Friday, March 16, 2007

ಸೂರ್ಯಗ್ರಹಣ

Here is a poll on what you would like to do on the Solar Eclipse day. Just click on the link ಸೂರ್ಯಗ್ರಹಣ , vote and forget.

ಸೂರ್ಯಗ್ರಹಣದ ದಿನ ಏನು ಮಾಡಬೇಕೆಂದಿದ್ದೀರಿ? ಇಲ್ಲಿ ನಿಮ್ಮ ಕೆಲವು ಆಯ್ಕೆಗಳಿವೆ. ನಿಮ್ಮದು ಯಾವುದು. ಕೆಳಗಿನ ಸೂರ್ಯಗ್ರಹಣ ಲಿಂಕ್‌ ಕ್ಲಿಕ್‌ ಮಾಡಿ.

ಮೊದಲಾಗಿದ್ದರೆ ನಾನು ಒಂದು ರಟ್ಟಿನ ಡಬ್ಬಿಯಲ್ಲಿ ತೂತು ಕೊರೆದು ಸೂರ್ಯಗ್ರಹಣದ ಚಲನಚಿತ್ರ (ಇದು ನಮ್ಮ ಬಾಲಿವುಡ್‌ನ ಥರ ರಬ್ಬರ್‌, ಬಲು ನಿಧಾನ!!) ನೋಡುತ್ತಿದ್ದೆ. ಈಗ ಮೊಣಕಾಲೂರಿ ಕುಳಿತುಕೊಳ್ಳುವಷ್ಟು ಯೌವನ ಇಲ್ಲ. ಹುಮ್ಮಸ್ಸೂ ಇಲ್ಲ. ನ್ಯಾಶನಲ್‌ ಜಿಯೋಗ್ರಾಫಿಕ್‌ನಲ್ಲಿ ತೋರಿಸುವ ಕ್ಷಿಪ್ರ ಚಿತ್ರಗಳನ್ನು ನೋಡಿ ಖುಷಿ ಪಡುವಂತಾಗಿದೆ. (ಶಯ್ಯಾ ದೊರೆ - Couch potato - ಆಗಿಬಿಟ್ಟಿದ್ದೇನಲ್ಲ:). ಬಹಳ ಹಿಂದೆ ಅಪ್ಪ, ಅಮ್ಮನ ಮಾತು ಕೇಳದೆ ನೇರವಾಗಿ ಬೆರಳುಗಳ ಸಂದಿಯೆಡೆಯಿಂದ ಸೂರ್ಯಗ್ರಹಣವನ್ನು ನೋಡಿದ್ದೆ. ಈಗ ಯಾವ ಕಣ್ಣಿನ ವೈದ್ಯರ ಬಳಿ ಹೋದರೂ, ನೀವು ಹಿಂದೆ ಸೂರ್ಯಗ್ರಹಣ ನೋಡಿದ್ದಿರಾ ಎಂದು ಪ್ರಶ್ನಿಸುತ್ತಾರೆ? ಅಂತಹ ತೊಂದರೆ ಏನೂ ಆಗಿಲ್ಲ. ಆದರೆ ಕಣ್ಣಿನ ಒಳಗೆ ಒಂದು ಚುಕ್ಕೆ - ಕಪ್ಪು ಚುಕ್ಕೆ - ಇದೆಯಂತೆ. ಮಾಡಬೇಡ ಎಂದಿದ್ದನ್ನು ಮಾಡಿದ್ದಕ್ಕೆ ಇರಬಹುದೇ?

