಾನ್ಯ. ಆಗೆಲ್ಲ ಬಿಲ್ ಪಾವತಿಯ ಹೊಣೆ ನನ್ನದೇ ಆಗಿರುತ್ತೆ. ಆದರೂ ಕೆಲವೊಮ್ಮೆ ಅವಳು ತವರಿಗೆ ಹೋದಾಗಲೋ, ನಾನು ಪ್ರವಾಸ ಹೋದಾಗಲೋ, ಅಥವಾ ಅವಳೇ ಗೆಳತಿ/ನಾದಿನಿಯರ ಜೊತೆ ಷಾಪಿಂಗ್ ಹೋದಾಗಲೋ ಒಂದಿಷ್ಟು ಹಣ ತೆಗೆದುಕೊಂಡು ಹೋಗುವುದು ವಾಡಿಕೆ. ವ್ಯಾಪಾರ ಮುಗಿಸಿ ಬಂದ ಮೇಲೆ ಖರ್ಚೆಷ್ಟಾಯಿತು ಎಂದು ನಾನು ಕೇಳುವುದಾಗಲಿ, ಅವಳು ಒಪ್ಪಿಸುವುದಾಗಲಿ ವಾಡಿಕೆಯಲ್ಲ. ಹಾಗೆ ಏನಾದರೂ ಉಳಿದಿದ್ದರೆ ಅದು ಅವಳ ಪರ್ಸಿನಲ್ಲಿಯೇ ಇರುತ್ತದೆ. ಹೀಗೆ ಎಷ್ಟೋ ಬಾರಿ ಮನೆಯಲ್ಲಿ ಯಾವ್ಯಾವುದೋ ಪರ್ಸಿನಲ್ಲಿ ಅಷ್ಟಿಷ್ಟು ದುಡ್ಡು ಸಿಗುವುದುಂಟು. ಇದೊಂದು ರೀತಿಯಲ್ಲಿ ನಮ್ಮ ಮನೆಯಲ್ಲಿನ ಕಾಳಧನ. ಆದರೆ ಬಲು ಉಪಯುಕ್ತ ಧನ. ಆಪತ್ಕಾಲಕ್ಕೆ ಒದಗುವಂಥದ್ದು.

"ಒಂದೆರಡು ಸಾವಿರ  ಇರಬಹುದು", ಎಂದಳು. ಹಾಗಿದ್ದರೆ ಪರವಾಗಿಲ್ಲ. ಒಂದು ವಾರ ಚಿಂತೆಯಿಲ್ಲದೆ ಕಳೆಯಬಹುದು ಎಂದು ಕೊಂಡೆ. ತಿಂಗಳ ಮೊದಲ ವಾರದಲ್ಲಿಯೇ ಪೇಪರು, ವಿದ್ಯುತ್ ಬಿಲ್ಲು ಮುಂತಾದ ನಗದು ವ್ಯವಹಾರಗಳಿಗೆ ಅಂತ ಹತ್ತಿಪ್ಪತ್ತು ಸಾವಿರ ತಂದಿಡುವುದುಂಟು. ಈ ತಿಂಗಳು ದೂರದೂರಿನಿಂದ ಬರುವ ಮಗನ ಟಿಕೆಟ್ಟು ಖರ್ಚು, ಮದುವೆ ಸೀಸನ್ನಿನ ಖರ್ಚು ಅಂತ ಸ್ವಲ್ಪ ಜಾಸ್ತಿಯೇ ತಂದಿದ್ದೆ. ಎಲ್ಲವನ್ನೂ ಲೆಕ್ಕ ಹಾಕಿದಾಗ, ಮಡದಿಯ ಪರ್ಸಿನಲ್ಲಿ ಒಂದು ನೂರು ನೋಟು, ನನ್ನ ಬಳಿ ಎರಡು ನೂರು ನೋಟುಗಳ ಹೊರತಾಗಿ ಉಳಿದವೆಲ್ಲವೂ 500, 1000ದ ನೋಟುಗಳೇ ಉಳಿದಿದ್ದವು. ಒಟ್ಟು ಹದಿನಾರು ಸಾವಿರ ಇತ್ತು. ಹೇಗೋ ಮೂರು ದಿನ ಕಳೆದ ಮೇಲೆ ಬ್ಯಾಂಕಿನಲ್ಲಿ ಕಟ್ಟಿ ಬಿಡಬಹುದು. ನಾಳೆ, ನಾಳಿದ್ದಿಗೆ ಹಾಲು, ತರಕಾರಿ ಖರ್ಚಾದರೆ ಸಾಕಲ್ಲ ಎಂದು ಲೆಕ್ಕ ಹಾಕಿದೆ.

ಬೆಳಗ್ಗೆ ಕೈಯಲ್ಲಿದ್ದ ನೂರು ರೂಪಾಯಿ ಹಿಡಿದು ಹಾಲು ತರಲು ಹೊರಟೆ. ಒಂದು ಲೀಟರು ಹಾಲು, ಅರ್ಧ ಕಿಲೋ ಬೀನ್ಸು, ಅರ್ಧ ಕ್ಯಾರಟ್ ಗೆ ಅದು ಸಾಕಾಯಿತು. ಕೊತ್ತಂಬರಿ ಸೊಪ್ಪಿಗೆ ಚಿಲ್ಲರೆ ಇಲ್ಲ ಅಂತ ವಾಪಸು ಬಂದೆ. ಟೀ ಕುಡಿಯುವಾಗ ಹೆಂಡತಿಯ "ರೀ" ಕೇಳಿಸಿತು. ಅಂದರೆ ಮರಳಿ ಅಂಗಡಿಗೆ ಹೋಗಿ ಅಂತಲೇ. ಏನು ಎಂದೆ. ತೊಗರಿ ಬೇಳೆ ಮುಗಿದಿದೆ. ಮಂಗಳ್ ಸ್ಟೋರಿಗೆ ಹೋಗಿ  ಎರಡು ಕೇಜಿ ತೊಗೊಂಡು ಬನ್ನಿ ಅಂದಳು.

ಕೇಜಿ ಬೇಳೆಗೆ 140 ರೂಪಾಯಿ. ನನ್ನ ಬಳಿ ಇರುವುದು ಕೇವಲ ಎರಡು ನೂರು. "ಆಗಲ್ಲ. ಈವತ್ತಿಗೆ ಅರ್ಧ ಕೇಜಿ ತರುತ್ತೀನಿ. ನಾಳೆ, ನಾಡಿದ್ದು ಎಟಿಎಮ್ಮೋ, ಬ್ಯಾಂಕೋ ದುಡ್ಡು ಕೊಟ್ಟಾಗ ಬೇರೆ ತರೋಣ," ಅಂತ ಅಂಗಡಿಗೆ ಹೋದೆ. ಅಲ್ಲಿ ರಾಜಕುಮಾರನನ್ನ (ಮಂಗಳ ಸ್ಟೋರಿನ ರಾಜಾಸ್ತಾನಿ ಮಾಲೀಕ) ಹತ್ತಿರ ಐಷಾರಾಮ ಮಾತನಾಡುತ್ತ ಅರ್ಧ ಕಿಲೊ ಬೇಳೆ ಕೊಡು. ನಾಳೆ ಇನ್ನೆರಡು ಕಿಲೊ ತೊಗೊಳ್ತೀನಿ ಎಂದೆ. "ಅಯ್ಯೋ ಅಂಕಲ್. ದುಡ್ಡಿಗೆ ಯಾಕೆ ಯೋಚನೆ ಮಾಡ್ತೀರಾ? ತೊಗೊಳ್ಳಿ. ಲೆಕ್ಕ ಬರೆದುಕೊಳ್ಳುತ್ತೇನೆ. ಆಮೇಲೆ ಕೊಡಿ." ಎಂದ. ಐದು ದಶಕಗಳ ಹಿಂದೆ ಬೇಡ ಎಂದು ಮರೆತು ಬಿಟ್ಟಿದ್ದ ಅಭ್ಯಾಸವನ್ನು ಈ ಮಾತು ನೆನಪಿಸಿತು.

ಐದು ದಶಕಗಳ ಹಿಂದೆ ನಾನು ಶಾಲೆಯಲ್ಲಿ ಓದುತ್ತಿದ್ದೆ. ಆಗ ರೇಶನ್ ಯುಗ. ದಿನಸಿಯನ್ನು ಕಾಗದದಲ್ಲಿ ಪೊಟ್ಟಣ ಕಟ್ಟಿ ತರುತ್ತಿದ್ದ ಕಾಲ. ಊರಿನಲ್ಲಿ ನಮ್ಮ ಮನೆಯ ಸಾಲಿನ ಕೊನೆಯಲ್ಲಿದ್ದ ಮೂಲೆ ಅಂಗಡಿ ರಾಜಪ್ಪನ ಬಳಿ ಅಮ್ಮ ತಿಂಗಳ ಲೆಕ್ಕ ಇಟ್ಟಿದ್ದಳು. ಕಾಸು ಕೊಡದೆಯೇ ಸಾಮಾನು ತರುತ್ತಿದ್ದೆವು. ತಿಂಗಳ ಮೊದಲ ವಾರದಲ್ಲಿ ಅಪ್ಪನಿಗೆ ಸಂಬಳ ಬಂದಾಗ ಅದನ್ನು ಹಿಂತಿರುಗಿಸುವುದು ಪರಿಪಾಠ. ಆ ಕಾಲದಲ್ಲಿ ಸಾಲ ಪಡೆದದ್ದನ್ನು ಕಾಲಕ್ಕೆ ಸರಿಯಾಗಿ ಮರೆಯದೆ ವಾಪಸು ಹಿಂತಿರುಗಿಸು ಅಂತ ಅಮ್ಮ ಆಗಾಗ ಪಾಠ ಹೇಳುತ್ತಿದ್ದಳು.( ಬಹುಶಃ ಮಲ್ಯನಿಗೆ ಈ ಪರಿಸ್ಥಿತಿ ಇರಲಿಲ್ಲವೇನೋ? )

ನಾನು ದೊಡ್ಡವನಾಗಿ ಸಂಪಾದನೆಗೆ ತೊಡಗಿದಾಗ, ಏನೇ ಕಷ್ಟವಿದ್ದರೂ ಅಂಗಡಿಯಲ್ಲಿ ಸಾಲ ಕೊಳ್ಳಬಾರದು ಎಂದು ತೀರ್ಮಾನಿಸಿ ಬಿಟ್ಟಿದ್ದೆ. ನನ್ನ ಹೆಂಡತಿಯೂ ಇದಕ್ಕೆ ಸಾಥ್ ಕೊಡುತ್ತಿದ್ದಳು. ಬಾಡಿಗೆ, ವಿದ್ಯುತ್ ಬಿಲ್ಲು, ನೀರಿನ ಬಿಲ್ಲು, ಹಾಲು, ತರಕಾರಿ, ಪೇಪರು ಹೀಗೆ ತಿಂಗಳ ಬಾಕಿಯನ್ನು ಸಂಬಳ ಬಂದ ಮರುದಿನವೇ ಚುಕ್ತಾ ಮಾಡಿಬಿಡುವುದು ಅಭ್ಯಾಸ.  ಕ್ರಮೇಣ ಇವನ್ನೂ ನಗದು ಕೊಟ್ಟೇ ತರುವ ಅಭ್ಯಾಸ ಬೆಳೆಯಿತು. ಸಾಲದ ಪುಸ್ತಕ ಎನ್ನುವುದು ಚರಿತ್ರೆಯಾಗಿತ್ತು.

"ಅಂಕಲ್. ಪೇಜ್ 94 ನೆನಪಿಟ್ಟುಕೊಳ್ಳಿ," ಎಂದ ರಾಜಕುಮಾರ. ಅಂತೂ ಸಾಲ ಬೇಡವೆಂದಿದ್ದವನ ಮೌಲ್ಯ ಹೀಗೆ ದಿಢೀರನೆ ಕುಸಿಯಿತು.

ಮನೆಗೆ ಬಂದು ತಿಂಡಿ ತಿನ್ನುವಷ್ಟರಲ್ಲಿ ಊರಿನಿಂದ ಅಕ್ಕನ ಫೋನು. ಮನೆಯಲ್ಲಿ ದುಡ್ಡು ಇದ್ದರೆ ಬ್ಯಾಂಕಿಗೆ ಕಟ್ಟಿಬಿಡು ಅಂತ ಉಪದೇಶ. ಏಕೆ ಎಂದೆ. ಪುಟ್ಟಮ್ಮನ ಕಥೆ ಹೇಳಿದಳು. ಪುಟ್ಟಮ್ಮ ನಮ್ಮ ಮನೆಯಲ್ಲಿ ಸುಮಾರು ಮೂವತ್ತು ವರ್ಷಗಳಿಂದ ಬಟ್ಟೆ ಒಗೆಯಲು ಮನೆ ಗುಡಿಸಿ ಸಾರಿಸಲು ಬರುತ್ತಿದ್ದಾಳೆ. ರೇಶನ್ ಯುಗ ಕಳೆದು ನಾವೆಲ್ಲ ಉದ್ಯೋಗವಂತರಾದಾಗ ಅಮ್ಮನಿಗೆ ನೆರವಾಗಲಿ ಎಂತ ನೇಮಿಸಿದ್ದೆವು. ಅವಳೂ ನಮ್ಮ ಮನೆಯವಳೇ ಆಗಿಬಿಟ್ಟಿದ್ದಳು. ಅವಳ ಮಗಳಿಗೆ ಈಗ ಮದುವೆ. ಮದುವೆಗೆ ಬೇಕಾಗುತ್ತದೆ ಎಂದು ಪ್ರತಿ ತಿಂಗಳೂ ಒಂದಿಷ್ಟು ಹಣವನ್ನು ಕೂಡಿಸಿ ಅಕ್ಕನ ಬಳಿ ಕೊಡುತ್ತಿದ್ದಳಂತೆ. ಅಕ್ಕ ಅದನ್ನು ಹಾಗೆಯೇ  ಪ್ರತ್ಯೇಕವಾಗಿ ಒಂದು ಬ್ಯಾಂಕ್ ಅಕೌಂಟಿನಲ್ಲಿ ಹಾಕಿಡುತ್ತಿದ್ದಳು. ಮೂರು ದಶಕದ ಉಳಿತಾಯ ಸುಮಾರು 60000 ಆಗಿತ್ತಂತೆ. ಮದುವೆ ನಿಶ್ಚಯವಾಗಿದೆ ಬೇಕು ಅಂತ ಹೇಳಿದ್ದಳು ಅಂತ ಮೊನ್ನೆ ಅಕ್ಕ ಅದನ್ನು ಬ್ಯಾಂಕಿನಿಂದ ತಂದಿದ್ದಳಂತೆ. ಈಗ ಅದನ್ನು ಏನು ಮಾಡುವುದು? ಅಷ್ಟು ಹಣವನ್ನು ತಕ್ಷಣಕ್ಕೆ ಬದಲಾಯಿಸಲು ಬರುವುದಿಲ್ಲವಲ್ಲ ಎಂದು ಸಲಹೆ ಕೇಳಲು ಫೋನ್ ಮಾಡಿದ್ದಳು.

ನಮ್ಮ ಪುಣ್ಯ. ಆ ಕಾಲದಲ್ಲಿ ನಮ್ಮ ಬೀದಿಯಲ್ಲಿದ್ದವರೆಲ್ಲರದ್ದೂ ದೊಡ್ಡ ಕುಟುಂಬಗಳು. ಒಬ್ಬೊಬ್ಬರಿಗೂ ಐದಾರು ಸಹೋದರ, ಸಹೋದರಿಯರು. ನನಗೂ ಅಷ್ಟೆ. ಆರು ಅಕ್ಕ ತಂಗಿಯರು. ಎಲ್ಲರೂ ಊರಲ್ಲೇ ಇರುವುದರಿಂದ, ಎಲ್ಲರೂ ಒಟ್ಟಿಗೆ ಬ್ಯಾಂಕಿಗೆ ಹೋಗಿ  ನಿಮ್ಮ, ನಿಮ್ಮ ಅಕೌಂಟಿನಿಂದ ತಂದು ಕೊಡಿ ಎಂದು ಸಲಹೆ ನೀಡಿದೆ. ಕಳ್ಳತನ ಮಾಡುತ್ತದ್ದೇವೆಯೋ ಎನ್ನಿಸಿತು.

ಸಂಜೆ ಆಫೀಸಿನಿಂದ ಬಂದಾಗ ಮಡದಿ ನೆನಪು ಮಾಡಿದಳು. ನಾಳೆ ಗಿರೀಶನ ಮಗಳ ಮದುವೆ. ಮುಂದಿನ ವಾರ ಶಶಿಯ ಮದುವೆ. ಇಬ್ಬರಿಗೂ ಗಿಫ್ಟ್ ಏನಾದರೂ ತರಬೇಕಲ್ಲವಾ? ಅದು ನನಗೂ ನೆನಪಿತ್ತು. ಅದಕ್ಕೇ ಬರುವಾಗ ಅಂಗಡಿಗಳು ತೆಗೆದಿವೆಯೋ ಎಂದು ನೋಡಿಕೊಂಡೇ ಬಂದಿದ್ದೆ  ಒಡವೆಯ ಅಂಗಡಿಯಿಂದ ಬೆಳ್ಳಿಯ ಪದಾರ್ಥವನ್ನು ತರುವ ಮನಸ್ಸಿತ್ತು. ಕಾರ್ಡು ಕೊಟ್ಟು ತರಬಹುದು ಎಂದು ತೀರ್ಮಾನಿಸಿದ್ದೆ. ಆದರೆ ಆಭರಣದ ಅಂಗಡಿಯವ ಕಾರ್ಡು ಕೊಟ್ಟರೆ ಅದಕ್ಕೆ ಮೂರು ಪರ್ಸೆಂಟ್ ಹೆಚ್ಚು ಸೇರಿಸುತ್ತಾನೆ ಎಂದಾಗ ಯೋಚನೆ ಬದಲಾಯಿತು.

ಅಲ್ಲೇ ಪಕ್ಕದಲ್ಲಿದ್ದ ಗಿಫ್ಟ ಅಂಗಡಿಗೆ ಹೋಗಿ ಮಿಕ್ಸಿ, ಗ್ರೈಂಡರ್ ಗಳನ್ನು ಹುಡುಕಿದೆವು. ಬೆಲೆಯೆಲ್ಲವನ್ನೂ ನೋಡಿದ ಮೇಲೆ ಅಂಗಡಿಯವನನ್ನು ಹಾಗೇ ಸುಮ್ಮನೆ ಕೇಳಿದೆ. ನಗದು ಕೊಡಲೋ? ಕಾರ್ಡು ಕೊಡಲೋ? "ಸಾರ್. ಕಾರ್ಡು ಕೆಲಸ ಮಾಡುತ್ತೋ ಇಲ್ಲವೋ ಗೊತ್ತಿಲ್ಲ. ನಗದಿದ್ದರೆ ಕೊಡಿ. ಆದರೆ ಸದ್ಯಕ್ಕೆ ನಾನು ಬಿಲ್ಲು ಕೊಡುವುದಿಲ್ಲ," ಎಂದ. ಬಿಲ್ಲು ಇಲ್ಲದಿದ್ದರೆ ಅದು ಭ್ರಷ್ಟ ವ್ಯಾಪಾರ ಅಲ್ಲವೇ ಎನ್ನಿಸಿತು. ಆದರೆ ನಿರ್ವಾಹವಿಲ್ಲ. ಕೈಯಲ್ಲಿರುವ ನಗದನ್ನು ಬ್ಯಾಂಕಿಗೆ ಹೋಗದೆಯೇ ಬದಲಾಯಿಸಿಕೊಳ್ಳುವ ಅವಕಾಶ  ಇದು ಎಂದುಕೊಂಡೆ. ನನ್ನ ಹಿಂಜರಿತ ಕಂಡ ಅವನೇ ಸಮಜಾಯಿಷಿಯನ್ನೂ ಹೇಳಿದ. "ಹೇಗೂ ಗಿಫ್ಟ ಕೊಡೋದಲ್ಲವಾ ಸರ್. ಬಿಲ್ಲು ಯಾಕೆ?"  ಇದುವೂ ತರ್ಕ ಸರಿಯೇ ಎಂದು ಕೊಂಡೆ. ನಿನಗೆ ತೊಂದರೆ ಆಗುವುದಿಲ್ಲವೇ ಎಂದೆ. "ನಾವೆಲ್ಲ ವ್ಯವಸ್ಥೆ ಮಾಡಿಕೊಳ್ತೇವೆ ಬಿಡಿ ಸಾರ. ಬಿಸಿನೆಸ್ ಅಂದ ಮೇಲೆ ಇವೆಲ್ಲವನ್ನು ನಿಭಾಯಿಸದಿದ್ದರೆ ಹೇಗೆ?" ಎಂದ. ಹೇಗೆ? ಅಂತ ಮಾತ್ರ ಹೇಳಲಿಲ್ಲ. ಅಂತೂ ಗಿರೀಶನ ಮಗಳ ಮದುವೆಗೆ ಗಿಫ್ಟ್ ಸಿದ್ಧವಾಯಿತು.

ನಾಳೆ ಬ್ಯಾಂಕು ತೆಗೆದ ಕೂಡಲೇ ಇರುವ ಹನ್ನೆರಡು ಸಾವಿರವನ್ನಾದರೂ ಅಕೌಂಟಿಗೆ ಹಾಕಿ ನಗದು ಬದಲಾಯಿಸಿಕೊಂಡು ಬಿಡಬೇಕು ಎಂದು ತೀರ್ಮಾನಿಸಿದೆ. ಕಪ್ಪುಧನ  ಇದ್ದವರಿಗೆ ನಿದ್ರೆ ಬಂದಿತ್ತೋ, ಇಲ್ಲವೋ ನನಗಂತೂ ನಿದ್ರೆ ಸರಿಯಾಗಿ ಬರಲಿಲ್ಲ ಅನ್ನುವುದು ನಿಜ.

