Wednesday, May 23, 2018

ಅವನು, ಅವಳು ಮತ್ತು ಅವರು

ಮೊನ್ನೆ ಯಾವುದೋ ಲೇಖನವನ್ನು ಬರೆದು ಗೆಳೆಯ ಅನಂತುವಿಗೆ ಓದಲು ಕೊಟ್ಟೆ. ಪ್ರಕಟಣೆಗೆ ಮುನ್ನವೇ ಒಮ್ಮೆ ಲೇಖನದ ಪರೀಕ್ಷೆ ಮಾಡುವುದು ನನ್ನ ಚಾಳಿ. ಸಾಮಾನ್ಯವಾಗಿ ಲೇಖನವನ್ನು ಮೆಚ್ಚುವವರಿಗೆ, ಅಂದರೆ ಹೆಂಡತಿಯನ್ನು ಬಿಟ್ಟು ಉಳಿದವರಿಗೆ, ಕೊಡುವುದು ಪರಿಪಾಠ. ಹಾಗೆಯೇ ಅನಂತುವಿಗೆ ಲೇಖನವನ್ನು ಕೊಟ್ಟೆ. "ಚೆನ್ನಾಗಿದೆ ಸರ್" ಎಂದು ನಾನು ಬಯಸಿದ್ದನ್ನೇ ಹೇಳಿದ. ಜೊತೆಗೇ " ಆದರೂ ಸರ್, 'ಡಾರ್ವಿನ್ ಹೀಗೆ ಹೇಳಿದ' ಅಂತ ಬರೆದಿದ್ದೀರಲ್ಲ? ಡಾರ್ವಿನ್ ಹೀಗೆ ಹೇಳಿದರು,' ಅಂತ ಬರೆಯಬೇಕಲ್ಲವಾ? ಅವರು ಹೇಗಿದ್ದರೂ ಹಿರಿಯರಲ್ಲವಾ? ಏಕವಚನ ಬಳಸುವುದು ಸರಿಯೋ?" ಎಂದು ಪ್ರಶ್ನೆ ಹಾಕಿದ. ಏನೋ ಸಮಝಾಯಿಷಿ ಕೊಟ್ಟು ಸುಮ್ಮನಾಗಿಸಿದೆನಾದರೂ, ಪ್ರತಿ ಲೇಖನ ಬರೆವಾಗಲೂ ಅವನ ಮಾತು ಮನಸ್ಸನ್ನು ಕೊರೆಯುತ್ತಲೇ ಇತ್ತು. ಹೌದು. ಅವನು, ಅವಳು ಮತ್ತು ಅವರು ಎನ್ನುವ ಪದಗಳನ್ನು ಯಾವಾಗ, ಹೇಗೆ ಬಳಸುತ್ತೇವೆ? ಏಕೆ ಬಳಸುತ್ತೇವೆ ಎಂದು ಯೋಚಿಸುತ್ತಲೇ ಹೋದೆ.
ಕನ್ನಡ ತರಗತಿಯಲ್ಲಿ ನನಗೆ ಪಾಠ ಹೇಳಿಕೊಟ್ಟವರು ಹೇಳಿದ್ದು ಇಷ್ಟೆ. ಅವನು - ಏಕವಚನ ಪುಲ್ಲಿಂಗ, ಅವಳು - ಏಕವಚನ ಸ್ತ್ರೀಲಿಂಗ, ಅವರು - ಬಹುವಚನ ಪುಲ್ಲಿಂಗ ಹಾಗೂ ಸ್ತ್ರೀಲಿಂಗ. ಆದರೂ ರೂಢಿಯಲ್ಲಿ ಅಮ್ಮ - ಅಪ್ಪ ಹಾಕಿಕೊಟ್ಟ  ಇನ್ನೂ ಕೆಲವು ನಿಯಮಗಳನ್ನು ಬಳಸುತ್ತಿದ್ದೆ. ಯಾರನ್ನಾದರೂ ಸಂಬೋಧಿಸಬೇಕಾದರೆ,  ಹಿರಿಯರಾದವರಿಗೆ ಬಹುವಚನ, ಕಿರಿಯರಾದವರಿಗೆ, ಆಪ್ತರಿಗೆ ಏಕವಚನ ಬಳಸಬೇಕು. ಇಲ್ಲಿಯೂ ಅಪವಾದಗಳೇ, ಅಪವಾದಗಳು.  ನನಗೆ ಆರೇಳು ವರ್ಷವಷ್ಟೆ ಹಿರಿಯರಾದ ಅತ್ತೆಯ ಮಕ್ಕಳನ್ನು ಬಹುವಚನದಲ್ಲಿಯೂ, ಹತ್ತು ವರ್ಷ ಹಿರಿಯಳಾದ ಅಕ್ಕನನ್ನು ಏಕವಚನದಲ್ಲಿಯೂ ಸಂಬೋಧಿಸುತ್ತಿದ್ದೆ. ಇವೆಲ್ಲವೂ ಯಾವುದೇ ವಿಚಾರ, ವಿಮರ್ಶೆಗಳನ್ನೂ ಮಾಡದೆಯೇ ನಡೆಯುತ್ತಿದ್ದ ರೂಢಿಗತ ಸಂಗತಿಗಳು. ಅನಂತನ ಮಾತು ಇವೆಲ್ಲವನ್ನು ಮನದಾಳದಿಂದ, ಮುಂದಕ್ಕೆ ತಂದು ಧುತ್ತೆಂದು ನಿಲ್ಲಿಸಿಬಿಟ್ಟಿತು.

ಹೇಗೆ ಕರೆದರೇನಂತೆ? ವ್ಯಕ್ತಿ ಗೌರವ ಮುಖ್ಯವಾದದ್ದು ಎಂದು ಸಮಾಧಾನ ಹೇಳಿಕೊಂಡು ಆರಾಮವಾಗಿದ್ದೆ. ಆದರೆ ಮೊನ್ನೆ ಯಾವುದೋ ಸಮಾರಂಭಕ್ಕೆ ಹೋಗಿದ್ದೆ. ಆಗ ಒಂದು ಪುಟ್ಟ ಮಗು ಟಾಟಾ ಬಂತು ಎಂದು ಹೇಳಿತು. ನಮ್ಮಲ್ಲಿ ಮಗುವಿಗೆ ನಪುಂಸಕ ಲಿಂಗ ಹಾಗೂ ಏಕವಚನ ಬಳಸುವುದು ವಾಡಿಕೆ. ಆದರೆ ನರೆತ ಕೂದಲಿನವರಿಗೆ? ಸ್ವಲ್ಪ ಕಸಿವಿಸಿ ಆಯಿತಾದರೂ, ಇದು ಕೆಲವರ ಮನೆಯಲ್ಲಿನ ಅಭ್ಯಾಸ ಎಂದು ಗೊತ್ತಾಯಿತು. ಏಕವಚನ ಎಂದರೆ ಆತ್ಮೀಯತೆ ಇರಬಹುದು. ಅದಕ್ಕೆ ಮಕ್ಕಳು ಅಪ್ಪ ಬಂತು. ಅಮ್ಮ ಬಂತು ಎಂದು ಮೊದಲಿಗೆ ಆರಂಭಿಸುತ್ತವೆ. ಕ್ರಮೇಣ ವ್ಯಾಕರಣ ಕಲಿತದ್ದಾಗಿಯೂ, ಬೆಳೆಯುತ್ತಿದ್ದಂತೆ ಆತ್ಮೀಯತೆ ಕಡಿಮೆ ಆಗಿದ್ದಕ್ಕೆಯೋ ಏಕವಚನಕ್ಕೆ ಇಳಿದು ಬಿಡುತ್ತವೆ. ನಮಗಿಂತ ಕಿರಿಯರನ್ನು ಏಕವಚನದಲ್ಲಿ ಸಂಭೋದಿಸುವುದು ಅದಕ್ಕೆ ಏನೋ.

ಕೃಷ್ಣನನ್ನು ಬಾ ಎನ್ನುತ್ತೇವೆ. ಶಿವ ಕಾಯುತ್ತಾನೆ ಎನ್ನುತ್ತೇವೆ. ಕಾಯುತ್ತಾರೆ ಅಂತಲ್ಲ. ಅಕ್ಕನಂತವರು ಚನ್ನಮಲ್ಲಿಕಾರ್ಜುನನನ್ನ ಏಕವಚನದಿಂದಲೇ ಹಾದಿ ಹೊಗಳಿದ್ದರಲ್ಲವೇ ? ಹಾಗಿದ್ದರೆ ದೊಡ್ಡವರೊ ಚಿಕ್ಕವರೊ ಆತ್ಮೀಯತೆ, ಭಕ್ತಿ  ಇದ್ದರೇ  ಏಕವಚನ ಬಳಸಬಹುದು.  ಇವೆರಡೂ ಇಲ್ಲದೆ ಬರಿಯ ಅಧಿಕಾರದ ಸಂಬಂಧವಷ್ಟೇ ಎಂದರೆ ರಾಜರ ಆಸ್ಥಾನದಲ್ಲಿ ಹೇಳುವ ಹಾಗೆ, ಸರ್ವಂ ಬಹುವಚನಮಯಂ ಎಂದಾಯಿತು ಎಂದುಕೊಂಡೆ. ಮದುವೆಗೂ ಮುನ್ನ ಬಾರೋ ಹೋಗೋ ಎನ್ನುತ್ತಿದ್ದ ಪ್ರೇಯಸಿ, ತಾಳಿ ಕೊರಳಿಗೆ ಬಿದ್ದ ಮೇಲೆ ಬನ್ನಿ ಹೋಗಿ ಎನ್ನುವುದು ಇದಕ್ಕೆ ಇರಬಹುದು ಅಲ್ಲವೇ?  ಆದರೆ ಇತ್ತೀಚಿಗೆ ಈ ನಿಯಮವೂ ಸರಿಯಿಲ್ಲ ಎನ್ನಿಸುತ್ತದೆ.


ಇತ್ತೀಚಿಗೆ ಫೇಸ್ಬುಕ್, ಟ್ವಿಟ್ಟರ್, ವಾಟ್ಸಪ್ಪುಗಳಲ್ಲಿ ಬರುವ ಸಂದೇಶಗಳನ್ನು ಗಮನಿಸಿದಾಗ ಈ ಸಂದೇಹ ಇನ್ನೂ  ಹೆಚ್ಚಾಯಿತು.  ಗಮನಿಸಿ. ನಿಮ್ಮ ಪಕ್ಷಕ್ಕೆ ಸೇರದ ಹಿರಿಯರಿಗೆ ಬಹುವಚನ ಬೇಕಿಲ್ಲ. ಬೇರೆ ಪಕ್ಷದ ಹಾಗೂ ನಿಮ್ಮ ಧರ್ಮದವರಿಗೆ ಬಹುವಚನ ಬಳಸಬಹುದು. ಆದರೆ ಬೇರೆ ಧರ್ಮದವರಾದರೆ ಈ ವಿನಾಯಿತಿಯೂ ಬೇಕಿಲ್ಲ. ಇನ್ನು ಅವರು ನಿಮಗೆ ಬೇಡದವರೋ, ಪ್ರಧಾನ ಮಂತ್ರಿ ಆದರೂ, ಮುಖ್ಯ ಮಂತ್ರಿ ಆದರೂ ಚಿಂತೆ ಇಲ್ಲ. ಏಕವಚನ ಸಾಕು.

ಕನ್ನಡ ವ್ಯಾಕರಣದಲ್ಲಿ ನಿಯಮಗಳಿಗಿಂತಲೂ ಅಪವಾದಾಗಲೇ ಹೆಚ್ಚು ಎಂದು ನನಗೆ ಅನ್ನಿಸಿದಂತೆ ನಿಮಗೂ ಅನ್ನಿಸಿದರೆ ಅದು ನನ್ನ ತಪ್ಪಲ್ಲ. ಈಗ ಜಾಣತನದಿಂದ ಬರೆಯೋದು ಕಲಿತಿದ್ದೀನಿ. ಅವರು ಅಂತಲೋ, ಅವನು-ಅವಳು ಅಂತಲೋ ಬರೆಯುವುದೇ ಇಲ್ಲ.  ಆತ ಎನ್ನುತ್ತೇನೆ. ಆತ ಬಂದ ಎನ್ನುತ್ತೇನೆ. ಆತ ಯಾವ ವಚನವೋ. ಬಂದ ಎನ್ನುವ ಏಕವಚನವನ್ನು ಸರಿದೂಗಿಸಿ ಬಿಡುತ್ತದೆ.

ಏನನ್ನುತ್ತೀ ...ರಿ ?

Sunday, August 27, 2017

ಅಪ್ಪ ಅಪ್ಪನೇ!

ಮೊನ್ನೆ ದೂರದ ಊರಿನಲ್ಲಿ ಓದುತ್ತಿರುವ ಮಗ ಚತುರ್ಥಿ ರಜೆಗೆ ಮನೆಗೆ ಬಂದಾಗ ಜೊತೆಗೆ ಅವನ ಬಳಿ ಇದ್ದ ಒಂದು ಫೋನು ಹಾಗೂ ಸ್ಪೀಕರು ಕೊಂಡು ತಂದಿದ್ದ. “ಅಪ್ಪಾ. ಇದು ಛಾರ್ಜು ಆಗುತ್ತಿಲ್ಲ. ಫೋನು ಸಿಮ್ಮನ್ನು ಗುರುತಿಸುತ್ತಿಲ್ಲ” ಎಂದು ದೂರಿತ್ತ. ಎರಡನ್ನೂ ಸಮೀಪದಲ್ಲಿದ್ದ ಅಂಗಡಿಗೆ ಕೊಂಡೊಯ್ದು ರಿಪೇರಿ ಮಾಡಿಕೊಡಿ ಎಂದರೆ “ಇವೆಲ್ಲ ರಿಪೇರಿ ಆಗುವ ಸಾಧನಗಳಲ್ಲ ಸರ್. ಹೊಸತು ತೆಗೆದುಕೊಳ್ಳಿ. ಬಯ್ ಬ್ಯಾಕ್, ಮಾಡ್ತೇವೆ. ಒಂದು ಐದು ನೂರು ರೂಪಾಯಿ ಡಿಸ್ಕೌಂಟ್ ಸಿಗುತ್ತೆ.” ಎಂದು ಉತ್ತರ ಬಂತು. ಮನಸ್ಸಿನಲ್ಲೇ ಕೊಳ್ಳುಬಾಕತನದ ಬಗ್ಗೆ ಬೈದು ಕೊಳ್ಳುತ್ತಾ ಮನೆಗೆ ಬಂದೆವು.
ಮನೆಯ ಪಾರ್ಲಿಮೆಂಟಿನಲ್ಲಿ ಇದರ ಚರ್ಚೆಯೂ ಆಯಿತು.  “ಬೇರೆ ತೆಗೆದುಕೊಡುತ್ತೇನೆ. ಇದನ್ನು ಇಲ್ಲೇ ಇಟ್ಟು ಹೋಗು.” ಎಂಬ ಪ್ರಸ್ತಾಪ ಮುಂದಿಟ್ಟೆ. ಮಡದಿಯದ್ದು ಒಂದೇ ವಿರೋಧ. “ಪ್ರತಿ ಬಾರಿ ಏನಾದರೂ ಹಾಳು ಮಾಡಿಕೊಂಡು ಬರುತ್ತಾನೆ. ಅದನ್ನು ರಿಪೇರಿ ಮಾಡಿ ಕೊಡವುದೋ, ಹಾಳಾಗದಂತೆ ಜಾಗ್ರತೆಯಿಂದ ಉಪಯೋಗಿಸು ಅಂತ ನೀವು ಯಾವತ್ತು ಹೇಳುವುದದಿಲ್ಲ. ಮಕ್ಕಳು ಕೇಳಿದ್ದನ್ನೆಲ್ಲ ಹೀಗೆ ಕೊಡಿಸುತ್ತಾ ಇದ್ದರೆ ಅವರು ಬದುಕನ್ನು ಕಲಿಯುವುದಾದರೂ ಹೇಗೆ?”

ನಿಜ. ಮಕ್ಕಳ ಮೇಲಿನ ಪ್ರೀತಿಯೋ, ನಮ್ಮ ಪ್ರತಿಷ್ಠೆಯೋ ಒಟ್ಟಾರೆ ಮಕ್ಕಳ ಬೇಡಿಕೆಗೆ ಇಲ್ಲ ಎನ್ನುವುದು ಕಷ್ಟವೇ. ನಾನಂತೂ ಇದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ತನ್ನ ಖಾತೆಯಲ್ಲಿಯೇ ಸಾಕಷ್ಟು ಹಣವಿದ್ದರೂ, ಅದನ್ನು ಖರ್ಚು ಮಾಡದೆ ನಮ್ಮ ಬಳಿ ಬಂದು ಒಪ್ಪಿಸಿದ್ದಾನಲ್ಲ ಮಗ. ಇದು ಹಣಕಾಸು ವ್ಯವಹಾರದಲ್ಲಿ ಅವನಿಗೆ ಜವಾಬುದಾರಿ ಇದೆ ಎನ್ನುವುದರ ಕುರುಹು ಎನ್ನುವ ವಾದದ ಜೊತೆಗೇ ಅವನು ಈಗ ಕೇಳುತ್ತಿರುವ ವಸ್ತುಗಳ ಒಟ್ಟು ಮೊತ್ತ ನನ್ನ ಮಾಸಿಕ ಆದಾಯದ ಒಂದೋ, ಎರಡೋ ಪರ್ಸೆಂಟಿನಷ್ಟು ಅಷ್ಟೆ!  ನಾವು ನಿತ್ಯ ಗಂಟೆಗಟ್ಟಲೆ ಮಾತನಾಡುವ ಫೋನು ಬಿಲ್ಲು ಅದಕ್ಕಿಂತ ಹೆಚ್ಚಾಗುತ್ತದೆ ಎಂದು ಮಡದಿಯ ಬಾಯಿ ಮುಚ್ಚಿಸಲು ನೋಡುತ್ತೇನೆ.