Wednesday, March 14, 2007

ಸೈಬರ್ ಸಮಸ್ಯೆ

ಇದೀಗ ತಾನೆ ಮಿತ್ರ ಮಂಜುನಾಥ (ksmanjunatha.blogspot.com)ಮೆಸೇಜ್ ಮಾಡಿದ್ದರು. ಹೊಸ ಬ್ಲಾಗ್ ಯಾವಾಗ ಬರೆಯುತ್ತೀರಿ? ಕೊಡವಿದರೆ ಎಲ್ಲಿ ಬಿದ್ದು ಹೋಗುತ್ತದೆಯೋ ಎನ್ನುವ ಹಾಗೆ ತಲೆಯಲ್ಲಿ ಯಾವಾಗಲೂ ಚಿಂತೆಗಳ ಸೆಮಿನಾರ್ ನಡೆಯುತ್ತಿರುತ್ತದೆ. ಈವತ್ತು ಆರಂಭವಾದ ಸೆಮಿನಾರ್‌ ಸೈಬರ್‌ ಸಂವಹನದ ಬಗ್ಗೆ. ಬೆಳಗ್ಗೆ ನಿತ್ಯಕರ್ಮವಾಗಿ ದಿನಪತ್ರಿಕೆ ಓದುವಾಗ, ಮುಂಬಯಿಯ ಐಐಟಿಯಲ್ಲಿ ವಿದ್ಯಾರ್ಥಿಗಳಿಗೆ ಇಂಟರ್‌ನೆಟ್‌ ಸೌಲಭ್ಯವನ್ನು ನಿಯಂತ್ರಿಸಿದ ಬಗ್ಗೆ ಓದಿದ್ದೆ. ನಮ್ಮ ದೇಶದ ’ಅತಿ ಬುದ್ಧಿವಂತ’ (ಪನ್‌ ಬಳಸಿದ್ದೇನೆ) ವಿದ್ಯಾರ್ಥಿಗಳು ಹಗಲೂ ರಾತ್ರಿ ಇಂಟರ್‌ನೆಟ್‌ನಲ್ಲೇ ಈಜಾಡುತ್ತ (ಸರ್ಫ್‌ ಮಾಡುತ್ತ) ಮಾನವ ಸಂಬಂಧಗಳ ಬಗ್ಗೆ ಮರೆತೇ ಬಿಟ್ಟಿದ್ದಾರೆ ಎನ್ನುವುದು ಅವರ ಶಿಕ್ಷಕರ ದೂರು. ಹೀಗಾಗಿ ಈಗ ಕಂಪ್ಯೂಟರ್‌ ಬಳಕೆಗೆ ಕೆಲವು ಕಾಲ ಕರ್ಫ್ಯೂ ವಿಧಿಸಲಾಗಿದೆಯಂತೆ.

ಹೌದೇ. ಯಂತ್ರ ಬಂದ ಕೂಡಲೆ ಮಾನವ ಸಂಬಂಧಗಳು ಕಳಚಿಕೊಳ್ಳುತ್ತವೆಯೇ? ಒಂದು ವಿಧದಲ್ಲಿ ಐಐಟಿಯ ಶಿಕ್ಷಕರ ವಾದದಲ್ಲಿ ಹುರುಳಿದೆ ಎನ್ನಬೇಕು. ಎಷ್ಟಿದ್ದರೂ ಅವರು ರಾಷ್ಟ್ರದ ಅತಿ ಮೇಧಾವಿ ವಿದ್ಯಾರ್ಥಿಗಳನ್ನು ತಿದ್ದುವವರು. ಇಂಟರ್‌ನೆಟ್‌ ಚಟವಾಗಿ ಬೆಳೆದಿದೆ ಎಂದು ನಾನು ಈ ಬ್ಲಾಗ್‌ನಲ್ಲಿ ಬರೆಯುವುದು ವಿಪರ್ಯಾಸವಷ್ಟೆ ಅಲ್ಲ, ವಿಡಂಬನೆಯ ವಿಷಯವೂ ಹೌದು. ಆದರೆ ಇದರಿಂದ ಸಂಬಂಧಗಳು ಮುರಿದಿವೆಯೇ? ಬೆಳೆದಿವೆಯೇ? ಬಹುಶಃ ಇದಮಿತ್ಥಂ ಎಂದು ಹೇಳುವ ಸಂಶೋಧನೆ ಇನ್ನು ಆಗಬೇಕಷ್ಟೆ.