ಮರುದಿನ ಕಛೇರಿಯ ಆವರಣದಲ್ಲೇ ಇರುವ ಬ್ಯಾಂಕಿಗೆ ಹೋದೆ. ಸಾಧಾರಣವಾಬಿ ಭಣಗುಡುತ್ತಿದ್ದ ಬ್ಯಾಂಕು ಸಿಬ್ಬಂದಿ ಬಂದು ಬಾಗಿಲು ತೆಗೆಯುವ ಮುನ್ನವೇ ಭರ್ತಿಯಾದಂತಿತ್ತು. ಕ್ಯೂ ನಲ್ಲಿ ನಿಂತೆ. ಚಲನ್ ಬರೆದಾಗ ನಿತ್ಯವೂ ನಮಸ್ಕಾರ ಎನ್ನುತ್ತಿದ್ದ ಬ್ಯಾಂಕಿನ ಸಿಬ್ಬಂದಿ, ಸರ್, ಹಿಂದೆ ಬನ್ನಿ. ನಿಮ್ಮ ಖಾತೆ ಚೆಕ್ ಮಾಡಿದ ಮೇಲೆ ಡೆಪಾಸಿಟ್ ಮಾಡುವಿರಂತೆ ಎಂದರು. ಪ್ರತಿ ಚಲನ್ನಿನಲ್ಲಿಯೂ ಅವರು ದಾಖಲಿಸಬೇಕಂತೆ. ಅತಿ ಪರಿಚಿತವಾದ ಸಿಬ್ಬಂದಿಗೂ ಮತ್ತೆ ಪರಿಚಯ ಹೇಳಿಕೊಳ್ಳುವಂತಿತ್ತು. ಕ್ಯೂನಲ್ಲಿ ನಿಂತು ಚಲನ್ನಿಗೆ ಸಹಿ ಹಾಕಿಸಿಕೊಂಡು ಮತ್ತೊಂದು ಕ್ಯೂ ಸೇರಿದೆ.

ಸಾಮಾನ್ಯವಾಗಿ ಬ್ಯಾಂಕಿಗೆ ಕಾಲಿಡದ ವ್ಯಕ್ತಿಗಳೆಲ್ಲಿ ಹಲವರು ಕಣ್ಣಿಗೆ ಕಂಡರು. ಓಹೋ. ಸಮಾನತೆ ಎಂದರೆ ಇದೇ ಎಂದು ನಮ್ಮ ರಾಷ್ಟ್ರದ ಪ್ರಜಾಪ್ರಭುತ್ವದ ಬಗ್ಗೆ ಗರ್ವಿಸುತ್ತ ಕ್ಯೂನಲ್ಲಿ ನಿಂತೆ. ನನ್ನ ಮುಂದೆ ಆಫೀಸಿನ ಗ್ರೂಪ್ 1ರ ಸಿಬ್ಬಂದಿಯೊಬ್ಬನಿದ್ದ. ಕ್ಯೂ ಸ್ವಲ್ಪ ಮುಂದುವರೆಯುತ್ತಿದ್ದಂತೆಯೇ, ಅವನ ಪಕ್ಕದಲ್ಲಿ ಅವನ ಹೆಂಡತಿಯೂ, ಮಗ ಮತ್ತು ಮಗಳೂ ಬಂದು ನಿಂತರು. ಹುಳಿ ನಗೆ ನಗುತ್ತಾ, "ಸಾರ್ ಇವರದ್ದೂ ಕಟ್ಟಿ ಬಿಡುತ್ತೇನೆ" ಎಂದ. ಆಫೀಸರರ ಮರ್ಯಾದೆಯಲ್ಲವೇ? ಔದಾರ್ಯ ತೋರಿ ಸರಿ ಎಂದು ಸರಿದೆ.

ಹಾಗೆಯೇ ಮುಂದಿರುವವರು ಕೊಟ್ಟ ಹಣವನ್ನು ಕ್ಯಾಶಿಯರ್ ಲೆಕ್ಕ ಹಾಕುವುದನ್ನು ನೋಡುತ್ತ ನಿಂತೆ. ಕಾಲ ಕಳೆಯಬೇಕಲ್ಲ. ಒಂದೆರಡು ಜನರ ಡೆಪಾಸಿಟ್ಟು ನೋಡಿದ ಮೇಲೆ, ನನ್ನ ಪರ್ಸು ಮುಟ್ಟಿಕೊಂಡೆ. ಪರ್ಸಿನಿಂದ ಕೈಗೆ ತೆಗೆದಿಟ್ಟುಕೊಂಡಿದ್ದ ಹಣವನ್ನು, ಹಿಡಿಯಾಗಿ ಮುಚ್ಚಿಟ್ಟುಕೊಂಡೆ. ಬೇರೆ ಯಾರೂ ನೋಡಬಾರದಲ್ಲ. ಅಲ್ಲಿ ಬಹುಶಃ ಹನ್ನೆರಡೇ ಸಾವಿರವನ್ನು ಡೆಪಾಸಿಟ್ಟು ಮಾಡಲು ಬಂದಿದ್ದವ ನಾನೊಬ್ಬನೇ ಇರಬೇಕು. ನನ್ನ ಮುಂದಿದ್ದ ಇಡೀ ಕುಟುಂಬ ಒಟ್ಟು ಒಂದೂಕಾಲು ಲಕ್ಷ ನಗದನ್ನು ಅಕೌಂಟಿಗೆ (ನಾಲಕ್ಕು ಅಕೌಂಟಿಗೆ ಎನ್ನಿ) ವರ್ಗಾಯಿಸಿತು. ಇದೆಲ್ಲದರ ಮುಂದೆ ನಾನು ಜಮಾಯಿಸಬೇಕಿದ್ದ ಮೊತ್ತ ತೃಣವೆನ್ನಿಸಿತು. ನನ್ನ ಬಗ್ಗೆಯೇ ಅಳುಕುಂಟಾಯಿತು. ಆಫೀಸರನೆಂಬ ಗರ್ವವನ್ನು ಹೀಗೆ ಕಳೆದುಕೊಂಡೆ.

ಅದಾದ ಮೇಲೆ ನೇರವಾಗಿ ರಜೆ ಹಾಕಿ ಮನೆಗೆ ಬಂದೆ. ಮಡದಿಗೆ ಒಂದು ಕಾಫಿ ಕೊಡು ಎಂದೆ. ನಗದು ಅಪಮೌಲ್ಯದ ನಡುವೆ ನನ್ನ ಬೆಲೆಯೆಷ್ಟು ಎಂಬುದರ ಅರಿವಾಗಿತ್ತು. "ಕಾಫಿ ಪುಡಿ ತರಬೇಕು," ಎಂದಳು. ಸರಿ ನೀರು ಕೊಡು ಎಂದು ಅದನ್ನೇ ಕುಡಿದು ನಿರಾಳ ನಿದ್ರೆ ಮಾಡಿದೆ. 

Friday, March 25, 2016

ದೇವರು, ಧರ್ಮ ಮತ್ತು ಮೌಢ್ಯ

ಮೌಢ್ಯ ಸಾರ್ವಕಾಲಿಕ. ಈ ಅರಿವು ಹೊಸತಲ್ಲ ಎನ್ನುವುದು ಮೊನ್ನೆ ಖ್ಯಾತ ಫ್ರೆಂಚ್ ತತ್ವಶಾಸ್ತ್ರಜ್ಞ ವಾಲ್ಟೇರ್ ಮುನ್ನುಡಿ ಬರೆದಿರುವ 1732 ರಲ್ಲಿ ಪ್ರಕಟವಾದ ಪುಸ್ತಕವೊಂದು ಕೈಗೆ ಸಿಕ್ಕಿದಾಗ ಅನಿಸಿದ ಮಾತು. ಅಂದ ಹಾಗೆ ಪುಸ್ತಕದ ಶೀರ್ಷಿಕೆಯೂ ಇದೇ. ಲೇಖಕನ ಕಥೆಯೂ ಸ್ವಾರಸ್ಯಕರ. ಮೌಢ್ಯ ಸಾರ್ವಕಾಲಿಕ ( ಸೂಪರ್ ಸ್ಟಿಶನ್ ಫಾರ್ ಆಲ್ ಏಜಸ್) ಬರೆದವನು ಜೀನ್ ಮೆಸ್ಲಿಯೆ. ಈತ ಅಂದಿನ ಚರ್ಚ್ ವ್ಯವಸ್ಥೆಯಲ್ಲಿ ಒಬ್ಬ ಪಾದ್ರಿ. ಹುಟ್ಟಿದ್ದು 1668 ರಲ್ಲಿ. ಸುಮಾರು 32 ವರ್ಷಗಳ ಕಾಲ ಫ್ರಾನ್ಸಿನ ಶಾಂಪೇನ್ ನಗರದಲ್ಲಿ ಪಾದ್ರಿಯಾಗಿದ್ದ ಈತ ತನ್ನ ಧರ್ಮ, ಪಾದ್ರಿತನ, ಚರ್ಚಿನಂತಹ ಧಾರ್ಮಿಕ ಸಂಸ್ಥೆಗಳು ಮೌಢ್ಯವನ್ನು ಬೆಳೆಸುತ್ತಿರುವ ರೀತಿಗೆ ಬೇಸತ್ತು ಪಾದ್ರಿ ಕೆಲಸವನ್ನು ಬಿಟ್ಟು ಬಿಡುತ್ತಾನೆ. ಸಾಯುವ ಮುನ್ನ ತನ್ನೆಲ್ಲ ಆಸ್ತಿಯನ್ನೂ ತನ್ನ ಅನುಯಾಯಿಗಳಿಗೆ ನೀಡುವಂತೆ ಉಯಿಲು ಬರೆಯುತ್ತಾನೆ. ನಮಗೆ ಇದೋ ಈ ಅದ್ಭುತ ಚಿಂತನೆಗಳನ್ನು ಉಳಿಸಿ ಹೋಗಿದ್ದಾನೆ.

ಮೂಲ ಫ್ರೆಂಚ್ ಪುಸ್ತಕವನ್ನು ಇಂಗ್ಲೀಷಿಗೆ ಆನಾ ನೂಪ್ ಅನುವಾದಿಸಿದ್ದು, ಈ ಆಂಗ್ಲ ಅನುವಾದದ ಇ-ಪ್ರತಿಗಳು ಪ್ರಾಜೆಕ್ಟ್ ಗುಟೆನ್ ಬರ್ಗ್ ನಲ್ಲಿ ಲಭ್ಯ.

ಪುಸ್ತಕದಲ್ಲಿರುವ ವಿವಿಧ ಟಿಪ್ಪಣಿಗಳ ಶೀರ್ಷಿಕೆಯೇ ಮೆಸ್ಲಿಯೆ ಯ ವಿಚಾರಗಳ ಗತಿಯನ್ನು ವಿವರಿಸುತ್ತವೆ. ಕೆಲವು ಉದಾಹರಣೆಗಳು:
MAN BORN NEITHER RELIGIOUS NOR DEISTICAL. ಹುಟ್ಟಿನಿಂದಲೇ ಮನುಷ್ಯ ಆಸ್ತಿಕನೂ ಅಲ್ಲ ಧಾರ್ಮಿಕನೂ ಅಲ್ಲ

IT IS NOT NECESSARY TO BELIEVE IN A GOD ದೇವರಲ್ಲಿ ವಿಶ್ವಾಸ ಇರಲೇಬೇಕೆನ್ನುವ ಅವಶ್ಯಕತೆ ಇಲ್ಲ.

ಮೆಸ್ಲಿಯೆ ಯ ವಿಚಾರಗಳೂ ಮೌಢ್ಯಗಳಂತೆಯೇ ಸಾರ್ವಕಾಲಿಕ. ಅವನ್ನು ಕನ್ನಡಕ್ಕೆ ತರುವ ಕಿರು ಪ್ರಯತ್ನ ಇದು. ಈಗಾಗಲೇ ಇದು ಕನ್ನಡಕ್ಕೆ ಭಾಷಾಂತರವಾಗಿದೆಯೋ ಇಲ್ಲವೋ ಗೊತ್ತಿಲ್ಲ. ಆಗಿದ್ದರೂ ಮತ್ತೊಮ್ಮೆ ಖುಷಿಗಾಗಿ ಒಂದೊಂದಾಗಿ ಇಲ್ಲಿ ಪರಿಚಯಿಸಬೇಕೆಂದಿದ್ದೇನೆ.

1. MAN BORN NEITHER RELIGIOUS NOR DEISTICAL.
All religious principles are founded upon the idea of a God, but it is impossible for men to have true ideas of a being who does not act upon any one of their senses. All our ideas are but pictures of objects which strike us. What can the idea of God represent to us when it is evidently an idea without an object? Is not such an idea as impossible as an effect without a cause? An idea without a prototype, is  it anything but a chimera? Some theologians, however, assure us that the idea of God is innate, or that men have this idea from the time of their birth. Every principle is a judgment; all judgment is the effect of experience; experience is not acquired but by the exercise of the senses: from which it follows that religious principles are drawn from nothing, and are not innate.

ಹುಟ್ಟಿನಿಂದಲೇ ಮನುಷ್ಯ ಧಾರ್ಮಿಕನೂ ಅಲ್ಲ, ದೈವಜ್ಞನೂ ಅಲ್ಲ.
ಎಲ್ಲ ಧರ್ಮಗಳನ್ನೂ ದೇವರು ಎನ್ನುವ ಕಲ್ಪನೆಯ ಬುನಾದಿಯ ಮೇಲೆ ಕಟ್ಟಲಾಗಿದೆ. ಆದರೆ ತನ್ನ ಯಾವುದೇ ಸಂವೇದನೆಗಳನ್ನೂ ಪ್ರಭಾವಿಸದ ವ್ಯಕ್ತಿಯ ನೈಜಪರಿಚಯ ಮನುಷ್ಯನಿಗೆ ಆಗುವುದು ಅಸಾಧ್ಯ.  ನಮ್ಮೆಲ್ಲ ಕಲ್ಪನೆಗಳೂ ನಮ್ಮ ಅರಿವಿನಲ್ಲಿರುವ ವಸ್ತಗಳ ಬಿಂಬಗಳಷ್ಟೆ. ವಾಸ್ತವಿಕವೇ ಅಲ್ಲದಿರುವಾಗ ದೇವರ ಚಿತ್ರಣ ನಮಗೆ ದೊರೆಯುವುದಾದರೂ ಹೇಗೆ? ಮಾದರಿಯಿಲ್ಲದ ಕಲ್ಪನೆ ಹಲವು ಭ್ರಮೆಗಳ ಮಿಶ್ರಣವಲ್ಲವೇ? ತತ್ವಶಾಸ್ತ್ರಿಗಳು ಕೆಲವರು ದೇವರ ಕಲ್ಪನೆ ಎನ್ನುವುದು ವೈಯಕ್ತಿಕ, ಆಂತರಿಕವೆಂದೂ, ಹುಟ್ಟಿನಿಂದಲೇ ಬಂದ ಕಲ್ಪನೆಯೆಂದೂ ಹೇಳುವುದುಂಟು. ಯಾವುದೇ ತತ್ವವೂ ಒಂದು ವ್ಯಾಖ್ಯಾನವಷ್ಟೆ. ಎಲ್ಲ ವ್ಯಾಖ್ಯಾನಗಳೂ ಅನುಭವದ ಪರಿಣಾಮ. ಅನುಭವ ಹಾಗೇ ಬರುವುದಿಲ್ಲ. ಸಂವೇದನೆಗಳ ಮೂಲಕ ಲಭಿಸುತ್ತದೆ. ಆದ್ದರಿಂದ ಧಾರ್ಮಿಕ ತತ್ವಗಳು ಆಂತರಿಕವಲ್ಲ, ಶೂನ್ಯದಿಂದ ಹುಟ್ಟಿದಂಥವು.

Thursday, April 21, 2011

ದೇವರ ವ್ಯಾಪಾರ 2

ತಿರುಪತಿಯ ವ್ಯಾಪಾರದ ಬಗ್ಗೆ ಇನ್ನೊಂದು ಮಾತು. ಮೊನ್ನೆ ಇಸ್ರೋದ ಹೊಸ ಉಪಗ್ರಹ ಆಕಾಶವೆರಿದ್ದು ಗೊತ್ತಲ್ಲ! ಅದರ ಫಲ ಇಸ್ರೋಗೆ ಸಲ್ಲಬೇಕೋ, ತಿರುಪತಿಯ ತಿಮ್ಮಪ್ಪನಿಗೆ ಸಲ್ಲಬೇಕೋ ಗೊಂದಲವಾಗಿದೆ. ಏಕೆಂದರೆ ಈಟಿವಿ ವರದಿ ಮಾಡಿದಂತೆ ಇಸ್ರೋದ ಮುಖ್ಯಸ್ತರು ಉಪಗ್ರಹದ ಉಡಾವಣೆಗೆ ಮೊದಲು ತಿರುಪತಿಯ ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿದ್ದರು. ಉಪಗ್ರಹ ಉಡಾವಣೆ ಸುಗಮವಾಗಿ ಸಾಗಲಿ ಅಂತ. ಇತ್ತೀಚಿಗೆ ದೇಶದ ಪ್ರತಿಷ್ಟಿತ ಸಂಸ್ಥೆಯಾದ ಇಸ್ರೋಗೂ ಗರ ಬಡಿದಿದೆ. ಅಂತರಿಕ್ಸ್ ಹಾಗೂ ದೇವಾಸ್ ಸಂಸ್ಥೆಗಳ ಗುತ್ತಿಗೆ ವ್ಯವಹಾರ ಹಾಗೂ ಕಳೆದ ಎರಡು ಉಡಾವಣೆಗಳ ವಿಫಲತೆ ಮುಂದೆ ಈ ಸಂಸ್ಥೆಯ ಹಣಕಾಸು ಬೇಡಿಕೆಗಳಿಗೆ ಅಡ್ಡಿಯಾಗಬಹುದು. ಮತ್ತೊಂದು ಉಡಾವಣೆಯು ಸೋತಿದ್ದಾರೆ ಕಷ್ಟವೇ ಆಗುತ್ತಿತ್ತು. ತಿರುಪತಿಯ ತಿಮ್ಮಪ್ಪ ಸಂಕಟ ಹರನಲ್ಲವೇ? ಅದಕ್ಕೆ ಬಹುಷಃ ಇಸ್ರೋದ ಅಧಿಕಾರಿಗಳು ತಿಮ್ಮಪ್ಪನ ಮೊರೆ ಹೋಗಿದ್ದಾರೆ ಎನಿಸುತ್ತದೆ. ವಿಜ್ಞಾನ ಹಾಗೂ ವಿಶ್ವಾಸಗಳ ಗೊಂದಲಕ್ಕೆ ಇದೂ ಒಂದು ಉದಾಹರಣೆ. ಆದರೂ, ಇಸ್ರೋ ಗಾಬರಿಯಾಗಬೇಕಿರಲಿಲ್ಲ. ಸರಕಾರ ಹಣ ಕೊಡದಿದ್ದರೂ, ಹತ್ತು ಉಪಗ್ರಹಗಳ ಉಡಾವಣೆಗೆ ಅವಶ್ಯಕವಾದ ಹಣವನ್ನು ತಿರುಪತಿಯ ಯು ಎಸ್ ಪಿ ಆಗಿತ್ತುಕೊಂಡು ಲಾಭ ಪಡೆಯುವುದರಲ್ಲಿ ಧಾರ್ಮಿಕ ಸಂಸ್ಥೆಗಳು ಸಿದ್ಧ ಹಸ್ತ ಅಲ್ಲವೇ? ಇಸ್ರೋ ಸರಕಾರವನ್ನು ಬೇಡುವುದಕ್ಕಿಂತ ದೇವರಲ್ಲಿ ಬೇಡಿದ್ದೆ ಸರಿಯೇನೋ ಅಲ್ಲವೇ? :)

Monday, April 18, 2011

ದೇವರ ವ್ಯಾಪಾರ!