ಹಾಗೆ ಮಾಡಿದಾಗಲೆಲ್ಲ ಈ ಅಪ್ಪಂದಿರ ಕಥೆಯೇ ಹೀಗೋ ಎನ್ನಿಸುತ್ತದೆ. ನನ್ನ ಗೆಳೆಯರೊಬ್ಬರು ತಮ್ಮ ಮಗನಿಗೆ ಕಾರು ಕೊಡಿಸಲು ಮಡದಿಯ ಬಳಿ ಒಂದು ಕಾದಂಬರಿಗೆ ಸಾಕಾಗುವಷ್ಟು ಕಥೆ,ಪುರಾಣ ಒಪ್ಪಿಸಿದ್ದರು. ಅಪ್ಪಂದಿರು ಹೀಗೇಕೆ? ಈ ಪ್ರಶ್ನೆ ನನ್ನನ್ನು ಯಾವಾಗಲೂ ಕಾಡುತ್ತದೆ. ನನ್ನ ಅಪ್ಪನೂ ಇದಕ್ಕೆ ಹೊರತಾಗಿರಲಿಲ್ಲ. ಹಾಗಂತ ನನ್ನ ಅಪ್ಪ ಧಂಡಿಯಾಗಿ ದುಡಿದು ತರುತ್ತಿದ್ದ ವೈಟ್ ಕಾಲರ್ ಅಧಿಕಾರಿಯಾಗಿರಲಿಲ್ಲ. ನಿತ್ಯ ಕೆಲಸ ಮಾಡಿದರಷ್ಟೆ ಕೈಗೆ ಕಾಸು. ಅದೂ ಎಂಟು ಮಂದಿಯ ಸಂಸಾರ ಸಾಗಿಸಲು ಪ್ರತಿ ದಿನಕ್ಕೆ ಹತ್ತು ರೂಪಾಯಿಯ ಆದಾಯ ಇರುತ್ತಿತ್ತು. ನಿಜ. ಅರವತ್ತು ಎಪ್ಪತ್ತರ ದಶಕದ ಅಂದಿನ ಕಾಲದಲ್ಲಿ ಆಹಾರ ಪದಾರ್ಥಗಳ ಬೆಲೆಯೂ ಹಾಗೆಯೇ ಇತ್ತು. ಎಂಟಾಣೆಗೆ ಕೇಜಿ ಅಕ್ಕಿ. ಐದು ಪೈಸೆಗೆ ಐದು ಬಿಲ್ಲೆ ಕಾಫಿ ಬಿಲ್ಲೆ. ಐದು ಪೈಸೆಗೆ ಲಿಪ್ಟನ್ ಚಹಾದ ಪುಟ್ಟ ಪೊಟ್ಟಣ. ಅತಿ ದುಂದಿನ ವೆಚ್ಚ ಎಂದರೆ ಬಾಡಿಗೆ, ಸೀಮೆಣ್ಣೆ, ಸಕ್ಕರೆ ಹಾಗೂ ಬೇಕರಿ ಪದಾರ್ಥಗಳು. 

ನನಗೆ ನೆನಪಿರುವ ಹಾಗೆ ಆ ಕಾಲದಲ್ಲಿಯೂ ಅಪ್ಪ ತನ್ನ ವರಮಾನದ ಶೇಕಡ ಹತ್ತರಷ್ಟು ಅಂದರೆ ದಿನಕ್ಕೆ ಒಂದು ರೂಪಾಯಿಯಷ್ಟು ಬಾಡಿಗೆಯನ್ನು ನೀಡುತ್ತಿದ್ದರು. ಸೀಮೆಣ್ಣೆ ಬೆಲೆ 75 ಪೈಸೆ ಇರುತ್ತಿತ್ತು. ಸಕ್ಕರೆಯ ಬೆಲೆ ಒಂದು ಕಿಲೋಗೆ ಒಂದು ರೂಪಾಯಿಯೇನೋ ಇರುತ್ತಿತ್ತು. ಅದೂ ಅಂಗಡಿಗಳಲ್ಲಿ ಸಿಕ್ಕುತ್ತಿರಲಿಲ್ಲ. ಮಾಸಿಕ ರೇಶನ್ ಕೊಂಡು ತಂದರಷ್ಟೆ ಸಕ್ಕರೆ ಅಮ್ಮನೂ ತನ್ನ ಜಾಣತನವನ್ನೆಲ್ಲ ಬಳಸಿ ಇದ್ದಷ್ಟರಲ್ಲಿ ವ್ಯವಹಾರ ಹೊಂದಿಸಿಕೊಂಡು ಹೋಗುತ್ತಿದ್ದಳು. ಪಕ್ಕದ ಮನೆಗೆ ಕೆಲಸಕ್ಕೆ ಬರುತ್ತಿದ್ದವಳ ರೇಶನ್ ಕಾರ್ಡಿನಲ್ಲಿ ಸಿಗುತ್ತಿದ್ದ ಸಕ್ಕರೆಯನ್ನು ತಾನು ಖರೀದಿಸಿ ಅವಳಿಗೆ ಬೆಲ್ಲ ಕೊಡುತ್ತಿದ್ದಳು. ಆಗ ಎಲ್ಲರ ಮನೆಯಲ್ಲೂ ಕಾಫಿ ಸಾಮಾನ್ಯವಾಗಿರಲಿಲ್ಲ. ಚಹಾ ಕೂಡ. ಹಾಲು ಕೂಡ ಸುಲಭವಾಗಿ ಸಿಗುವ ವಸ್ತುವಾಗಿರಲಿಲ್ಲ.
ಅಂತಹ ದಿನಗಳಲ್ಲೂ ಅಪ್ಪ ಒಮ್ಮೊಮ್ಮೆ ಮನೆಗೆ ಬರುವಾಗ ಜೇಬಿನಲ್ಲಿ ನಮ್ಮ ಮನೆಯಲ್ಲಿದ್ದ ಟಾಮಿಗೆಂದು ಬೇಕರಿಯ ಬನ್ನು ತರುತ್ತಿದ್ದದ್ದು ಇಂದಿಗೆ ವಿಚಿತ್ರ ಎನ್ನಿಸುತ್ತದೆ. ಹಾಗೆಯೇ ಬೆಂಗಳೂರಿಗೋ, ಮೈಸೂರಿಗೋ ಕಾರ್ಯನಿಮಿತ್ತ ಹೋದರೆ ಬರಿಗೈಯಲ್ಲಿ ಬರುತ್ತಲೇ ಇರುತ್ತಿರಲಿಲ್ಲ. ಅಲ್ಲಿಂದ ರಸ್ಕು ಮತ್ತು ಆಟದ ಸಾಮಾನುಗಳನ್ನೋ ಗೊಂಬೆಗಳನ್ನೋ ಹೊತ್ತು ತರುತ್ತಿದ್ದರು.

ಹೌದು. ಅಂದಿನ ಕಾಲದಲ್ಲಿಯೂ 50 ಪೈಸೆ ದುಬಾರಿ ಬೆಲೆ ಕೊಟ್ಟು ಮನೆಗೆ ಸುಧಾ ತರಿಸುತ್ತಿದ್ದೆವು. ಪ್ರಜಾಮತ ಬರುತ್ತಿತ್ತು. ಇವೆರಡೂ ಪತ್ರಿಕೆಗಳೂ ಅರ್ಧ ಕಿಲೋಮಿಟರು ದೂರವಿದ್ದ ಆ ರಸ್ತೆಯಲ್ಲಿ ಓದಿದ್ದ ಎಲ್ಲ ಹೆಣ್ಣುಮಕ್ಕಳ ಬಳಿಯೂ ಸುತ್ತಾಡುತ್ತಿತ್ತು. ಕನ್ನಡದವಳಲ್ಲದ ಅಮ್ಮನೂ ಕನ್ನಡ ಕಲಿತು ಪತ್ರಿಕೆಗಳನ್ನು ಓದಿ ನಮಗೆ ಕಲಿಸುತ್ತಿದ್ದರು. ಅಪ್ಪ-ಅಮ್ಮರಿಬ್ಬರೂ ಅಕ್ಷರವಂತರಷ್ಟೆ ಹೊರತು ಪದವೀಧರರಲ್ಲ. ಆದರೂ ಎಲ್ಲ ಬ್ರಾಹ್ಮಣ ಮನೆತನದವರಂತೆ ತಮ್ಮ ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗ ಸಂಪಾದಿಸಬೇಕು ಎನ್ನುವ ಹಂಬಲ ಇಬ್ಬರಲ್ಲೂ ಇತ್ತು. ಅಮ್ಮ ಕಲಿತದ್ದು ಮಲೆಯಾಳಂ ಆದರೂ ನಮಗಾಗಿ ಕನ್ನಡವನ್ನೂ, ಇಂಗ್ಲೀಷನ್ನೂ ಕಲಿತು ಪಾಠ ಹೇಳುತ್ತಿದ್ದರು. ನಮಗಷ್ಟೆ ಅಲ್ಲ. ಬೀದಿಯಲ್ಲಿದ್ದ ಹತ್ತಾರು ಹೆಣ್ಣು ಮಕ್ಕಳಿಗೆ ಅಕ್ಕಂದಿರ ಜೊತೆಗೆ ಉಚಿತ ಮನೆಪಾಠವೂ ನಡೆಯುತ್ತಿತ್ತು. ನಾನೂ ಮಧ್ಯೆ ಸೇರಿ ಕೇಳಿ, ಕೇಳಿಯೇ ಇಂಗ್ಲೀಷು ಕಲಿತೆ. 

ಈಗ ಕನ್ನಡ, ಇಂಗ್ಲೀಷು ಮಾಧ್ಯಮಗಳ ಬಗ್ಗೆ ಚರ್ಚೆ ನಡೆಯುವಾಗೆಲ್ಲ ಈ ಎರಡು ಚೇತನಗಳ ಸಾಧನೆ ಕಡಿಮೆಯೇನಲ್ಲ ಎನ್ನಿಸುತ್ತದೆ. ಹಾಗೆಯೇ ಮಡದಿಯ ಶಾಲೆಯಲ್ಲಿ ಪೋಷಕರು "ಶಾಲೆ ಇರುವುದು ಏತಕ್ಕೆ? ನಾವು ಏಕೆ ಮಕ್ಕಳಿಗೆ ಕಲಿಸಬೇಕು?" ಎಂಬ ದೂರಿದರು ಎಂದು ತಿಳಿದಾಗಲೆಲ್ಲ ಪೋಷಕರೂ ಹೀಗೂ ಇರಬಹುದೇ ಎನ್ನಿಸದಿರದು.
1976ರಲ್ಲಿ ನಾನು ಎಸ್ಸೆಸ್ಸೆಲ್ಸಿ ಪಾಸು ಮಾಡಿದ್ದೆ. ಪೀಯೂಸಿಗೆ ಸೇರಿದ ಹೊಸತು. ಅಪ್ಪ ಒಮ್ಮೆ ಬೆಂಗಳೂರಿಗೆ ಹೋಗಿದ್ದವರು ಮನೆಗೆ ಮರಳುವಾಗ ರೂಬಿಕ್ ಕ್ಯೂಬ್ ತಂದಿದ್ದರು. ರೂಬಿಕ್ ಕ್ಯೂಬ್ ಪ್ರಪಂಚಕ್ಕೆ ಪರಿಚಿತವಾದ ಹೊಸ ಆಟಿಕೆ. ಅದನ್ನು ಕಲಿತವರೂ ಕಡಿಮೆ. ಅದರ ಬಗ್ಗೆ ಆಸಕ್ತಿ ಇದ್ದವರೂ ಕಡಿಮೆ. ಅಂತಹ ದಿನಗಳು ಅವು. ಎಪ್ಪತ್ತೈದು ರೂಪಾಯಿ ಕೊಟ್ಟು ತಂದಿದ್ದರೆಂದು ನೆನಪು. ಅದು ಅವರ ತಿಂಗಳ ವರಮಾನದ ಕಾಲು ಭಾಗದಷ್ಟು. ಈ ಲೆಕ್ಕಾಚಾರವೆಲ್ಲ ನನಗೆ ಆಗ ಬರುತ್ತಿರಲಿಲ್ಲವೆನ್ನಿ. ಅದನ್ನು ತಿಳಿಯುವ ವಯಸ್ಸೂ ಆಗಿರಲಿಲ್ಲ. ನೆನಪಿರುವುದಿಷ್ಟೆ. ರೂಬಿಕ್ ಕ್ಯೂಬನ್ನು ಅದರ ಮೊದಲ ವಿನ್ಯಾಸಕ್ಕೆ ಮರಳಿಸುವ ವಿಫಲ ಪ್ರಯತ್ನದಲ್ಲಿ ನನಗೆ ಅಪ್ಪನೂ ಜೊತೆಯಾಗಿರುತ್ತಿದ್ದರು. ಎಷ್ಟೋ ಬಾರಿ ಗಂಟೆಗಟ್ಟಲೆ ಅದನ್ನು ಮಾಡಲಾಗದೇ ಕೊನೆಗೆ ಸ್ಕ್ರೂ ಡ್ರೈವರಿನಿಂದ ಎಲ್ಲವನ್ನೂ ಬಿಚ್ಚಿ ಮತ್ತೆ ಜೋಡಿಸಿ ಬಿಡುತ್ತಿದ್ದೆವು.

ಚೆಸ್, ವಿವಿಧ ವಿನ್ಯಾಸಗಳನ್ನು ಜೋಡಿಸಬಹುದಾದ ಮೆಕ್ಯಾನೋ ಸೆಟ್ಟುಗಳು (ಇಂದಿನ ಲೀಗೋ ಸೆಟ್ಟುಗಳ ಹಾಗೆ) ಸದ್ದು ಮಾಡುವ ಗೊಂಬೆ, ಮಲಗಿಸಿದರೆ ಕಣ್ಣು ಮುಚ್ಚಿಕೊಳ್ಳುವ ಗೊಂಬೆ ಹೀಗೆ ಎಲ್ಲರಿಗೂ ಆಟದ ಸಾಮಾನುಗಳನ್ನು ಕೊಡಿಸುವುದರಲ್ಲಿ ಅಪ್ಪ ಎಂದಿಗೂ ಹಿಂದೆ ಬಿದ್ದಿರಲಿಲ್ಲ. ವೃತ್ತಿಯಿಂದ ಮೆಕ್ಯಾನಿಕ್ ಆಗಿದ್ದ ಅವರಿಗೆ ಮನೆಯಲ್ಲಿ ಇದ್ದ ಗಡಿಯಾರ, ರೇಡಿಯೊ, ಸೈಕಲ್ಲು ಇತ್ಯಾದಿಗಳನ್ನೆಲ್ಲ ತಾವೇ ಬಿಚ್ಚಿ ಮತ್ತೆ ಜೋಡಿಸುವುದೆಂದರೆ ಬಲು ಇಷ್ಟ. ರಜೆಯ ದಿನಗಳನ್ನೆಲ್ಲ ಹೀಗೇ ಕಳೆಯುತ್ತಿದ್ದರು. ನಾನೂ ಅವರ ಜೊತೆಗೆ ಸ್ಕ್ರೂಡ್ರೈವರ್ರು ಕೊಡುವುದೋ, ವಿದ್ಯುತ್ ತಂತಿಗೆ ಇನ್ಸುಲೇಟರು ಹಚ್ಚುವುದೋ ಮಾಡುತ್ತಿದ್ದೆ. ಈಗಲೂ ಮನೆಯಲ್ಲಿ ವಿದ್ಯುತ್ ಏನಾದರೂ ಹೆಚ್ಚು ಕಡಿಮೆಯಾದರೆ ನಮ್ಮ ಅಕ್ಕಂದಿರು ತಾವೇ ಅದನ್ನು ಸರಿ ಪಡಿಸಲು ಹೋಗುವುದು ಬಹುಶಃ ಅಪ್ಪನ ತರಬೇತಿಯಿಂದಲೇ ಇರಬೇಕು. ಇವನ್ನೆಲ್ಲ ಶಿಕ್ಷಣವೆನ್ನಲೋ, ಕೌಶಲ್ಯವೆನ್ನಲೋ ಗೊತ್ತಿಲ್ಲ.

ಇತ್ತೀಚೆಗೆ ಮಗ ರೂಬಿಕ್ ಕ್ಯೂಬನ್ನು ಇಷ್ಟ ಪಟ್ಟಾಗಲೇ ಗೊತ್ತಾಗಿದ್ದು ಅಪ್ಪನ ಅಂದಿನ ತ್ಯಾಗ. ದೇಶದಲ್ಲಿ ತಯಾರಾಗದೇ ಇರುವ ಆಮದು ಮಾಡಿಕೊಳ್ಳಬೇಕಾದಂತಹ ಆಟಿಕೆಗಳನ್ನು ಅವು ದುಬಾರಿಯಾದರೂ ಹಿಂಜರಿಯದೆ ನಮಗೆ ತಂದು ಕೊಟ್ಟಿದ್ದರೆನ್ನುವುದು ನಂಬಲಾಗದ ಸಂಗತಿ. ಇಂದು ಮಗನ ಬಳಿ ಕನಿಷ್ಟ ನಲವತ್ತು ಬಗೆಯದಾದರೂ ರೂಬಿಕ್ ಕ್ಯೂಬುಗಳಿವೆ. ನನಗೆ ಅವುಗಳನ್ನು ಮರುಜೋಡಿಸುವುದು ಆಗುವುದಿಲ್ಲ ಎನ್ನುವುದು ಅವನಿಗೆ ತಮಾಷೆ ಎನ್ನಿಸುತ್ತದೆ. ಕೆಲವೇ ಸೆಕೆಂಡುಗಳಲ್ಲಿ ತಾನು ಸಾಧಿಸುವ ಕೆಲಸವನ್ನು ಅಪ್ಪನಿಗೆ ಯಾಕೆ ಸಾಧಿಸಲಾಗುತ್ತಿಲ್ಲ ಎಂದು ಅವನು ಯೋಚಿಸುತ್ತಿರಲೂ ಬಹುದು.