ನನ್ನ ವಿಷಯವನ್ನೇ ತೆಗೆದುಕೊಳ್ಳಿ. ಕಂಪ್ಯೂಟರ್‌ ಬಳಸಲು ಆರಂಭಿಸಿ ಕೆಲವು ವರುಷಗಳಷ್ಟೆ ಆಗಿವೆ. ಈ ವಯಸ್ಸಿನಲ್ಲಿ (ನನ್ನ ತಲೆಗೂದಲು ನರೆಯುತ್ತಿದೆ ಎಂದು ಮಡದಿಯ ದೂರು ಕೇಳಿ ಈ ಮಾತು ಹೇಳುತ್ತಿದ್ದೇನೆ. ಇಲ್ಲದಿದ್ದರೆ ನಾನೂ ಹಸಿ ಯುವಕನೇ! :)) ಕಂಪ್ಯೂಟರ್‌ ಬಳಕೆ, ಅದರ ಸಾಮರ್ಥ್ಯ ಹಾಗೂ ಅನುಕೂಲತೆಗಳ ಸದುಪಯೋಗ ಪಡೆಯುವುದೆನ್ನುವುದು ಸುಲಭದ ಮಾತಲ್ಲ. ನಮ್ಮ ಮನೆಗೆ ಕಂಪ್ಯೂಟರ್‌ ಬಂದಾಗ ಇಂಟರ್‌ನೆಟ್‌ ಕೈಗೆಟುಕುವಷ್ಟು ಅಗ್ಗವಾಗಿರಲಿಲ್ಲ. ಆದರೂ, ಐಐಟಿಯ ಶಿಕ್ಷಕರು ಈಗ ಹೇಳುತ್ತಿರುವ ದೂರನ್ನು ಮಡದಿಯೂ ಹೇಳುತ್ತಿದ್ದಳು.’ಕಂಪ್ಯೂಟರು ಮುಂದೆ ಕುಳಿತರೆ ನಿಮಗೆ ಹೊತ್ತು ಹೋಗುವುದೇ ಗೊತ್ತಾಗುವುದಿಲ್ಲ. ಮನೆಯಲ್ಲಿ ಬೇರೆ ಮನುಷ್ಯರೂ ಇದ್ದಾರೆ ಎನ್ನುವುದೂ ಮರೆತಂತೆ ಕಾಣುತ್ತದೆ’ ಎನ್ನುತ್ತಿದ್ದಳು. ಟೀವಿ ಹೋಯಿತು, ಕಂಪ್ಯೂಟರ್‌ ಬಂತು, ಡುಂ.ಡುಂ.ಡುಂ. ಎನ್ನುತ್ತಿದ್ದೆ.

ಗಂಡಸರ ಬುದ್ಧಿ ಸುಲಭವಾಗಿ ತಿದ್ದಲಾಗುವುದಿಲ್ಲವಂತೆ. ಇದೂ ನನ್ನವಳ ಹೇಳಿಕೆ. ಬಹುಶಃ ನಿಜವಿರಬಹುದು. ನಾನು ಇನ್ನೂ ಕಂಪ್ಯೂಟರ್‌, ಇಂಟರ್‌ನೆಟ್‌ ಸಹವಾಸ ಬಿಟ್ಟಿಲ್ಲ. ಮಂಜುನಾಥ್‌ರವರ ಬಗ್ಗೆ ಹೇಳಿದೆನಲ್ಲವೇ? ಈ ಸನ್ಮಿತ್ರರನ್ನು ನಾನು ಭೇಟಿಯಾಗಿಯೇ ಇಲ್ಲ. ಆದರೆ ಹಳೆಯ ಮಿತ್ರರಂತೆ ಚಾಟ್‌ನಲ್ಲಿ ಜೋಕ್‌ ಮಾಡುತ್ತೇವೆ. ಬೆದರಿಸುತ್ತೇವೆ. ನಾವು ಎದಿರು ಬದಿರಾದಾಗ ಇದೇ ಸಲುಗೆಯಿಂದ ಸಂವಾದ ನಡೆಸುವೆವೇ? ಗೊತ್ತಿಲ್ಲ. ನನ್ನ ಮತ್ತು ಮಂಜುನಾಥ್‌ರವರ ನಡುವಿನ ಸಂಬಂಧದ ಕೊಂಡಿಗಳಲ್ಲಿ, ತವರೂರು ಒಂದು ಮತ್ತೊಂದು ಈ ಕಂಪ್ಯೂಟರ್‌ (ಅರ್ಥಾತ್‌ ಇಂಟರ್‌ನೆಟ್‌). ಬಹುಶಃ, ಆರ್ಕುಟ್‌ ಇಲ್ಲದಿದ್ದಲ್ಲಿ ನನ್ನದೆ ತವರೂರಿನ ಮತ್ತೊಂದು ಪೀಳಿಗೆಯ ಸಂವೇದನಶೀಲ ವ್ಯಕ್ತಿ ಮಂಜುನಾಥ್‌ ಜೊತೆ ಭೇಟಿಯಾಗುತ್ತಿರಲಿಲ್ಲ.