ಮೊನ್ನೆ ಮಡದಿಯ ವರಾತ ತಾಳಲಾರದೆ ತಿಮ್ಮಪ್ಪನ ತಿರುಪತಿಗೆ ಪ್ರವಾಸ ಹೋಗಿದ್ದೆ. ನನ್ನ ಹೆಸರಿನಲ್ಲೇ ತಿಮ್ಮಪ್ಪನ ಹೆಸರಿದ್ದರೂ ಅರ್ಧ ಶತಮಾನದಿಂದಲೂ ತಿರುಪತಿಗೆ ಹೋಗಿರಲಿಲ್ಲ ಎನ್ನುವುದು ವಾಸ್ತವ. ಹೊಟ್ಟೆ ತಾಳ ಹಾಕುತ್ತಿದ್ದರೂ, ಫ್ಯಾಶನ್‌ಗೆ ಟೇಬಲ್‌ ಕುಟ್ಟಿಕೊಂಡು ಊಟಕ್ಕೆ ಕಾಯುತ್ತ ಕುಳಿತುಕೊಳ್ಳುವುದು ಹಾಗೂ ಭಕ್ತಿ ಎನ್ನುವ ಹೆಸರಿನಲ್ಲಿ ಗಂಟೆಗಟ್ಟಲೆ ಕ್ಯೂ ನಿಲ್ಲುವುದು ನನಗೆ ಒಗ್ಗಿಬಾರದ ಸಂಗತಿ. ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹತ್ತಾರು ಗಂಟೆಗಳ ಕಾಲ ಕಾಯಬೇಕು ಎನ್ನುವ ಅರಿವಿದ್ದರೂ ಈ ಬಾರಿ ಅದೇನಾಗುತ್ತದೋ ನೋಡಿಯೇ ಬಿಡೋಣ ಅಂತ ಹೋದೆ. ಜೊತೆಗೆ ಅಲ್ಲಿಗೆ ಪ್ರವಾಸ ಹೋಗಿ ಬಂದವರೆಲ್ಲರೂ ’ಮಾನವನಾಗಿ ಹುಟ್ಟಿದ ಮೇಲೆ ಒಮ್ಮೆಯಾದರೂ ತಿರುಪತಿ ನೋಡಲೇ ಬೇಕು,’ ಎನ್ನುವಂತೆ ವಿವರಿಸುತ್ತಿದ್ದದ್ದೂ ಪ್ರೇರಣೆಯಾಗಿರಬೇಕು. ತಿಂಗಳಿಗೊಮ್ಮೆಯಾದರೂ ತಿರುಪತಿಗೆ ಹೋಗುವ ಗೆಳೆಯರಿದ್ದಾರೆ. ನನಗೆ ತಿರುಪತಿಯಿಂದ ಏನೂ ಆಗಬೇಕಿರಲಿಲ್ಲವಾದ್ದರಿಂದ ಅಲ್ಲಿಗೆ ಹೋಗುತ್ತಿಲ್ಲ ಎಂದು ಅವರಿಗೆ ಸಮಜಾಯಿಷಿ ಕೊಡುತ್ತಿದ್ದೆ. ಆದರೆ ಮೊನ್ನೆಯ ನನ್ನ ಅನುಭವ - ಅನುಭವ ಅನ್ನುವುದಕ್ಕಿಂತಲೂ ಅವಲೋಕನ ಎನ್ನುವುದೇ ಸರಿ - ಈ ಬರೆಹಕ್ಕೆ ಹೂರಣ. ೧. ಪ್ರತಿ ದಿನವೂ ಲಕ್ಷಾಂತರ ಮಂದಿ ಪ್ರವಾಸಿಗರು ಬರುವ ಸ್ಥಳವಾದರೂ ಸ್ವಚ್ಛತೆಯನ್ನು ಕಾಯ್ದುಕೊಂಡಿರುವ ಪರಿ ನಿಜಕ್ಕೂ ಮಾದರಿಯೇ ಸರಿ. ಈ ವಿಷಯದಲ್ಲಿಯಾದರೂ ತಿರುಪತಿ ತಿರುಮಲ ದೇವಸ್ವಂನಿಂದ ಕಲಿಯುವುದು ಬಹಳ ಇದೆ. ರಾತ್ರಿ ಹನ್ನೆರಡು ಗಂಟೆಯಾಗುತ್ತಿದ್ದರೂ ಕಸಬರಲು ಹಿಡಿದು ರಸ್ತೆ ಗುಡಿಸುತ್ತಾ ಇರುವ ಮಹಿಳೆಯರನ್ನು ನೋಡಬಹುದು! ೨. ಭಾರತೀಯ ಬ್ಯುಸಿನೆಸ್‌ ಶಾಲೆಗಳಿಗೆ ವಿದೇಶೀಯರು ಮುಗಿ ಬೀಳುತ್ತಾರಂತೆ! ಬಹುಶಃ ತಿರುಪತಿಗಿಂತಲೂ ದೊಡ್ಡ ಬ್ಯುಸಿನೆಸ್‌ ಶಾಲೆ ಇನ್ನೊಂದು ಇರಲಾರದು. ನನಗೆ ಮಾರ್ಗದರ್ಶಿಯಾಗಿ ಬಂದಿದ್ದ ಮಿತ್ರರೊಬ್ಬರ ಮಾತುಗಳನ್ನು ಕೇಳಿ ನನಗೆ ಹೀಗನ್ನಿಸಿತು. ದೇವಸ್ತಾನಗಳ ನಿರ್ವಹಣೆಗೆ ತಿರುಪತಿಯ ತಿಮ್ಮಪ್ಪನ ಕೊಡುಗೆ ಅಷ್ಟಿಷ್ಟಲ್ಲ ಎನ್ನಿಸಿದೆ. ನಾನು ಚಿಕ್ಕವನಾಗಿದ್ದಾಗ ಊರಿನಲ್ಲಿದ್ದ ಶಿವ ಮಂದಿರಕ್ಕೆ ಹೋಗುತ್ತಿದ್ದುದಕ್ಕೂ, ತಿರುಪತಿಯ ತಿಮ್ಮಪ್ಪನ ದರ್ಶನಕ್ಕೂ ಅಜಗಜಾಂತರವಲ್ಲ, ಅಜ-ಡೈನೋಸಾರ್‌ ವ್ಯತ್ಯಾಸವಿದೆ. ಶಿವಮಂದಿರದ ದೀಕ್ಷಿತರು ನಿಧಾನವಾಗಿ ಮಂತ್ರ ಹೇಳುತ್ತಾ, ಮನೆವಾರ್ತೆಯನ್ನೂ ವಿಚಾರಿಸಿಕೊಂಡು ತೀರ್ಥ ಕೊಡುತ್ತಿದ್ದದ್ದು ಮನದಿಂದ ಮರೆಯಾಗಿಲ್ಲ. ಅಲ್ಲಿ ಕುಂಕುಮಾರ್ಚನೆಗೂ, ಸಹಸ್ರನಾಮಾರ್ಚನೆಗೂ ಯಾವುದೇ ನಿಗದಿತ ಶುಲ್ಕ ಇರಲಿಲ್ಲ. ಯಥಾಶಕ್ತಿ ಭಕ್ತರು ತಟ್ಟೆಗೆ ಹಾಕಿದ ದಕ್ಷಿಣೆಯೇ ದೀಕ್ಷಿತರಿಗೆ ಸಂಪಾದನೆ! ತಿರುಪತಿ ತಿಮ್ಮಪ್ಪನನ್ನೇ ನೋಡಿ!. ವ್ಯಾಲ್ಯೂ ಆಡೆಡ್‌ (ಮೌಲ್ಯವರ್ಧಿತ) ಭಕ್ತಿ ಎಂದರೆ ಇದೇ! ಕಲ್ಯಾಣೋತ್ಸವದಿಂದ ಆರಂಭಿಸಿ ಹಲವು ವಿಶೇಷ ಪೂಜೆಗಳಿವೆ. ಒಂದೊಂದಕ್ಕೂ ಅದಕ್ಕೆ ತಕ್ಕಂತೆ ಶುಲ್ಕ. ಭಕ್ತಿಯ ಈ ಮೌಲ್ಯವರ್ಧನೆ (ಮೌಢ್ಯವರ್ಧನೆ ಎಂದಿದ್ದಾರೆ) ಉಳಿದೆಲ್ಲ ದೇವಾಲಯಗಳಿಗಿಂತಲೂ ಮೊದಲು ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲೇ ಹುಟ್ಟಿರಬೇಕು ಎನ್ನುವುದು ನನ್ನ ವಾದ. ಚರಿತ್ರೆಯಲ್ಲಿ ನಾನು ತುಸು ಹಿಂದೆ ಆದ್ದರಿಂದ ಈ ಬಗ್ಗೆ ನಿಖರವಾಗಿ ಹೇಳಲಾರೆ. ಆದರೆ ಬ್ಯುಸಿನೆಸ್‌ ಮಾಡೆಲ್‌ ಆಗಿ ತಿಮ್ಮಪ್ಪನ ಸನ್ನಿಧಾನ ಅತ್ಯುತ್ತಮ ಎನ್ನುವುದು ನನ್ನ ವಾದ. ತಿರುಪತಿ ತಿಮ್ಮಪ್ಪ ಎನ್ನುವ ಬ್ರಾಂಡ್‌ ಯಾರಿಗೆ ಗೊತ್ತಿಲ್ಲ! ಬ್ರಾಂಡ್‌ ಕ್ರಿಯೇಷನ್‌ನಲ್ಲೂ ತಿಮ್ಮಪ್ಪ ಪಯನಿಯರ್‌ (ಮೊದಲಿಗ) ಇರಬೇಕು. ವಿವಿಧ ಮೌಲ್ಯಗಳ ದರ್ಶನವೂ ಇದೆ. ಮುಫತ್ತು ದರ್ಶನ ಎಲ್ಲರಿಗೂ ಲಭ್ಯ. ದುಡ್ಡಿದ್ದವರಿಗೆ ವಿಶೇಷ ದರ್ಶನ. ಅದಕ್ಕೂ ಹೆಚ್ಚಿನ ದುಡ್ಡು, ಪ್ರಭಾವ ಇದ್ದವರಿಗೆ ವಿಐಪಿ ದರ್ಶನ. ಒಂದೇ ಉತ್ಪನ್ನದಲ್ಲಿ ಡೈವರ್ಸಿಫಿಕೇಶನ್‌ ಸಾಧ್ಯ ಎಂದು ತೋರಿಸಿಕೊಟ್ಟಿದ್ದಾನೆ ತಿಮ್ಮಪ್ಪ. ೩. ಅಮೆರಿಕೆಯಲ್ಲಿರುವ ತಿಮ್ಮಪ್ಪ ಭಕ್ತರಿಗೆ ಆನ್‌ಲೈನ್‌ ದರ್ಶನವೂ ಲಭ್ಯವಂತೆ. ತಿಮ್ಮಪ್ಪನ ದರ್ಶನಕ್ಕೆಂದು ಕ್ಯೂನಲ್ಲಿ ನಿಂತಿದ್ದಾಗ ಅಮೆರಿಕೆಯಲ್ಲಿ ತಿಮ್ಮಪ್ಪನ ದೇವಸ್ಥಾನ ಇದ್ದಿದ್ದರೆ ಹೇಗಿರುತ್ತಿತ್ತು ಎನಿಸಿತು. ನಮ್ಮ ದೇಶದ ಜನದಟ್ಟಣೆಯ ಹತ್ತರಲ್ಲೊಂದಂಶದಷ್ಟು ವಿರಳ ಜನ ದಟ್ಟಣೆ ಇರುವ ಅಮೆರಿಕೆಯಲ್ಲಿ ತಿಮ್ಮಪ್ಪನ ದರ್ಶನಕ್ಕೆ ಇಷ್ಟೊಂದು ದೊಡ್ಡ ಕ್ಯೂ ಬಹುಶಃ ಇರುತ್ತಿರಲಿಲ್ಲ. ಹಾಗೆಯೇ, ಹತ್ತಾರು ಗಂಟೆಗಳ ಕಾಲ ಕ್ಯೂನಲ್ಲಿ "ಗೋವಿಂದ, ಗೋವಿಂದ’ ಎನ್ನುತ್ತಾ ನಡೆದು ಬಂದವರು, ಗರ್ಭಗುಡಿಯ ಸಮೀಪ ಬರುತ್ತಿದ್ದ ಹಾಗೆಯೇ ಆ ಎಲ್ಲ ಶಿಸ್ತನ್ನೂ ಮರೆತು ಮತ್ತೆ ಗುಂಪುಗೋವಿಂದರಾಗುವುದು ಏಕೋ ಅರ್ಥವಾಗಲಿಲ್ಲ. ೪. ಧರ್ಮ ಹಾಗೂ ವಿಜ್ಞಾನ ಒಂದಕ್ಕೊಂದು ವಿರೋಧ ಎನ್ನುತ್ತಾರಷ್ಟೆ! ವಿಜ್ಞಾನದ ಬಳುವಳಿಯಾದ ತಂತ್ರಜ್ಞಾನ ಮಾತ್ರ ಯಾಕೋ ಧರ್ಮಭೀರುಗಳಾದ ದೇವರಿಗೆ ಪ್ರಿಯ. ತಿರುಪತಿಯ ಪ್ರತಿಯೊಂದು ಚಟುವಟಿಕೆಯಲ್ಲಿಯೂ ವಿಜ್ಞಾನ ಹಾಗೂ ತಂತ್ರಜ್ಞಾನದ ಬಳಕೆಯನ್ನು ಕಂಡೆ. ಯಾವುದೇ ವಹಿವಾಟನ್ನು ನಡೆಸುವಾಗಲೂ ಅದಕ್ಕೆ ಅನುಕೂಲವಾಗುವಂತಹ, ಲಾಭ ಹೆಚ್ಚಿಸುವಂತಹ ತಂತ್ರಜ್ಞಾನ, ಕ್ರಮಗಳನ್ನು ಅಳವಡಿಸಿಕೊಳ್ಳುವುದು ಸಹಜವೇ! ಅಪ್ಪಟ ವಾಣಿಜ್ಯಮೂರ್ತಿ ತಿಮ್ಮಪ್ಪನ ತಿರುಪತಿ ಇದಕ್ಕೆ ಅಪವಾದ ಹೇಗಾದೀತು? ಲಕ್ಷಾಂತರ ಜನರ ಭಕ್ತಿಗೆ ಪ್ರಸಾದ ಒದಗಿಸುವ ಲಡ್ಡುವನ್ನು ಹೊತ್ತು ತರಲು ಕನ್ವೆಯರ್‌ ಬೆಲ್ಟ್‌ ವ್ಯವಸ್ಥೆ, ಬಯೋಡಿಗ್ರೇಡಬಲ್‌ (ಜೈವಿಕ ಶಿಥಿಲತೆಯ) ಪ್ಲಾಸ್ಟಿಕ್‌ ಚೀಲಗಳು, ಸದಾ ಜನತೆಯ ಕಣ್ಗಾವಲಾಗಿರುವ ದೇವರ ದೇವಾಲಯವನ್ನು ಕಾಯುವುದಕ್ಕೆ ಕ್ಲೋಸ್ಡ್‌ ಸರ್ಕೀಟ್‌ ಕಣ್ಗಾವಲು ವ್ಯವಸ್ಥೆ, ಮಂತ್ರ ಪಠಣಕ್ಕೆ, ಸಂಗೀತಕ್ಕೆ ಧ್ವನಿವರ್ಧಕ, ಭಕ್ತರ ಸಾಗಾಟಕ್ಕೆ ವಾಹನಗಳು ಇವೆಲ್ಲವೂ ವಿಜ್ಞಾನ ತಂತ್ರಜ್ಞಾನದ ಕೊಡುಗೆಗಳೇ! ಅದಷ್ಟೆ ಅಲ್ಲ. ಭಕ್ತರ ಜಂಗುಳಿಯನ್ನು ನಿಯಂತ್ರಿಸಲು ಪ್ರವಾಹ ನಿಯಂತ್ರಣ ವ್ಯವಸ್ಥೆಯಂತೆ ಅಲ್ಲಲ್ಲಿ ಅಡ್ಡಿಕೋಣೆ (ಇದನ್ನು ಕಂಪಾರ್ಟ್‌‌ಮೆಂಟ್‌ ಎನ್ನುತ್ತಾರೆ)ಗಳಿವೆ - ನೀರ ಹರಿವನ್ನು ನಿಯಂತ್ರಿಸುವ ಚೆಕ್‌ ಡ್ಯಾಮ್‌ಗಳಂತೆ. ವಿವಿಧ ಮೌಲ್ಯದ ದರ್ಶಕರ ಪ್ರವಾಹವನ್ನು ಬೇರೆ, ಬೇರೆ ದಿಕ್ಕಿನಿಂದ ಹರಿಯ ಬಿಟ್ಟು, ಒಂದೆಡೆಗೇ ಕೂಡಿಸುವ ಸೂಯರ್‌ ವ್ಯವಸ್ಥೆಯಂತಹ ಚಾಲಾಕಿತನವನ್ನೂ ಇಲ್ಲಿ ನೋಡಬಹುದು. ೫. ತಿರುಪತಿಯಲ್ಲಿ ನಾನು ಕಂಡ ಹೆಚ್ಚಿನವರು ಆಂಧ್ರ, ತಮಿಳುನಾಡು ಹಾಗೂ ಮಹಾರಾಷ್ಟ್ರದವರು. ಕೇರಳ ಹಾಗೂ ಇತರೆ ರಾಜ್ಯಗಳಿಂದ ಬಂದವರ ಸಂಖ್ಯೆ ಕಡಿಮೆ. ಭೌಗೋಳಿಕವಾಗಿ ಸಮೀಪವಿರುವುದರಿಂದ ಹೀಗೋ ಅಥವಾ ತಿಮ್ಮಪ್ಪನ ಜ್ಯೂರಿಸ್‌ಡಿಕ್ಷನ್‌ (ಮಾರ್ಕೆಟಿಂಗ್‌ ಏರಿಯಾ) ಹಾಗಿರಬಹುದೋ? ಏಕೆಂದರೆ ಧರ್ಮಸ್ಥಳಕ್ಕೆ ಭೇಟಿನೀಡುವವರಲ್ಲಿ ಹೆಚ್ಚಿನವರು ಉತ್ತರಕರ್ನಾಟಕದವರು, ಕೊಲ್ಲೂರಿಗೆ ಬರುವವರಲ್ಲಿ ಮಲ್ಲು ನಾಡಿನವರೇ ಹೆಚ್ಚು! ತಮಿಳುನಾಡಿನಲ್ಲಿ ಕೆಲವು ದೇವಸ್ಥಾನಗಳಿಗೆ ಹೋದರೆ ತಮಿಳರಿಗಿಂತಲೂ ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಾರೆ (ಕೆಲವೊಮ್ಮೆ ನಮ್ಮ ಮುಖ್ಯಮಂತ್ರಿಗಳೂ ಅಲ್ಲೇ ನಿಮ್ಮನ್ನು ಭೇಟಿಯಾಗಬಹುದು). ಭಕ್ತಿಗೂ ಒಂದು ನಿರ್ದಿಷ್ಟ ಪ್ರಭಾವವಲಯ ಇರಬಹುದೇ? ೬. ಯಾವುದೇ ಮೌಲ್ಯದ ದರ್ಶನವಾದರೂ ಕನಿಷ್ಠ ಎಂಟು ಗಂಟೆ ಕಾಯಲೇಬೇಕು ಎನ್ನುವುದು ಅರಿವಾದಾಗ ನನ್ನ ಮಿತ್ರರು ಅಪ್ಪಟ ಭಾರತೀಯ ಕೆಲಸ ಮಾಡಲು ಹೊರಟರು. ಅಲ್ಲೇ ಕಾವಲು ನಿಂತಿದ್ದ ಸೆಕ್ಯೂರಿಟಿಯವನಿಗೆ ಅಣ್ಣಾ-ತಮ್ಮಾ ಎಂದು ತಮ್ಮ ಸಂಕಷ್ಟಗಳನ್ನು ಹೇಳಿಕೊಂಡು, ಹೇಗಾದರೂ ಕ್ಯೂವಿನ ಒಳಗೆ ಬಿಡಲಾದೀತೇ ಎಂದು ಪುಸಲಾಯಿಸಿದರು. ವಿಶೇಷ ದರ್ಶನಕ್ಕೂ ವಿಶೇಷವಾದ ದರ್ಶನ ವ್ಯವಸ್ಥೆ ಇರಬಹುದು ಎನ್ನಿಸಿದ್ದು ಆಗಲೇ! ’ಏಮಾನಾ ಇಚ್ಚೇಸ್ತಾನು, ಚೂಡು ನಾಯನಾ,’ ಅಂತ ಅವರು ಪುಸಲಾಯಿಸಿದಾಗ ಅಣ್ಣಾ ಹಜಾರೆ ಯಾಕೆ ಗೆಲ್ಲುವುದಿಲ್ಲ ಅಂತ ಅರ್ಥವಾಯಿತು. ಆದರೆ ಆ ಸೆಕ್ಯೂರಿಟಿಯವ ಬಗ್ಗಲಿಲ್ಲ. ಅಪ್ಪಟ ತೆಲುಗುವಿನಲ್ಲಿ ಅವ ಹೇಳಿದ್ದು, "ಆಗಲ್ಲಣ್ಣ. ಮೊದಲಾಗಿದ್ರೆ ಏನಾದ್ರೂ ಮಾಡಬಹುದಿತ್ತು. ಆದ್ರೆ ಈಗ ಸಿಸಿಟೀವಿ ಹಾಕಿಬಿಟ್ಟಿದಾರೆ. ಯಾರನ್ನಾದರೂ ಬಿಟ್ರೆ ತಕ್ಷಣ ಅಲ್ಲಿ ಗೊತ್ತಾಗಿ ಬಿಡುತ್ತೆ." ತಿಮ್ಮಪ್ಪನೂ ತರಲಾಗದ ನೈತಿಕ ಭಯವನ್ನು ತಂತ್ರಜ್ಞಾನ ತಂದಿತೇ?