ಅದೇನೇ ಇರಲಿ. ಇಂದು ಮೊಮ್ಮಗ ರೂಬಿಕ್ ಕ್ಯೂಬನ್ನು ಹಿಡಿದು ಕುಳಿತಾಗಲೆಲ್ಲ ತೊಂಭತ್ತರ ಅಮ್ಮ ಅಪ್ಪನನ್ನು ನೆನಪಿಸಿಕೊಳ್ಳುತ್ತಾಳೆ. ಅರ್ಧ ಶತಮಾನದ ಮೊದಲು ಅವನ ಅಜ್ಜ ತನ್ನ ಸಂಬಳದ ಬಹುಪಾಲು ವೆಚ್ಚ ಮಾಡಿ ತಂದಿದ್ದಾಗ ಅವರಿಬ್ಬರ ನಡುವೆಯೂ ವಾಗ್ವಾದವಾಗಿರಬಹುದೇ? ಖಂಡಿತವಾಗಿ ಆಗಿರುತ್ತದೆ. ನಮ್ಮ ಆದಾಯದ ಒಂದು ಪರ್ಸೆಂಟಿನಷ್ಟನ್ನು ನಾವು ಬಹಳ ಜತನದಿಂದ ಲೆಕ್ಕ ಹಾಕುವಾಗ ಕಾಲು ಭಾಗದ ಆದಾಯವನ್ನು ಆಹಾರಕ್ಕಲ್ಲದೆ ಆಟಕ್ಕೆ ವೆಚ್ಚ ಮಾಡಿದ ಗಂಡನನ್ನು ತರಾಟೆಗೆ ತೆಗೆದುಕೊಳ್ಳದೇ ಇದ್ದಳೇ? ಆಕೆಯ ದೂರುಗಳಿಗೆ ಬೆದರಿ ಅಪ್ಪ ಇವನ್ನೆಲ್ಲ ನಮಗೆ ಕೊಡಿಸದೇ ಇದ್ದಿದ್ದರೆ ನಾನು ಹೇಗಿರುತ್ತಿದ್ದೆ ಎಂದು ಆಲೋಚಿಸಲೂ ಭಯವಾಗುತ್ತದೆ.


ಅಪ್ಪ ಅಪ್ಪನೇ! ಅಮ್ಮ ಅಮ್ಮನೇ!

Monday, August 14, 2017

ಮನೆಯಲ್ಲಿ ಶೆರ್ಲಾಕ್ ಹೋಮ್ಸ

ನಂಬಿದರೆ ನಂಬಿ ಬಿಟ್ಟರೆ ಬಿಡಿ. ನಮ್ಮ ಮನೆಯಲ್ಲಿ ಶೆರ್ಲಾಕ್ ಹೋಮ್ಸನ ಪ್ರೇತ ಬಂದು ಸೇರಿಕೊಂಡಿದೆ. ಇಲ್ಲದಿದ್ದರೆ ನಾನು ಎಷ್ಟೇ ಗುಟ್ಟು ಮಾಡಿದರ ವಿಷಯವೂ ನನ್ನವಳಿಗೆ ಗೊತ್ತಾಗುವುದು ಹೇಗೆ? ನೀವೇ ಹೇಳಿ.
ಒಂದು ಉದಾಹರಣೆ. ಮೊನ್ನೆ ಕಾವೇರಿ ನೀರಿನ ಗಲಾಟೆ ಅಂತ ಬಂದ್ ಆಯಿತಲ್ಲ! ಅವತ್ತೂ ರಾಜ್ಯವೂ ಬಂದ್, ನನ್ನ ರಜಾ ನಿದ್ರೆಯೂ ಬಂದ್. ರಜೆಯ ದಿನವಾದರೂ ನಿಧಾನವಾಗಿ ಏಳೋಣ ಅಂತಿದ್ದೆ. ಆದರೆ ಮಡದಿ ಬಿಡಬೇಕಲ್ಲ. ಹೊದ್ದಿಗೆ ಎಳೆದು ಹೋಗಿ ತರಕಾರಿ ತನ್ನಿ ಅಂತ ಆದೇಶಿಸಿಯೇ ಬಿಟ್ಟಳು. ಈವತ್ತು ಬಂದ್ ಏನೂ ಇರೋದಿಲ್ಲ ಅಂದರೂ ಕೇಳಲಿಲ್ಲ. “ಬೆಳಗ್ಗೆ ಐದು ಗಂಟೆಗೆ ಆಟೋ ಸದ್ದು ಕೇಳಿಸ್ತಿತ್ತು. ತರಕಾರಿ ಮಾರೋವರು ಬಂದಿರ್ತಾರೆ ಹೋಗ್ರಿ ಸೋಮಾರಿ,” ಅನ್ನೋದೇ? ಅಲ್ಲ. ಆಟೋ ಸದ್ದಿನಿಂದಲೇ ತರಕಾರಿ ಮಾರ್ಕೆಟ್ಟು ತೆರೆದಿದೆ ಅಂತ ಊಹಿಸೋದೇನು ಸುಮ್ಮನೇನಾ? ಅದಿಕ್ಕೆ ಹೇಳಿದ್ದು ನಮ್ಮ ಮನೇಲಿ ಶೆರ್ಲಾಕ್ ಹೋಮ್ಸನ ಪ್ರೇತ ಇರಬೇಕು ಅಂತ.
ಇದು ಕಾಕತಾಳೀಯ ಇದ್ದಿರಬಹುದು ಅಂದಿರಾ? ಅಯ್ಯೋ ಸ್ವಾಮಿ. ಇದು ಮೊದಲನೆ ಘಟನೆ ಅಲ್ಲ ಸ್ವಾಮಿ. ಅಪರಾಧ ಪತ್ತೆಯಲ್ಲಿ ಆಕ್ಸಿಡೆಂಟ್ ಅನ್ನುವ ಪದ ಇಲ್ಲ ಅನ್ನೋದು ಶೆರ್ಲಾಕ್ ಹೋಮ್ಸ ನಿಯಮ.
ನಿತ್ಯ ಬೆಳಗ್ಗೆ ಎದ್ದು ತರಕಾರಿ ತರೋದು ನನ್ನದೇ ಕೆಲಸ. ಬೆಳಗ್ಗೆ ಎದ್ದು ಚೌಕಾಸಿ ಯಾರು ಮಾಡ್ತಾರೆ ಅಂತ ಕೇಳಿದ ರೇಟಿನ ದುಡ್ಡು ಕೊಟ್ಟು ಬರ್ತೀನಿ. ಮನೆಗೆ ಬಂದ ಮೇಲೆ ಲೆಕ್ಕ ಬೇರೆ ಕೊಡಬೇಕು. ಅದರಲ್ಲೇನು ತಪ್ಪು ಅಂದಿರಾ? ಅಲ್ಲೇ ಇರೋದು ಸ್ವಾಮಿ. “ಅಲ್ರೀ. ಟೊಮ್ಯಾಟೋಗೆ ಹದಿನೈದು ರೂಪಾಯಿ ಕೊಟ್ಟಿದ್ದೀರಲ್ಲ? ಹದಿನೈದಕ್ಕೆ ಎರಡು ಕೇಜಿ ಬರ್ತಿತ್ತಂತೆ,” ಅನ್ನೋ ಮಾತು ಖಂಡಿತ. ರೇಡಿಯೋ ಇಲ್ಲ. ಮಾರ್ಕೆಟ್ ಮುಖ ನೋಡಿಲ್ಲ. ಮಹರಾಯಿತಿಗೆ ಅದು ಹೇಗೆ ಗೊತ್ತಾಗುತ್ತೋ? ಕೇಳಿದ್ರೆ, “ನಾನೇನು ನಿಮ್ಮ ಹಾಗೆ ಪೆದ್ದಲ್ಲ,” ಅನ್ನುವ ಉತ್ತರ ಗ್ಯಾರಂಟಿ. ವಾಟ್ಸನ್ನನಿಗೂ ಶೆರ್ಲಾಕ್ ಹೋಮ್ಸ್ ಹೀಗೇ ಹೇಳುತ್ತಿದ್ದ ಅಂತ ಎಲ್ಲೋ ಓದಿದ್ದ ನೆನಪು. “ಎಲಿಮೆಂಟರಿ ವಾಟ್ಸನ್.”
ಅವತ್ತು ಇನ್ನೊಂದು ವಿಷಯ ಆಯ್ತು. ತರಕಾರಿ ತರುವಾಗಲೇ, ಕೊಟ್ಟ ಬೆಲೆಗಿಂತ ಕಡಿಮೆ ಹೇಳೋದು ಅಂತ ತೀರ್ಮಾನಿಸಿ ಬಂದಿದ್ದೆ. ಅಲ್ಲಿ ಹದಿನೈದು ಕೊಟ್ಟು ಬಂದಿದ್ದರೂ, ಮನೆಯಲ್ಲಿ ಹತ್ತು ರೂಪಾಯಿಯಷ್ಟೆ ಕೊಟ್ಟಿದ್ದು ಅಂತ ಹೇಳಿ ಶಭಾಸ್ ಗಿರಿ ಪಡೆಯೋ ಪ್ಲಾನ್ ಮಾಡಿ ಬಂದೆ. ಏನಾಯ್ತು ಅಂತೀರಿ? ಕಾಲರ್ ತಿರುವಿಕೊಂಡು (ಮೀಸೆ ಬಿಟ್ಟಿಲ್ಲದ್ದರಿಂದ ಅದನ್ನ ತಿರುವಕ್ಕೆ ಆಗಲ್ಲ) “ನೋಡು ಹ್ಯಾಗೆ ಚೌಕಾಶಿ ಮಾಡಿ ಹತ್ತು ರೂಪಾಯಿಗೇ ತಂದಿದ್ದೀನಿ.” ಅಂದೆ. ಬಿಡಿ ನಂಗೆ ಗೊತ್ತಿಲ್ಲವಾ? ಬೆಲೆ ಕಡಿಮೆ ಮಾಡಿ ಹೇಳ್ತಿದ್ದೀರಾ ಅನ್ನೋದೇ! ಅಲ್ಲಾ ಅಷ್ಟೆಲ್ಲಾ ಪ್ಲಾನು ಮಾಡಿಕೊಂಡು ಬಂದರೂ ಅದು ಹೇಗೆ ಇವಳಿಗೆ ಗೊತ್ತಾಯ್ತೋ? ವಿವರಣೆ ಕೇಳಕ್ಕೆ ಹೋಗಲಿಲ್ಲ ಬಿಡಿ. ಯಾಕಂದ್ರೆ ಶೆರ್ಲಾಕ್ ಹೋಮ್ಸನ ಪ್ರೇತ ಬೀಡು ಬಿಟ್ಟಿರೋದು ಖಾತ್ರಿ.
ಪತ್ತೇದಾರರಿಗೆ ನಾಯಿ ಮೂಗು, ಹದ್ದಿನ ಕಣ್ಣು, ಬಾವಲಿಯ ಕಿವಿ ಇರಬೇಕು ಅಂತಾರೆ. ನನ್ನವಳಿಗೆ ಮೈಯೆಲ್ಲಾ ಕಣ್ಣೋ ಏನೋ? ಸಂಜೆ ಆಫೀಸಿನಲ್ಲಿ ಓಸಿ ಹೊಡೆದು ಗೆಳೆಯರ ಜೊತೆ ಎನ್ಟಿಆರ್ ನಲ್ಲಿ ಮಸಾಲೆ ದೋಸೆ ಪಾರ್ಟಿ ಮಾಡಿ ಬಂದಿದ್ದೆ ಅನ್ನಿ. ನಿತ್ಯದ ಸಮಯಕ್ಕೇ ಮನೆಗೆ ಮರಳಿದ್ದರೂ ಅದು ಹೇಗೋ ಇವಳಿಗೆ ಗೊತ್ತಾಗಿಬಿಡುತ್ತೆ. ಅವಳು ಕೊಟ್ಟ ಟೀ ಕುಡಿದು ಮುಗಿಸ್ತಾ ಇದ್ದ ಹಾಗೆ, “ಏನು ಇವತ್ತು ಪಾರ್ಟೀನಾ?” ಅಂತ ಕೇಳೇ ಬಿಡ್ತಾಳೆ. ಹ್ಹೆ. ಹ್ಹೆ. ಅನ್ನಬೇಕಷ್ಟೆ. “ನಿಂಗೆ ಹ್ಯಾಗೆ ಗೊತ್ತಾಯ್ತೇ?” ಅಂದ್ರೆ ನೀವು ಕೊಟ್ಟ ಟೀಯನ್ನ ನೋಡದೆಯೇ ಕುಡಿದ್ರಲ್ಲ. ಆಗಲೇ ಗೊತ್ತಾಯ್ತುಅಂತಾಳೆ. ಇದು ಶೆರ್ಲಾಕ್ ಹೋಮ್ಸನ ತಂತ್ರದ ಥರಾನೇ ಇಲ್ಲವಾ?
ರಾತ್ರಿ ನಿದ್ರೆ ಬರದೇ ಇದ್ದಾಗ, “ಸ್ವಲ್ಪ ಅರ್ಜೆಂಟು ಕೆಲಸ ಇದೆಅಂತ ಸಬೂಬು ಹೇಳಿ ಕಂಪ್ಯೂಟರು ಮುಂದೆ ಕೂತೆ ಅನ್ನಿ. ಅರ್ದ ಗಂಟೆ ಕಳೆದ ಮೇಲೆ ಕಮೆಂಟು ಬರುತ್ತೆ. “ಆಯ್ತೇನ್ರೀ ಕಥೆ ಪುಸ್ತಕ ಓದಿದ್ದು. ಲೈಟ್ ಆರಿಸಿ ಮಲಕ್ಕೊಳ್ಳಿ. ನಾಳೆ ಆಫೀಸು ಇದೆ. ಆಮೇಲೆ ಆಫೀಸಲ್ಲಿ ನಿದ್ರೆ ಮಾಡಬೇಕಾಗುತ್ತೆ.” ಅಲ್ರೀ. ಮೂರು ಕೋಣೆ ಆಚೆ ಇರೋ ಕಂಪ್ಯೂಟರಿನಲ್ಲಿ ನಾನು ಏನು ಮಾಡ್ತಿದ್ದೀನಿ ಅಂತ ಇವಳಿಗೆ ಹೇಗೆ ಗೊತ್ತಾಗುತ್ತೆ ಅಂತ. ಬಾವಲಿ ಕಿವಿಯೋ, ಸಿಕ್ಸ್ತ್ ಸೆನ್ಸೋ ಇರಬೇಕು ಅಲ್ಲವಾ? ಅಥವಾ ಶೆರ್ಲಾಕ್ ಹೋಮ್ಸನ ಪ್ರೇತ
ಇವೆಲ್ಲ ಬಿಡಿ. ಮೊನ್ನೆ ಇನ್ನೊಂದು ವಿಷಯ ಆಯ್ತು ಗೊತ್ತಾ? ರಾಮಣ್ಣನ ಮಗನ ಮದುವೆಗೆ ಹೋಗಬೇಕಿತ್ತು. ವಾರದ ದಿನವೇ ಆದ್ದರಿಂದ ಊಟದ ಸಮಯಕ್ಕೆ ಹೋಗಿ ವಾಪಸ್ ಬರೋದು ಅಂತಿ ತೀರ್ಮಾನಿಸಿ ಹೋಗಿದ್ದೆವು. ಮೈಲುದ್ದದ ಕ್ಯೂನಲ್ಲಿ ನಿಂತು ವಧೂ ವರರನ್ನ ಹರಸುವುದೆಂದರೆ ಮರುದಿನ ಬೆಳಗಾಗುತ್ತದೇನೋ ಅನ್ನಿಸಿ, ನೇರವಾಗಿ ಊಟ ಮುಗಿಸಿಕೊಂಡು ವಾಪಸ್ ಬಂದೆವು. ಮನೆಗೆ ಬಂದ ಮೇಲೆ ಇವಳು ಏನಂದಳು ಗೊತ್ತಾ? “ಅಲ್ಲರೀ. ಹುಡುಗನ ಕಡೆಯವರು ತುಂಬಾ ಜಿಪುಣರು ಕಣ್ರೀಅನ್ನೋದೇ. ಅವರ ಆಸ್ತಿ-ಪಾಸ್ತಿ, ವ್ಯವಹಾರವೆಲ್ಲ ಕ್ಷಣಮಾತ್ರದಲ್ಲಿ ಇವಳಿಗೆ ಹೇಗೆ ಗೊತ್ತಾಯಿತು ಅಂತ ಅಚ್ಚರಿ ಆಗಿದ್ದಂತೂ ನಿಜ. “ನೋಡ್ರೀ. ವರ ಹಾಕ್ಕೊಂಡಿರೋ ವಾಚು ನೋಡಿದ್ರಾ? ಲೆದರ್ ಸ್ಟ್ರಾಪ್. ಆದರೆ ಕಾರು ಮಾತ್ರ ಆಡಿ ಕಾರು,” ಅಂತ ಆಡಿಕೊಂಡಳು. ನಿಜ. ಅದೆಲ್ಲ ನನ್ನ ಕಣ್ಣಿಗೆ ಬಿದ್ದೇ ಇರಲಿಲ್ಲ. ಇವಳಿಗೆ ಮಾತ್ರ ಹೇಗೆ ಕಂಡಿತೋ?
ಒಮ್ಮೆ ಶೆರ್ಲಾಕ್ ಹೋಮ್ಸ ಮನೆಗೆ ಒಬ್ಬ ಮುದುಕ ಬಂದನಂತೆ. ಅವನನ್ನ ನೋಡಿದ ಕೂಡಲೇ ನೀನು ಯುದ್ಧದಲ್ಲಿ ಹೋರಾಡಿದ್ದೆ. ಇಂತಹ ದೇಶದಲ್ಲಿ ಅಂತೆಲ್ಲ ಹೋಮ್ಸ ಹೇಳಿದನಂತೆ. ಆ ಮುದುಕನಿಗೆ ಆಶ್ಚರ್ಯ ಆಗದೇ ಇರುತ್ಯೆ. ಆಮೇಲೆ ವಾಟ್ಸನ್ ಹೇಳಿದನಂತೆ. ಅವನ ಶೂನಲ್ಲಿ ಒಂದು ಹೆಚ್ಚು ಸವೆದಿತ್ತು. ಇನ್ನೊಂದು ಕಡಿಮೆ. ಹೀಗಾಗಿ ಅವನ ಕಾಲು ಕುಂಟಾಗಿರಬೇಕು. ಅದು ಹುಟ್ಟಿನಿಂದ ಬಂದದ್ದಲ್ಲ ಅಂದ ಮೇಲೆ ಗಾಯವಷ್ಟೆ. ಶಿಸ್ತು ನೋಡಿದರೆ ಮಿಲಿಟರಿ ಅನ್ನಿಸ್ತು. ಅಂತ ವಾಟ್ಸನ್ ಗೆ ವಿವರಿಸ್ತಾನೆ. ನಮ್ಮವಳೇನು ಕಮ್ಮಿ ಅಲ್ಲವಾ? ವಾಚ್ ಸ್ಟ್ರಾಪ್ ನೋಡಿಯೇ ಅಂತಸ್ತು ನಿರ್ಧರಿಸೋವ್ರನ್ನ ಶೆರ್ಲಾಕ್ ಹೋಮ್ಸ ಅನ್ನದೆ ಇನ್ನೇನು ಹೇಳಕ್ಕೆ ಆಗತ್ತೆ. ನೀವೇ ಹೇಳಿ.
ಅಷ್ಟೇ ಅಲ್ಲ. ಮದುವೆ ಮನೆಯಲ್ಲಿ ಅವಳ ಪಕ್ಕ ಊಟಕ್ಕೆ ಕುಳಿತಿದ್ದ ಬೆಂಗಳೂರಿನ ಆಂಟಿಯ ಮಗ, ಮಗಳು, ಸೊಸೆ ಎಲ್ಲರ ವೃತ್ತಾಂತವನ್ನೂ ಸವಿಸ್ತಾರವಾಗಿ ತಿಳಿಸಿದಳು. ಮಗನಿಗೆ ಹೆಣ್ಣು ಹುಡುಕುತ್ತಿರುವ ವಿಚಾರ. ಮಗಳ ಜಾತಕ ದೋಷ. ಅದಕ್ಕೆ ಪರಿಹಾರ ಎಲ್ಲವನ್ನೂ ಒಂದು ಊಟ ಮಾಡಿ ಮುಗಿಸುವಷ್ಟರಲ್ಲಿ ಸಂಗ್ರಹಿಸಿಯಾಗಿತ್ತು. ಮದುವೆ ಮನೆಯಲ್ಲಿ ಊಟಕ್ಕೆ ಎಷ್ಟು ಹೊತ್ತು ಬೇಕು ಹೇಳಿ? ಅಷ್ಟು ವೇಳೆಗೇ ಇಷ್ಟೆಲ್ಲ ಮಾಹಿತಿಯನ್ನು ಗಮನಿಸೋದು ಅಂದರೆ ಸುಮ್ಮನೇನಾ? ಖಂಡಿತ ಶೆರ್ಲಾಕ್ ಹೋಮ್ಸನ ಪ್ರೇತವಿರಬೇಕು. ಏನಂತೀರಿ?
ಸಿನಿಮಾದಲ್ಲಿ ನೋಡಿದ್ದೇನೆ. ಶರ್ಟನಲ್ಲಿ ಲಿಪ್ ಸ್ಟಿಕ್. ಕಾಲರ್ ನಲ್ಲಿ ಕೂದಲು ನೋಡಿ ಮನೆಯಲ್ಲಿ ರಾದ್ಧಾಂತ ಆಗುತ್ತೆ. ಸದ್ಯಕ್ಕೆ ನನಗೆ ಅಂತಹ ಸಂದರ್ಭ ಬಂದಿಲ್ಲ. ಆದರೂ ಅದನ್ನೆಲ್ಲ ಗಮನಿಸುವಷ್ಟು ಸೂಕ್ಷ್ಮದೃಷ್ಟಿ ಪತ್ತೇದಾರರಿಗೆ ಇರಲೇ ಬೇಕು. ಅದೂ ಹುಟ್ಟಿನಿಂದ ಬರಲ್ಲ ಅನ್ನಿ. ನಿಜವಾಗಿ ಕಲಿತ ಕೌಶಲ್ಯ. ಅವತ್ತು ಯಾವತ್ತೋ ಹೀಗೇ ಆಯಿತು. ಗೆಳೆಯನೊಬ್ಬ ಫೋನ್ ಮಾಡಿ ಅರ್ಜೆಂಟು ದುಡ್ಡು ಕೇಳಿದ. ಆ ಹಿಂದೆ ಒಮ್ಮೆ ಅವನಿಗೆ ಸಾಲ ಕೊಟ್ಟು ಕೈ ಸುಟ್ಟುಕೊಂಡಿದ್ದೆ. ಆದರೂಎ ಫ್ರೆಂಡ್ ಇನ್ ನೀಡ್ ಈಸ್ ಫ್ರೆಂಡ್ ಇನ್ ನೀಡ್,’ ಅಲ್ಲವೇ. ಆಕಡೆಯಿಂದ ಅವನ ಮಾತನ್ನಷ್ಟೆ ಕೇಳಿಸಂಜೆ ಸಿಗೋಣಅಂದಷ್ಟೆ ಹೇಳಿ ಫೋನಿಟ್ಟೆ. ಸಂಜೆ ಮನೆಗೆ ಬಂದ ಕೂಡಲೆಎಷ್ಟು ಸಾಲ ಕೊಟ್ಟಿರಿ?” ಎನ್ನುವ ಪ್ರಶ್ನೆ ಕೇಳಿ ಅವಾಕ್ಕಾದೆ.
ಫೋನು ಯಾರು ಮಾಡಿದ್ದು? ಏನು ಕಾರಣ? ನಾನು ಏಕೆ ಸಂಜೆ ಸಿಗೋಣ ಎಂದು ಹೇಳಿದೆ? ಇದು ಯಾವುದೂ ಗೊತ್ತಾಗದೆ ಅದು ಹೇಗೆ ಇಂಥವರನ್ನ, ಇದೇ ಕಾರಣಕ್ಕೇ ಭೇಟಿ ಮಾಡಲು ಹೋಗುತ್ತಿದ್ದೇನೆ ಎನ್ನುವುದನ್ನು ಕಂಡುಕೊಂಡಳಲ್ಲ. ಸಾಲ ಕೊಟ್ಟದ್ದನ್ನು ಒಪ್ಪಿಕೊಳ್ಳಲೇ ಬೇಕಾಯಿತು. ಆಗ ಗೊತ್ತಾಯಿತು ನೋಡಿ ನನ್ನವಳ ಶೆರ್ಲಾಕ್ ಹೋಮ್ಸ ಬುದ್ಧಿ. “ಸ್ಕೂಟರ್ ಕೀ ಎಲ್ಲಿದೆ ಅಂತ ದಿನಾನೂ ಕೇಳೋರು, ಚೆಕ್ ಬುಕ್ ಹುಡುಕಿ ಹುಡುಕಿ ಬ್ಯಾಗಿಗೆ ಹಾಕಿಕೊಂಡಾಗಲೇ ಗೊತ್ತು. ಯಾರಿಗೋ ಸಾಲ ಕೊಡಕ್ಕೆ ಹೊರಟಿದ್ದೀರಿ ಅಂತ. ನಿಮ್ಮ ಹತ್ರ ಸಾಲ ಕೇಳೋವ್ರು ಇನ್ಯಾರು ಇದ್ದಾರೆ. ಅವನೇ ತಾನೇ?” ಅಂತ ಪೋಸ್ಟ್ ಮಾರ್ಟಮ್ ವಿವರದ ಹಾಗೆ ವಿವರವಾಗಿ ಹೇಳಿದಳು. ಶೆರ್ಲಾಕ್ ಹೋಮ್ಸ ಹೇಳುತ್ತಿದ್ದನಂತೆ. “ಪ್ರತಿಯೊಬ್ಬ ಅಪರಾಧಿಯೂ ಏನಾದರೂ ಸುಳಿವು ಬಿಟ್ಟು ಕೊಟ್ಟೇ ಇರುತ್ತಾನೆ. ಅದನ್ನ ಗಮನಿಸುವ ದೃಷ್ಟಿ ಇರಬೇಕು ಅಷ್ಟೆ,” ಅಂತ. ನಾನೆಷ್ಟು ಜಾಗರೂಕತೆ ವಹಿಸಿದರೂ, ನನ್ನವಳ ಕಣ್ಣು ತಪ್ಪಿಸೋದಿಕ್ಕೆ ಸಾಧ್ಯವೇ ಆಗಿಲ್ಲ. ಅಂದ ಮೇಲೆ ಶೆರ್ಲಾಕ್ ಹೋಮ್ಸ ಪ್ರೇತ ಮನೆಯಲ್ಲಿದೆ ಅಂತ ತಾನೇ?
ಇನ್ನು ಮನೆಯಲ್ಲಿ ಕಳೆದು ಹೋಗಿರುವ ವಸ್ತುವನ್ನು ಹುಡುಕಿ ತೆಗೆಯುವುದರಲ್ಲಿ ನನ್ನವಳನ್ನು ಮೀರಿಸುವವರಿಲ್ಲ. ಮೊನ್ನೆ ಟೂರಿಗೆ ಹೋಗುವ ಸಂದರ್ಭದಲ್ಲಿ ಯಾವಾಗಲೂ ನನ್ನ ಬ್ಯಾಗಿನಲ್ಲೇ ಇರುತ್ತಿದ್ದ ಲೇಸರ್ ಪಾಯಿಂಟರ್ ಕಾಣಿಸಲಿಲ್ಲ. ಮೂರು ಗಂಟೆ ಕಾಲ ಹುಡುಕಿ ಕೈಚೆಲ್ಲಿ ಕುಳಿತೆ. ಈ ಹಿಂದೆ ಯಾವ ಕಾರ್ಯಕ್ರಮಕ್ಕೆ ಹೋಗಿದ್ದೆ ಎನ್ನುವ ವಿಶ್ಲೇಷಣೆಯನ್ನೂ ಮಾಡಿದ್ದಾಯಿತು. ಮರೆತು ಆಫೀಸಿನಲ್ಲೇ ಬಿಟ್ಟಿರಬಹುದೇ ಎಂದೂ ಚಿಂತಿಸಿದೆ. ಕೊನೆಗೆ ನನ್ನವಳಿಗೆ ಹೇಳಿದೆ. “ಅಯ್ಯೋ ಅದು ಅಲ್ಲೇ ನಿಮ್ಮ ಬ್ಯಾಗಿನಲ್ಲೇ ಇರಬೇಕು ನೋಡಿ,” ಎಂದಳು. ಮತ್ತೆ ಹುಡುಕಿದೆ ಸಿಗಲಿಲ್ಲ. ಅವಳೇ ಬಂದು ಅದೇ ಬ್ಯಾಗಿನಿಂದ ಎರಡೇ ನಿಮಿಷದಲ್ಲಿ ಅದನ್ನು ಹುಡುಕಿ ಕೊಟ್ಟಳಲ್ಲ! ಪತ್ತೇದಾರಿಣಿ ತಾನೇ? ನನಗೆ ಮರೆವು ಇತ್ತೇನೋ ನಿಜ. ಆದರೆ ಆ ಬ್ಯಾಗಿನಲ್ಲಿ ನಾನೂ ಹುಡುಕಿದ್ದೆನಲ್ಲ? “ಬರೇ ಸುಳಿವನ್ನು ಹುಡುಕಿದರೆ ಸಾಕಾಗುವುದಿಲ್ಲ. ಎಂತಹ ಸುಳಿವು ಅನ್ನುವುದನ್ನೂ ಮೊದಲೇ ಊಹಿಸಿರಬೇಕು,” ಅನ್ನೋದು ಶೆರ್ಲಾಕ್ ನಿಯಮ. ಮನೆಯವಳಿಗೆ ಇದು ಗೊತ್ತು ಅನ್ನುವ ಅನುಮಾನ ನನಗೆ.