ಇಂಟರ್‌ನೆಟ್‌ ನ ಸಂಬಂಧಗಳೇ ಹೀಗೆ. ನೇರ ಸಂಬಂಧಗಳ ಹಾಗೆ ಇವುಗಳಲ್ಲಿನ ವೈರುಧ್ಯ ಅಥವಾ ನಾಟಕೀಯತೆ ಎದ್ದು ಕಾಣುವುದಿಲ್ಲ. ಬಹುಶಃ ಅದೇ ಕಾರಣಕ್ಕೇ ನಾವು ಇಂಟರ್‌ನೆಟ್‌ ಸಂಬಂಧಗಳಿಗೆ ಹೆಚ್ಚು ಮಹತ್ವ ಕೊಡುತ್ತೇವೇನೋ ಎನ್ನಿಸಿಬಿಟ್ಟಿದೆ. ಉದಾಹರಣೆಗೆ, ನನ್ನ ಮಗಳ ಜೊತೆಗೆ ನಾನು ನಡೆಸುವ ಚಾಟ್‌. ಚಾಟ್‌ನಲ್ಲಿ ಹಾಸ್ಯ, ಕೋಪ, ಇವೆಲ್ಲ ಇರುತ್ತದೆ. ಮುಕ್ತವಾಗಿ ವಿವಿಧ ವಿಚಾರಗಳ ಬಗ್ಗೆ ಮಾತನಾಡುತ್ತೇವೆ. ಆದರೆ ಇದೇ ಸಲುಗೆ ಬಹುಶಃ ನಾವು ಎದುರಾದಾಗ ಇರುವುದಿಲ್ಲವೇನೋ? ಕೆಲವು ವಿಷಯಗಳನ್ನು ಮಗಳು ಎನ್ನುವ ಕಾರಣಕ್ಕಾಗಿಯೇ ಮುಚ್ಚಿಡಬೇಕಾಗುತ್ತದೆ. ಆಕೆಯೂ ತಂದೆ ಎನ್ನುವ ಗೌರವದಿಂದ ಬಹುಶಃ ನೇರವಾಗಿ ಹೇಳುವುದಿಲ್ಲ. ವ್ಯಕ್ತಿ ಎದುರಿಗಿದ್ದಾರಲ್ಲಾ? ಚಾಟ್‌ನಲ್ಲಿಯಾದರೆ ಅದೊಂದು ಯಂತ್ರ. ಏನು ಹೇಳಿದರೂ ನಡೆಯುತ್ತದೆ. ಅದು ಮುಖ ಸಿಂಡರಿಸುವುದಿಲ್ಲ. ಸ್ವರ ಬದಲಿಸುವುದಿಲ್ಲ. ಸಂಭಾಷಣೆಯ ಜೊತೆಗೆ ತಳುಕಿಸುವ ಸ್ಮೈಲಿಗಳೂ ಆಷಾಢಭೂತಿಗಳೇ. ಕಪಟ ಚಿಹ್ನೆಗಳೇ ಎನ್ನಿಸುತ್ತದೆ.