Sunday, November 22, 2009

ಜಾಗತೀಕರಣ

ಮೊನ್ನೆ ಅಮೆರಿಕೆಯಲ್ಲಿ ಓದುತ್ತಿರುವ ಮಗಳ ಫೋನ್‌. ಅಪ್ಪಾ... "ಮುಂದಿನ ತಿಂಗಳು ಕ್ರಿಸ್‌ಮಸ್‌ಗಾಗಿ ಇಲ್ಲಿ ರಿಯಾಯಿತಿ ಮಾರಾಟ ಇರುತ್ತದೆ. ನಿನಗೆ ಏನಾದರೂ ಬೇಕಾದರೆ ಹೇಳು. ರಜೆಗೆ ಬರುವಾಗ ಕೊಂಡು ತರುತ್ತೇನೆ," ಅಂದಳು. ಹೇಳಿ, ಕೇಳಿ ಅಮೆರಿಕೆ. ಅಲ್ಲಿ ಪ್ರತಿ ಡಾಲರನ್ನೂ ರೂಪಾಯಿಗೆ ಪರಿವರ್ತಿಸಿಕೊಂಡು ಲೆಕ್ಕ ಹಾಕುವ ಮಗಳು ಹೀಗೆ ಹೇಳಿದಾಗ ಆಶ್ಚರ್ಯವೆನಿಸಿತು. "ಏನೂ ಬೇಡಮ್ಮ," ಎಂದೆ. ಆದರೆ ಅವಳು ಬಿಡಬೇಕಲ್ಲ. "ಏನು ಬೇಕು ಹೇಳು ತರ್ತೀನಿ" ಅಂತ ಹಠ ಹಿಡಿದಳು. ಎಲ್ಲ ಅಪ್ಪಂದಿರ ಹಾಗೇ ವಿನಾಕಾರಣ ಖರ್ಚು ಮಾಡಿ ತೊಂದರೆಗೆ ಮಗಳು ಸಿಕ್ಕಿಕೊಳ್ಳಬಹುದು ಎನ್ನಿಸಿ, ಮತ್ತೊಮ್ಮೆ ಏನೂ ಬೇಡ ಅಂದೆ. ಆದರೂ ಅವಳ ವರಾತ ಹೆಚ್ಚಾದಾಗ, "ಇಲ್ಲಿ ಸಿಗದ್ದು ಅಲ್ಲಿದ್ದರೆ ತೊಗೊಂಡು ಬಾ." ಎಂದೆ.

ನಾನು ಅಮೆರಿಕೆಗೆ ಹೋಗಿಲ್ಲ. ಹೋಗುವ ಹುಮ್ಮಸ್ಸೂ ಇಲ್ಲ. ಇಡೀ ಕರ್ನಾಟಕವನ್ನೇ ಸುತ್ತಿ ಬಂದರೂ ಎರಡು ಜನ್ಮ ಸಾಲದಷ್ಟು ನೋಡುವುದಿದೆ. ನೂರು ಜನ್ಮ ಕಳೆದರೂ ಭಾರತವನ್ನು ಪೂರ್ತಿ ಸುತ್ತಿ ನೋಡಲಾಗುವುದಿಲ್ಲ. ಇನ್ನು ಅಮೆರಿಕೆಗೋ, ಯುರೋಪಿಗೋ ಹೋಗಿ ಬಂದರೆ ಸಾಕೇ ಅನ್ನುವುದು ನನ್ನ ಅನಿಸಿಕೆ. ಅಮೆರಿಕೆಗೋ, ಯುರೋಪಿಗೋ ಹೋಗಿ ಬಂದವರನ್ನು ಕೈಲಾಸಕ್ಕೇ ಹೋಗಿ ಬಂದಂತೆ ಗೌರವಿಸುತ್ತಿದ್ದ ಕಾಲವಿತ್ತು. ಈಗ ಕಾಲ ಬದಲಾಗಿದೆ.

ಕಾಲ ಇನ್ನೊಂದು ಬದಲಾವಣೆಯನ್ನೂ ತಂದಿದೆ. ಹಿಂದೆ ಕಾಶಿಗೆ ಹೋಗಿ ಬಂದವರನ್ನು "ಕಾಶಿಯಲ್ಲಿ ಏನನ್ನು ಬಿಟ್ಟು ಬಂದೆ" ಅಂತ ಕೇಳ್ತಾ ಇದ್ದರಂತೆ. ಹಾಗೆಯೇ ಕಛೇರಿ ನಿಮಿತ್ತವಾಗಿಯೋ, ವಿರಾಮಕ್ಕೋ ಎಲ್ಲಿಗಾದರೂ ಪ್ರವಾಸ ಹೋದವರು ಮರಳಿದಾಗ ಅಲ್ಲಿಂದ ಏನು ತಂದೆ ಎನ್ನುವ ಪ್ರಶ್ನೆ ಎದುರಾಗುತ್ತಿತ್ತು. ರಾಮೇಶ್ವರ, ಕನ್ಯಾಕುಮಾರಿಯ ಪ್ರವಾಸಿಗಳು ಕಪ್ಪೆಚಿಪ್ಪುಗಳ ಸಾಮಾನುಗಳನ್ನು ಹೊತ್ತು ತರುತ್ತಿದ್ದರು. ದೆಹಲಿಗೆ ಹೋದವರು "ಡೆಲ್ಲಿ ಸೆಟ್‌" ರೇಡಿಯೋಗಳನ್ನೋ, ಟೇಪ್‌ರೆಕಾರ್ಡರ್‌ಗಳನ್ನೋ ತರುತ್ತಿದ್ದರು. ಮುಂಬಯಿಯಿಂದ ಬರುವವರ ಜೊತೆಗೆ ಉಡುಪಿನ ಉಡುಗೊರೆಯ ಕಂತೆ ಇರುತ್ತಿತ್ತು. ಚೆನ್ನೈನಿಂದ ಚರ್ಮದ ಸಾಮಾನುಗಳು, ಗೌಹಾತಿಯಿಂದ ಗುಡ್ಡಗಾಡು ಜನರ ದಿರಿಸುಗಳು, ಜಬಲ್‌ಪುರದಿಂದ ಅಮೃತಶಿಲೆಯ ಸಾಮಾನುಗಳು, ಲಕ್ನೋ-ಕಲ್ಕತ್ತಾದಿಂದ ಚಪ್ಪಲಿ, ಮೈಸೂರಿನಿಂದ ಗಂಧದ ಕೆತ್ತನೆ, ಜಯಪುರದ ರಜಾಯಿ... ಹೀಗೇ ಆಯಾ ಪ್ರದೇಶದ ಪ್ರಾದೇಶಿಕ ಸಿರಿಯನ್ನು ನೆನಪಿನ ಕಾಣಿಕೆಯಾಗಿ ತರುತ್ತಿದ್ದುದುಂಟು. ಕಳೆದ ವರ್ಷ ಶಿರಸಿಗೆ ಪ್ರವಾಸ ಹೋಗಿದ್ದಾಗ ಉತ್ತರಕರ್ನಾಟಕದ ವಿಶಿಷ್ಟತೆಯ ಪ್ರತಿನಿಧಿಗಾಗಿ ಹುಡುಕಿದೆ. ಏನೂ ಸಿಗಲಿಲ್ಲ. ಎಲ್ಲ ಅಂಗಡಿಗಳಲ್ಲೂ ಅದೇ ಪ್ಲಾಸ್ಟಿಕ್‌ ಬಿಂದಿಗೆ, ಪ್ಲಾಸ್ಟಿಕ್‌ ವಸ್ತುಗಳು, ಚೀನಾದ ಬೊಂಬೆಗಳು... ಕೊನೆಗೆ ಶಿರಸಿಯ ವಿಶಿಷ್ಟ ಕಷಾಯವನ್ನೇ ಎರಡು ಪ್ಯಾಕೆಟ್‌ ತಂದೆ. "ಅಯ್ಯೋ... ಇದನ್ನು ತರಕ್ಕೆ ಶಿರಸಿಗೆ ಹೋಗಬೇಕಿತ್ತಾ.. ಮನೆಯಲ್ಲೇ ಮಾಡಬಹುದಿತ್ತು," ಅನ್ನುವ ಟೀಕೆಯೂ ಸಿಕ್ಕಿತು ಅನ್ನಿ.

ಮಗಳು ಪ್ರಶ್ನೆ ಕೇಳಿದಾಗ ಇವೆಲ್ಲವೂ ನೆನಪಾಯಿತು. ನಾನು ಕಾಲೇಜು ಓದುತ್ತಿದ್ದಾಗ ಕ್ರಿಕೆಟ್‌ ವೀಕ್ಷಕ ವಿವರಣೆ ಕೇಳಲೆಂದು ಕಾಸು-ಕಾಸು ಕೂಡಿ ಹಾಕಿ ನ್ಯಾಶನಲ್‌ ಪ್ಯಾನಸೋನಿಕ್‌ನ ಒಂದು ಪಾಕೆಟ್‌ ರೇಡಿಯೋ ಕೊಂಡುಕೊಂಡಿದ್ದೆ. ಅದನ್ನು ಕೊಳ್ಳಲು ಬೆಂಗಳೂರಿಗೆ ಹೋಗಬೇಕಿತ್ತು. ಈಗ ನ್ಯಾಶನಲ್‌ ಪ್ಯಾನಸೋನಿಕ್‌ ಇರಲಿ, ಯುರೋಪು, ಅಮೆರಿಕ, ಜಪಾನ್‌ ಮತ್ತು ಚೀನಾದ ವಸ್ತುಗಳು ತಾಲೂಕು, ಹೋಬಳಿ ಕೇಂದ್ರಗಳಲ್ಲಿಯೂ "ಸೇಲ್‌"ನಲ್ಲಿ ಕಾಣಿಸುತ್ತವೆ. ಮೊಬೈಲ್‌ ಫೋನ್‌ಗಳನ್ನೇ ಗಮನಿಸಿ. ಪಾಕಿಸ್ತಾನದ ತೊಗರಿಬೇಳೆ, ಮಲೇಶಿಯಾದ ಪಾಮೆಣ್ಣೆ, ಇಟಲಿಯ ಕಾಪುಚಿನೊ ಕಾಫಿ ಎಲ್ಲವೂ ಭಾರತದಲ್ಲಿ ಲಭ್ಯ. ಕೊಳ್ಳಲು ಕಾಸಿರಬೇಕಷ್ಟೆ!

ದೇಶದ ವಿವಿಧ ಸ್ಥಳಗಳಲ್ಲಿ ದೊರಕುವ ವಸ್ತುಗಳಲ್ಲಿ ವಿಶೇಷತೆ ಕಾಣೆಯಾಗಿರುವುದನ್ನೆ ಜಾಗತೀಕರಣದ ಉದಾಹರಣೆ ಅನ್ನುವುದಾದರೆ ನಮ್ಮ ಮದುವೆ ಊಟದಲ್ಲಿ ಆಗಿರುವ ಬದಲಾವಣೆಗೆ ಏನು ಹೇಳೋಣ! ಸಭೆ, ಸಮ್ಮೇಳನಗಳಲ್ಲಿ ಮತ್ತು ಹೋಟೆಲುಗಳಲ್ಲಿ ದೊರೆಯುವ ಊಟವನ್ನ ನನ್ನ ಗೆಳೆಯರೊಬ್ಬರು’ಪ್ಯಾನ್‌ ಇಂಡಿಯನ್‌’ ಎನ್ನುತ್ತಿದ್ದರು. ಕಾರಣ ಇಷ್ಟೆ: ಎಲ್ಲಿ ಹೋದರೂ ಊಟದಲ್ಲಿ ಚಪಾತಿ, ರೊಟ್ಟಿ ಜೊತೆಗೆ ಒಂದಿಷ್ಟು ಅನ್ನ, ಮೊಸರನ್ನ, ಪಲ್ಯೆ, ಸಾಂಬಾರ್‌, ರಸಂ ದೊರೆತೇ ಇರುತ್ತಿತ್ತು. ದಕ್ಷಿಣಭಾರತದವ ಅನ್ನ, ಸಾಂಬಾರ್‌ ತಿಂದು ಕೈತೊಳೆದರೆ, ಉತ್ತರಭಾರತೀಯರು ರೊಟ್ಟಿ,ಪ ಲ್ಯೆ ತಿಂದು ನಡೆಯಬಹುದಿತ್ತು. ಎರಡನ್ನೂ ತಿಂದು ಹೊಟ್ಟೆ ಬೆಳೆಸಿಕೊಳ್ಳುವುದೂ ಸಾಧ್ಯವಿತ್ತು. ಜೊತೆಗೆ ಐಸ್‌ಕ್ರೀಂ ಖಂಡಿತ. ಈಗ ಮದುವೆಯ ಮನೆಗೆ ಹೋದರೆ ಇಂತಹುದೇ ಊಟ! ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಥಾಲಿ ಎಂದರೆ ಇದೇ!

ಜಾಗತೀಕರಣ ಊಟದ ಎಲೆಯನ್ನೂ ತಾಕದೆ ಬಿಟ್ಟಿಲ್ಲ. ಇದೀಗ ಕರ್ನಾಟಕದ ಮದುವೆಗಳಲ್ಲೂ ಒಂದು ಅಭ್ಯಾಸ ಆರಂಭವಾಗಿದೆ. ಮೊದಲು ಅಯ್ಯಂಗಾರರ ಮದುವೆ ಎಂದರೆ ಪುಳಿಯೋಗರೆ, ಅಯ್ಯರ್‌ರವರ ಮದುವೆಗಳಲ್ಲಿ ವಿಶೇಷ ಪಾಯಸ, ವೀರಶೈವರ ಮದುವೆಗಳಲ್ಲಿ ವಿಶೇಷ ಕಾಳಿನ ಸಾಂಬಾರ್‌, ಕೊಡಗಿನವರ ಮದುವೆಯ ಊಟದ ಮಜವೇ ಬೇರೆ... ಹೀಗೆ ಮದುವೆಯ ಊಟ ವೈವಿಧ್ಯಮಯವಾಗಿರುತ್ತಿತ್ತು. ಇಂದು ಹಾಗಿಲ್ಲ. ಊಟ ನೋಡಿ ಆತಿಥೇಯರು ಎಲ್ಲಿಯವರು ಎಂದು ಊಹಿಸುವುದು ಈಗ ಆಗದ ಮಾತು! ಕೋಸಂಬರಿಯ ಜಾಗದಲ್ಲಿ ಮೆಕ್ಕೆಜೋಳ, ದಾಳಿಂಬೆಯ ಸಲಾಡ್. ಚಿರೋಟಿ-ಫೇಣಿಯ ಜಾಗದಲ್ಲಿ ಬರ್ಫಿ, ಐಸ್‌ಕ್ರೀಂ. ರಾತ್ರಿ ಊಟವಾದರೋ ಪಾನಿಪುರಿ, ಗೋಬಿ ಮಂಚೂರಿ! ಪಿಜ್ಜಾ ಇನ್ನೂ ಮದುವೆಯ ಔತಣಕ್ಕೆ ಸೇರಿಕೊಂಡಿಲ್ಲ ಎನ್ನುವುದೊಂದೇ ಸಮಾಧಾನ. ಎಲೆಯ ತುಂಬಾ ವೈವಿಧ್ಯಮಯವಾದ ತಿನಿಸುಗಳಿದ್ದರೂ, ಅವೆಲ್ಲವೂ ಆಯಾ ಪ್ರದೇಶದ ವಿಶಿಷ್ಟ ಅನ್ನಿಸುವುದೇ ಇಲ್ಲ.

ಜಾಗತೀಕರಣದ ತೌರೂರಾದ ಅಮೆರಿಕೆಯಲ್ಲಿ ಇನ್ನು ಅಲ್ಲಿಗೇ ವಿಶಿಷ್ಟವಾದಂಥದ್ದು ಏನಾದರೂ ಉಳಿದಿರಬಹುದೇ! ಅದಕ್ಕೆ ಮಗಳಿಗೆ ಹೇಳಿದೆ. "ಭಾರತದಲ್ಲಿ ಸಿಗದಂಥದ್ದು ಅಮೆರಿಕೆಯಲ್ಲಿ ಏನಿದೆ ಮಗಳೇ! ಹಾಗೆ ಇರುವುದಾದರೆ ಒಂದೇ... ಅದು ಕುಟುಂಬ... ಅಮ್ಮ, ಅಪ್ಪ... ಅದನ್ನಂತೂ ಅಲ್ಲಿಂದ ಕೊಂಡು ತರಲು ಸಾಧ್ಯವಿಲ್ಲ... ಹಾಗೇ ಬರಿಗೈ ಬೀಸಿಕೊಂಡು ಹಾಯಾಗಿ ಬಾ.." ಎಂದೆ. ಅವಳಿಗೆ ಎಷ್ಟು ಅರ್ಥವಾಯಿತೋ ಗೊತ್ತಿಲ್ಲ. ಜನರೇಶನ್‌ ಗ್ಯಾಪ್‌ ಇರಲೇ ಬೇಕಲ್ಲ!

Wednesday, November 18, 2009

ಸಂಗೀತ

ಮೊನ್ನೆ ಮಗ ಇದ್ದಕ್ಕಿದ್ದ ಹಾಗೆ ಪಿಟೀಲು ಕಲಿಯಬೇಕು ಎಂದಾಗ ಆಶ್ಷರ್ಯವಾಯಿತು. ಏಕೆಂದರೆ ಎಲ್ಲ ಅಪ್ಪ-ಅಮ್ಮಂದಿರ ಹಾಗೇ ನನ್ನ ಮಗನೂ ಸರ್ವಕಲಾಸಂಪನ್ನನಾಗಬೇಕು ಎಂದು ಸಂಗೀತ ಪಾಠಕ್ಕೆ ಕಳಿಸುತ್ತಿದ್ದೆವು. ಒಂದು ವರ್ಷ ಹೋದವ ಮನೆಯಲ್ಲಿಯೂ ಎಂದೂ ’ಸಾಪಾಸಾ’ ಅಭ್ಯಾಸ ಮಾಡಲೇ ಇಲ್ಲ. ಆಮೇಲೆ ಎಂದೋ, ಏನೋ ಕಾರಣದಿಂದ ಪಾಠ ನಿಲ್ಲಿಸಿದವ, ಮತ್ತೆ ಅದರ ನೆನಪನ್ನೂ ಮಾಡಿಕೊಂಡಿರಲಿಲ್ಲ. ಹೀಗಾಗಿ ಪಿಟೀಲು ತರಗತಿಗೆ ಸೇರುತ್ತೇನೆ ಎಂದಾಗ ಅದು ಕ್ಷಣಿಕ ಮೋಹ ಅಂತಲೇ ಭಾವಿಸಿದೆ. ಆದರೆ ಅವ ಮತ್ತೆ ಮತ್ತೆ ಅದೇ ರಾಗ ಹಾಡಿದಾಗ ಪಾಠಕ್ಕೆ ಸೇರಿಸದೆ ವಿಧಿ ಇರಲಿಲ್ಲ. ಆದರೂ ನನ್ನ ಮಗನಲ್ಲವೇ! ನನ್ನ ಹಾಗೆಯೇ ಶ್ರುತಿಗಿವುಡ. ಕೆಲವೇ ದಿನಗಳಲ್ಲಿ ಮತ್ತೆ ಪಿಟೀಲನ್ನೂ ನಿಲ್ಲಿಸುತ್ತಾನೆ ಎಂದುಕೊಂಡೆ.

ಸಂಗೀತ ಅಂದರೆ ನನಗೆ ಅಷ್ಟಕ್ಕಷ್ಟೆ ಎಂದು ನೀವು ಭಾವಿಸಿದರೆ ಆಶ್ಚರ್ಯವೇನಿಲ್ಲ! ಶ್ರುತಿ, ಸ್ವರ, ನಾದ, ತಾಳ ಎಲ್ಲವೂ ಸಮಾನಾರ್ಥಕ ಪದಗಳು ಎಂಬುದು ನನ್ನ ಅನಿಸಿಕೆ. ಏಕತಾನ ಎನ್ನುವುದು ಬಾಟನಿ ಮೇಷ್ಟರ ಪಾಠವನ್ನು ವಿವರಿಸುವ ಪದವಾಗಿತ್ತು. ಪಿಟೀಲು, ಬೇಡದ ವಿಷಯವನ್ನು ಉದ್ದುದ್ದ ಎಳೆಯುವ ಗೆಳೆಯರ ಮಾತಿಗೆ ಇನ್ನೊಂದು ವಿವರಣೆ ಆಗಿತ್ತು. ರಾಗ ಅಳುವಿನ ಅನ್ವರ್ಥ ಎನಿಸಿತ್ತು. ಇನ್ನು ಸಂಗೀತ ಪಾಠ ಹೇಗೆ ಕಲಿತೇನು.

ಹಾಗಂತ ನಾನು ಸಂಗೀತವನ್ನು ಕೇಳಲೇ ಇಲ್ಲ ಅಂತಲ್ಲ. ಅಮ್ಮ ಸಾಕಷ್ಟು ಸಂಗೀತ ಕಲಿತಿದ್ದಳು ಎಂದು ತಿಳಿದಿತ್ತು. ಹೆತ್ತ ಏಳು ಮಕ್ಕಳಿಗೂ ಜೋಗುಳ ಹಾಡಿಯೇ ಕಲಿತಳೋ, ಪಾಠದಿಂದಲೇ ಕಲಿತಳೋ ಗೊತ್ತಿಲ್ಲ. ಆದರೆ ಸುಶ್ರಾವ್ಯವಾಗಿ ಹಾಡುತ್ತಿದ್ದುದಂತೂ ನೆನಪಿದೆ. ಅಪ್ಪನಿಗೂ ಸಂಗೀತದ ಮೋಹವಿತ್ತು. ವಿದ್ವಾನ್‌ ಪಿಟೀಲ್‌ ಚೌಡಯ್ಯನವರ ಡ್ರೈವರ್‌ ಆಗಿದ್ದರಂತೆ! ನನಗೂ ಸಂಗೀತ ಪಾಠ ಕಲಿಸಬೇಕೆಂದು ಅವರು ಎಷ್ಟೋ ಪ್ರಯತ್ನಿಸಿದ್ದು ನೆನಪಿದೆ. ಆದರೆ ಹೊಟ್ಟೆ ತಾಳ ಹಾಕುಾಗ ಗಂಟಲಲ್ಲಿ ಇನ್ಯಾವ ಸ್ವರವೂ ಹುಟ್ಟುವುದಿಲ್ಲವೇನೋ! ಅಂದಿನ ಪರಿಸ್ಥಿತಿಯಲ್ಲಿ ಶಾಲೆಗೆ ಹೋಗುವುದೇ ಕಷ್ಟವಾಗಿದ್ದಾಗ, ಸಂಗೀತ ಪಾಠಕ್ಕೂ ಫೀಸು ಕೊಡುವುದು ಸಾಧ್ಯವೇ ಇರಲಿಲ್ಲ.

