Tuesday, March 20, 2007

Retirement (ನಿವೃತ್ತಿ)

ಮೊನ್ನೆ ನಮ್ಮ ಘನ ಭಾರತ ಸರಕಾರ ಉನ್ನತ ಶಿಕ್ಷಣ ಕ್ಷೇತ್ರದಲ್ಲಿರುವ ತನ್ನ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು ಐದು ವರುಷ ಹೆಚ್ಚಿಸಿತು. Now, government employees in the higher education, especially in the top posts, retire at 65 instead of 60. They can continue to be reemployed till 70 years of age. ಇದು ವರವೇ, ಶಾಪವೇ ಎನ್ನುವ ಬಗ್ಗೆ ಚರ್ಚೆ ಆರಂಭವಾಗಲಿದೆ. ಈ ತೀರ್ಮಾನದಿಂದ ಲಾಭ ಪಡೆಯುವವರು ಖಂಡಿತವಾಗಿಯೂ ಇದು ಒಂದು ಒಳ್ಳೆಯ ತೀರ್ಮಾನ ಎನ್ನುತ್ತಾರೆ. ಇಂತಹ ಉದ್ಯೋಗಗಳಿಗಾಗಿ ಹತ್ತಾರು ಪರೀಕ್ಷೆ, ಸಂದರ್ಶನಗಳನ್ನು ಎದುರಿಸಿ ನಿರಾಶೆಗೊಂಡಿರುವವರು, ಇದು ತಮಗೆ ಶಾಪ ಎಂದು ತೀರ್ಮಾನಿಸುವುದು ಖಂಡಿತ. ಏಕೆಂದರೆ, ಇಂದಿನ ಜಾಗತೀಕರಣದ ಪರಿಸರದಲ್ಲಿಯೂ ಸರ್ಕಾರಿ ಉದ್ಯೋಗವನ್ನೇ ಉದ್ಯೋಗ ಎಂದು ನಂಬಿಕೊಂಡವರು ಕೋಟಿಗಟ್ಟಲೆ ಇದ್ದಾರೆ.

ನಿವೃತ್ತಿ ಎನ್ನುವ ಮಾತು ಕೇಳಿದಾಗ ನಮ್ಮ ಸಂಸ್ಥೆಯಲ್ಲಿ ಪ್ರತಿ ತಿಂಗಳೂ ನಡೆಯುವ ನಿವೃತ್ತರಿಗೆ ಬೀಳ್ಕೊಡುಗೆ ಎನ್ನುವ ಆಚರಣೆಯ ನೆನಪಾಯಿತು. ನಮ್ಮದು ನೂರಾರು ಉದ್ಯೋಗಿಗಳಿರುವ ಸರ್ಕಾರಿ ಸಂಸ್ಥೆ. ಸಂಸ್ಥೆ ಹಳೆಯದಾದಷ್ಟೂ ನಿವೃತ್ತರಾಗುವವರ ಸಂಖ್ಯೆಯೂ ಹೆಚ್ಚು. ಪ್ರತಿ ತಿಂಗಳೂ ಕನಿಷ್ಠ ಐದು ಮಂದಿಯಾದರೂ ನಿವೃತ್ತರಾಗುತ್ತಾರೆ. ತಿಂಗಳ ಕೊನೆಯ ದಿನದಂದು ಇಂತಹವರಿಗೆ ಬೀಳ್ಕೊಡುಗೆ ನೀಡಲಾಗುತ್ತದೆ. ಈ ಸಮಾರಂಭದ ಖರ್ಚಿಗಾಗಿ ಒಂದು ನಿಧಿಯನ್ನೂ ಸ್ಥಾಪಿಸಲಾಗಿದೆ. ಪ್ರತಿಯೊಬ್ಬ ಸಿಬ್ಬಂದಿಯೂ ತಮ್ಮ ತಿಂಗಳ ವೇತನದಿಂದ ಒಂದೈದು ರೂಪಾಯಿಗಳನ್ನು ಈ ನಿಧಿಗೆ ನೀಡುತ್ತಾರೆ.