ಇದು ಬೇರೆ ಪ್ರೇತವೂ ಆಗಿರಬಹುದು ಅಂದಿರಾ? ಖಂಡಿತ ಇಲ್ಲ. ಇದು ಶೆರ್ಲಾಕ್ ಹೋಮ್ಸನದ್ದೇ ಇದು ಅಂತ ನನಗೆ ನಂಬಿಕೆ. ಯಾಕೆ ಅಂದರೆ ಮೊನ್ನೆ ಭಾನುವಾರ ಏನೂ ಕೆಲಸ ಇಲ್ಲದಿದ್ದಾಗಛೇ ಒಂದು ಕಪ್ ಬಿಸಿ ಟೀ ಇದ್ದರೆ ಹೇಗಿರುತ್ತಿತ್ತು,” ಅಂತ ಯೋಚಿಸ್ತಾ ಇದ್ದೆ ಅಷ್ಟೆ. ಬಿಸಿ, ಬಿಸಿ ಚಹಾ ಹಿಡಿದ ಹೆಂಡತಿ ಪ್ರತ್ಯಕ್ಷ. “ಅಲ್ಲ. ಅದು ಹೇಗೆ ನನ್ನ ಮನಸ್ಸಿನಲ್ಲಿದ್ದದ್ದು ನಿಂಗೆ ಗೊತ್ತಾಯಿತು,” ಅಂದೆ ಒಂದು ಹುಸಿ ನಗು ನಕ್ಕಳು. “ಎಲಿಮೆಂಟರಿ ವ್ಯಾಟ್ಸನ್,” ಅನ್ನೋ ಥರ. ಖಂಡಿತ ಇದು ಸಿಕ್ಸ್ತ್ ಸೆನ್ಸ್ ಅಲ್ಲವಾ. ಅದಿಕ್ಕೆ ನನಗೆ ಖಾತ್ರಿ ನಮ್ಮ ಮನೆಯಲ್ಲೊಂದು ಶೆರ್ಲಾಕ್ ಹೋಮ್ಸನ ಪ್ರೇತ ಸೇರಿಕೊಂಡಿರಬೇಕು ಅಂತ.

Friday, August 11, 2017

ಹಕ್ಕಿ ಹಾರಿತು

ಎರಡು ತಿಂಗಳು ಪ್ರವಾಸ ಮುಗಿಸಿ ಮನೆಗೆ ಮರಳುವ ಮೊದಲು ಅಕ್ಕನಿಗೆ ಫೋನ್ ಮಾಡಿದೆ. ಬೀಗ ಹಾಕಿದ ಮನೆಯನ್ನು ಆಗಾಗ್ಗೆ ಗಮನಿಸಿಕೊಳ್ಳಲು ತಿಳಿಸಿದ್ದೇನಲ್ಲ! ಜೊತೆಗೆ. ಮನೆಗೆ ಮರಳಿದಾಗ ಕುಡಿಯಲು ನೀರಾದರೂ ಇರಬೇಡವೇ? ಹೀಗಾಗಿ ಮುನ್ಸೂಚನೆ ನೀಡಲು ಕರೆ ಮಾಡಿದೆ.

 'ನಿಮ್ಮ ಮನೆಗೆ ಕಳ್ಳರು ಹೊಕ್ಕಿದ್ದಾರೆ.' ಎಂದಳು. ಮನೆಯಲ್ಲಿ ಬೆಲೆ ಬಾಳುವ ವಸ್ತುಗಳು ಇಲ್ಲದಿದ್ದರೂ ತುಸು ಗಾಭರಿ ಆಯಿತು. 'ಪೋಲೀಸ್ ಗೆ ಹೇಳಿದಿರಾ?' ಎಂದೆ. ನಮ್ಮ ಅನುಪಸ್ಥಿತಿಯಲ್ಲಿ ಮನೆ ಕಾವಲಿನ ಜವಾಬುದಾರಿಯನ್ನು ಹೊರಿಸಿದ್ದೆನಲ್ಲ? ಎನ್ನುವ ದೂರು ನನ್ನ ದನಿಯಲ್ಲಿ ಇತ್ತು. ಉತ್ತರವಾಗಿ 'ರೆಕ್ಕೆ-ಪುಕ್ಕದ ಕಳ್ಳರು ಹೊಕ್ಕು ಗೂಡು ಕಟ್ಟಿದ್ದಾರೆ', ಅಂತ ಅಕ್ಕ ಜೋರಾಗಿ ನಕ್ಕಳು.