ಐಐಟಿಯ ಪ್ರಭೃತಿಗಳು ಕಂಪ್ಯೂಟರ್‌ ಮುಂದೆ ಕುಳಿತು ಇಡೀ ಜಗತ್ತನ್ನು, ಅದರಲ್ಲಿನ ಸಂಸ್ಕೃತಿ, ಮಾನವತೆ, ಕಲೆ, ಸಾಹಿತ್ಯ ಎಲ್ಲವನ್ನೂ ಮರೆತಿದ್ದಾರೆ ಎನ್ನುತ್ತಾರೆ ಅವರ ಶಿಕ್ಷಕರು. ಆದರೆ ಇದುವೇ ಒಂದು ಸಂಸ್ಕೃತಿ ಅಲ್ಲವೇ? ಇಲ್ಲಿ ಮಂಜುನಾಥರ ಕವನ ಓದಲು ಸಿಗುತ್ತದೆ. ಎಲ್ಲೋ, ಯಾರೋ ಬರೆದ ಸಂಗೀತ ಕೇಳಲು ದೊರೆಯುತ್ತದೆ. ಎಲ್ಲ ಚಾಟ್‌ಗಳೂ ಸಲುಗೆಯವೇ? ಪುಟ್ಟ ಮಗುವಾಗಿದ್ದಾಗ ನೋಡಿದ್ದ ಪಲ್ಲವಿ ಧುತ್ತೆಂದು ಆರ್ಕುಟ್‌ನಲ್ಲಿ ಅಂಕಲ್‌ ಎನ್ನುತ್ತಾಳೆ. ನೆನಪಿನ ಮೂಲೆಯಲ್ಲಿ ಎಲ್ಲೋ ಕೊಳೆತುಹೋಗಿದ್ದ ಯಾವುದೋ ಒಂದು ಸಂಬಂಧ ಇದ್ದಕ್ಕಿದ್ದ ಹಾಗೆ ಅಮೆರಿಕೆಯ ನ್ಯೂಯಾರ್ಕ್‌‌ನ ಒಂದು ವೆಬ್‌ ತಾಣದಲ್ಲಿ ಎದುರಾಗುತ್ತದೆ. ವಿಶ್ವ ಎಷ್ಟುಕಿರಿದು ಎನ್ನಿಸುತ್ತದೆ.

ಈಗ ನೀವೇ ಹೇಳಿ. ಈ ಸೈಬರ್‌ ಸಮಸ್ಯೆಗೆ ಬೇರೆ ದಾರಿ ಇದೆಯೇ?