ಅತ್ತೆಯ ಮಕ್ಕಳು ಪ್ರಸಿದ್ಧ ಹಾಡುಗಾರ್ತಿಯರು. ಮಗ ವಿಶ್ವಪ್ರಸಿದ್ಧ ಮೃದಂಗವಾದಕ. ಅವರ ಬಳಿಯಾದರೂ ಕಳಿಸಿ ಮೃದಂಗ ಕಲಿಸಬೇಕೆಂಬ ಇಚ್ಛೆ ಅಪ್ಪನಿಗೆ ಇತ್ತು. ಆದರೆ ಆ ಉತ್ಸಾಹ ನನಗೆ ಇರಲಿಲ್ಲ. ಬಹುಶಃ ಸಂಗೀತ ಎನ್ನುವುದಕ್ಕೆ ಬುದ್ಧಿ ಬೇಕಿಲ್ಲ ಅನ್ನುವ ಉಪೇಕ್ಷೆಯೋ, ಅಥವಾ ಇಂದಿನ ಹಾಗೆ ರಿಯಾಲಿಟಿ ಶೋಗಳ ಆಕರ್ಷಣೆ ಇಲ್ಲದಿದ್ದುದರಿಂದಲೋ ಒಟ್ಟಾರೆ ಸಂಗೀತ ಎಂದರೆ ನನಗೆ ಅಷ್ಟಕ್ಕಷ್ಟೆ ಆಗಿತ್ತು. ಕಲಿಯುವ ಉತ್ಸಾಹ ಇರಲಿಲ್ಲ. ಕೇಳುವುದು ಕೇವಲ ರಾಮನವಮಿಯ ಸಂಗೀತೋತ್ಸವಕ್ಕಷ್ಟೆ ಸೀಮಿತವಾಗಿತ್ತು. ಮಂಗಳಾರತಿ ಮುಗಿದ ಅನಂತರ ಕೊಡುತ್ತಿದ್ದ ಹೆಸರುಬೇಳೆ ಉಸಲಿಯ ಆಸೆಗಾಗಿ ಅಪ್ಪನ ಜೊತೆ ಸಂಗೀತೋತ್ಸವಕ್ಕೆ ಹೋಗಿ ಕೇಳುತ್ತಿದ್ದೆ. ಆಲಿಸುತ್ತಿರಲಿಲ್ಲ.

ಬಾತ್‌ರೂಮ್‌ನಲ್ಲೂ ಹಾಡು ಹಾಡಿದವನಲ್ಲ. ಪ್ರೀತಿಸಿದವಳಿಗೆ ಪ್ರೇಮಗೀತೆ ಹಾಡುವುದರ ಬದಲಿಗೆ, ಅಶ್ವತ್ಥ, ಅನಂತಸ್ವಾಮಿಯವರ ಗೀತೆಗಳನ್ನು ಕೇಳಿಸಿ ಮನವೊಲಿಸಿದ್ದೆ! ಇಂತಹ ಶ್ರುತಿಗಿವುಡನ ಮಗ ಸಂಗೀತ ಕಲಿಯುವುದುಂಟೇ?

ಆದರೂ ಮಗ ಹಠ ಹಿಡಿದಾಗ, ಮೇಷ್ಟರು ಹೇಳಿದ ಮೇಲೆ ಪಿಟೀಲು ಕೊಡಿಸಲು ಅಂಗಡಿಗೆ ಹೋದೆ. ಅಷ್ಟೆ. ಸಂಗೀತ ಎಂದರೆ ಏನೆಂಬುದರ ಪರಿಚಯ ಅಲ್ಲಿ ನನಗಾಯಿತು. ಕಂಜಿರಾದಿಂದ ಮೃದಂಗದವರೆಗೆ, ಪಿಟೀಲಿನಿಂದ ಇಲೆಕ್ಟ್ರಾನಿಕ್‌ ಗಿಟಾರ್‌ವರೆಗೆ, ಹಾರ್ಮೋನಿಯಂನಿಂದ ಆರ್ಕೆಸ್ಟ್ರಾದ ಡ್ರಂ, ಸ್ಕೂಲ್‌ ಬ್ಯಾಂಡ್‌ನ ಬ್ಯೂಗಲ್‌, ತರಹೇವಾರಿ ಇಲೆಕ್ಟ್ರಾನಿಕ್‌ ರಾಗಮಾಲ, ತಬಲಾ, ಇಲೆಕ್ಟ್ರಾನಿಕ್‌ ಕೀಬೋರ್ಡ್‌, ಪಿಯಾನೋ... ಒಂದೇ ಎರಡೇ... ಕಣ್ಣೆದುರಿಗೆ ಹೊಸ ಪ್ರಪಂಚವೇ ತೆರೆದುಕೊಂಡಿತು. ಮಗನಂತೂ ಪಿಟೀಲು ಮರೆತು ಅಲ್ಲಿದ್ದ ಎಲ್ಲ ಡ್ರಮ್‌, ತಂತಿವಾದ್ಯಗಳ ಮೇಲೂ ಕೈಯಾಡಿಸುತ್ತಿದ್ದ. ಬರೇ ವಿಜ್ಞಾನವಷ್ಟೆ ಪ್ರಪಂಚವಾಗಿದ್ದ ನನಗೆ ಸಂಗೀತ ಲೋಕದ ಪರಿಚಯ ಆಯಿತು.

ಐವತ್ತರ ಹೊಸ್ತಿಲಲ್ಲಿರುವಾಗ ಸಂಗೀತ ಕಲಿಯೋಣ ಎನ್ನುವ ಉತ್ಸಾಹ ಬಂದಿದೆ ಎಂದರೆ ನೀವು ನಂಬಲೇಬೇಕು. ಆದರೆ ಒಂದು ಪುಟ ಬರೆಯುವುದರೊಳಗೆ ಹಿಡಿದುಕೊಳ್ಳುವ ಟೆನಿಸ್‌ ಎಲ್ಬೋ, ಹತ್ತು ನಿಮಿಷ ಭಾಷಣ ಮಾಡುವುದರೊಳಗೆ ಒಣಗಿ ಹಿಡಿದುಕೊಳ್ಳುವ ಗಂಟಲು, ಹೆಂಡತಿ ಹತ್ತು ಬಾರಿ ಕರೆದರೂ ಗಮನಗೊಡದ ಕಿವಿ... ಇವು ನನ್ನ ಈ ಉತ್ಸಾಹಕ್ಕೆ ’ಸಾಥ್‌’ ಕೊಡುತ್ತವೆಯೇ? ’ಸಾಧನೆ’ ವಯಸ್ಸನ್ನೂ ಮೀರಬಹುದೇ? ಪ್ರಯತ್ನಿಸಿ ನೋಡಬೇಕಷ್ಟೆ!

ಛೀ! ಸೋಮಾರಿ!!!

ಈ ಬ್ಲಾಗ್‌ನಲ್ಲಿ ಹೊಸ ಅಕ್ಷರ ಮೂಡಿ ಒಂದು ವರ್ಷಕ್ಕೂ ಹೆಚ್ಚು ಕಾಲವಾಗಿದೆ. ಇದಕ್ಕೆ ಸೋಮಾರಿತನವೇ ಕಾರಣ ಅನ್ನೋಣ. ಸೋಮಾರಿ ತನಕ್ಕೆ ಸಮಜಾಯಿಷಿಯೂ ಇಲ್ಲ. ಕ್ಷಮೆಯೂ ಇಲ್ಲ. ಅದಕ್ಕೇ ಈ ಎರಡು ಸಾಲಿನ ಬ್ಲಾಗ್‌!

Thursday, June 26, 2008

ಹಾ! ಕಳ್ಳ!

ಮೊನ್ನೆ ಎಕೆಬಿಯವರ (ಅಡ್ಯನಡ್ಕ ಕೃಷ್ಣಭಟ್ಟರ) ಮನೆಗೆ ಹೋಗಿದ್ದೆ. ಅವರು ಊರಿನಲ್ಲಿ ಇರಲಿಲ್ಲವಾದ್ದರಿಂದ, ಭೇಟಿ ನೀಡಿ ಬಹಳ ದಿನಗಳಾಗಿತ್ತು. ಕರೆಗಂಟೆ ಬಾರಿಸಿದಾಗ ಎಂದಿನಂತೆ "ಬನ್ನಿ, ಶರ್ಮರೆ" ಎನ್ನುವ ಆತ್ಮೀಯ ಕರೆ ಬರುವುದು ತುಸು ತಡವಾಯಿತು. ಸಂಜೆಯ ಇಳಿಹೊತ್ತಿನ ಮಸುಕಿನಲ್ಲಿ ನನ್ನ ಬಣ್ಣವೂ ಬೆರೆತು, ಕಳ್ಳನಂತೆ ಕಂಡೆನೋ ಎನಿಸಿತು. ಮತ್ತೆ ಎಂದಿನ ಪ್ರೀತಿಯ ಕರೆ. ಭಟ್ಟರೊಬ್ಬರೆ ಮನೆಯಲ್ಲಿದ್ದರು. ಸರಸಕ್ಕ ಇರಲಿಲ್ಲ. "ಅಕ್ಕ ಅಂಗಡಿಗೆ ಹೋಗಿದ್ದಾರೆ. ನೀವು ಈಗ ಬಂದದ್ದು ಒಳ್ಳೆಯದೇ ಆಯಿತು." ಎಂದ ಭಟ್ಟರ ಪೀಠಿಕೆ ಯಾವುದೋ ಮುಖ್ಯ ಸಮಾಚಾರ ಇದೆ ಎಂದು ಸೂಚಿಸಿತು. ಸಾಮಾನ್ಯವಾಗಿ ನಮ್ಮಿಬ್ಬರ ಸಂಭಾಷಣೆ ವಿಜ್ಞಾನ ಬರವಣಿಗೆ, ಪದಬಳಕೆಯ ದೋಷಗಳು, ಬರವಣಿಗೆ ತಂತ್ರಗಳು, ಇತಿಹಾಸ ಇತ್ಯಾದಿಯತ್ತಲೇ ಇರುವುದರಿಂದ, ಸರಸಕ್ಕ ನಮ್ಮ ಸಂಭಾಷಣೆಗೆ ಮೂಕ ಶ್ರೋತೃ. ಬಹುಶಃ ಅವರಿಗೆ ಅನಾವಶ್ಯ ಕಿರುಕುಳವಾಗದಿರಲಿ ಎಂದು ಹೀಗೆ ಹೇಳಿದರೇನೋ ಎಂದು ಕೊಂಡೆ. ಆದರೆ ಅನಂತರ ಭಟ್ಟರು ಹೇಳಿದ ಸಂಗತಿಗಿಂತಲೂ ಅವರು ಹೇಳಿದ ರೀತಿ ಮನ ತಟ್ಟಿತು. ವಿಷಯ ಇಷ್ಟೆ. ಅವರು ಊರಿಗೆ ಹೋಗಿದ್ದಾಗ ಅವರ ಮನೆಯ ಕಿಟಕಿಯ ಸರಳುಗಳನ್ನು ಬಾಗಿಸಿ, ಒಳನುಗ್ಗಿದವರು, ಮನೆಯಲ್ಲಿ ಜಾಲಾಡಿದ್ದರು. "ನೋಡಿ, ಈ ಕಬ್ಬಿಣದ ಕಂಬಿ ಎಷ್ಟು ಗಟ್ಟಿ. ಇದನ್ನು ಬಾಗಿಸಿದ್ದಾರೆ ಎಂದರೆ ಎಷ್ಟು ಬಲ ಬಳಸಿರಬೇಕು," ಭಟ್ಟರ ಒಳಗಿನ ಫಿಸಿಕ್ಸ್‌ ಶಿಕ್ಷಕ ಲೆಕ್ಕ ಹಾಕಿತು. "ಇದೇನು ವಿಚಿತ್ರ ಶರ್ಮರೆ, ನಾವು ಯಾವ ಕೋಣೆಯ ಬಾಗಿಲನ್ನೂ ಹಾಕಿರಲಿಲ್ಲ. ಎಲ್ಲವೂ ತೆರೆದಿತ್ತು. ಇದೊಂದು ಕೋಣೆಯ ಬಾಗಿಲನ್ನು ಹಾಕಿದ್ದೆವು. ಅದನ್ನೇ ಮುರಿದಿದ್ದಾರೆ. ಅಲಮಾರಿಯ ಬೀಗಗಳನ್ನೂ ಹಾಕಿರಲಿಲ್ಲ. ಒಟ್ಟು ಒಂದಿನ್ನೂರು ರೂಪಾಯಿಗಳು, ಒಂದು ಹಳೆಯ, ರಿಪೇರಿಗೆ ಇದ್ದ ಕ್ಯಾಮೆರಾ ಇವಷ್ಟೆ ತೆಗೆದುಕೊಂಡು ಹೋಗಿದ್ದಾರೆ." ಸಜ್ಜನಿಕೆಯ ಭಟ್ಟರ ವಿವರಣೆಯಲ್ಲಿ ಎಲ್ಲಿಯೂ ಕಳ್ಳ ಎನ್ನುವ ಪದ ಕಾಣಿಸಲಿಲ್ಲ. ಯಾರೋ ಕುಶಲಕಲೆಗಾರನ ಕಥೆ ಹೇಳುವಂತೆ ಹೇಳಿದರು. ತಮಗೆ ಅನ್ಯಾಯ ಮಾಡಿದವರನ್ನೂ ಹೀಗಳೆಯದ ಸಜ್ಜನಿಕೆ ಅವರಲ್ಲಿ ಕಂಡು ವಿಚಿತ್ರವೆನ್ನಿಸಿತು. ಅವರಲ್ಲಿ ಸಿಟ್ಟಿನ ಲೇಶವೂ ಇರಲಿಲ್ಲ.

"ಹಣ ಹೋದದ್ದಕ್ಕೆ ಬೇಸರವಿಲ್ಲ ಶರ್ಮರೆ. ಆದರೆ ಯಾರೋ ಅಪರಿಚಿತರು ನಮ್ಮ ಸೀಮೆಯೊಳಗೆ, ಅನುಮತಿ ಇಲ್ಲದೆ ಪ್ರವೇಶಿಸಿದರು ಅನ್ನುವ ಅನಿಸಿಕೆಯೇ ಎದೆಯನ್ನು ಭಾರವಾಗಿಸಿದೆ," ಎಂದ ಎಪ್ಪತ್ತರ ವೃದ್ಧರ ಮಾತು ಎದೆ ತಟ್ಟಿತು. ಅಷ್ಟರಲ್ಲಿ ಬಂದ ಸರಸಕ್ಕ, ಮೊಮ್ಮಗಳು ಕಳ್ಳನ ಬಗ್ಗೆ ಕೇಳಿದ ಪ್ರಶ್ನೆಗಳನ್ನು ನೆನಪಿಸಿಕೊಂಡರು. ಕಳ್ಳ ಯಾರು? ಅವನಿಗೆ ಮೀಸೆ ಇದೆಯಾ? ಕಳ್ಳನ ಬಣ್ಣ ಏನು? ನೋಡಿದರೆ ಹೆದರಿಕೆ ಆಗುತ್ತದೆಯಾ? ನಿಜ. ಕಳ್ಳ ಎನ್ನುವವರ ಸ್ವರೂಪ ಹೇಗಿದೆ ಎಂದು ಕಲ್ಪಿಸಿಕೊಳ್ಳುವುದು ಕಷ್ಟವೇ! ಹಳೆಯ ಸಿನಿಮಾದ ಸ್ಟೀರಿಯೊಟೈಪ್‌ ನೆನಪಿಗೆ ಬರುತ್ತದೆ. ಕಣ್ಣಷ್ಟೆ ತೋರುವಂತೆ ಮುಖವಾಡ. ಕೈಯಲ್ಲೊಂದು ಚಾಕು. ಇಂಗ್ಲೀಷ್‌ ಸಿನೆಮಾಗಳಲ್ಲಿಯಾದರೆ ಪಟ್ಟೆ ಅಂಗಿ. ಆದರೆ ನಿಜವಾಗಿ ಕಳ್ಳ ಎಂದರೆ ಏನು?

ಭಟ್ಟರು ಹೇಳಿದಂತೆ ನಮ್ಮ ಸೀಮೆಯೊಳಗೆ ಅನುಮತಿ ಇಲ್ಲದೆ ಪ್ರವೇಶಿಸಿ, ಅಪರಿಚಿತನಾಗಿ ಉಳಿವ, ನಷ್ಟ ಉಂಟು ಮಾಡುವವರನ್ನು ಕಳ್ಳರು ಎನ್ನಬಹುದೇ? ಅದುವೇ ಸರಿ ಎಂದು ಅನಿಸಿತು. ಹೀಗಾದರೆ ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಕಳ್ಳತನ ಮಾಡಿದವರೇ ಆಗಿರಬೇಕಲ್ಲವೇ? ಬಾಗಿಲು ಮುರಿಯದಿರಬಹುದು. ಆದರೆ ಯಾರದ್ದೋ ಮನದಲ್ಲಿನ ನೆನಪುಗಳಲ್ಲಿ, ನಮ್ಮ ಅರಿವಿಗೇ ಬಾರದೆ, ಅಪರಿಚಿತರಾಗಿ ನಡೆಸಿದ ಯಾವುದೋ ಕೃತ್ಯ, ಕಳ್ಳತನವಾಗಬಹುದಲ್ಲವೇ? ರೈಲು ನಿಲ್ದಾಣದಲ್ಲಿ ಟಿಕೇಟು ಕ್ಯೂನಲ್ಲಿ ಮೆಲ್ಲನೆ ಸರದಿ ತಪ್ಪಿಸಿ ಟಿಕೇಟು ಕೊಂಡು ಏನೋ ಗೆದ್ದವರಂತೆ ನಡೆಯುವಾಗಲೂ, ಯಾರ ಮನಸ್ಸಿನಲ್ಲಿಯೋ ನಾವು ಕಳ್ಳರಾಗಿ ಉಳಿಯಬಹುದಲ್ಲ! ಬಸ್ಸಿನಲ್ಲಿ ಕೈಗಳೆರಡರಲ್ಲೂ ಸಾಮಾನು ಇಟ್ಟುಕೊಂಡು ಸುಸ್ತಾಗಿ ನಿಂತವರು ಖಾಲಿಯಾದ ಸೀಟಿಗೆ ತಲುಪುವುದಕ್ಕೆ ಮುನ್ನವೇ ಓಡಿ, ಜಂಭದ ನಗು ನಗುತ್ತ ಕುಳಿತುಕೊಳ್ಳುವಾಗಲೂ ನಾವು ಕಳ್ಳತನ ಮಾಡಿರಬಹುದಲ್ಲವೇ? ಅಥವಾ ಅದು ಸ್ಪರ್ಧೆಯೋ? ಒಟ್ಟಾರೆ ಭಟ್ಟರ ಮೊಮ್ಮಗಳಿಗೆ ಕಳ್ಳನ ವಿವರಣೆ ಕೊಡುವುದು ಹೇಗೆಂದು ಆಲೋಚಿಸುತ್ತ ಮನೆಗೆ ಬಂದೆ.

ಹಾಂ. ಈ ಬ್ಲಾಗ್‌ನಲ್ಲಿ ಭಟ್ಟರ ಬದುಕಿನ ಈ ಖಾಸಗಿ ಘಟನೆಯನ್ನು ಬರೆಯುವುದೂ ಕಳ್ಳತನವೇ! ಸದ್ಯ. ಭಟ್ಟರು ಇದಕ್ಕೆ ಅನುಮತಿ ನೀಡಿದ್ದಾರೆ ಎನ್ನುವ ಸಮಾಧಾನ ಹೇಳಿಕೊಳ್ಳಬೇಕಷ್ಟೆ.

Saturday, March 1, 2008

ಒಂದು ಸಾವಿನ ನೆನಪು!

ಇನ್ನೇನು ಮೂರು ತಿಂಗಳು ಕಳೆದರೆ ನಾಲ್ಕು ವರ್ಷಗಳಾಗುತ್ತವೆ. ಆದರೆ ಅಂದು ಎದೆ ನಡುಗಿಸಿದ ಭೀತಿ ಇನ್ನೂ ಮರೆಯಾಗಿಲ್ಲ. ಬೇರೆ ಇನ್ನೇನು ಕಾರಣ ಹೇಳಬಹುದು? ಆ ದಿನ ಬೆಳ್ಳಂಬೆಳಗ್ಗೆ, ವಿಜಯನಗರದ ಸಮೀಪ, ರಸ್ತೆಯಿಂದ ಜಾರಿ ಬದಿಯ ಹಳ್ಳಕ್ಕೆ ಬಿದ್ದ ಕಾರಿನ ಪುಕ್ಕದ ದೀಪ ಹೊಳೆಯುತ್ತಲೇ ಇತ್ತು. ಆದರೆ ನಾನು ಅಲ್ಲಿ ನಿಲ್ಲದೇ ಓಡಿಬಿಟ್ಟೆ. ಕಾರಿನಲ್ಲಿ ಯಾರಾರೂ ಇದ್ದಾರೋ ಇಲ್ಲವೋ ಗಮನಿಸಲೂ ಇಳಿಯಲಿಲ್ಲ. ಅನಾಗರೀಕನಾಗಿಬಿಟ್ಟೆ. ಇನ್ನೊಂದು ದಿನ ಕೆಡಿ ವೃತ್ತದ ಬಳಿ, ಮಟ-ಮಟ ಮಧ್ಯಾಹ್ನ ಎರಡು ಬೈಕ್‌ಗಳ ಢಿಕ್ಕಿಯಾಗಿ, ಒಬ್ಬ ಅಂಗಾತ ಬಾಯಿ ಬಿಟ್ಟು ರಸ್ತೆಯಲ್ಲಿಯೇ ಬಿದ್ದಿದ್ದರೂ, ನಾನು ಕೆಲಸಕ್ಕೆ ತಡವಾದೀತು ಎಂದು ಕಾರಣ ಹೇಳಿಕೊಂಡು ಓಡಿ ಬಿಟ್ಟೆ. ಬೇರೆ ದಿನಗಳಲ್ಲಿ ಕೆಲಸಕ್ಕೆ ತಡವಾದರೆ, ರಜೆ ಹಾಕಿದರಾಯಿತು ಬಿಡು ಎನ್ನುವ ಧಾರ್ಷ್ಟ್ಯ ತೋರುವವ, ಅಂದು ಬಹಳ ಪ್ರಾಮಾಣಿಕನಂತೆ ಓಡಿ ಬಿಟ್ಟೆ.