ನಾನು ನಗಲಿಲ್ಲ. ಹಕ್ಕಿ ಮನೆ ಹೊಕ್ಕು ಗೂಡು ಕಟ್ಟಿದೆ ಎಂದರೆ ಎರಡು ತಿಂಗಳ ದೂಳು, ಕಸದ ಜೊತೆಗೆ ರೆಕ್ಕೆ, ಹಿಕ್ಕೆಗಳನ್ನೂ ಸಾರಿಸುವ ಕೆಲಸ ಬಿತ್ತು ಅಂತ ಗೊಣಗಿಕೊಂಡೆ. ಬೀಗ ಹಾಕುವ ಮುನ್ನ ಎಲ್ಲ ಕಿಟಕಿ, ಬಾಗಿಲುಗಳನ್ನೂ ಸರಿಯಾಗಿ ಹಾಕಿದ್ದೆನೋ, ಇಲ್ಲವೋ ಅಂತ ಮಡದಿ ನಾಲ್ಕು ಬಾರಿ ಪರಿಶೀಲಿಸಿದ್ದಳಲ್ಲ? ಇನ್ನೆಲ್ಲಿಂದ ಹಕ್ಕಿ ಹೊಕ್ಕಿತೋ?

ಮನೆಗೆ ಬಂದು ಬೀಗ ತೆಗೆದವನಿಗೆ ಅಚ್ಚರಿ ಕಾದಿತ್ತು. ಮನೆಯಲ್ಲಿ ದೂಳು, ಕಸ ಇತ್ತು, ಆದರೆ ರೆಕ್ಕೆ, ಹಿಕ್ಕೆ ಇರಲಿಲ್ಲ. ಹಕ್ಕಿಗಳು ಹಾರಿ ಹೋಗಿರಬೇಕು ಎಂದುಕೊಂಡು ಮಲಗುವ ಕೋಣೆಯತ್ತ ನಡೆದೆ.  ಬಾಗಿಲ ಕಡೆಗೆ ಸಾಗಿದೆನಷ್ಟೇ, ರಿಮೋಟ್ ಅಲಾರಂ ಹೊಡೆದ ಹಾಗೆ ಕೀಚ್, ಕೀಚ್ ಎಂದು ತಲೆ ಚಿಟ್ಟಾಗುವಷ್ಟು ಸದ್ದು ಮಾಡುತ್ತಾ ಎರಡು ಹಕ್ಕಿಗಳು ನನ್ನ ಸುತ್ತಲೂ ಹಾರಾಡಲು ಆರಂಭಿಸಿದವು. ಈ ರೆಕ್ಕೆ-ಪುಕ್ಕದ ಜೋಡಿಯೇ ಅಕ್ಕ ಹೇಳಿದ ಕಳ್ಳರು ಅಂತ ಅರ್ಥವಾಯಿತು.

ಮಲಗುವ ಕೋಣೆಯ ಬಾಗಿಲ ಮುಂಗಟ್ಟಿನ ಮೇಲೆ ಪುಟ್ಟ ಗೂಡು ಕಟ್ಟಿದ್ದುವು.  ಮನೆಯ ಎದುರಿನ ವಿದ್ಯುತ್ ತಂತಿಯ ಮೇಲೆ ನಿತ್ಯವೂ ಈ ಹಕ್ಕಿಗಳು ಬಂದು ಕೂರುವುದನ್ನು ಕಂಡಿದ್ದೆ.  ವ್ಯರ್ಥವಾಗಿ ಮನೆ ಖಾಲಿ ಇಡುವ ಮನುಷ್ಯರ ಸ್ವಾರ್ಥ ಅವಕ್ಕೆ ಅರ್ಥವಾಗಲಿಲ್ಲವೋ ಏನೋ?  ಗವಾಕ್ಷಿಯಿಂದ ಬಂದು ಖಾಲಿ ಇದ್ದ ಮನೆ ತುಂಬಿದ್ದುವು. ಏಷ್ಟು ದಿನಗಳ ಹಿಂದೆ 'ಗೃಹ ಪ್ರವೇಶ' ನಡೆದಿತ್ತೋ ಗೊತ್ತಿಲ್ಲ. ಆದರೆ ಎಲ್ಲಿಯೂ ಒಂದಿಷ್ಟೂ ಹಿಕ್ಕೆ ಇರಲಿಲ್ಲ. ಬಾಡಿಗೆದಾರರಿಗಿಂತ ಪ್ರಜ್ಞಾವಂತ ಪಕ್ಷಿಗಳು, ಮನೆಯನ್ನು ಗಲೀಜು ಮಾಡಿರಲಿಲ್ಲ.  ಗೂಡು ಕಟ್ಟಿ ಬಹಳ ದಿನಗಳಾಗಿರಲಿಲ್ಲ. ಕಿತ್ತು ಬಿಸಾಡಿದರೆ, ಬೇರೆಲ್ಲಿಯಾದರೂ ಹೋಗಿ ನೆಲೆಯಾದಾವು ಎಂದು ಗೂಡಿಗೆ ಕೈ ಹಾಕುವವನಿದ್ದೆ. ಅಷ್ಟರಲ್ಲಿ ಗೂಡಿನೊಳಗಿಂದ ಪುಟ್ಟ, ಗುಲಾಬಿ ಬಣ್ಣದ ಕೊಕ್ಕು ಕಾಣಿಸಿತು. ಮೊಟ್ಟೆ ಮರಿಯಾಗಿತ್ತು. ಗೂಡನ್ನು ಹಾಗೇ ಬಿಟ್ಟೆ. ಗೂಡಿನೊಳಗಿನ ಚಟುವಟಿಕೆಯನ್ನು ನೋಡುವುದು ನಿತ್ಯಕರ್ಮಗಳಲ್ಲಿ ಸೇರಿಕೊಂಡಿತು.

ಕೋಣೆಯ ಸಮೀಪ ಬಂದ ಕೂಡಲೇ ಮರಿಗೆ ಕಾವು ಕೊಡುತ್ತಿದ್ದ ಹಕ್ಕಿ ಸೂರು ಬಿದ್ದ ಹಾಗೆ ಬೆದರಿ ಗಲಾಟೆ ಮಾಡುತ್ತಿತ್ತು. ಅದರ ರಂಪಾಟ ನೋಡಲಾರದೆ ಆದಷ್ಟೂ ಆ ಜಾಗೆಯಿಂದ ದೂರ ಇರುವುದನ್ನ ಕಲಿತುಕೊಂಡೆವು. ರಾತಿ ಮಲಗಲು ಅಷ್ಟೇ ಕೋಣೆಗೆ ಪ್ರವೇಶ ಎನ್ನುವುದು ತೀರ್ಮಾನವಾಯಿತು. ಅದು ಯಾವ ಪಕ್ಷಿ ಅಂತಲೂ  ಗೊತ್ತಿಲ್ಲ, ಕಾವು ಕೊಡುತ್ತಿದ್ದದ್ದು ಗಂಡೋ, ಹೆಣ್ಣೋ ತಿಳಿಯಲಿಲ್ಲ. ಅಂತೂ ಒಂದು ದಿನ ಹಕ್ಕಿಗಳ ಸದ್ದು ಕಡಿಮೆ ಆದಂತೆ ಕಂಡಿತು. ನೋಡಿದರೆ, ಪುಟ್ಟ ಮರಿಗಳು ಗೂಡಿಂದ ಹಾರಿ, ಕಿಟಕಿಗೆ ಮತ್ತೆ ಅಲ್ಲಿಂದ ಮರಳಿ ಗೂಡಿಗೆ ಹಾರುತ್ತಿದ್ದವು. ದೂರದಲ್ಲಿ ತಾಯಿ ಕುಳಿತು ಕಾಯುತ್ತಿತ್ತು. ನಾವು ಯಾರಾದರೂ ಬಳಿ ಸಾರಿದರೆ ಕೂಡಲೇ ಕಿರುಚಾಡಿ ಮಕ್ಕಳನ್ನು ಎಚ್ಚರಿಸುತ್ತಿತ್ತು.

ಪಕ್ಷಿ, ಪ್ರಾಣಿಗಳಲ್ಲಿ ಮಾನವ ಭಾವನೆಗಳನ್ನು ಕಾಣುವ ನಮ್ಮ ಪ್ರವೃತ್ತಿ ಸಹಜವಾದುದೇ. ಹೀಗಾಗಿ ಇದು ಇನ್ನು ಮುಂದೇನು ಮಾಡುತ್ತದೆ ಎಂದು ವೀಕ್ಷಿಸುವುದು ನಮ್ಮ ನಿತ್ಯ ಕರ್ಮ ವಾಯಿತು.

 ಒಂದು ದಿನ ಬೆಳಗ್ಗೆ ಸೂರ್ಯೋದಯವಾದರೂ ಚಿಲಿಪಿಲಿ ಸದ್ದಿಲ್ಲ. ಬಂದು ನೋಡಿದರೆ ತಾಯಿಯೂ ಇಲ್ಲ, ಮಕ್ಕಳೂ ಇಲ್ಲ. ಮರುದಿನವೂ ಸುದ್ದಿ ಇಲ್ಲ. ದಿನವೂ ನಾವು ಕಾದದ್ದೇ ಬಂತು. ನಮ್ಮ ಮನೆಯ 'ಕಳ್ಳ ಬಾಡಿಗೆದಾರರು' ಮರಳಲೇ ಇಲ್ಲ.
 ಇದಾಗಿ ಸುಮಾರು ಆರು ತಿಂಗಳು ಕಳೆದಿರಬಹುದು. ಪೋಸ್ಟ್ ಬಂದಿದೆಯಾ ಎಂದು ಅಂಚೆ ಪೆಟ್ಟಿಗೆ ತೆಗೆದರೆ, ಅಲ್ಲೊಂದು ಗೂಡು. ನಾಲ್ಕು ಮೊಟ್ಟೆಗಳು. ಅಂದಿನಿಂದ ಪೋಸ್ಟ್ ಮನ್‍ ಬರುವ ಹಾದಿ ಕಾಯುವುದು ಇನ್ನೊಂದು ಕೆಲಸ  ಆಯಿತು. ನಾವು ತರಿಸುವ ದಪ್ಪ ಪುಸ್ತಕಗಳನ್ನ ಅಂಚೆಯವ  ಜೋರಾಗಿ ಡಬ್ಬದೊಳಗೆ ತುರುಕಿದರೆ? ಮೊಟ್ಟೆಗಳಿಗೆ ಏಟು ಬಿದ್ದರೆ?

ಈಗ ನಮ್ಮ ಮನೆಯ ಪೋಸ್ಟ್ ಬಾಕ್ಸ್ ಖಾಯಂ ಹಕ್ಕಿ ಮನೆ. ಒಂದು ಹಾರಿ ಹೋಗಿ ಕೆಲವು ದಿನ ಕಳೆಯುವುದರೊಳಗೆ ಇನ್ನೊಂದು ಬಂದು ಮೊಟ್ಟೆ ಇಡುತ್ತದೆ. ಅವು ಒಂದೇ ವಂಶಜರೋ? ಬೇರೆ ಬೇರೆ ಕುಟುಂಬದವೋ? ಗೊತ್ತಿಲ್ಲ.  ಒಟ್ಟಾರೆ ನಮ್ಮ ನೆರೆಯವರಿಗಿಂತಲೂ ಆತ್ಮೀಯವಾಗಿ ಇವೆ ಅನ್ನುವುದಷ್ಟೆ ನಮಗೆ ಗೊತ್ತು. ಅಂಚೆಯವನೂ ಈಗೀಗ ಹೊಸ್ತಿಲಿಗೆ ಪುಸ್ತಕ ಬಿಸಾಡಿ ಹೋಗುತ್ತಾನೆ. ನಮ್ಮ ಬಾಡಿಗೆದಾರರ ಭಯ ಇರಬೇಕು.

Saturday, June 17, 2017

ಹೊದಿಕೆಯನ್ನೂ ತೆರೆಯದ ಪತ್ರಿಕೆ ಮೇಜಿನ ಮೇಲೆ ಇರುವುದು ಓದುವುದು ನಿಂತಿದೆ ಅಂತಲ್ಲ. ಇ-ಓದು ಪತ್ರಿಕೆಗಳಿಗೆ ಈ ಗತಿ ತಂದಿದೆ. ಪತ್ರಿಕೆ ಕೈ ಸೇರುವ ಮುನ್ನವೇ ಸೈಬರ್ಲೋಕದಲ್ಲಿ ಅದನ್ನೋದಿ, ಚರ್ಚಿಸಿ, ಜೀರ್ಣಿಸಿಯೂ ಆಗಿರುವುದರಿಂದ ನಮ್ಮ ಮನೆಯಲ್ಲಿ ಇವೆಲ್ಲವೂ ಹಾಗೇ ಇರುತ್ತವೆ. ಇವನ್ನು ಕಂಡಾಗೆಲ್ಲ ಸಾಯಿಬ್ ಸಿಂಗ್ ನೆನಪಾಗುತ್ತಾನೆ.

ಅವನ ಹೆಸರು ಅದೇ ಇರಬೇಕು. ನೆನಪಾಗುತ್ತಿಲ್ಲ. ನೆನಪಿನಲ್ಲಿ ಉಳಿದಿರುವುದು ಕೆಂಪು ಅಥವಾ ನೀಲಿ ಮಫ್ಲರ್ ಸುತ್ತಿದ ಮುಖ, ಕುಂಟ ನಡೆ, 'ತ' ವೆಲ್ಲ ದವನ್ನಾಗಿಸಿದ ತೊದಲು ನುಡಿ. ನಾವೆಲ್ಲ ಅವನನ್ನು ಮ್ಯಾಗಜೀನ್ ಮ್ಯಾನ್ ಎನ್ನುತ್ತಿದ್ದೆವು.

ಎಲ್ಲ ಪತ್ರಿಕೆಗಳನ್ನೂ ಓದುವ ಹಂಬಲ, ಅವನ್ನು ಕೊಳ್ಳಲಾಗದ ಹತಾಶೆಯೇ ಜೇಬು ತುಂಬಿರುತ್ತಿದ್ದ ಕಾಲ ಅದು. ಕಛೇರಿಯಲ್ಲಿ ನಾವು ಕೆಲವರು ಒಟ್ಟಾಗಿ ಮ್ಯಾಗಜೀನ್ ಕ್ಲಬ್ ನಡೆಸುತ್ತಿದ್ದೆವು. ಎಲ್ಲರ ಚಂದಾವೂ ಒಟ್ಟಾಗಿ ಹತ್ತಾರು ದುಬಾರಿ ಬೆಲೆಯ ಪತ್ರಿಕೆಗಳನ್ನು ಕೊಳ್ಳುತ್ತಿದ್ದೆವು. ದಿನಕ್ಕೆ ಎರಡು ಮ್ಯಾಗಜೀನ್ ಕೊಂಡೊಯ್ದು ಓದಿ ವಾಪಸು ತರಬೇಕೆನ್ನುವುದು ನಿಯಮ. ನಾಲ್ಕು ಕಾಫಿಗೆ ಕೊಡುವ ಕಾಸಿನಲ್ಲಿ ಇಷ್ಟೊಂದು ಓದು ಸಿಗುವದು ಎಲ್ಲರಿಗೂ ಬೇಕಿತ್ತು. ಕೆಲಸಕ್ಕೆ ಆಗ ತಾನೇ ಸೇರಿದ್ದ ನಾನು ಕ್ಲಬ್ಬಿನ ಕಿರಿಯ ಸದಸ್ಯ.
ಕ್ಲಬ್ಬುನ ನಿರ್ವಾಹಕ ಸಾಯಿಬ್ ಸಿಂಗ್.

ಬಹುಶಃ ಅಷ್ಟಾವಕ್ರನ ರೂಪವನ್ನು ಸಾಯಿಬ್ ಸಿಂಗನನ್ನೇ ನೋಡಿ ವರ್ಣಿಸಿದ್ದಿರಬೇಕು. ಅಚ್ಚಗಪ್ಪು ಬಣ್ಣ, ಜೋಲು ತುಟಿಗಳು, ಅಡ್ಡಾದಿಡ್ಡಿ ಬೆಳೆದ ಹಲ್ಲುಗಳು, ಅಸ್ಪಷ್ಟ ಮಾತುಗಳು, ನಕ್ಕರೂ ಕ್ರೂರವಾಗಿ ಕಾಣುತ್ತಿದ್ದ ಚಹರೆ. ಜಾಠರ ಕುಲದವನಾಗಿದ್ದರೂ ಬಲು ಕುಳ್ಳು. ಕುಂಟು ನಡೆ ಬೇರೆ. ಮಕ್ಕಳನ್ನು ಬೆದರಿಸಿಡಲು ಅವನನ್ನು ತೋರಿಸಿದರೆ ಸಾಕಿತ್ತು.

ನಮ್ಮಲ್ಲಿ ಕೆಲವರು ಅವನನ್ನು ಡೈನೋಸಾರು ಎಂದೂ ಎನ್ನುತ್ತಿದ್ದೆವು. ಏಕೆಂದರೆ ನಾನೂರು ಜನರಿದ್ದ ಸಂಸ್ಥೆ ಯಲ್ಲಿ ಅತಿ ವಯಸ್ಸಾದವನೆಂದರೆ ಅವನೇ! ಅವನ ವಯಸ್ಸೆಷ್ಟು ಅಂತ ಸ್ವತಃ ಅವನಿಗೇ ತಿಳಿದಿರಲಿಲ್ಲ. ಸಂಸ್ಥೆಯಲ್ಲು ದಾಖಲೆಗಳಿರಲಿಲ್ಲ. ಸಂಸ್ಥೆ ಸ್ಥಾಪನೆಯಾದ ಅಲ್ಪ ಕಾಲದಲ್ಲೇ ಯಾರೋ ಕರುಣೆಯಿಂದ ಕೆಲಸ ನೀಡಿದ್ದರು. ಸೇರಿದ ಉದ್ಯೋಗದಲ್ಲೇ ಮೇಲೂ ಏರದೆ, ಕೆಳಗೂ ಇಳಿಯದೆ ಇದ್ದ.

ಸ್ವತಃ ಎರಡಕ್ಷರ ಓದಲು ಬಾರದ ಈ ಜೀವ ನಮ್ಮೆಲ್ಲರಿಗೂ ಓದಲು ಸಾಮಗ್ರಿಯನ್ನು ಬಡಿಸುತ್ತಿತ್ತೆಂದರೆ ಎಂತಹ ವಿಪರ್ಯಾಸ. ವಯಸ್ಸಾಗಿದ್ದರಿಂದಲೂ, ಓದು-ಬರೆಹ ಬಾರದ್ದರಿಂದಲೂ ಅವನಿಗೆ ತಿಂಡಿ ತಿನಿಸು ತರುವ, ಮ್ಯಾಗಜೀನ್ ಕ್ಲಬ್ಬಿನ ಪುಸ್ತಕಗಳನ್ನು ಹಂಚುವ ಕೆಲಸವಷ್ಟೆ ಹಚ್ಚಿದ್ದರು.  ಕಾರ್ಪೊರೇಟು ಜಗತ್ತಿನಲ್ಲಿ ಇಂತಹ ವಿಚಿತ್ರಗಳು ಸಿಗಲಿಕ್ಕಿಲ್ಲ.

ಈ ಡೈನೊಸಾರು ಜೀವಿ ತನಗೊಪ್ಪಿಸಿದ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿದ್ದ ನೀಯತ್ತು ಕಂಡರೆ ಅಚ್ಚರಿಯಾಗುತ್ತಿತ್ತು. ಒಬ್ಬರಿಗೆ ಒಮ್ಮೆಗೆ ಎರಡೇ ಮ್ಯಾಗಜೀನು. ಜಪ್ಪಯ್ಯ ಎಂದರೂ ಇನ್ನೊಂದು ಹೆಚ್ಚಿಗೆ ಕೊಡುತ್ತಿರಲಿಲ್ಲ. ಎರಡು ದಿನ ಕಳೆದ ಕೂಡಲೆ ತಪ್ಪದೆ ಹಾಜರು. 'ಸಾಬ್ ಕಿತಾಬ್' ಎನ್ನುತ್ತಿದ್ದ. ಅಯ್ಯೋ ತರಲು ಮರೆತೆ ಎಂದರೆ ತಲೆ ಕೊಡವಿ ಹೊರಟು ಬಿಡುತ್ತಿದ್ದ. ಮರು ದಿನ ಮತ್ತೆ ಹಾಜರು. ತಂದು ಕೊಡುವವರೆಗೂ ಮತ್ತೊಂದು ಪತ್ರಿಕೆ ಕೊಡುತ್ತಿರಲಿಲ್ಲ. ಮುಂಜಾನೆ ಬಂದು ಎದುರು ನಿಲ್ಲುವುದನ್ನು ತಪ್ಪಿಸುತ್ತಿರಲಿಲ್ಲ.

ಯಾರ್ಯಾರಿಗೆ ಯಾವ್ಯಾವ ಮ್ಯಾಗಜೀನು ಇಷ್ಟ ಎನ್ನುವುದರ ಡಾಟಾದಲ್ಕು ಮಾತ್ರ ಪಕ್ಕ. ಮ್ಯಾಗಜೀನು ಹಿಂದಿರುಗಿಲ್ಲವಾದರೆ ಆ ಮೆಚ್ಚಿನ ಪತ್ರಿಕೆಯ ಹೊಸ ಸಂಚಿಕೆ ತಂದು ತೋರಿಸಿ ಪುಸಲಾಯಿಸುತ್ತಿದ್ದ. ಅತಿ ಕಿರಿಯವನು ಅಂತಲೋ, ಡೆಬೊನೇರ್, ಕಾಸ್ಮೊಪಾಲಿಟನ್ ನಂತಹ ಬೇಡಿಕೆ ಹೆಚ್ಚಿದ್ದ ಪತ್ರಿಕೆಗಳ ಬದಲಿಗೆ ಮಿರರ್, ಕ್ಯಾರಾವಾನ್, ಔಟ್ಲುಕ್ ಗಳನ್ನು ಓದುತ್ತಿದ್ದುದಕ್ಕೋ, ಅತಿ ಕಿರಿಯವನು ಎನ್ನುವ ಪ್ರೀತಿಗೋ ನನಗಿಷ್ಟವಾದ ಪತ್ರಿಕೆ ಬಂದ ಕೂಡಲೆ ಸೂಚನೆ ಕೊಟ್ಟು ಹೋಗುತ್ತಿದ್ದ. ಮೊದಲು ಓದಲು ನನಗೇ ಸಿಗುವಂತೆ ನೋಡಿಕೊಳ್ಳುತ್ತಿದ್ದ.

ಅವನ ಮಕ್ಕಳು ಬೆಳೆದು ಮೊಮ್ಮಕ್ಕಳೂ ಆಗಿದ್ದರೂ ಇವನ ಕಾಯಕಕ್ಕೆ ಕೊನೆ ಬಂದಿರಲಿಲ್ಲ. ಮನೆ ರಾಜಕೀಯದಲ್ಲಿ ಒಬ್ಬಂಟಿಯಾಗಿದ್ದ ಕಛೇರಿಯಲ್ಲಿಯೂ ಅವನ ಹುಟ್ಟಿದ ದಿನದ ದಾಖಲೆಗಳು ಇಲ್ಲದ ಕಾರಣ ನಿವೃತ್ತಿ ಮಾಡುವುದು ಹೇಗೆಂದು ಜಿಜ್ಞಾಸೆ ನಡೆದಿತ್ತು. ಏಳು ವರ್ಷ ನಮ್ಮ ಒಡನಾಟ. ಕೊನೆಗೆ ನಾನು ಕರ್ನಾಟಕಕ್ಕೆ ಮರಳುವ ದಿನಗಳು ಸನಿಹವಾದಾಗ "ಅಬ್ ಯೇ ಕೌನ್ ಪಡೇಗಾ ಸಾಬ್" ಎಂದು ನಿರಾಸೆಯಲ್ಲಿ ತೊದಲಿದ್ದ. ಅವನ ಹೊಣೆಯನ್ನು ಪೂರ್ಣವಾಗಿ ನಿರ್ವಹಿಸಲಾಗದ್ದರಿಂದಲೋ, ನನ್ನ ಮೇಲಿನ ಪ್ರೀತಿಯಿಂದಲೋ ಗೊತ್ತಿಲ್ಲ.

ಅಷ್ಟು ದೀರ್ಘ ಕಾಲದಲ್ಲಿ ನಮ್ಮ ನಡುವೆ ನಡೆದ ಸಂಭಾಷಣೆ ಬಹುಶಃ ಈ ಪೋಸ್ಟಿಗಿಂತಲೂ ಪುಟ್ಟದಾದೀತು. ಆದರೆ ಈ ಪ್ಲಾಸ್ಟಿಕ್ ಕವರಿನ ಹಾಗೆಯೇ ಸ್ವತಃ ಅನಕ್ಷರಸ್ಥ ನಾದರೂಬ ಅವರವರಿಗಿಷ್ಟವಾದ ಜ್ಞಾನವನ್ನು ಕೊಂಡೊಯ್ಯುತ್ತಿದ್ದ ಸಾಯಿಬ್ ಸಿಂಗ್.

ನಾನು ಬಂದ ಹತ್ತು ವರ್ಷಗಳ ನಂತರ ಅವನಿಗೆ ಕೊನೆಗೂ ನಲವತ್ತೊಂಬತ್ತು ವರ್ಷಗಳ ಸೇವೆಯಾಯಿತಾದ್ದರಿಂದ ವಯಸ್ಸಾಯಿತೆಂದು ಲೆಕ್ಕ ಹಾಕಿ ನಿವೃತ್ತಿ ಮಾಡಿದರಂತೆ!

Monday, November 28, 2016

ಅರೆ ಘಂಟೆಯ ಕುರುಡು

ದಾರಿಯಲ್ಲಿ ಯಾರಾದರೂ ದೃಷ್ಟಿಹೀನರು ಬಂದರೆ ಬಹುಶಃ ಹಾಗೇ ಕನಿಕರದಿಂದ ನೋಡಿ ದಾರಿ ಬಿಟ್ಟು ನಿಲ್ಲುತ್ತಿದ್ದೆ. ಜಗತ್ತನ್ನು ಕಾಣಲಾಗದವರ ಸಹವಾಸ ನನಗೆ ಇಲ್ಲವೆಂದೇನಲ್ಲ. ನನಗೆ ಸಂಗೀತ ಹೇಳಿಕೊಡಲು ಪ್ರಯತ್ನಿಸಿದ ಮಾಸ್ಟರಿಗೆ ಕಣ್ಣು ಕಾಣುತ್ತಿರಲಿಲ್ಲ. ಪಂಚಾಕ್ಷರಿ ಗವಾಯಿಗಳ ಹಾಗೆ ಕಂಠ ಮಾತ್ರ ಮಧುರವಾಗಿತ್ತು. ಹಾಡುವುದಿರಲಿ, ಪಿಟೀಲನ್ನು ಲೀಲಾಜಾಲವಾಗಿ ಶ್ರುತಿ ಹಿಡಿದು ಅವರು ನುಡಿಸುವಾಗ ನಾನು ಕಣ್ಣು, ಬಾಯಿ ಬಿಟ್ಟು ಕೂರುತ್ತಿದ್ದೆ. ಏಕೆಂದರೆ ಕಣ್ಣು ಇದ್ದರೂ ನನಗೆ ಅವರಂತೆ ಕೀ ಬೋರ್ಡಿನಲ್ಲಿ ಸಂಗೀತ ನುಡಿಸಲಾಗುತ್ತಿರಲಿಲ್ಲ. ಕೀ ಗಳನ್ನು ಹುಡುಕಿ, ಹುಡುಕಿ ಒತ್ತುತ್ತಿದ್ದೆ.

ಮೊನ್ನೆ ಕಣ್ಣು ಪರೀಕ್ಷೆಗೆಂದು ಆಸ್ಪತ್ರೆಗೆ ಹೋದಾಗಲೇ ಅದೆಂತಹ ಅದ್ಭುತ ಅನ್ನುವುದು ಗೊತ್ತಾಗಿದ್ದು. ರಾತ್ರಿ ಪ್ರಖರವಾದ ಬೆಳಕಿಗೆದುರಾದಾಗ ಕಣ್ಣು ಸ್ವಲ್ಪ ಹೆಚ್ಚು ಕಾಲವೇ ಕತ್ತಲೆಗಟ್ಟಿಕೊಳ್ಳುತ್ತಿತ್ತು. ವಯೋಸಹಜವಾಗಿ ಪೊರೆ ಕಟ್ಟುತ್ತಿರಬಹುದು ಅಂತ ಪರೀಕ್ಷೆಗೆ ಹೋದೆ. ಅ, ಆ, ಇ. ಈ ಓದಿಸಿದ ಮೇಲೆ ಕಣ್ಣಿಗೆ ಏನೋ ದ್ರವ ಹಾಕಿ ಕಣ್ಣು ಮುಚ್ಚಿಕೊಂಡಿರಿ ಅಂದಳು ನರ್ಸಮ್ಮ. ಎಷ್ಟು ಹೊತ್ತು ಎಂದೆ. ನಲವತ್ತೈದು ನಿಮಿಷವಾದರೂ ಬೇಕಾಗುತ್ತದೆ ಎಂದಳು.

ಕಾಯುವ ಕೆಲಸವೇ ಬೇಜಾರು. ಮದುವೆಯಲ್ಲೋ, ದೇವಸ್ಥಾನದಲ್ಲೋ, ಬಿಲ್ಲು ಕಟ್ಟುವ ಕ್ಯೂನಲ್ಲೋ (ಈಗೀಗ ಎಟಿಎಂ ಮುಂದೆಯೂ)  ಕಾಯಬೇಕಾದ ಸಂದರ್ಭ ಬಂದಾಗ ಸ್ಮಾರ್ಟ್ ಫೋನ್ ಹಿಡಿದು ಗೆಳೆಯರ ಜೊತೆ ಚಾಟಿಸುತ್ತೇನೆ. ಅಥವಾ ಅದರಲ್ಲಿರುವ ಯಾವುದಾದರೂ ಪುಸಗತಕ ಓದುತ್ತಿರುತ್ತೇನೆ. ಇದೆಲ್ಲ ತೋರಿಕೆ ಅಂತಾಳೆ ನನ್ನವಳು. ಆದರೂ ಸ್ಮಾರ್ಟ್ ಫೋನ್ ಇದ್ದರೆ ಟೈಂ ಪಾಸ್ ಸುಲಭ ಅಂತ ನನ್ನ ಅನಿಸಿಕೆ.

ಇದು ಸಾರ್ವಕಾಲಿಕ ಸತ್ಯವಲ್ಲ ಅಂತ ಕಣ್ಣಾಸ್ಪತ್ರೆಯ ಅನುಭವ ಕಣ್ತೆರೆಸಿತು. ಕಣ್ಣಿಗೆ ಹಾಕಿದ ದ್ರವ ಮೂಗಿನಿಂದ ಗಂಟಲಿಗೆ ಇಳಿದು ಕಿರಿಕಿರಿಯಾದಾಗ ಸುಮ್ಮನಿರಲಾಗಲಿಲ್ಲ. ಕಣ್ಣು ಮುಚ್ಚಿದ ಮಾತ್ರಕ್ಕೆ ನಿದ್ರೆ ಬಂತೆಂದೇನಾಗುವುದಿಲ್ಲವಷ್ಟೆ. ಚಡಪಡಿಸಿದೆ. ಹಾಗೇ ಚಾಟಿಸಲು ಪ್ರಯತ್ನಿಸಿದೆ. ಸ್ಮಾರ್ಟ್ ಫೋನ್ ಬದಲಿಗೆ ಹಳೆಯ ಕೀ ಫೋನು ಇದ್ದಿದ್ದರೆ ಯಾವ ಕೀ ಎಲ್ಲಿದೆ ಎಂದು ತಡಕಾಡಬಹುದಿತ್ತು. ಲಲನೆಯ ಕೆನ್ನೆಯಂತೆ ನಯವಾದ ಸ್ಮಾರ್ಟ್ ಫೋನಿನಲ್ಲಿ ಯಾವ ಅಕ್ಷರ ಎಲ್ಲಿದೆ ಎಂದು ತಿಳಿಯುವುದೂ ಕಷ್ಟ.

ಕೀ ಒತ್ತಿದಾಗ ಶಬ್ದ ಮಾಡುತ್ತದೆ ನಿಜ. ಆದರೆ ಎಲ್ಲ ಕೀಗಳ ಶಬ್ದವೂ ನನ್ನ ಸಂಗೀತದಂತೆಯೇ ಒಂದೇ ಶ್ರುತಿ. ಸದ್ದು. ಹೇಗೆ ಉಪಯೋಗಕ್ಕೆ ಬಂದೀತು? ಆಗಲೇ ನನಗೆ ನಮ್ಮ ಮೇಸ್ಟರ ಅದ್ಭುತ ಸಿದ್ಧಿಯ ಅರಿವಾಗಿದ್ದು. ಕೀ ಬೋರ್ಡಿನಲ್ಲಿ ಕೀಗಳಿರುವ ಸ್ಥಾನವನ್ನು ನೆನಪಿಟ್ಟುಕೊಂಡು ಶ್ರುತಿ ತಪ್ಪದಂತೆ ನುಡಿಸುವುದು ಸುಲಭವಲ್ಲ.

ಅರ್ಧ ಗಂಟೆ ಕತ್ತಲಲ್ಲಿ ಬದುಕುವುದೇ ಅಸಹನೀಯವೆನ್ನಿಸಿದಾಗ ಕತ್ತಲೇ ಬದುಕಾದವರ ಕಥೆ ಹೇಗಿದ್ದಿರಬೇಕು? ಕಣ್ಣು ಮುಚ್ಚಿಕೊಂಡು ಹೀಗೆಲ್ಲ ತಲೆ ಕೆಡಿಸಿಕೊಳ್ಳುವಾಗ ಮೇಸ್ಟರು ಒಮ್ಮೆ ಮಾಡಿದ್ದ ವಿನಂತಿ ನೆನಪಿಗೆ ಬಂತು. ಅವರ ಮನೆಯಲ್ಲಿ ಒಂದು ವರ್ಲ್ಡ್ ಸ್ಪೇಸ್ (ರೇಡಿಯೊ) ಇತ್ತು. ಉಪಗ್ರಹಗಳ ಮೂಲಕ ಸಂಗೀತ ಪ್ರಸಾರ ಮಾಡುವ ಚಾನೆಲ್ಗಳನ್ನು ಈ ರೇಡಿಯೋ ಮೂಲಕ ಕೇಳಬಹುದಿತ್ತು. ದಿನದ ಇಪ್ಪತ್ತನಾಲ್ಕು ಗಂಟೆಯೂ ಅದು ಲಭ್ಯವಿತ್ತು.

ಮೇಸ್ಟರಿಗೆ ಬಲು ಅನುಕೂಲವಾಗಿತ್ತು. ರಿಮೋಟಿನ ಎರಡು ಬಟನುಗಳನ್ನು ಬಳಸಿದರೆ ರೇಡಿಯೋ ಕೇಳಬಹುದಿತ್ತು. ಬೇಕೆಂದ ಚಾನೆಲ್ ಹುಡುಕಬಹುದಿತ್ತು. ಆದರೆ ಅದು ತುಸು ದುಬಾರಿಯಾಗಿತ್ತು ಅನ್ನುವುದೂ ನಿಜ. ತಿಂಗಳ ಚಂದಾ ಜೊತೆಗೆ ಉಪಗ್ರಹ ಸಂಪರ್ಕಕ್ಕೆ ದುಬಾರಿ ಆಂಟೆನಾ ಬೇಕಿತ್ತು.