Monday, March 12, 2007

ನಾಯಿಪಾಡು

ಹೊಸದಾಗಿ ಬ್ಲಾಗ್‌ ಆರಂಭಿಸುವಾಗ ವಿಷಯ ಏನಿರಬೇಕು ಎಂಬ ಚಿಂತೆ ಮೂಡಲೇ ಇಲ್ಲ. ನಾಯಿ ಪಾಡು ಎದುರಲ್ಲೇ ಇತ್ತು. ಮೊನ್ನೆ ಬೆಂಗಳೂರಿನಲ್ಲಿ ನಾಯಿ ಕಚ್ಚಿ ಮಗುವೊಂದು ಸತ್ತಿದ್ದು ಸುದ್ದಿಯಾಯಿತಲ್ಲ. ಅಂದಿನಿಂದ ಪ್ರತಿ ನಿತ್ಯವೂ ಪತ್ರಿಕೆಯಲ್ಲಿ ಒಂದು ಕಲಂ ನಾಯಿ ಹತ್ಯೆಯ ಬಗ್ಗೆಯೇ ಇದೆ. ಬೀಡಾಡಿ ನಾಯಿಗಳ ಹೋಮ ಮಾಡಿ ಎನ್ನುವವರು ಒಂದೆಡೆ. ಇನ್ನೊಂದೆಡೆ, ಪಾಪ ನಾಯಿಗಳು. ಅವುಗಳಿಗೆ ವಾಕ್‌ ಸ್ವಾತಂತ್ರ್ಯ ಇದ್ದಿದ್ದರೆ ಅವುಗಳೂ ಮೆರವಣಿಗೆ ಹೋಗುತ್ತಿದ್ದುವೇನೋ ಎನ್ನುವವರು. ಒಟ್ಟಾರೆ ನಾಯಿಗಳ ಸುದ್ದಿ ಕೇಳುತ್ತಿದ್ದ ಹಾಗೆಯೇ ನಮ್ಮ ಮನೆಯಲ್ಲಿಯೂ ನಡೆಯುವ ನಾಯಿ ಚರ್ಚೆ ನೆನಪಿಗೆ ಬಂತು.
ಮನೆಯಲ್ಲಿ ಎಂಟರ ಮಗ ಮತ್ತುಹದಿನೆಂಟರ ಮಗಳು ಇಬ್ಬರದೂ ಹಲವು ವರುಷಗಳಿಂದ ಒಂದೇ ವರಾತ. ಮನೆಯಲ್ಲಿ ಒಂದು ನಾಯಿ ಸಾಕೋಣ. ನಾಯಿ ಸಾಕೋಣ ನಮಗೇನೂ ಹೊಸದಲ್ಲ. ಅವರ ಅಜ್ಜಿಯ ಮನೆಯಲ್ಲಿ ನಾನು ಹುಟ್ಟುವುದಕ್ಕೂ ಮೊದಲಿನಿಂದಲೇ ನಾಯಿ ಸಾಕುವ ಪರಿಪಾಠ ಇದೆ. ನಮಗೆ ಹೊತ್ತು, ಹೊತ್ತಿಗೆ ಕಾಫಿ, ತಿಂಡಿ ಸಿಗುತ್ತಿತ್ತೋ ಇಲ್ಲವೋ, ನಾಯಿಗೆ ಅದು ತಪ್ಪುವುದಿಲ್ಲ. ಇಂದಿಗೂ ಅಲ್ಲಿ ಜಿಪ್ಸಿ ಇದೆ.
ಜಿಪ್ಸಿಗೆ ಮೊದಲು ಜಿಮ್ಮಿ ಇತ್ತು. ಅದಕ್ಕೂ ಮೊದಲು ನಿಶಾ. ಅದಕ್ಕೂ ಮೊದಲು ರಾಣಿ. ರಾಣಿಗೂ ಹಿಂದೆ ಟಾಮಿ. ಇವೆಲ್ಲ ನನಗೆ ನೆನಪಿರುವಂತಹವು. ನೆನಪಿಲ್ಲದಂತಹವು ಇನ್ನೂ ಎಷ್ಟೋ! ನಾವಿರುವ ಊರಿನಲ್ಲಿ ಖಂಡಿತ ನಾಯಿ ಕೃಷಿ (ಬ್ರೀಡರ್ಸ್‌)ಕರು ಇಲ್ಲ. ಇದ್ದಿದ್ದರೆ ಬೀದಿಯ ನಾಯಿಗಳು ನಮ್ಮ ಮನೆಯವುಗಳಾಗುತ್ತಿರಲಿಲ್ಲ.