ಒಂದಲ್ಲ ಎರಡಲ್ಲ, ಕಳೆದ ನಾಲ್ಕು ವರ್ಷಗಳಲ್ಲಿ ಹತ್ತಾರು ಅಪಘಾತಗಳನ್ನು ನೇರವಾಗಿ ನೋಡಿದ್ದೇನೆ. ಎಲ್ಲಿಯೂ ನಾಗರೀಕನಂತೆ ವರ್ತಿಸಲಿಲ್ಲ. ಯಾಕೋ, ಎದೆ ಢವಗುಟ್ಟುತ್ತದೆ. ನಾಲ್ಕು ವರ್ಷಗಳ ಹಿಂದೆ, ಬಾಗಿಲ ಎತ್ತರಕ್ಕೂ ನಿಂತು, "ಅಂಕಲ್‌, ಎರಡೇ ನಿಮಿಷ. ಹೀಗೆ ಹೋಗಿ ಹಾಗೆ ಬಂದು ಬಿಡುತ್ತೀನಿ. ನೀವು ರೆಸ್ಟ್‌ ತೆಗೆದುಕೊಳ್ಳಿ," ಎಂದು ಹೋದವ ಮತ್ತೆ ಬರಲೇ ಇಲ್ಲ. ನಾನು ಕಾದದ್ದೇ ಆಯಿತು. ಬಂದದ್ದು ಪಕ್ಕದ ಮನೆಯಾಕೆ. "ಮೂಲೆಯಲ್ಲಿ ಒಂದು ಆಕ್ಸಿಡೆಂಟ್‌ ಆಗಿದೆ. ಸ್ಪಾಟ್‌. ಹುಡುಗ ಯಾರು ಅಂತ ಹುಡುಕುತ್ತಿದ್ದಾರೆ. ನಿಮಗೇನಾದರೂ ಗುರುತು ಸಿಗುತ್ತದೆಯೋ," ಎಂದು ಕೇಳಲು ಬಂದಿದ್ದರು. ಓಡಿದೆ. ನನ್ನ ಅನುಮಾನ ನಿಜವಾಗಿತ್ತು.ಅಲ್ಲಿ ಇದ್ದದ್ದು ಅವನದ್ದೇ ಬೈಕ್‌. ಅವನಿರಲಿಲ್ಲ."ಓಹ್‌, ದೇವರೇ!" ಅಪ್ಪಟ ನಾಸ್ತಿಕನ ಬಾಯಿ ಅಯಾಚಿತವಾಗಿ ನುಡಿದಿತ್ತು. ಬಳಿಯಲ್ಲೇ ಇದ್ದ ಪೋಲೀಸನ್ನು ವಿಚಾರಿಸಿದ್ದೆ. "ಎಲ್ಲಿ ಹುಡುಗ?" "ಶವಾಗಾರದಲ್ಲಿ," ಎಂದು ನಿರ್ಲಿಪ್ತನಾಗಿ ನುಡಿದಿದ್ದ. ಡಾಕ್ಟರುಗಳು, ಪೋಲೀಸರು ಸಾವನ್ನು ವರದಿ ಮಾಡುವಷ್ಟು ನಿರ್ಭಾವುಕರಾಗಿ ಇನ್ಯಾರೂ ಮಾಡಲು ಸಾಧ್ಯವಿಲ್ಲ. ಅದಕ್ಕೂ ಬಹುಶಃ ತರಬೇತಿ ಬೇಕಾಗಬಹುದು.

ಹೌದು. ತೇಜ ಇನ್ನಿಲ್ಲ ಎನ್ನುವ ವಿಷಯ ಎದೆಗೆ ಒದ್ದಿತು. ತೊಡೆ ಥರ,ಥರ ನಡುಗಿತು. ಮನೆಗೆ ಓಡಿ ಬಂದೆ. ನನ್ನ ಮುಖ ನೋಡಿಯೇ ಮಡದಿಗೆ ವಿಷಯ ತಿಳಿದಿತ್ತು ಎನ್ನಿಸುತ್ತೆ. ಪಕ್ಕದಲ್ಲಿ ಅತೀವ ಜ್ವರದಲ್ಲಿ ಮಲಗಿದ್ದ ಮಗನನ್ನೂ ಮರೆದು ಓ ಎಂದು ಅಳತೊಡಗಿದಳು. ನಿಜ. ಸಾವು ಯಾರಿಗೂ ಹೇಳಿ ಬರುವುದಿಲ್ಲ. ಯಾರನ್ನೂ ಅದು ಅಪಾಯಿಂಟ್‌ಮೆಂಟ್‌ ಕೇಳುವುದಿಲ್ಲ. ಆದರೆ, ಹೀಗೇ ಏಕೆ? ಕೆಲವೇ ನಿಮಿಷಗಳ ಹಿಂದೆ ನಗುವಾಗಿದ್ದವ, ಶವವಾಗಿದ್ದ. ತಲೆಯೊಡೆದು ಬಿದ್ದು ಶವಾಗಾರದ ಒಂದು ಪೆಟ್ಟಿಗೆಯ ನಂಬರ್‌ ಆಗಿದ್ದ. ಬರೇ ಬಾಡಿ. ಯಾರಾದರೂ ನೀರು ಕುಡಿಸಿದರೋ ಇಲ್ಲವೋ? ಸಾಯುವ ಮೊದಲು ಏನು ಹೇಳಿರಬಹುದು? ಅಂಕಲ್‌ ಎಂದನೇ? ಅಥವಾ ನನಗಿಂತಲೂ ಆಪ್ತಳಾಗಿದ್ದ ಮಡದಿಯನ್ನು ನೆನಪಿಸಿಕೊಂಡನೇ? ಇಲ್ಲ, ಮನೆಯಲ್ಲಿ ಜ್ವರದಿಂದ ಮಲಗಿದ್ದ ಮಗನಿಗಾಗಿ ಔಷಧಿ ತರಲು ಹೋಗಿದ್ದನಲ್ಲ? ಅವನನ್ನು ಕರೆದನೇ? ಸಾವನ್ನು ಎದುರಿಸಿದಾಗ ಏನು ಮಾತನಾಡಿರಬಹುದು? ಏನೇನು ಭಾವನೆಗಳು ಬಂದಿರಬಹುದು? ನೋವಾಯಿತೋ? ಅಥವಾ ಏನೂ ಗೊತ್ತೇ ಆಗಲಿಲ್ಲವೋ?

ಅಂದಿನಿಂದ ಇಂದಿನವರೆವಿಗೂ ಅಪಘಾತಗಳನ್ನು ಎದುರಿಸಲು ಭಯವಾಗುತ್ತದೆ. ಪರಿಚಿತ ಮುಖದ ಮೇಲೆ ಘಾಯ, ರಕ್ತದ ಕಲೆಗಳು ಇರುವುದನ್ನು ಸಹಿಸಲಾಗುವುದಿಲ್ಲ. ಸಾವು ನನ್ನನ್ನೂ ಹಿಡಿದು ಬಿಟ್ಟೀತೇನೋ ಎನ್ನುವ ಆತಂಕವಿರುವವನಂತೆ ಅಪಘಾತಗಳಿಂದ ದೂರ ಓಡುತ್ತೇನೆ. ರಸ್ತೆಯಲ್ಲಿ ಚಲಿಸುವಾಗ, ಬದಿಯಿಂದ ಯಾವುದೇ ವಾಹನ ವೇಗದಿಂದ ಚಲಿಸಿದರೂ "ಆ ಕ್ಷಣ" ನೆನಪಾಗುತ್ತದೆ. "ಅಂಕಲ್‌, ಎರಡೇ ನಿಮಿಷ. ಹೀಗೆ ಹೋಗಿ ಹಾಗೆ ಬರುತ್ತೇನೆ," ಎಂದದ್ದು ಧ್ವನಿಸುತ್ತದೆ. ಆ ಕೊನೆಯ ಶಬ್ದಗಳು ಎಲ್ಲಿಯಾದರೂ ಕೇಳಿಸಿಬಿಟ್ಟರೆ ಎನಿಸುತ್ತದೆ. ಸಾಯುವವರ ಸನಿಹದಲ್ಲಿ ಇರುವುದಕ್ಕಿಂತಲೂ ಸತ್ತವರನ್ನು ಮಣ್ಣು ಮಾಡುವುದು ಸುಲಭವೇನೋ ಎನಿಸುತ್ತದೆ. ರೊಯ್ಯನೆ ಬದಿಯಿಂದ ಬೈಕ್‌ ಮುಂದೋಡಿದರೆ, ಈ ಎಲ್ಲ ಭಾವನೆಗಳೂ ಒಂದು ಕ್ಷಣ ಎದುರಾಗಿ, ಸ್ಟೀರಿಂಗ್‌ ನಡುಗುತ್ತದೆ. ನಾನು ಮತ್ತೆಂದು ನಾಗರೀಕನಾಗುವೆನೋ?

Saturday, February 23, 2008

ಕೃತಿಚೌರ್ಯ

ನಿನ್ನೆ (೨೩.೧.೨೦೦೮) ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಯಲ್ಲಿ ತಿರುಪತಿ ವಿಶ್ವವಿದ್ಯಾನಿಲಯ ಅಲ್ಲಿನ ಪ್ರೊಫೆಸರ್‌ ಒಬ್ಬರಿಗೆ ಶಿಕ್ಷೆ ವಿಧಿಸಿದ್ದು ಓದಿದೆ. ಅಪರಾಧ: ಕೃತಿಚೌರ್ಯ. ವಿಜ್ಞಾನ ಮತ್ತು ಶೈಕ್ಷಣಿಕ ಜಗತ್ತಿನಲ್ಲಿ ಕೃತಿಚೌರ್ಯದಷ್ಟು ಹೀನ ಕೃತ್ಯ ಇನ್ನೊಂದಿಲ್ಲ. ಇವೆರಡೂ ಕ್ಷೇತ್ರಗಳೂ ಬೌದ್ಧಿಕ ಚಟುವಟಿಕೆಗೆ ಮೀಸಲು. ಇಲ್ಲಿ ನಿಮ್ಮ ಚಿಂತನೆಗಳು ಮೂರ್ತ ರೂಪ ಪಡೆಯುತ್ತವೆ. ವಿಜ್ಞಾನ ಕ್ಷೇತ್ರದಲ್ಲಂತೂ, ವೈಯಕ್ತಿಕ ಚಿಂತನೆಗಳು ಪ್ರಯೋಗ, ಪರಾಮರ್ಶೆಗಳ ಒರೆಯಲ್ಲಿ ಪುಟವಿಟ್ಟು ಬರುತ್ತವೆ. ಈ ದಿನಗಳಲ್ಲಿ ನಿತ್ಯವೂ ಲಕ್ಷಾಂತರ ಸಂಶೋಧನಾ ಪ್ರಬಂಧಗಳು ಪ್ರಕಟವಾಗುತ್ತಿವೆ. ಇವುಗಳೆಲ್ಲವನ್ನೂ ಕೃತಿಚೌರ್ಯವಲ್ಲ ಎಂದು ವೈಜ್ಞಾನಿಕ ಜಗತ್ತು ನಂಬುತ್ತದೆ. ಏಕೆಂದರೆ, ಪ್ರಕಟಣೆಯಾಗುವ ಮುನ್ನ ಈ ಎಲ್ಲ ಪ್ರಬಂಧಗಳೂ ವಿಜ್ಞಾನ ಜಗತ್ತಿಗೇ ವಿಶಿಷ್ಟವೆನ್ನಿಸಿದ ಪೀರ್‌ ರಿವ್ಯೂ (ಸೋದರ ಪರಾಮರ್ಶೆ)ಯ ಶೋಧಕದಿಂದ ಹೊರ ಬರಬೇಕು. ಪ್ರಬಂಧಗಳನ್ನು ಅವುಗಳಲ್ಲಿನ ವೈಜ್ಞಾನಿಕ ಅಡಕಗಳ ಸತ್ಯಾಸತ್ಯತೆಯ ಪರಿಶೀಲನೆಗೆಂದು ಅದೇ ಕ್ಷೇತ್ರದಲ್ಲಿ ಸಂಶೋಧನೆಗೈಯುತ್ತಿರುವ ಇನ್ನೂ ಹಲವರಿಗೆ ತಲುಪಿಸಲಾಗುತ್ತದೆ. ಲೇಖಕ ಯಾರೆಂಬುದು ಈ ಪರಾಮರ್ಶಕರಿಗೆ ತಿಳಿದಿದ್ದರೂ, ಪರಾಮರ್ಶಕರು ಯಾರೆಂಬುದು ಲೇಖಕರಿಗೆ ತಿಳಿದಿರುವುದಿಲ್ಲ. ಪರಾಮರ್ಶಕರು, ಲೇಖನದಲ್ಲಿರುವ ಪ್ರಯೋಗಗಳು,ಫಲಿತಾಂಶಗಳು ಹಾಗೂ ಅವುಗಳಿಂದ ಪಡೆದ ತೀರ್ಮಾನವೆಲ್ಲವೂ ಸತ್ಯ ಎಂದು ಮನವರಿಕೆ ಮಾಡಿಕೊಂಡು, ಪ್ರಕಟಣೆಗೆ ಯೋಗ್ಯವೆಂದು ತೀರ್ಮಾನಿಸುತ್ತಾರೆ. ಇಲ್ಲಿ ಭಾಷೆ ಮುಖ್ಯವಾಗುವುದಿಲ್ಲ. ಅದಾದ ಅನಂತರ ಕೃತಿ ಪ್ರಕಟವಾಗುತ್ತದೆ. ವೈಜ್ಞಾನಿಕ ಜಗತ್ತಿನಲ್ಲಿ ತನ್ನ ನೆಲೆ ಕಂಡುಕೊಳ್ಳುತ್ತದೆ.

ತಿರುಪತಿಯ ಪ್ರೊಫೆಸರ್‌ರವರು ಇದುವರೆವಿಗೂ ಪ್ರಕಟಿಸಿರುವ ೭೫ ಪ್ರಬಂಧಗಳೂ ಕೃತಿಚೌರ್ಯವಿರಬಹುದು ಎಂದು ಗುಮಾನಿಸಲಾಗಿದೆ. ಗುಮಾನಿಗೆ ಕಾರಣ: ಅವರು ಪ್ರಬಂಧಗಳಲ್ಲಿ ನಮೂದಿಸಿರುವ ಪ್ರಯೋಗಗಳನ್ನು ನಡೆಸುವ ಸವಲತ್ತು ಅವರ ವಿಶ್ವವಿದ್ಯಾನಿಲಯದಲ್ಲಿ ಇರಲೇ ಇಲ್ಲ! ವಿಜ್ಞಾನ ಜಗತ್ತಿನಲ್ಲಿ ಸಂಶೋಧನೆಗಳನ್ನು ಸತ್ಯಾಸತ್ಯತೆಯ ಪರೀಕ್ಷೆ ಎನ್ನಲಾಗುತ್ತದೆ. ಇಲ್ಲಿ ಭಾವುಕತೆಗೆ, ಕಲ್ಪನಾವಿಹಾರಕ್ಕೆ ಎಡೆ ಇಲ್ಲ. ಆದರೂ, ಕೇವಲ ಕಾಲ್ಪನಿಕ ಸಂಶೋಧನೆಗಳನ್ನು ನಡೆಸಿಯೇ ಇಷ್ಟು ವರುಷ ವಿದ್ವತ್‌ ಜಗತ್ತಿನಲ್ಲಿ ಬದುಕುಳಿದ ಈ ಚಾಣಾಕ್ಷ ಮತಿಯನ್ನು ಹೊಗಳಬೇಕೇ, ತೆಗಳಬೇಕೇ?

ಭಾರತದಲ್ಲಿ ಕೃತಿಚೌರ್ಯದ ಸಂಗತಿ ಬಯಲಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರುಷ ಚೆನ್ನೈನಲ್ಲಿರುವ ಅಣ್ಣಾಮಲೈ ವಿಶ್ವವಿದ್ಯಾನಿಲಯದ ಫಿಸಿಕ್ಸ್‌ ಸಂಶೋಧಕನೊಬ್ಬ, ಹತ್ತು ತಿಂಗಳ ಹಿಂದೆ ಸುಪ್ರಸಿದ್ಧ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಸಂಶೋಧನಾ ಪ್ರಬಂಧವೊಂದನ್ನು ಸಾರಾಸಗಟು (ಪದಕ್ಕೆ ಪದ) ನಕಲು ಮಾಡಿ, ಅದರ ಶೀರ್ಷಿಕೆ ಬದಲಿಸಿ ಪ್ರಕಟಿಸಿದ್ದ. ವಿಷಯ ಬಯಲಾದಾಗ, ಅದು ತನ್ನದೇ ಎಂದು ವಾದಿಸಿಯೂ ಇದ್ದ.

ಹೀಗೆ ವೈಜ್ಞಾನಿಕ ಜಗತ್ತಿನ ಆಧಾರಸ್ತಂಭವೆನ್ನಿಸಿದ ವಿಶ್ವಾಸದ ಬುಡಕ್ಕೇ ಕೊಡಲಿಯೇಟು ನೀಡುವವರಿಗೆ ನೀಡುವ ಶಿಕ್ಷೆಯಾದರೂ ಏನು? ಇನ್ನು ಮುಂದೆ ಅವರು ಸಂಶೋಧನೆ ನಡೆಸಬಾರದು, ಅಷ್ಟೆ. ಎಂದಿನಂತೆ ಪಾಠ ಹೇಳಬಹುದು. ಕಲಿಸುವರೋ, ಕದಿಯಲು ತಿಳಿಸುವರೋ ಯಾರು ಬಲ್ಲರು.

Thursday, May 10, 2007

ಗಂಡ-ಹೆಂಡತಿ

ಈ ಬಗ್ಗೆ ನಾನು ಎಂದೂ ಗಂಭೀರವಾಗಿ ಚಿಂತಿಸಿರಲಿಲ್ಲ. ಈಗಲೂ ಅಷ್ಟು ಗಹನವಾಗಿ ಚಿಂತಿಸುತ್ತಿಲ್ಲವೇನೋ? ಆದರೆ ಈ ಬ್ಲಾಗ್‌ ಬರೆಯಲು ಕಾರಣ, ಮೊನ್ನೆ ಮಂಜುವಿನ ಜೊತೆಗೆ ನಡೆದ ಸಂವಾದ ಹಾಗೂ ಸಂಜೆ ರಜೆಗೆಂದು ಊರಿಗೆ ತೆರಳಿರುವ ಮಡದಿ ಫೋನಾಯಿಸಿ, "ಐ ಮಿಸ್‌ ಯು" ಎಂದದ್ದು.

ಹಾಗಂತ ನಮ್ಮ ದಾಂಪತ್ಯವೇನೂ ಇತ್ತೀಚಿನದಲ್ಲ. ೨೩ ವರುಷಗಳ ಹಿಂದೆಯೇ ಒಬ್ಬರಿನ್ನೊಬ್ಬರ ಜೊತೆ ಇಡೀ ಜೀವನ ಸವೆಸೋಣ ಎಂದು ತೀರ್ಮಾನಿಸಿದ್ದೆವು. ಆಗ ಈ ಬಗ್ಗೆ ಏನೋ ಹೊಸ ಖುಷಿ ಇತ್ತು. ಕಛೇರಿ ರಾಜಕೀಯ, ಸೈಟ್‌ ಬೆಲೆ ಅತಿ ಹೆಚ್ಚಾಗಿ ಹೋದ ಚಿಂತೆ, ಮಕ್ಕಳು ಶಾಲೆಯಿಂದ ಬಂದ ಅನಂತರ ಸರಿಯಾಗ ಊಟ ಮಾಡದ ಬಗ್ಗೆ ಆತಂಕ, ಪ್ರತಿದಿನವೂ ನೀರು ಸರಬರಾಜು ಆಗುತ್ತದೆ ಎಂದು ನಿತ್ಯ ಪತ್ರಿಕೆಯಲ್ಲಿ ಓದಿದ ಮೇಲೂ ನಲ್ಲಿಯ ಮುಂದೆ ತಪಸ್ಸು ಮಾಡಬೇಕಾದ ಅನಿವಾರ್ಯತೆ, ಇನ್‌ಕಂಟ್ಯಾಕ್ಸ್ ಹೆಚ್ಚಾದ ಗತಿಯಲ್ಲಿಯೇ ಇಂಕ್ರಿಮೆಂಟೂ ಏಕೆ ಹೆಚ್ಚಾಗುವುದಿಲ್ಲವೋ? ಇಂಕ್ರಿಮೆಂಟು ಹೆಚ್ಚಾದ ಗತಿಗಿಂತ ತರಕಾರಿಯ ಬೆಲೆ ಹೆಚ್ಚುವುದು ಯಾವಾಗಲೂ ತೀವ್ರವೇಕೋ? ಎಂಬ ಉತ್ತರವೇ ಇರದ ಪ್ರಶ್ನೆಗಳು,ಇತ್ಯಾದಿಗಳ ನಡುವೆ ನಾನು-ನೀನು ಎನ್ನುವ ಸಂಬಂಧವನ್ನು ಕುರಿತು ಮಾತನಾಡುವುದೇ ಮರೆತು ಹೋಗಿತ್ತೆನ್ನಿಸಿತು, ಮೊನ್ನೆ ನನ್ನವಳ ಕರೆ ಬರುವವರೆಗೆ.