ಮೇಸ್ಟರು ಅದನ್ನು ಕೊಂಡು ಏಳೆಂಟು ತಿಂಗಳಾಗಿರಬಹುದು. ತಂತ್ರಜ್ಞಾನ ಬದಲಾಯಿತು. ಎಫ್ ಎಮ್ ರೇಡಿಯೋ ನಿಲಯಗಳು ಊರಿಗೆ ಹತ್ತರಂತೆ ತಲೆಯೆತ್ತಿದುವು. ಅದಕ್ಕೆ ತಕ್ಕಂತೆ ಪುಟ್ಟ, ಅಗ್ಗದ ರೇಡಿಯೊ ಬಂತು. ಇಂಟರ್ನೆಟ್ ಎಲ್ಲೆಡೆ ತನ್ನ ಜಾಲ ಹರಡಿತು. ವರ್ಲ್ಡ್ ಸ್ಪೇಸ್ ಗೆ ಚಂದಾ ಕೊಡುವವರು ಕಡಿಮೆಯಾದರು. ಕಂಪೆನಿ ಮುಚ್ಚಿತು.

ತೊಂದರೆಯಾಗಿದ್ದು ಮೇಸ್ಟರಿಗೆ. ಎಫ್ ಎಮ್ ನಲ್ಲಿ ಅವರಿಗೆ ಹಿತವಾಗಿದ್ದ ಕರ್ನಾಟಕ ಸಂಗೀತ ಆಗೊಮ್ಮೆ ಈಗೊಮ್ಮೆ ಪ್ರಸಾರವಾಗುತ್ತಿತ್ತೇ ಹೊರತು ವರ್ಲ್ಡ ಸ್ಪೇಸ್ ನಲ್ಲಿ ಆಗುತ್ತಿದ್ದಂತೆ ದಿನಪೂರ್ತಿಯಲ್ಲ. ಟೀವಿ ಅವರಿಗೆ ಒಗ್ಗದ ಮನರಂಜನೆ. ಹೀಗಾಗಿ ನಿಮಗೆ ಗೊತ್ತಿರುವವರು ಯಾರಾದರೂ ಇದ್ದರೆ ಅವರಿಗೆ ಹೇಳಿ ಆ ಕಂಪೆನಿ ಮುಚ್ಚದಂತೆ ನೋಡಿ ಎನ್ನುವುದು ಅವರ ವಿನಂತಿ.

ನಾನೂ ನನ್ನ ಟೆಕ್ ಜ಼್ಾನದ ಸಲಹೆಗಳನ್ನು ಕೊಟ್ಟಿದ್ದೆ. ಇಂಟರ್ನೆಟ್ ರೇಡಿಯೊ ಬಳಸಿ. ಐ-ಪಾಡ್ ತೆಗೆದುಕೊಳ್ಳಿ ಅಂತೆಲ್ಲ. ಅವೆಲ್ಲ ಆಗಲ್ ಬಿಡಿ ಎಂದು ಹೇಳಿಬಿಟ್ಟಿದ್ದರು.

ಯಾಕೆ ಅಂತ ಅರ್ಥವಾಗಿದ್ದು ಕಣ್ಣು ಮುಚ್ಚಿ ಕುಳಿತುಕೊಳ್ಳಬೇಕಾದಾಗ. ಸ್ಮಾರ್ಟ್ ಫೋನ್ ಅಸ್ಭುತ ಸಾಧನವೇ ಆಗಿದ್ದರೂ ಅದನ್ನು ಬಳಸಲು ಬೇರೊಬ್ಬರ ನೆರವು ಬೇಕಿತ್ತು. ಬಹುಶಃ ಸ್ವಾವಲಂಬನೆಯಿಂದ ಪರಾವಕಂಬನೆಗೆ ಮರಳಬೇಕಾಗಬಹುದು ಎಂದು ಅವರು ಹೊಸ ತಂತ್ರಜ್ಞಾನವನ್ನು ನಿರಾಕರಿಸಿದರೆ?

ಏನೇ ಇರಲಿ. ಜಾಗತೀಕರಣ ತಂದ ಸವಲತ್ತುಗಳು ಇಂತಹ ಎಷ್ಟು ಜೀವಗಳ ಖುಷಿಗೆ ಅಡ್ಡಿಯಾಗಿವೆಯೋ ಯಾರಿಗೆ ಗೊತ್ತು? ಎಲ್ಲವೂ ಡಿಜಿಟಲೀಕರಣಗೊಳ್ಳಲಿ ಎನ್ನುವಾಗ ನಮ್ಮ ಮೇಸ್ಟರಂತವರನ್ನು ನಾವು ನೆನಪಿಸಿಕೊಳ್ಳುವುದು ಒಳ್ಳೆಯದು.

Friday, November 11, 2016

ಅಪಮೌಲ್ಯದ ದಿನ

ಮೊನ್ನೆ ಸಂಜೆ ಚಹಾ ಕುಡಿಯುತ್ತ ಸುದ್ದಿ ಸವಿಯುತ್ತಿದ್ದಾಗ ದಿಢೀರನೆ 500 ಹಾಗೂ 1000 ರೂಪಾಯಿ ನೋಟುಗಳ ಅಪಮೌಲ್ಯದ ಸುದ್ದಿ ಚಹಾಗಿಂತಲೂ ಚುರುಕಾಗಿ ನಿದ್ರೆಯನ್ನೋಡಿಸಿತು. ಇನ್ನು ಮುಂದಿನ ಎರಡು ದಿನಗಳ ವ್ಯವಹಾರಗಳು ಹೇಗೆ ನಡೆಸುವುದು ಎನ್ನುವ ಚಿಂತೆ ಮೊದಲು ಬಂತು.
ತಕ್ಷಣ ಮಡದಿಗೆ ಕೇಳಿದೆ. "ನಿನ್ನ ಪರ್ಸಿನಲ್ಲಿ ಇರೋ ದುಡ್ಡೆಲ್ಲ ತೆಗೆದಿಡು."

ಈ ಪ್ರಶ್ನೆ ಕೇಳುವುದಕ್ಕೆ ಕಾರಣವಿದೆ.  ವ್ಯಾಪಾರಕ್ಕೆ ಇಬ್ಬರೂ ಒಟ್ಟಿಗೆ ಹೋಗುವುದು ಸಾಮಾನ್ಯ. ಆಗೆಲ್ಲ ಬಿಲ್ ಪಾವತಿಯ ಹೊಣೆ ನನ್ನದೇ ಆಗಿರುತ್ತೆ. ಆದರೂ ಕೆಲವೊಮ್ಮೆ ಅವಳು ತವರಿಗೆ ಹೋದಾಗಲೋ, ನಾನು ಪ್ರವಾಸ ಹೋದಾಗಲೋ, ಅಥವಾ ಅವಳೇ ಗೆಳತಿ/ನಾದಿನಿಯರ ಜೊತೆ ಷಾಪಿಂಗ್ ಹೋದಾಗಲೋ ಒಂದಿಷ್ಟು ಹಣ ತೆಗೆದುಕೊಂಡು ಹೋಗುವುದು ವಾಡಿಕೆ. ವ್ಯಾಪಾರ ಮುಗಿಸಿ ಬಂದ ಮೇಲೆ ಖರ್ಚೆಷ್ಟಾಯಿತು ಎಂದು ನಾನು ಕೇಳುವುದಾಗಲಿ, ಅವಳು ಒಪ್ಪಿಸುವುದಾಗಲಿ ವಾಡಿಕೆಯಲ್ಲ. ಹಾಗೆ ಏನಾದರೂ ಉಳಿದಿದ್ದರೆ ಅದು ಅವಳ ಪರ್ಸಿನಲ್ಲಿಯೇ ಇರುತ್ತದೆ. ಹೀಗೆ ಎಷ್ಟೋ ಬಾರಿ ಮನೆಯಲ್ಲಿ ಯಾವ್ಯಾವುದೋ ಪರ್ಸಿನಲ್ಲಿ ಅಷ್ಟಿಷ್ಟು ದುಡ್ಡು ಸಿಗುವುದುಂಟು. ಇದೊಂದು ರೀತಿಯಲ್ಲಿ ನಮ್ಮ ಮನೆಯಲ್ಲಿನ ಕಾಳಧನ. ಆದರೆ ಬಲು ಉಪಯುಕ್ತ ಧನ. ಆಪತ್ಕಾಲಕ್ಕೆ ಒದಗುವಂಥದ್ದು.

"ಒಂದೆರಡು ಸಾವಿರ  ಇರಬಹುದು", ಎಂದಳು. ಹಾಗಿದ್ದರೆ ಪರವಾಗಿಲ್ಲ. ಒಂದು ವಾರ ಚಿಂತೆಯಿಲ್ಲದೆ ಕಳೆಯಬಹುದು ಎಂದು ಕೊಂಡೆ. ತಿಂಗಳ ಮೊದಲ ವಾರದಲ್ಲಿಯೇ ಪೇಪರು, ವಿದ್ಯುತ್ ಬಿಲ್ಲು ಮುಂತಾದ ನಗದು ವ್ಯವಹಾರಗಳಿಗೆ ಅಂತ ಹತ್ತಿಪ್ಪತ್ತು ಸಾವಿರ ತಂದಿಡುವುದುಂಟು. ಈ ತಿಂಗಳು ದೂರದೂರಿನಿಂದ ಬರುವ ಮಗನ ಟಿಕೆಟ್ಟು ಖರ್ಚು, ಮದುವೆ ಸೀಸನ್ನಿನ ಖರ್ಚು ಅಂತ ಸ್ವಲ್ಪ ಜಾಸ್ತಿಯೇ ತಂದಿದ್ದೆ. ಎಲ್ಲವನ್ನೂ ಲೆಕ್ಕ ಹಾಕಿದಾಗ, ಮಡದಿಯ ಪರ್ಸಿನಲ್ಲಿ ಒಂದು ನೂರು ನೋಟು, ನನ್ನ ಬಳಿ ಎರಡು ನೂರು ನೋಟುಗಳ ಹೊರತಾಗಿ ಉಳಿದವೆಲ್ಲವೂ 500, 1000ದ ನೋಟುಗಳೇ ಉಳಿದಿದ್ದವು. ಒಟ್ಟು ಹದಿನಾರು ಸಾವಿರ ಇತ್ತು. ಹೇಗೋ ಮೂರು ದಿನ ಕಳೆದ ಮೇಲೆ ಬ್ಯಾಂಕಿನಲ್ಲಿ ಕಟ್ಟಿ ಬಿಡಬಹುದು. ನಾಳೆ, ನಾಳಿದ್ದಿಗೆ ಹಾಲು, ತರಕಾರಿ ಖರ್ಚಾದರೆ ಸಾಕಲ್ಲ ಎಂದು ಲೆಕ್ಕ ಹಾಕಿದೆ.

ಬೆಳಗ್ಗೆ ಕೈಯಲ್ಲಿದ್ದ ನೂರು ರೂಪಾಯಿ ಹಿಡಿದು ಹಾಲು ತರಲು ಹೊರಟೆ. ಒಂದು ಲೀಟರು ಹಾಲು, ಅರ್ಧ ಕಿಲೋ ಬೀನ್ಸು, ಅರ್ಧ ಕ್ಯಾರಟ್ ಗೆ ಅದು ಸಾಕಾಯಿತು. ಕೊತ್ತಂಬರಿ ಸೊಪ್ಪಿಗೆ ಚಿಲ್ಲರೆ ಇಲ್ಲ ಅಂತ ವಾಪಸು ಬಂದೆ. ಟೀ ಕುಡಿಯುವಾಗ ಹೆಂಡತಿಯ "ರೀ" ಕೇಳಿಸಿತು. ಅಂದರೆ ಮರಳಿ ಅಂಗಡಿಗೆ ಹೋಗಿ ಅಂತಲೇ. ಏನು ಎಂದೆ. ತೊಗರಿ ಬೇಳೆ ಮುಗಿದಿದೆ. ಮಂಗಳ್ ಸ್ಟೋರಿಗೆ ಹೋಗಿ  ಎರಡು ಕೇಜಿ ತೊಗೊಂಡು ಬನ್ನಿ ಅಂದಳು.

ಕೇಜಿ ಬೇಳೆಗೆ 140 ರೂಪಾಯಿ. ನನ್ನ ಬಳಿ ಇರುವುದು ಕೇವಲ ಎರಡು ನೂರು. "ಆಗಲ್ಲ. ಈವತ್ತಿಗೆ ಅರ್ಧ ಕೇಜಿ ತರುತ್ತೀನಿ. ನಾಳೆ, ನಾಡಿದ್ದು ಎಟಿಎಮ್ಮೋ, ಬ್ಯಾಂಕೋ ದುಡ್ಡು ಕೊಟ್ಟಾಗ ಬೇರೆ ತರೋಣ," ಅಂತ ಅಂಗಡಿಗೆ ಹೋದೆ. ಅಲ್ಲಿ ರಾಜಕುಮಾರನನ್ನ (ಮಂಗಳ ಸ್ಟೋರಿನ ರಾಜಾಸ್ತಾನಿ ಮಾಲೀಕ) ಹತ್ತಿರ ಐಷಾರಾಮ ಮಾತನಾಡುತ್ತ ಅರ್ಧ ಕಿಲೊ ಬೇಳೆ ಕೊಡು. ನಾಳೆ ಇನ್ನೆರಡು ಕಿಲೊ ತೊಗೊಳ್ತೀನಿ ಎಂದೆ. "ಅಯ್ಯೋ ಅಂಕಲ್. ದುಡ್ಡಿಗೆ ಯಾಕೆ ಯೋಚನೆ ಮಾಡ್ತೀರಾ? ತೊಗೊಳ್ಳಿ. ಲೆಕ್ಕ ಬರೆದುಕೊಳ್ಳುತ್ತೇನೆ. ಆಮೇಲೆ ಕೊಡಿ." ಎಂದ. ಐದು ದಶಕಗಳ ಹಿಂದೆ ಬೇಡ ಎಂದು ಮರೆತು ಬಿಟ್ಟಿದ್ದ ಅಭ್ಯಾಸವನ್ನು ಈ ಮಾತು ನೆನಪಿಸಿತು.

ಐದು ದಶಕಗಳ ಹಿಂದೆ ನಾನು ಶಾಲೆಯಲ್ಲಿ ಓದುತ್ತಿದ್ದೆ. ಆಗ ರೇಶನ್ ಯುಗ. ದಿನಸಿಯನ್ನು ಕಾಗದದಲ್ಲಿ ಪೊಟ್ಟಣ ಕಟ್ಟಿ ತರುತ್ತಿದ್ದ ಕಾಲ. ಊರಿನಲ್ಲಿ ನಮ್ಮ ಮನೆಯ ಸಾಲಿನ ಕೊನೆಯಲ್ಲಿದ್ದ ಮೂಲೆ ಅಂಗಡಿ ರಾಜಪ್ಪನ ಬಳಿ ಅಮ್ಮ ತಿಂಗಳ ಲೆಕ್ಕ ಇಟ್ಟಿದ್ದಳು. ಕಾಸು ಕೊಡದೆಯೇ ಸಾಮಾನು ತರುತ್ತಿದ್ದೆವು. ತಿಂಗಳ ಮೊದಲ ವಾರದಲ್ಲಿ ಅಪ್ಪನಿಗೆ ಸಂಬಳ ಬಂದಾಗ ಅದನ್ನು ಹಿಂತಿರುಗಿಸುವುದು ಪರಿಪಾಠ. ಆ ಕಾಲದಲ್ಲಿ ಸಾಲ ಪಡೆದದ್ದನ್ನು ಕಾಲಕ್ಕೆ ಸರಿಯಾಗಿ ಮರೆಯದೆ ವಾಪಸು ಹಿಂತಿರುಗಿಸು ಅಂತ ಅಮ್ಮ ಆಗಾಗ ಪಾಠ ಹೇಳುತ್ತಿದ್ದಳು.( ಬಹುಶಃ ಮಲ್ಯನಿಗೆ ಈ ಪರಿಸ್ಥಿತಿ ಇರಲಿಲ್ಲವೇನೋ? )

ನಾನು ದೊಡ್ಡವನಾಗಿ ಸಂಪಾದನೆಗೆ ತೊಡಗಿದಾಗ, ಏನೇ ಕಷ್ಟವಿದ್ದರೂ ಅಂಗಡಿಯಲ್ಲಿ ಸಾಲ ಕೊಳ್ಳಬಾರದು ಎಂದು ತೀರ್ಮಾನಿಸಿ ಬಿಟ್ಟಿದ್ದೆ. ನನ್ನ ಹೆಂಡತಿಯೂ ಇದಕ್ಕೆ ಸಾಥ್ ಕೊಡುತ್ತಿದ್ದಳು. ಬಾಡಿಗೆ, ವಿದ್ಯುತ್ ಬಿಲ್ಲು, ನೀರಿನ ಬಿಲ್ಲು, ಹಾಲು, ತರಕಾರಿ, ಪೇಪರು ಹೀಗೆ ತಿಂಗಳ ಬಾಕಿಯನ್ನು ಸಂಬಳ ಬಂದ ಮರುದಿನವೇ ಚುಕ್ತಾ ಮಾಡಿಬಿಡುವುದು ಅಭ್ಯಾಸ.  ಕ್ರಮೇಣ ಇವನ್ನೂ ನಗದು ಕೊಟ್ಟೇ ತರುವ ಅಭ್ಯಾಸ ಬೆಳೆಯಿತು. ಸಾಲದ ಪುಸ್ತಕ ಎನ್ನುವುದು ಚರಿತ್ರೆಯಾಗಿತ್ತು.