ಅಪ್ಪಟ ಸಂಪ್ರದಾಯದವರ ಮನೆಗೆ ನಾಯಿ ಬಂದ ಬಗ್ಗೆಯೂ ಅಪ್ಪ ಕತೆ ಹೇಳುತ್ತಿದ್ದರು. ಅವರ ಬಾಸ್‌ ಮನೆಗೆ ಒಂದು ನಾಯಿ ಬಂತಂತೆ. ಆದರೆ ಬಾಸ್‌ನ ಹೆಂಡತಿಗೆ ನಾಯಿಯ ಬಗ್ಗೆ ಬಲು ಭಯ. ಹೀಗಾಗಿ ನಾಯಿಯನ್ನ ಊರಿನಿಂದ ದೂರ ಎಲ್ಲೋ ಹೊರಗೆ ಬಿಟ್ಟು ಬಂದು ಬಿಡಿ ಎಂದರಂತೆ. ನಾಯಿಗೆ ಊರಿನಿಂದ ಬಹಿಷ್ಕಾರ ಹಾಕುವ ಕೆಲಸ ಡ್ರೈವರ್‌ ಆಗಿದ್ದ ಅಪ್ಪನ ಪಾಲಿಗೆ ಬಂತು. ಜೀಪಿನಲ್ಲಿ ಕೊಂಡೊಯ್ದು ಬಲು ದೂರದಲ್ಲಿ ಬಿಟ್ಟು ಬಂದರಂತೆ. ನಾಲಕ್ಕೇ ದಿನ, ನಾಯಿ ಮತ್ತೆ ಹಾಜರ್‌. ಹೀಗೆ ಎರಡು ಮೂರು ಬಾರಿ ಆದ ಮೇಲೆ, ಕರುಣೆ ಬಂದು ಅಪ್ಪ ಅದನ್ನು ಮನೆಗೇ ತಂದಿಟ್ಟುಕೊಂಡರಂತೆ.
ಒಂದು ರೂಮಿನ ಮನೆಯಲ್ಲಿ ಎಂಟು ಮಂದಿ ಇದ್ದ ಕಾಲ ಅದು. ಟಾಮಿ ಒಂಬತ್ತನೆಯದಾಗಿ ಮನೆ ಸೇರಿತ್ತು. ರಾತ್ರಿ ಅಪ್ಪ ಬೀದಿಯ ಮೂಲೆಯಲ್ಲಿ ಬಂದರೆ ಸಾಕು, ಊರಿಗೇ ಸೈರನ್‌ನ ಹೊಡೆಯುತ್ತಿತ್ತು ಟಾಮಿ. ಯಾರನ್ನೂ ಅದು ಕಚ್ಚಿದ ನೆನಪಿಲ್ಲ. ನನಗೆ ಅದರ ನೆನಪು ಇರುವುದು ಇಷ್ಟೆ. ತೆಪ್ಪಗೆ ಮಲಗಿರುತ್ತಿದ್ದ ಅದನ್ನೇ ತಲೆದಿಂಬಾಗಿಟ್ಟುಕೊಂಡು ಎಷ್ಟೋ ಬಾರಿ ಒರಗಿರುತ್ತಿದ್ದೆ. ಎಷ್ಟೇ ನೆನಪಿಸಿಕೊಂಡರೂ ಅದರ ಚಿತ್ರ ನೆನಪಾಗುತ್ತಿಲ್ಲ. ನೆನಪಾಗುತ್ತಿರುವುದು ಕೇವಲ ನನ್ನ ಮಡದಿ ಹೊಲಿದು ಇಟ್ಟಿರುವ ಬೆಳ್ಳಗಿನ ಪಾಲಿಫೈಬರ್‌ನ ಸಾಫ್ಟೀ ನಾಯಿ ಬೊಂಬೆಯಷ್ಟೆ. ಆದರೆ ಒಂದು ದಿನ ಮನೆಯ ಎದುರಿನಲ್ಲೇ ರಭಸದಿಂದ ಬಂದ ಲಾರಿ (ತಿಂಗಳಿಗೊಮ್ಮೆ ಟ್ರಕ್ಕುಗಳು ಕಾಣಿಸಿಕೊಳ್ಳುತ್ತಿದ್ದ ಕಾಲ ಅದು. ಇಂದಿನಂತೆ ಸಾಲು, ಸಾಲಾಗಿ ಮರಳು ಲಾರಿಗಳು ಬರುತ್ತಿರಲಿಲ್ಲ) ಚಕ್ರಕ್ಕೆ ಸಿಲುಕಿ ಕರ್ಕಶವಾಗಿ ಕೂಗಿ ಕೊನೆಯುಸಿರೆಳೆದದ್ದು ನೆನಪಿನಲ್ಲಿದೆ.
ನಾಯಿಯ ಕೂಗು ಕೇಳಿ ಓಡಿ ಬಂದ ಅಮ್ಮ, ನನ್ನನ್ನು ಮನೆಯಿಂದ ಹೊರಗೆ ಬಿಟ್ಟಿರಲಿಲ್ಲ. ಬೀದಿಯವರೆಲ್ಲ ಸೇರಿ ಟ್ರಕ್‌ ಚಾಲಕನಿಗೆ ಧರ್ಮದೇಟು ಕೊಟ್ಟಿದ್ದರಂತೆ. ರಾತ್ರಿ ಅಪ್ಪ ಮರಳುವವರೆಗೂ ಅಮ್ಮ, ಅಕ್ಕಂದಿರು, ಅಕ್ಕಪಕ್ಕದವರು, ಟಾಮಿಯನ್ನ ಜೋಪಾನವಾಗಿ ಬಟ್ಟೆ ಹೊದಿಸಿ ಕಾದಿಟ್ಟಿದ್ದರು. ಅಪ್ಪ ಬಂದ ನಂತರ ಅರ್ಧ ರಾತ್ರಿಯಲ್ಲಿಯೇ ದೂರದ ಕೆರೆಯ ಬಳಿ ಟಾಮಿಯ ಸಂಸ್ಕಾರ ಆಯಿತು. ಮರುದಿನ ಟಾಮಿಯ 'ಗೋರಿ'ಯ ಬಳಿ ಹೋಗಿ ಹಣ್ಣು, ಹೂವು ಇಟ್ಟಿದ್ದಾಯಿತು. ಅಪ್ಪ ಕೂಡ ಬಂದಿದ್ದರು. ನಾಲ್ಕು ಬನ್‌ಗಳ ಜೊತೆಗೆ. ನಿತ್ಯ ರಾತ್ರಿ ಬಂದಾಗ ಜೇಬಿನಲ್ಲಿ ಬನ್‌ ಒಂದು ತರುವ ಅಭ್ಯಾಸ. ಟಾಮಿ ಹಾರಿ ಹೋಗಿ ಜೇಬಿನಿಂದ ಅದನ್ನು ಎಗರಿಸುತ್ತಿತ್ತು. ಟಾಮಿಯ ಮೆಚ್ಚಿನ ತಿಂಡಿ ಎಂದು ಅಪ್ಪ ಗೋರಿಗೆ ಬನ್‌ ಒಪ್ಪಿಸಿದ್ದರು. ನಾನು ಮೂರು, ನಾಲ್ಕು ದಿನ ಟಾಮಿ ಬೇಕು ಎಂದು ಅಳುತ್ತಿದ್ದೆನಂತೆ. ಈಗ ಅಮ್ಮ ನೆನಪಿಸಿಕೊಳ್ಳುತ್ತಿರುತ್ತಾರೆ.
ಕಾಲ ಬದಲಾಗಿದೆ. ಮನೆಯಲ್ಲಿ ಜಿಪ್ಸಿ ಇದೆ. ಊರವರನ್ನೆಲ್ಲ ಬೆದರಿಸುತ್ತದೆ. ಹತ್ತಾರು ತಿಂಗಳು ಕಳೆದು ಹೋದರೂ ನೆನಪಿನಿಂದ ಬಾಲ ಅಲ್ಲಾಡಿಸುತ್ತದೆ. ಆದರೆ ನಾನು ಬನ್ ತೆಗೆದುಕೊಡುವುದಿಲ್ಲ. ಮೈ ಸವರುವುದಿಲ್ಲ.
ನಾಯಿ ೧