ಇಪ್ಪತ್ತನಾಲ್ಕು ವರುಷಗಳ ಹಿಂದೆ ಸಾವಿರ ಮೈಲು ದೂರದಲ್ಲಿದ್ದಾಗ ಇದ್ದಷ್ಟು ಆತ್ಮೀಯತೆ ಈಗ ಕಡಿಮೆ ಆಗಿದೆಯೇನೋ? Familiarity breeds contempt ಅಂತಾರಲ್ಲ. ಸಹವಾಸದಿಂದ ಸಂಬಂಧಗಳು ಕೊಳೆಯುತ್ತವೆಯೋ? ಸಣ್ಣ ಪುಟ್ಟ ಸಂಗತಿಗಳ ಬಗ್ಗೆ ಉಂಟಾಗುತ್ತಿದ್ದ ವಿರಸ, ಸರಸವನ್ನು ಮರೆಸುತ್ತಿತ್ತೇನೋ?

ಇಪ್ಪತ್ತು ವರುಷದ ಸಹವಾಸದ ಬಗ್ಗೆಯೇ ಇಷ್ಟು ತೀವ್ರವಾಗಿ ಆಲೋಚಿಸುವವನಿಗೆ ಎಪ್ಪತ್ತು ವರುಷದ ಸಹವಾಸ ಮಾಡಿದವರ ಬಗ್ಗೆ ಆಲೋಚಿಸುವುದು ತಿಳಿದೀತೇ? ನಮ್ಮ ದಾಂಪತ್ಯದ ಬಗ್ಗೆಯೇ ಯೋಚಿಸುತ್ತಿದ್ದವನಿಗೆ ಅಪ್ಪನ ಮರಣ, ಎದ್ದು ಎದೆಗೊದೆದದ್ದು ನಿಜ. ಎಪ್ಪತ್ತು ವರುಷಗಳ ಕಾಲ ತನ್ನ ಜೊತೆಗಿದ್ದ ಒಂದು ಜೀವ ಮರೆಯಾಗಿ, ಮಣ್ಣಾಗಿ ಹೋಗಿದ್ದನ್ನು ತಾಯಿ ತಡೆದುಕೊಳ್ಳಬಹುದೇ? ಇಷ್ಟು ದೀರ್ಘ ಕಾಲ ಜೊತೆಗಿದ್ದ ಆಕೆಯ ಮನಸ್ಸಿನಲ್ಲಿ ಎಂತಹ ಭಾವನೆಗಳು ಇರಬಹುದು ಎನ್ನುವ ಪ್ರಶ್ನೆಗಳು ಅಪ್ಪನ ಚಿತೆಗೆ ಬೆಂಕಿಯಿಡುವಾಗಲೂ ಕಾಡುತ್ತಿತ್ತು.

ಉತ್ತರಕ್ಕೆ ಬಹಳ ದಿನ ಕಾಯಬೇಕಾಗಲಿಲ್ಲ. ನಿತ್ಯವೂ ಊಟ ಮಾಡುವಾಗ, ಅಥವಾ ಮಗ ಆಟವಾಡುವಾಗಲೂ ಅದರಲ್ಲಿ ತಂದೆಯ ಛಾಪನ್ನು ಅಮ್ಮ ಕಾಣುತ್ತಿದ್ದಳು. ನಿಜ. ಮೊಮ್ಮಗನಲ್ಲಿ ತಾತನ ಕಾಲು ಭಾಗ ವಂಶವಾಹಿಗಳು ಇರುತ್ತವೆ ಎನ್ನುವುದು ವಿಜ್ಞಾನ ಕಲಿತ ನನಗೆ ತಿಳಿಯದ್ದಲ್ಲ. ಆದರೆ ಅಪ್ಪ ಇರುವವರೆವಿಗೂ ಅಮ್ಮನಿಗೆ ಕಾಣದ ಈ ಸಾಮ್ಯ ಈಗ ಆ ಒಂಟಿತನದ ಕಾರಣವಾಗಿ ಎದ್ದು ತೋರುತ್ತಿತ್ತು. ನಾವೆಲ್ಲ ಬೆಳೆಯುತ್ತಿದ್ದಂತೆ ಅಪ್ಪ-ಅಮ್ಮನ ನಡುವೆ ತೀವ್ರವಾಗಿ ಕಾಣುತ್ತಿದ್ದ ವಿರಸ ಎಲ್ಲಿ ಹೋಯಿತೋ ತಿಳಿಯಲಿಲ್ಲ. ಇಡ್ಲಿಯ ಹಿಟ್ಟಿನ ಹದದಲ್ಲಿ, ದೇವರ ಪೂಜೆಗೆ ಹತ್ತಿಸಿದ ಗಂಧದ ಕಡ್ಡಿಯ ಪರಿಮಳದಲ್ಲಿ, ಕೊನೆಗೆ ಉಪ್ಪು ಕಟ್ಟಿ ಸೋರುತ್ತಿದ್ದ ನಲ್ಲಿಯಲ್ಲೂ ಅಪ್ಪನ ನೆನಪು ಅಮ್ಮನಿಗೆ ಕಾಡುತ್ತಿತ್ತು. ಅಸಹನೆಯಿಂದ ಮಕ್ಕಳ ಎದುರಿಗೇ ಅಪ್ಪನನ್ನು ಗದರಿಸುತ್ತಿದ್ದ ಅಮ್ಮ ಎಲ್ಲಿ, ಈಗ ಕಾಣಲು ಎದುರಿಗಿಲ್ಲದ ಜೀವದ ಬಗ್ಗೆ ಹಳಹಳಿಸುವವಳೆಲ್ಲಿ? ಇದೆಂತಹ ವಿಚಿತ್ರ ಎನ್ನಿಸಿತು.

ಕೆಲವು ವರುಷಗಳ ಹಿಂದೆ ಅಮೆರಿಕೆಯ ಮನಶ್ಶಾಸ್ತ್ರಜ್ಞರೊಬ್ಬರು ಸುದೀರ್ಘ ದಾಂಪತ್ಯ ನಡೆಸಿದ (ಅಮೆರಿಕೆಯ ಮುಕ್ತ ಸಮಾಜದಲ್ಲಿ ಇದು ಬಲು ಅಪರೂಪದ ವಿಷಯವಷ್ಟೆ!) ದಂಪತಿಗಳನ್ನು ಅಧ್ಯಯನ ಮಾಡಿ, ಇಂತಹ ಗಂಡ-ಹೆಂಡತಿ ಇಬ್ಬರ ಮನೋಭಾವ ಹಾಗೂ ಮುಖಭಾವಗಳಲ್ಲಿ ಕಾಲ ಕಳೆದಂತೆಲ್ಲ ಸಾಮ್ಯ ತೋರಿಬರುತ್ತದೆ ಎಂದು ಗುರುತಿಸಿದ್ದರು. ಮನೋಭಾವದಲ್ಲಿ ಇರಬಹುದು. ಯಾರೊಬ್ಬರ ಜೊತೆಗಿನ ಹೊಂದಾಣಿಕೆಗಾಗಿ ತಮ್ಮ ಅನಿಸಿಕೆಗಳನ್ನು ಬದಲಿಸಿಕೊಂಡೋ, ಹತ್ತಿಕ್ಕಿಕೊಂಡೋ ನಡೆದಾಗ ಇಬ್ಬರ ಮನೋಭಾವವೂ ಒಂದೇ ಆದಂತೆ ಕಾಣಬಹುದು ಎಂದು ಸಮಾಧಾನ ಹೇಳಿಕೊಂಡಿದ್ದೆ. ಮುಖಭಾವ ಒಂದೇ ಆಗಿರುತ್ತದೆ ಎನ್ನುವುದು ತುಸು ಅತಿರೇಕದ ತೀರ್ಮಾನ ಎನ್ನಿಸಿತ್ತು. ನಮ್ಮ ಜೋಡಿಯನ್ನೇ ನೋಡಿದವರು ನನ್ನ ತೀರ್ಮಾನವನ್ನು ಖಂಡಿತ ಒಪ್ಪುತ್ತಾರೆ! ನನ್ನವಳು ಇಪ್ಪತ್ತು ವರುಷಗಳ ಹಿಂದೆ ಹೇಗಿದ್ದಳೋ ಹಾಗೆಯೇ ಕಾಣಿಸುತ್ತಾಳೆ. ಆದರೆ ಕನ್ನಡಿ ನನ್ನ ನರೆತ ಕೂದಲನ್ನು ಬಿಚ್ಚುಮನಸ್ಸಿನಿಂದ ಪ್ರತಿಬಿಂಬಿಸುತ್ತದೆ.

ಮೊನ್ನೆ ಮಡದಿ ಊರಿನಲ್ಲಿರುವಾಗ ಇದ್ದಕ್ಕಿದ್ದ ಹಾಗೆ ಬಂದೆರಗಿದ ಮೈಗ್ರೇನ್‌ ಇಷ್ಟೆಲ್ಲ ಆಲೋಚನೆಗೆ ಕಾರಣ. ಅವಳಿದ್ದಿದ್ದರೆ, ನನ್ನ ಮೌನವನ್ನು ಅಥವಾ ನಾನು ಕುಳಿತ ಭಂಗಿಯನ್ನು ಗಮನಿಸಿಯೇ ತಲೆನೋವೇ ಎಂದು ಕೇಳಿಬಿಡುತ್ತಿದ್ದಳು. ಕೆಲವೊಮ್ಮೆ ಹೀಗಾಗಿ ಇಲ್ಲ ಎಂದು ಮರೆಮಾಚುತ್ತಿದ್ದೆ. ಆದರೂ ನಾನು ಹೇಳುವುದು ಸುಳ್ಳು ಎನ್ನುತ್ತಿದ್ದಳು. ನನ್ನ ತಲನೋವು ಅವಳಿಗೆ ಹೇಗೆ ತಟ್ಟುತ್ತದೆಯೋ ತಿಳಿಯುವುದಿಲ್ಲ! ಹೀಗೇ ಏನಾದರೂ ಬರೆಯುವಾಗ 'ಅಯ್ಯೋ, ಒಂದು ಗುಟುಕು ಚಹಾ ಇದ್ದಿದ್ದರೆ,' ಎನಿಸುವಷ್ಟರಲ್ಲಿ ಚಹಾ ಟೇಬಲಿಗೆ ಬರುತ್ತಿತ್ತು. ನನಗೆ ಚಹಾ ಬೇಕೆನಿಸುವ ಸಮಯದಲ್ಲಿಯೇ ಅದು ದೊರೆಯುತ್ತಿತ್ತು. ರಜೆಯಲ್ಲಿ ಊರಿಗೆ ಹೋದಾಗ, ಇದ್ದಕ್ಕಿದ್ದ ಹಾಗೆ 'ಚಹಾ ಬೇಕೆ?' ಎನ್ನುವ ಪ್ರಶ್ನೆ ಬರುತ್ತಿತ್ತು. ಹಾಗೆ ಬೇಕೆನ್ನಿಸಿದ ಸಮಯದಲ್ಲಿಯೇ ಈ ಪ್ರಶ್ನೆ ಬರುತ್ತಿದ್ದದ್ದು ಸಖತ್‌ ಅಚ್ಚರಿಯ ವಿಷಯ. ಹೇಗೆ ತಿಳಿಯಿತು ಎಂದರೆ ಒಂದು ಮುಗುಳ್ನಗೆಯೇ ಉತ್ತರವಾಗಿರುತ್ತಿತ್ತು.

ಆದರೆ ಈ ಬಗೆಯ ಚಿಂತೆಗಳು ನನಗೇಕೆ ಬರುವುದಿಲ್ಲವೋ, ಗೊತ್ತಿಲ್ಲ. ಜವಳಿ ಅಂಗಡಿಯ ಮುಂದೆ ಹೋದಾಗಲೂ ಸೀರೆ ಬೇಕೆ ಎಂದು ಕೇಳುವುದಿಲ್ಲ. ಅಕ್ಷಯ ತ್ರಿತೀಯದಂದು ಊರಿಗೆ ಊರೇ ಚಿನಿವಾರರ ಅಂಗಡಿಗೆ ದಾಳಿ ಹಾಕಿದ್ದರೂ ಮಡದಿಯನ್ನು ಕರೆದೊಯ್ಯಬೇಕೆನ್ನಿಸಿರಲಿಲ್ಲ! ಹಾಗಿದ್ದರೂ, "ಐ ಮಿಸ್‌ ಯು" ಎಂದಳಲ್ಲ! ಏನು ಉತ್ತರ ಕೊಡಲಿ?

(ಇದನ್ನು ಬರೆದ ಮೇಲೆ, ನನ್ನ ಮೆಚ್ಚಿನ ಬ್ಲಾಗ್‌ (ಬೆಂಗಳೂರಿನ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸ್‌ ನಲ್ಲಿ ಪ್ರೊಫೆಸರ್‌ ಆಗಿರುವ ಡಾ. ಅಭಿರಾಮನ್‌ರವರ ಬ್ಲಾಗ್‌) ನಾನೊಪಾಲಿಟನ್‌ ನಲ್ಲಿ ಈ ಒಂದು ಸಂವಾದವನ್ನು ಕಂಡೆ: ನ್ಯೂ ಯಾರ್ಕ್‌ ಟೈಂಸ್‌ನ ಸಾರಾ ಡೇವಿಡ್‌ಸನ್‌ ಅಮೆರಿಕೆಯ ನ್ಯಾಶನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಏಜಿಂಗ್‌ನ ಪ್ರೊಫೆಸರ್‌ ರಾಬರ್ಟ್‌ ಬಟ್ಲರ್‌ರವರ ಜೊತೆ ನಡೆಸಿದ ಸಂವಾದ ಇದು.

ಸಾರಾ: What about the institution of marriage? If you’re going to live to 100 and get married at 22 or 25. ... (ಮದುವೆಯ ಬಗ್ಗೆ ಏನು ಹೇಳುವಿರಿ? ನೀವು ನೂರು ವರುಷ ಬದುಕುವವರಾಗಿದ್ದು, ೨೨-೨೫ ವಯಸ್ಸಿನಲ್ಲಿ ಮದುವೆಯಾದರೆ...)

ಬಟ್ಲರ್‌: BUTLER: Oh, you are evil. (ಓಹ್‌.. ನೀನು ಬಲು ಕಿಲಾಡಿ..)

ಸಾರಾ: Are you still going to vow “till death do us part”? (ಆಗಲೂ ಸಾಯುವವರೆವಿಗೂ ಜೊತೆಗಿರೋಣ ಎಂದು ಶಪಥ ಮಾಡುವಿರಾ?)

ಬಟ್ಲರ್‌ BUTLER: There’s a demographer, Peter Uhlenberg, who said that divorce is a substitute for death, because in the old days there was enough death, unfortunately, particularly of women in childbirth, that the men would remarry. Someone even calculated that marriage now lasts about as long as it did then, it was ended by death rather than by divorce. (ಪೀಟರ್‌ ಉಲೆನ್‌ಬರ್ಗ್ ಎನ್ನುವ ಸಮುದಾಯ ವಿಜ್ಞಾನಿ ವಿಚ್ಛೇದನ ಸಾವಿಗೆ ಪರ್ಯಾಯ ಎಂದು ಹೇಳಿದ್ದಾನೆ. ಏಕೆಂದರೆ ಹಿಂದೆ ಸಾವು ಸಾಕಷ್ಟು ಇರುತ್ತಿತ್ತು. ದುರದೃಷ್ಟವಶಾತ್‌, ಮಗುವಿನ ಹುಟ್ಟಿನ ಸಂದರ್ಭದಲ್ಲಿ ಮಹಿಳೆಯರು ಸಾವಿಗೀಡಾಗಿ,ಗಂಡಂದಿರು ಮರುಮದುವೆಯಾಗಬಹುದಿತ್ತು. ಈಗಲೂ ಮದುವೆಯ ಬಂಧ ಅಂದಿನಷ್ಟೇ ದೀರ್ಘವಾಗಿದೆ ಎಂದು ಯಾರೋ ಲೆಕ್ಕ ಹಾಕಿದ್ದಾರೆ. ಆಗ ಅದು ವಿಚ್ಛೇದನದ ಬದಲಿಗೆ ಸಾವಿನಿಂದ ಕೊನೆಗೊಳ್ಳುತ್ತಿತ್ತು.)


ಈ ಲೆಕ್ಕಾಚಾರದಲ್ಲಿ ನಮ್ಮಲ್ಲಿ ಈಗ ವಿವಾಹ ಎಂಬ ವ್ಯವಸ್ಥೆ ಇನ್ನಷ್ಟು ದೀರ್ಘವಾಗಿದೆ ಎನ್ನೋಣವೇ?

Friday, April 6, 2007

ತೇಜಸ್ವಿಯವರಿಗೆ ನಮನಗಳು

ಪೂರ್ಣಚಂದ್ರ ಅಸ್ತಂಗತ. ಇದು ಟೀವಿ ಚಾನಲ್‌ ಒಂದರಲ್ಲಿ ಪೂಚಂತೇರವರ ನಿಧನದ ಬಗ್ಗೆ ಬಂದ ತಲೆಬರೆಹ. ಇದಕ್ಕಿಂತಲೂ ಉತ್ತಮ ತಲೆಬರೆಹ ಬೇಕಿಲ್ಲ. ಮೈಸೂರಿನ ಶ್ರದ್ಧಾಂಜಲಿ ಸಭೆಯೊಂದರಲ್ಲಿ ಮಾತನಾಡಿದ ಹಿರಿಯ ಅಂಕಣಕಾರ ಹೆಚ್‌ಎಸ್‌ಕೆ ಹೇಳಿದ್ದು, ಪೂಚಂತೇ "ಕುವೆಂಪು ರವರ ಮಗನಾಗಿ ಗುರುತಿಸಲ್ಷಡುವುದಕ್ಕಿಂತಲೂ, ಕುವೆಂಪು ರವರು ತೇಜಸ್ವಿಯವರ ತಂದೆ ಎಂದು ಗುರುತಿಸಲ್ಪಟ್ಟಿರುವುದೇ ಹೆಚ್ಚು," ಎಂದು ನುಡಿದದ್ದು ಅಪ್ಪಟ ಸತ್ಯ. ಹೀಗೆ ಸುಪ್ರಸಿದ್ಧ ತಂದೆಯ ನೆರಳಿನಲ್ಲಿ ಬೆಳೆದೂ, ಹಲವು ಹೊಸ ಪ್ರತಿಭೆಗಳಿಗೆ ಆಸರೆಯಾಗುವ ದೊಡ್ಡ ಆಲದ ಮರವಾಗಿ ತೇಜಸ್ವಿ ಬೆಳೆದರು.

ತೇಜಸ್ವಿಯವರ ಸಾಹಿತ್ಯದ ಬಗ್ಗೆ ಹೇಳುವ ಸಾಮರ್ಥ್ಯ ನನಗಿಲ್ಲ. ಇಷ್ಟು ಮಾತ್ರ ಸತ್ಯ. ಅವರ ಸಾಹಿತ್ಯ ಕೇವಲ ಬುದ್ಧಿಜೀವಿಗಳಿಗಾಗಿಯಷ್ಟೆ ಇರಲಿಲ್ಲ. ಎಲ್ಲರಿಗೂ ದಕ್ಕುವಂತಹ ಅಪ್ಪಟ ಕನ್ನಡ ಜಾಯಮಾನದ ಸಾಹಿತ್ಯ ಎನ್ನಬಹುದು. ಬೇಂದ್ರೆ, ದೇವನೂರು, ತರಾಸುರವರಂತೆ ತೇಜಸ್ವಿಯವರ ಸಾಹಿತ್ಯವನ್ನು ಇಂಗ್ಲೀಶಿಗೆ ಅನುವಾದಿಸುವುದು ಬಹಳ ಕಷ್ಟಕರವಾದ ಕೆಲಸ. ಕನ್ನಡದ ಹಿರಿಯರೆನ್ನಿಸಿಕೊಂಡ ಇನ್ನೂ ಎಷ್ಟೋ ಕವಿ, ಲೇಖಕರ ಸಾಹಿತ್ಯವನ್ನು ಸುಲಭವಾಗಿ ಇಂಗ್ಲೀಶಿಗೆ ಅನುವಾದಿಸಬಹುದು. ಏಕೆಂದರೆ ಇವುಗಳಲ್ಲಿನ ಚಿಂತನೆಗಳಲ್ಲಿ ಇಂಗ್ಲೀಶಿನ ಜಾಯಮಾನ ಎದ್ದು ತೋರುತ್ತದೆ. ಆದರೆ ತೇಜಸ್ವಿಯವರ ಸಾಹಿತ್ಯದಲ್ಲಿ ತಾಯ್ನೆಲದ, ತಾಯ್ನುಡಿಯ ವಾಸನೆ ಎಷ್ಟು ಗಾಢವಾಗಿತ್ತೆಂದರೆ ಅದರಲ್ಲಿನ ಪದ, ಪದಗಳ ಹಿಂದಿನ ಭಾವಾರ್ಥಗಳಿಗೆ ಸರಿಸಮನಾದ ಇಂಗ್ಲೀಶಿನ ಪದಗಳನ್ನು ಹುಡುಕುವುದು ಬಹಳ ಕಷ್ಟವೆನ್ನಿಸುತ್ತಿತ್ತು.