"ಅಂಕಲ್. ಪೇಜ್ 94 ನೆನಪಿಟ್ಟುಕೊಳ್ಳಿ," ಎಂದ ರಾಜಕುಮಾರ. ಅಂತೂ ಸಾಲ ಬೇಡವೆಂದಿದ್ದವನ ಮೌಲ್ಯ ಹೀಗೆ ದಿಢೀರನೆ ಕುಸಿಯಿತು.

ಮನೆಗೆ ಬಂದು ತಿಂಡಿ ತಿನ್ನುವಷ್ಟರಲ್ಲಿ ಊರಿನಿಂದ ಅಕ್ಕನ ಫೋನು. ಮನೆಯಲ್ಲಿ ದುಡ್ಡು ಇದ್ದರೆ ಬ್ಯಾಂಕಿಗೆ ಕಟ್ಟಿಬಿಡು ಅಂತ ಉಪದೇಶ. ಏಕೆ ಎಂದೆ. ಪುಟ್ಟಮ್ಮನ ಕಥೆ ಹೇಳಿದಳು. ಪುಟ್ಟಮ್ಮ ನಮ್ಮ ಮನೆಯಲ್ಲಿ ಸುಮಾರು ಮೂವತ್ತು ವರ್ಷಗಳಿಂದ ಬಟ್ಟೆ ಒಗೆಯಲು ಮನೆ ಗುಡಿಸಿ ಸಾರಿಸಲು ಬರುತ್ತಿದ್ದಾಳೆ. ರೇಶನ್ ಯುಗ ಕಳೆದು ನಾವೆಲ್ಲ ಉದ್ಯೋಗವಂತರಾದಾಗ ಅಮ್ಮನಿಗೆ ನೆರವಾಗಲಿ ಎಂತ ನೇಮಿಸಿದ್ದೆವು. ಅವಳೂ ನಮ್ಮ ಮನೆಯವಳೇ ಆಗಿಬಿಟ್ಟಿದ್ದಳು. ಅವಳ ಮಗಳಿಗೆ ಈಗ ಮದುವೆ. ಮದುವೆಗೆ ಬೇಕಾಗುತ್ತದೆ ಎಂದು ಪ್ರತಿ ತಿಂಗಳೂ ಒಂದಿಷ್ಟು ಹಣವನ್ನು ಕೂಡಿಸಿ ಅಕ್ಕನ ಬಳಿ ಕೊಡುತ್ತಿದ್ದಳಂತೆ. ಅಕ್ಕ ಅದನ್ನು ಹಾಗೆಯೇ  ಪ್ರತ್ಯೇಕವಾಗಿ ಒಂದು ಬ್ಯಾಂಕ್ ಅಕೌಂಟಿನಲ್ಲಿ ಹಾಕಿಡುತ್ತಿದ್ದಳು. ಮೂರು ದಶಕದ ಉಳಿತಾಯ ಸುಮಾರು 60000 ಆಗಿತ್ತಂತೆ. ಮದುವೆ ನಿಶ್ಚಯವಾಗಿದೆ ಬೇಕು ಅಂತ ಹೇಳಿದ್ದಳು ಅಂತ ಮೊನ್ನೆ ಅಕ್ಕ ಅದನ್ನು ಬ್ಯಾಂಕಿನಿಂದ ತಂದಿದ್ದಳಂತೆ. ಈಗ ಅದನ್ನು ಏನು ಮಾಡುವುದು? ಅಷ್ಟು ಹಣವನ್ನು ತಕ್ಷಣಕ್ಕೆ ಬದಲಾಯಿಸಲು ಬರುವುದಿಲ್ಲವಲ್ಲ ಎಂದು ಸಲಹೆ ಕೇಳಲು ಫೋನ್ ಮಾಡಿದ್ದಳು.

ನಮ್ಮ ಪುಣ್ಯ. ಆ ಕಾಲದಲ್ಲಿ ನಮ್ಮ ಬೀದಿಯಲ್ಲಿದ್ದವರೆಲ್ಲರದ್ದೂ ದೊಡ್ಡ ಕುಟುಂಬಗಳು. ಒಬ್ಬೊಬ್ಬರಿಗೂ ಐದಾರು ಸಹೋದರ, ಸಹೋದರಿಯರು. ನನಗೂ ಅಷ್ಟೆ. ಆರು ಅಕ್ಕ ತಂಗಿಯರು. ಎಲ್ಲರೂ ಊರಲ್ಲೇ ಇರುವುದರಿಂದ, ಎಲ್ಲರೂ ಒಟ್ಟಿಗೆ ಬ್ಯಾಂಕಿಗೆ ಹೋಗಿ  ನಿಮ್ಮ, ನಿಮ್ಮ ಅಕೌಂಟಿನಿಂದ ತಂದು ಕೊಡಿ ಎಂದು ಸಲಹೆ ನೀಡಿದೆ. ಕಳ್ಳತನ ಮಾಡುತ್ತದ್ದೇವೆಯೋ ಎನ್ನಿಸಿತು.

ಸಂಜೆ ಆಫೀಸಿನಿಂದ ಬಂದಾಗ ಮಡದಿ ನೆನಪು ಮಾಡಿದಳು. ನಾಳೆ ಗಿರೀಶನ ಮಗಳ ಮದುವೆ. ಮುಂದಿನ ವಾರ ಶಶಿಯ ಮದುವೆ. ಇಬ್ಬರಿಗೂ ಗಿಫ್ಟ್ ಏನಾದರೂ ತರಬೇಕಲ್ಲವಾ? ಅದು ನನಗೂ ನೆನಪಿತ್ತು. ಅದಕ್ಕೇ ಬರುವಾಗ ಅಂಗಡಿಗಳು ತೆಗೆದಿವೆಯೋ ಎಂದು ನೋಡಿಕೊಂಡೇ ಬಂದಿದ್ದೆ  ಒಡವೆಯ ಅಂಗಡಿಯಿಂದ ಬೆಳ್ಳಿಯ ಪದಾರ್ಥವನ್ನು ತರುವ ಮನಸ್ಸಿತ್ತು. ಕಾರ್ಡು ಕೊಟ್ಟು ತರಬಹುದು ಎಂದು ತೀರ್ಮಾನಿಸಿದ್ದೆ. ಆದರೆ ಆಭರಣದ ಅಂಗಡಿಯವ ಕಾರ್ಡು ಕೊಟ್ಟರೆ ಅದಕ್ಕೆ ಮೂರು ಪರ್ಸೆಂಟ್ ಹೆಚ್ಚು ಸೇರಿಸುತ್ತಾನೆ ಎಂದಾಗ ಯೋಚನೆ ಬದಲಾಯಿತು.

ಅಲ್ಲೇ ಪಕ್ಕದಲ್ಲಿದ್ದ ಗಿಫ್ಟ ಅಂಗಡಿಗೆ ಹೋಗಿ ಮಿಕ್ಸಿ, ಗ್ರೈಂಡರ್ ಗಳನ್ನು ಹುಡುಕಿದೆವು. ಬೆಲೆಯೆಲ್ಲವನ್ನೂ ನೋಡಿದ ಮೇಲೆ ಅಂಗಡಿಯವನನ್ನು ಹಾಗೇ ಸುಮ್ಮನೆ ಕೇಳಿದೆ. ನಗದು ಕೊಡಲೋ? ಕಾರ್ಡು ಕೊಡಲೋ? "ಸಾರ್. ಕಾರ್ಡು ಕೆಲಸ ಮಾಡುತ್ತೋ ಇಲ್ಲವೋ ಗೊತ್ತಿಲ್ಲ. ನಗದಿದ್ದರೆ ಕೊಡಿ. ಆದರೆ ಸದ್ಯಕ್ಕೆ ನಾನು ಬಿಲ್ಲು ಕೊಡುವುದಿಲ್ಲ," ಎಂದ. ಬಿಲ್ಲು ಇಲ್ಲದಿದ್ದರೆ ಅದು ಭ್ರಷ್ಟ ವ್ಯಾಪಾರ ಅಲ್ಲವೇ ಎನ್ನಿಸಿತು. ಆದರೆ ನಿರ್ವಾಹವಿಲ್ಲ. ಕೈಯಲ್ಲಿರುವ ನಗದನ್ನು ಬ್ಯಾಂಕಿಗೆ ಹೋಗದೆಯೇ ಬದಲಾಯಿಸಿಕೊಳ್ಳುವ ಅವಕಾಶ  ಇದು ಎಂದುಕೊಂಡೆ. ನನ್ನ ಹಿಂಜರಿತ ಕಂಡ ಅವನೇ ಸಮಜಾಯಿಷಿಯನ್ನೂ ಹೇಳಿದ. "ಹೇಗೂ ಗಿಫ್ಟ ಕೊಡೋದಲ್ಲವಾ ಸರ್. ಬಿಲ್ಲು ಯಾಕೆ?"  ಇದುವೂ ತರ್ಕ ಸರಿಯೇ ಎಂದು ಕೊಂಡೆ. ನಿನಗೆ ತೊಂದರೆ ಆಗುವುದಿಲ್ಲವೇ ಎಂದೆ. "ನಾವೆಲ್ಲ ವ್ಯವಸ್ಥೆ ಮಾಡಿಕೊಳ್ತೇವೆ ಬಿಡಿ ಸಾರ. ಬಿಸಿನೆಸ್ ಅಂದ ಮೇಲೆ ಇವೆಲ್ಲವನ್ನು ನಿಭಾಯಿಸದಿದ್ದರೆ ಹೇಗೆ?" ಎಂದ. ಹೇಗೆ? ಅಂತ ಮಾತ್ರ ಹೇಳಲಿಲ್ಲ. ಅಂತೂ ಗಿರೀಶನ ಮಗಳ ಮದುವೆಗೆ ಗಿಫ್ಟ್ ಸಿದ್ಧವಾಯಿತು.

ನಾಳೆ ಬ್ಯಾಂಕು ತೆಗೆದ ಕೂಡಲೇ ಇರುವ ಹನ್ನೆರಡು ಸಾವಿರವನ್ನಾದರೂ ಅಕೌಂಟಿಗೆ ಹಾಕಿ ನಗದು ಬದಲಾಯಿಸಿಕೊಂಡು ಬಿಡಬೇಕು ಎಂದು ತೀರ್ಮಾನಿಸಿದೆ. ಕಪ್ಪುಧನ  ಇದ್ದವರಿಗೆ ನಿದ್ರೆ ಬಂದಿತ್ತೋ, ಇಲ್ಲವೋ ನನಗಂತೂ ನಿದ್ರೆ ಸರಿಯಾಗಿ ಬರಲಿಲ್ಲ ಅನ್ನುವುದು ನಿಜ.

ಮರುದಿನ ಕಛೇರಿಯ ಆವರಣದಲ್ಲೇ ಇರುವ ಬ್ಯಾಂಕಿಗೆ ಹೋದೆ. ಸಾಧಾರಣವಾಬಿ ಭಣಗುಡುತ್ತಿದ್ದ ಬ್ಯಾಂಕು ಸಿಬ್ಬಂದಿ ಬಂದು ಬಾಗಿಲು ತೆಗೆಯುವ ಮುನ್ನವೇ ಭರ್ತಿಯಾದಂತಿತ್ತು. ಕ್ಯೂ ನಲ್ಲಿ ನಿಂತೆ. ಚಲನ್ ಬರೆದಾಗ ನಿತ್ಯವೂ ನಮಸ್ಕಾರ ಎನ್ನುತ್ತಿದ್ದ ಬ್ಯಾಂಕಿನ ಸಿಬ್ಬಂದಿ, ಸರ್, ಹಿಂದೆ ಬನ್ನಿ. ನಿಮ್ಮ ಖಾತೆ ಚೆಕ್ ಮಾಡಿದ ಮೇಲೆ ಡೆಪಾಸಿಟ್ ಮಾಡುವಿರಂತೆ ಎಂದರು. ಪ್ರತಿ ಚಲನ್ನಿನಲ್ಲಿಯೂ ಅವರು ದಾಖಲಿಸಬೇಕಂತೆ. ಅತಿ ಪರಿಚಿತವಾದ ಸಿಬ್ಬಂದಿಗೂ ಮತ್ತೆ ಪರಿಚಯ ಹೇಳಿಕೊಳ್ಳುವಂತಿತ್ತು. ಕ್ಯೂನಲ್ಲಿ ನಿಂತು ಚಲನ್ನಿಗೆ ಸಹಿ ಹಾಕಿಸಿಕೊಂಡು ಮತ್ತೊಂದು ಕ್ಯೂ ಸೇರಿದೆ.

ಸಾಮಾನ್ಯವಾಗಿ ಬ್ಯಾಂಕಿಗೆ ಕಾಲಿಡದ ವ್ಯಕ್ತಿಗಳೆಲ್ಲಿ ಹಲವರು ಕಣ್ಣಿಗೆ ಕಂಡರು. ಓಹೋ. ಸಮಾನತೆ ಎಂದರೆ ಇದೇ ಎಂದು ನಮ್ಮ ರಾಷ್ಟ್ರದ ಪ್ರಜಾಪ್ರಭುತ್ವದ ಬಗ್ಗೆ ಗರ್ವಿಸುತ್ತ ಕ್ಯೂನಲ್ಲಿ ನಿಂತೆ. ನನ್ನ ಮುಂದೆ ಆಫೀಸಿನ ಗ್ರೂಪ್ 1ರ ಸಿಬ್ಬಂದಿಯೊಬ್ಬನಿದ್ದ. ಕ್ಯೂ ಸ್ವಲ್ಪ ಮುಂದುವರೆಯುತ್ತಿದ್ದಂತೆಯೇ, ಅವನ ಪಕ್ಕದಲ್ಲಿ ಅವನ ಹೆಂಡತಿಯೂ, ಮಗ ಮತ್ತು ಮಗಳೂ ಬಂದು ನಿಂತರು. ಹುಳಿ ನಗೆ ನಗುತ್ತಾ, "ಸಾರ್ ಇವರದ್ದೂ ಕಟ್ಟಿ ಬಿಡುತ್ತೇನೆ" ಎಂದ. ಆಫೀಸರರ ಮರ್ಯಾದೆಯಲ್ಲವೇ? ಔದಾರ್ಯ ತೋರಿ ಸರಿ ಎಂದು ಸರಿದೆ.

ಹಾಗೆಯೇ ಮುಂದಿರುವವರು ಕೊಟ್ಟ ಹಣವನ್ನು ಕ್ಯಾಶಿಯರ್ ಲೆಕ್ಕ ಹಾಕುವುದನ್ನು ನೋಡುತ್ತ ನಿಂತೆ. ಕಾಲ ಕಳೆಯಬೇಕಲ್ಲ. ಒಂದೆರಡು ಜನರ ಡೆಪಾಸಿಟ್ಟು ನೋಡಿದ ಮೇಲೆ, ನನ್ನ ಪರ್ಸು ಮುಟ್ಟಿಕೊಂಡೆ. ಪರ್ಸಿನಿಂದ ಕೈಗೆ ತೆಗೆದಿಟ್ಟುಕೊಂಡಿದ್ದ ಹಣವನ್ನು, ಹಿಡಿಯಾಗಿ ಮುಚ್ಚಿಟ್ಟುಕೊಂಡೆ. ಬೇರೆ ಯಾರೂ ನೋಡಬಾರದಲ್ಲ. ಅಲ್ಲಿ ಬಹುಶಃ ಹನ್ನೆರಡೇ ಸಾವಿರವನ್ನು ಡೆಪಾಸಿಟ್ಟು ಮಾಡಲು ಬಂದಿದ್ದವ ನಾನೊಬ್ಬನೇ ಇರಬೇಕು. ನನ್ನ ಮುಂದಿದ್ದ ಇಡೀ ಕುಟುಂಬ ಒಟ್ಟು ಒಂದೂಕಾಲು ಲಕ್ಷ ನಗದನ್ನು ಅಕೌಂಟಿಗೆ (ನಾಲಕ್ಕು ಅಕೌಂಟಿಗೆ ಎನ್ನಿ) ವರ್ಗಾಯಿಸಿತು. ಇದೆಲ್ಲದರ ಮುಂದೆ ನಾನು ಜಮಾಯಿಸಬೇಕಿದ್ದ ಮೊತ್ತ ತೃಣವೆನ್ನಿಸಿತು. ನನ್ನ ಬಗ್ಗೆಯೇ ಅಳುಕುಂಟಾಯಿತು. ಆಫೀಸರನೆಂಬ ಗರ್ವವನ್ನು ಹೀಗೆ ಕಳೆದುಕೊಂಡೆ.

ಅದಾದ ಮೇಲೆ ನೇರವಾಗಿ ರಜೆ ಹಾಕಿ ಮನೆಗೆ ಬಂದೆ. ಮಡದಿಗೆ ಒಂದು ಕಾಫಿ ಕೊಡು ಎಂದೆ. ನಗದು ಅಪಮೌಲ್ಯದ ನಡುವೆ ನನ್ನ ಬೆಲೆಯೆಷ್ಟು ಎಂಬುದರ ಅರಿವಾಗಿತ್ತು. "ಕಾಫಿ ಪುಡಿ ತರಬೇಕು," ಎಂದಳು. ಸರಿ ನೀರು ಕೊಡು ಎಂದು ಅದನ್ನೇ ಕುಡಿದು ನಿರಾಳ ನಿದ್ರೆ ಮಾಡಿದೆ.