ಬರವಣಿಗೆಯಲ್ಲಿ ಹೊಸ ಸ್ಫೂರ್ತಿ ನೀಡಿದ ಆ ಚೇತನಕ್ಕೆ ನನ್ನ ನಮನ.

ತೇಜಸ್ವಿಯವರ ಕಾದಂಬರಿಗಳಲ್ಲಿ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುವುದು ಚಿದಂಬರ ರಹಸ್ಯ. ಪ್ರತಿಯೊಂದು ಅಧ್ಯಾಯವೂ ಪ್ರತ್ಯೇಕ ಕಥೆಯಾಗಿ ನಿಲ್ಲುವಂತೆ ವಿಶಿಷ್ಟ ತಂತ್ರವನ್ನು ಬಳಸಿದ ಕಾದಂಬರಿ ಇದು. ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಸ್ವಾರ್ಥ ಇತ್ತಾದರೂ, ಉಳಿದ ಪಾತ್ರಗಳ ಪ್ರಭಾವದಿಂದಾಚೆಗೆ ಯಾವ ಪಾತ್ರವೂ ನಡೆದುಕೊಳ್ಳಲಾಗಲಿಲ್ಲ. ನಮಗೆ ಸಂಬಂಧವೇ ಇಲ್ಲದ ದೂರದ ಘಟನೆಯೊಂದು ನಮ್ಮ ಬದುಕನ್ನು ಎಲ್ಲೋ ಆಳವಾಗಿ ತಾಕುತ್ತದೆ. ಕೇವೋಸ್‌ ಸಿದ್ಧಾಂತದಂತೆ, ಯಾವುದೋ ನಿಕೃಷ್ಟ ಘಟನೆ ಬೃಹತ್ತಾಗಿ ಬೆಳೆದು ತೀವ್ರ ಪರಿಣಾಮ ಬೀರಬಹುದು. ಇಂತಹ ಘಟನೆಗಳಿಗೆ ಯಾವ ನಿಯಮ, ನೀತಿಗಳು ಲಗಾಮು ಹಾಕಲಾಗದು. ಚಿದಂಬರ ರಹಸ್ಯದ ಪ್ರತಿಯೊಂದು ಘಟನೆಗಳೂ ಹೀಗೆಯೇ ಅಲ್ಪ ಘಟನೆಗಳು. ಆದರೆ ಅವುಗಳ ಪರಿಣಾಮ ಮಾತ್ರ ತೀವ್ರ.

ಇಂದಿಗೂ ರಸ್ತೆಯಲ್ಲಿ ಎಲ್ಲಿಯಾದರೂ ಟಾರು ಬಳೆಯುವ ಯಂತ್ರ ಕಾಣಿಸಿದರೆ, ಚಿದಂಬರ ರಹಸ್ಯ ನೆನಪಾಗುತ್ತದೆ. ಹಾಗೆಯೇ, ಪೂಚಂತೇಯವರ ಹೆಸರು ಕೇಳಿದಾಗಲೆಲ್ಲ, ಕರ್ವಾಲೊ ರ ಚಿತ್ರ ಕಣ್ಮುಂದೆ ಸುಳಿಯುತ್ತದೆ. ಪೂಚಂತೇಯವರ ಚಿತ್ರವನ್ನು ನೋಡಿದಾಗಲೂ ಅದು ಅವರು ಅನ್ನಿಸುವುದಿಲ್ಲ. ಕರ್ವಾಲೋರವರ ಚಿತ್ರವಷ್ಟೆ ಸತ್ಯ ಎನ್ನಿಸುತ್ತದೆ.

Wednesday, April 4, 2007

Witness Box 3 ಸಾಕ್ಷಿಕಟ್ಟೆ ೩

"ಈವತ್ತಿಗೆ ನಿಮಗೆ ಮುಕ್ತಿ ಸಾರ್‌," ಎಂದರು ಪಟ್ಟಾಭಿರಾಮನ್‌. ಈತ ಮೈಸೂರಿನ ಒಂದು ಪೋಲೀಸ್‌ ಠಾಣೆಯ ಪೀಸಿ. ಕೋರ್ಟು ವ್ಯವಹಾರಗಳ ನಿರ್ವಹಣೆ ಇವರ ಕರ್ತವ್ಯ. ಪ್ರತಿ ಬಾರಿ ಕೋರ್ಟಿಗೆ ಹೋದಾಗಲೂ ಈತನಿಗೆ ಹಾಜರಿ ಒಪ್ಪಿಸಬೇಕಿತ್ತು. ಹಾಜರಿ ಒಪ್ಪಿಸಿದಾಗಲೆಲ್ಲ, ಅಳುಕಿನಿಂದಲೇ ದಯವಿಟ್ಟು ಒಳಗೆ ಕುಳಿತುಕೊಳ್ಳಿ ಎಂದು ವಿನಂತಿಸಿಕೊಳ್ಳುತ್ತಿದ್ದ. ಪೋಲೀಸರಿಗೂ ಅಳುಕು ಎನ್ನುವುದು ಇರುತ್ತದೆ ಎನ್ನುವುದು ಪಟ್ಟಾಭಿರಾಮನ್‌ರನ್ನು ನೋಡಿ ತಿಳಿಯಿತು.

ಮುಕ್ತಿ ಸಿಕ್ಕಿದ್ದು ನ್ಯಾಯಾಲಯದಲ್ಲಿ ಸಾಕ್ಷಿ ಹೇಳುವುದರಿಂದ ಎಂದು ಹೇಳಬೇಕಿಲ್ಲ, ಅಲ್ಲವೇ? ಎಂಟು ಬಾರಿ, ಎರಡೂವರೆ ವರುಷಗಳವರೆಗೆ ನ್ಯಾಯಾಲಯಕ್ಕೆ ತಿರುಗಿದ ಅನಂತರ ನನ್ನ ಸಾಕ್ಷಿ ಎನ್ನುವುದು ಮುಗಿಯಿತು. ಆ ಖಟ್ಲೆಯಲ್ಲಿ ಇದುವರೆವಿಗೂ ಮುಗಿದಿರುವುದು ಎರಡೇ ಸಾಕ್ಷಿಯ ವಿಚಾರಣೆ. ಇನ್ನೂ ಹತ್ತಾರು ಸಾಕ್ಷಿಗಳಿದ್ದಾರೆ. ಇವರೆಲ್ಲರ ಸಾಕ್ಷಿಯೂ ಮುಗಿದು, ಅಪಘಾತ ನಡೆಸಿದ ಚಾಲಕನಿಗೆ ದಂಡ ಸಿಗುವಷ್ಟರಲ್ಲಿ, ಆ ಚಾಲಕನಿಗೆ ಶಿಕ್ಷೆ ದೊರೆತೇ ಹೋಗಿರುತ್ತದೆ.

ನಾಗರೀಕ ಕರ್ತವ್ಯ ಎನ್ನುವ ಮನೋಭಾವದಿಂದ ಈ ರೀತಿಯಲ್ಲಿ ಸಾಕ್ಷಿ ಹೇಳುವವರಿಂದಾಗಿ ಪ್ರತಿದಿನವೂ ಎಷ್ಟು ಸಮಯ ಹಾಳಾಗುತ್ತಿರಬಹುದು ಎನ್ನುವುದಕ್ಕೆ ಒಂದು ಪುಟ್ಟ ಲೆಕ್ಕ ಹಾಕಿದೆ. ಹೇಗೂ, ನ್ಯಾಯಾಲಯದಲ್ಲಿ ನನ್ನನ್ನು ಸಾಕ್ಷಿ ಕಟ್ಟೆಗೆ ಕರೆಯುವವರೆವಿಗೂ ಅಲ್ಲಿನ ಬೆಂಚಿನ ಬಿಸಿ ಏರಿಸಬೇಕಿತ್ತಲ್ಲ! ಸಮಯ ಕಳೆಯಲು ಓ. ಹೆನ್ರಿಯ ಒಂದು ಪುಸ್ತಕವನ್ನು ಕೊಂಡೊಯ್ದಿದ್ದೆನಾದರೂ, ನ್ಯಾಯಾಲಯದೊಳಗೆ ಸಾಹಿತ್ಯ ಓದುವುದು ಅಪರಾಧವಿರಬಹುದೇ ಎನ್ನುವ ಆತಂಕ ಕಾಡಿ ಪುಸ್ತಕವನ್ನು ತೆರೆಯಲೇ ಇಲ್ಲ! ಬೆಳಗ್ಗೆ ಹತ್ತು ಗಂಟೆಗೆ ನ್ಯಾಯಾಲಯದೊಳ ಹೊಕ್ಕವನಿಗೆ ಮುಕ್ತಿ ಸಿಕ್ಕಾಗ ಸಂಜೆ ನಾಲ್ಕು ಗಂಟೆ. ನನ್ನ ಪಾಟೀಸವಾಲಿಗೆ ಸಂದ ಸಮಯ ಹತ್ತು ನಿಮಿಷಗಳು. ೩೬೦ ನಿಮಿಷಗಳಲ್ಲಿ ಪಾಟೀಸವಾಲಿನ ೧೦ ನಿಮಿಷ ಕಳೆದರೆ ಉಳಿದ ೩೫೦ ನಿಮಿಷಗಳು ನಾನು, ಅಪರಾಧಿ, ಹಾಗು ಅಪರಾಧಿಯ ವಕೀಲರಿಗೆ ಮಾಡುವುದು ಏನೂ ಇರಲಿಲ್ಲ.

ಹೀಗಾಗಿ ಒಂದು ಲೆಕ್ಕಾಚಾರ ಮಾಡಿದೆ. ಒಂದು ಅಂದಾಜಿನ ಪ್ರಕಾರ ಇಂದು ದೇಶಾದ್ಯಂತ ೧ ಕೋಟಿಗೂ ಹೆಚ್ಚು ಖಟ್ಲೆಗಳು ನ್ಯಾಯಾಲಯದಲ್ಲಿ ನಡೆಯುತ್ತಿವೆ. ಇವು ಪ್ರತಿಯೊಂದರಲ್ಲೂ ಒಬ್ಬ ಅಪರಾಧಿ, ಒಬ್ಬ ವಕೀಲ, ಒಬ್ಬ ಸಾಕ್ಷಿ ಇದ್ದಾರೆ ಎಂದಿಟ್ಟುಕೊಳ್ಳೋಣ. ದಿನವೊಂದಕ್ಕೆ ಒಂದೇ ಖಟ್ಲೆಯಲ್ಲಿ ಸಾಕ್ಷಿ ಮತ್ತು ಅಪರಾಧಿ ಹಾಜರಾಗುವುದರಿಂದ ಇವರಿಬ್ಬರ ದಿನವೂ ವ್ಯಯವಾಯಿತು. ಈ ಒಂದುಕೋಟಿ ಕೇಸುಗಳು ತಿಂಗಳಲ್ಲಿ ಒಮ್ಮೆ ಮಾತ್ರ ವಿಚಾರಣೆಗೆ ಬರುತ್ತವೆ ಎನ್ನೋಣ. ಹಾಗಿದ್ದರೆ ಪ್ರತಿ ತಿಂಗಳೂ ಎರಡು ಕೋಟಿ ಜನರು ತಮ್ಮ ಒಂದು ದಿನವನ್ನು ನ್ಯಾಯಾಲಯದಲ್ಲಿಯೇ ಕಳೆಯುತ್ತಾರೆ ಎಂದಾಯಿತು. ಕೆಲವು ಖಟ್ಲೆಗಳಲ್ಲಿ ಹತ್ತಾರು ಸಾಕ್ಷಿಗಳಿರುತ್ತಾರೆ. ಎಲ್ಲರ ವಿಚಾರಣೆಯೂ ಒಂದೇ ದಿನ ಆಗದಿದ್ದರೂ, ಎಲ್ಲರೂ ನ್ಯಾಯಾಲಯಕ್ಕೆ ಹಾಜರಿರಲೇ ಬೇಕು. ಹಾಗಿದ್ದರೆ ಎಷ್ಟು ಕಾಲ ವ್ಯಯವಾಗುತ್ತಿದೆ ಎನ್ನುವುದನ್ನು ಗಮನಿಸಿ. ಇದಕ್ಕೆ ಪರಿಹಾರ ಇಲ್ಲವೇ?

ಇಂದಿನ ಐಟಿ ಯುಗದಲ್ಲಿಯೂ ಮೊದಲು ಹಾಜರಿ ಕರೆದು ಅನಂತರ ವಿಚಾರಣೆಗೆ ತೊಡಗುವುದು ಅವಶ್ಯವೇ? ಹಾಜರಿಯನ್ನು ಮೊದಲೇ ಖಾತರಿ ಪಡಿಸಿಕೊಳ್ಳಲು ಆಗುವುದಿಲ್ಲವೇ? ಇವೆಲ್ಲ ಪ್ರಶ್ನೆಗಳು ಕಾಡಿತು.


ಈ ಲೆಕ್ಕಾಚಾರಗಳ ನಡುವೆ ನ್ಯಾಯಾಲಯದಲ್ಲಿ ನಡೆದ ಸ್ವಾರಸ್ಯಕರವಾದ ಘಟನೆಯೊಂದಕ್ಕೂ ನಾನು ಸಾಕ್ಷಿ ಆದೆ. ಒಂದು ಕಳ್ಳತನದ ಖಟ್ಲೆ. ಫಿರ್ಯಾದುದಾರರು ೭೦ ವರುಷದ ಮುದುಕ. ನಿವೃತ್ತ ಮೇಷ್ಟರು. ಮನೆಯಲ್ಲಿದ್ದ ೪೦ ಗ್ರಾಂ ಆಭರಣವನ್ನು ತಮ್ಮ ಪರಿಚಿತನಾದ ಆಟೋ ಚಾಲಕನೊಬ್ಬ ಸಮಯ ಸಾಧಿಸಿ ಕದ್ದಿದ್ದ ಎಂದು ದೂರು ನೀಡಿದ್ದರು. ಅಪರಾಧಿಯೂ ಅಲ್ಲಿದ್ದ. ಆತ ಅಡವಿಟ್ಟಿದ್ದ ಒಡವೆಗಳೂ ಸಿಕ್ಕಿದ್ದುವು. ಈಗ ನಡೆದಿದ್ದುದು ವಿಚಾರಣೆ. ಮೇಷ್ಟರನ್ನು ವಿಚಾರಣೆಗೆ ಕರೆಸಿ ವಿವರಗಳನ್ನು ಸರಕಾರಿ ಲಾಯರು ಕೇಳಿದರು. ಅನಂತರ ಪಾಟೀ ಸವಾಲು. ಆ ದಿನ ನಡೆದ ಎಲ್ಲ ಪಾಟೀ ಸವಾಲುಗಳಲ್ಲಿಯೂ ಒಂದೆರಡು ಪ್ರಶ್ನೆಗಳು ಸಾಮಾನ್ಯವಾಗಿರುತ್ತಿದ್ದುವು. "ನೀವು ಅಪರಾಧಿಯ ಮೇಲೆ ಯಾವುದೋ ವೈಷಮ್ಯದಿಂದ ದೂರು ನೀಡಿದ್ದೀರಿ." "ಪೋಲೀಸರು ನಿಮಗೆ ಪರಿಚಯ. ಅದರಿಂದಾಗಿ ಅವರೇ ಹೇಳಿ ಈ ಖಟ್ಲೆ ಹೂಡಿದ್ದಾರೆ." "ದೂರು ನೀವು ಕೊಟ್ಟಿಲ್ಲ. ಪೋಲೀಸರೇ ಬರೆದು ನಿಮ್ಮಿಂದ ಸಹಿ ಮಾತ್ರ ಪಡೆದುಕೊಂಡಿದ್ದಾರೆ." "ಪೋಲೀಸರು ಪತ್ತೆ ಮಾಡಿದ ಕೇಸುಗಳ ಸಂಖ್ಯೆ ಹೆಚ್ಚಾಗಲಿ ಎಂದು ಯಾರನ್ನೋ ಹಿಡಿದು ದೂರು ಕೊಟ್ಟಿದ್ದಾರೆ." ಹೀಗೆ.

ಮೇಷ್ಟರಿಗೂ ಇಂತಹುದೇ ಪಾಟೀಸವಾಲು ಎದುರಾಯಿತು. ಪಾಟೀ ಸವಾಲು ನಡೆಸಿದ ಎದುರು ಪಕ್ಷದ ವಕೀಲರು, ಮೇಷ್ಟರನ್ನು "ನೀವು ಹಿಂದಿನ ದಿನ ರಾತ್ರಿ ಆಟೋ ಚಾಲಕ ವಾಡಿಕೆಗಿಂತಲೂ ಹೆಚ್ಚು ಹಣ ಕೇಳಿದ್ದಕ್ಕೆ, ಜಗಳವಾಡಿ ಆ ಸಿಟ್ಟಿನಿಂದ ಸುಳ್ಳು ಕೇಸು ಹಾಕಿದ್ದೀರಾ?" ಎಂದು ಆರೋಪಿಸಿದ. ಮೇಷ್ಟರು ಸಿಟ್ಟಿನಿಂದ ನಾನು ಆಟೋ ಹತ್ತಲೇ ಇಲ್ಲ ಆ ದಿನ ಅಂತ ಹೇಳಿದ ಮೇಲೂ ಈ ಪ್ರಶ್ನೆ ಕೇಳುತ್ತಿದ್ದೀರಲ್ಲ? ಇದೇನು ಸರಿಯಾ?" ಎಂದು ದಬಾಯಿಸಿದಾಗ, ನ್ಯಾಯಾಧೀಶರು ಸಾಕ್ಷಿ ಕೇವಲ ಇಲ್ಲ, ಹೌದು ಎನ್ನುವ ಉತ್ತರವನ್ನಷ್ಟೆ ಹೇಳಬೇಕು ಎಂದರು.

ಇದಾದಮೇಲೆ ಮೇಷ್ಟರ ಅಮ್ಮ (೮೭ ವರುಷದ ಮುದುಕಿ)ನ ಪಾಟೀಸವಾಲು. "ಆರೋಪಿ ಅಲಮಾರಿ ತೆಗೆದಾಗ ನಿಮಗೆ ಸದ್ದು ಕೇಳಿಸಲಿಲ್ಲವೇ?" "ಇಲ್ಲ." "ನಿಮಗೆ ನಾನು ಹೇಳುತ್ತಿರುವುದು ಕೇಳಿಸುತ್ತಿದೆಯೇ?" "ಏನಪ್ಪ ಕೇಳಿದೆ?" ಒಟ್ಟಿನಲ್ಲಿ ಆಕೆಯ ಕಿವಿ ಮಂದ ಎನ್ನುವುದು ಎಲ್ಲರಿಗೂ ಸ್ಪಷ್ಟವಾಗಿತ್ತು. ಆದರೂ, ಎದುರು ಪಕ್ಷದ ವಕೀಲರು ಕೆಲವು ಪ್ರಶ್ನೆಗಳನ್ನು ಕೇಳಿದಾಗ ಆಕೆ ಹೌದು ಎನ್ನುವಂತೆ ತಲೆಯಾಡಿಸುತ್ತಿದ್ದರು. ಇದು ತಮ್ಮ ಸಾಕ್ಷಿಗೆ ವಿರುದ್ಧವಾಗಿದೆ ಎಂದು ತಿಳಿದಾಗ ಮೇಷ್ಟರು ಎದ್ದು ನ್ಯಾಯಾಧೀಶರನ್ನು ಉದ್ದೇಶಿಸಿ ಆಕೆಗೆ ಪ್ರಶ್ನೆ ಸರಿಯಾಗಿ ತಿಳಿಯಲಿಲ್ಲ ಎನ್ನಿಸುತ್ತದೆ ಎಂದಾಗ ಆತನನ್ನು ಹಾಗೆ ಮಧ್ಯೆ ಪ್ರವೇಶಿಸಿ ಮಾತನಾಡುವುದು ಅವಮರ್ಯಾದೆ ಮಾಡಿದಂತೆ ಎಂದು ಕುಳ್ಳಿರಿಸಲಾಯಿತು. ಅಜ್ಜಿಗೆ ಕಿವಿ ಕೇಳುತ್ತಿಲ್ಲ ಎಂದು ತಿಳಿದರೂ, ಪಾಟೀ ಸವಾಲು ಮುಂದುವರೆದು, ಆಕೆ ಎಲ್ಲಕ್ಕೂ ತಲೆ ಆಡಿಸುವುದು ನಡೆಯಿತು. ಇಡೀ ನ್ಯಾಯಾಲಯದಲ್ಲಿ ಮುಸು, ಮುಸು ನಗೆ ಹಬ್ಬಿತ್ತು. ಆದರೆ ಯಾರೂ ಆಕೆಗೆ ಕೇಳುಸುವಂತೆ ಪ್ರಶ್ನೆ ಕೇಳಲಿ ಎಂದು ಹೇಳಲಿಲ್ಲ. ನ್ಯಾಯಾಧೀಶರೂ ಸಹ. ಸಾಕ್ಷಿಗೆ ನಡುವೆ ನ್ಯಾಯಾಧೀಶರು ಹಾಗೆ ಸಹಾಯ ಮಾಡುವುದು ಕಾನೂನಿಗೆ ವಿರುದ್ಧವೇನೋ? ಒಟ್ಟಾರೆ, ತಾನು ಏನು ಸಾಕ್ಷಿ ಹೇಳಿದೆ ಎನ್ನುವುದು ತಿಳಿಯದೆಯೇ ಆ ಅಜ್ಜಿ ಸಾಕ್ಷಿ ಹೇಳಿಯಾಗಿತ್ತು.