ಸಮಾರಂಭ ಪ್ರತಿ ತಿಂಗಳ ಕಡೆಯ ದಿನ (working day) ಸಂಜೆ ನಿವೃತ್ತರಾಗಲಿರುವವರು ಹಾಗೂ ಅವರ ಪತಿ ಯಾ ಪತ್ನಿಯವರನ್ನು ವೇದಿಕೆಯಲ್ಲಿ ಕುಳ್ಳಿರಿಸಿ, ಸಂಸ್ಥೆಯ ಮುಖ್ಯಸ್ಥರಿಂದ ಸನ್ಮಾನ ಮಾಡಲಾಗುತ್ತದೆ. ಒಂದು ಹೂ ಗುಚ್ಛ, ಪುಟ್ಟದೊಂದು ಸ್ಮರಣಿಕೆ ಹಾಗೂ ಫಲ, ತಾಂಬೂಲ ನೀಡಿ ಸತ್ಕರಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ನಿವೃತ್ತರ ವಿಭಾಗದ ಮುಖ್ಯಸ್ಥರು ನಿವೃತ್ತರ ಸೇವೆಯ ಬಗ್ಗೆ ಒಂದೆರಡು ಮಾತುಗಳನ್ನೂ ಹೇಳುವುದುಂಟು. ನಿವೃತ್ತರೂ ತಮ್ಮ ಒಂದೆರಡು ಮಾತುಗಳನ್ನು ಹೇಳುವುದುಂಟು. ವಿಶೇಷವೇನೆಂದರೆ ಇದುವರೆಗಿನ ನನ್ನ ಸೇವಾ ಅವಧಿಯಲ್ಲಿ ನಿವೃತ್ತಿಯಾದ ಯಾರೂ ಸಂಸ್ಥೆಯ ಬಗ್ಗೆ ಕೆಟ್ಟ ನುಡಿಗಳನ್ನು ನುಡಿದಿಲ್ಲ. ಸಿಬ್ಬಂದಿ ಹಾಗೂ ಅವರ ಮುಖ್ಯಸ್ಥರು ಹಾಗೂ ಇತರೆ ಸಹೋದ್ಯೋಗಿಗಳ ಜೊತೆಗೆ ಒಳ್ಳೆಯ ಸಂಬಂಧ ಇಲ್ಲದಿದ್ದ ಸಮಯದಲ್ಲಿಯೂ ಸಂಸ್ಥೆಯ ಬಗ್ಗೆ ಕೆಟ್ಟ ನುಡಿ ಬಂದದ್ದು ನಾನು ಕೇಳಿಲ್ಲ. ಸಾರ್ವಜನಿಕ ಸಭೆಯ ಗೌರವವನ್ನು ಕಾಪಾಡಿಕೊಳ್ಳಬೇಕು ಎಂದು ಎಲ್ಲರೂ ಹೀಗೆ ಒಳ್ಳೆಯದನ್ನೇ ನುಡಿದಿರುತ್ತಾರೆ ಎನ್ನುವುದನ್ನು ಒಪ್ಪಲು ಸ್ವಲ್ಪ ಕಷ್ಟವಾಗುತ್ತದೆ. ಏಕೆಂದರೆ ಈ ಸಮಾರಂಭದಲ್ಲಿ ವೇದಿಕೆಯನ್ನು ಹಂಚಿಕೊಳ್ಳುವವರಲ್ಲಿ ವಿವಿಧ ವರ್ಗದ ನೌಕರರಿರುತ್ತಾರೆ. ಎಲ್ಲರಿಗೂ ಸಾರ್ವಜನಿಕ ಸಭೆಯ ಮರ್ಯಾದೆಗಳು ತಿಳಿದಿರುತ್ತದೆ ಎನ್ನುವುದು ಹೇಗೆ? ಹಾಗಿದ್ದರೆ ಸಂಸ್ಥೆಯ ವ್ಯಕ್ತಿತ್ವ, ಅದರೊಳಗಿನ ವ್ಯಕ್ತಿಗಳ ಅಂತರ ಸಂಬಂಧಗಳಿಂದ ಮುಕ್ತವಾದದ್ದೇ? ಸಂಸ್ಥೆಯ ವ್ಯಕ್ತಿತ್ವಕ್ಕೆ, ಪ್ರತಿಷ್ಠೆಗೆ ಸಿಬ್ಬಂದಿಗಳ ನಡುವಣ ಸಂಬಂಧ ಕಾರಣವಾಗಲಿಕ್ಕಿಲ್ಲವೇ? ಇಂದಿನ ಮ್ಯಾನೇಜ್‌ಮೆಂಟ್‌ ನಿಯಮಗಳು ಹೇಳುವಂತೆ ಟೀಮ್‌ ಸ್ಪಿರಿಟ್‌ ಎನ್ನುವುದು ವ್ಯಕ್ತಿಗಳ ನಡುವಣ ಸಂಬಂಧವನ್ನು ಮೀರಿದ ಒಂದು ಸಂಬಂಧವೇ? ಇದು ನನ್ನನ್ನು ಕಾಡಿದ ಪ್ರಶ್ನೆ.

ಪ್ರತಿ ತಿಂಗಳೂ ಈ ಸಮಾರಂಭದಲ್ಲಿ ಭಾಗವಹಿಸುವ ನನಗೆ ಸಮಾರಂಭದಲ್ಲಿ ಮದುವೆಯ ಕಳೆ ನನಗೆ ಎಂದೂ ತೋರಿಲ್ಲ ಎನ್ನುವುದು ವಾಸ್ತವ. ಸಾವಿನ ಮನೆಯಲ್ಲಿ ಮರಣಿಸಿದ ವ್ಯಕ್ತಿಯ ನಡೆ, ನುಡಿಗಳ ಬಗ್ಗೆ ಹೇಗೆ ಗೌರವದಿಂದ ನಡೆದುಕೊಳ್ಳುತ್ತೇವೆಯೋ ಹಾಗೆಯೇ ಇಲ್ಲಿಯೂ ನಾವು ವರ್ತಿಸುತ್ತಿರಬಹುದು ಎನ್ನುವ ಅನುಮಾನ ನನಗಿದೆ. ನಿವೃತ್ತರಾದವರ ಬದುಕು (ಪ್ರೊಫೆಶನಲ್‌ ಬದುಕು) ಇಲ್ಲಿಗೆ ಕೊನೆಯಾಯಿತು ಎನ್ನುವ ರೀತಿಯಲ್ಲಿ ಇದು ಇರುತ್ತದೆ.

ನಮ್ಮ ಸಂಸ್ಥೆಗೇ ವಿಶಿಷ್ಟವಾದ ಆಚರಣೆಯೊಂದು ಸಮಾರಂಭದ ಕೊನೆಗೆ ನಡೆಯುತ್ತದೆ. ಅಂದು ನಿವೃತ್ತರಾದವರು ಮತ್ತು ಅವರ ಕುಟುಂಬದವರನ್ನು ಸಂಸ್ಥೆಯ ವಾಹನದಲ್ಲಿ ಮನೆಗೆ ಕಳಿಸಿಕೊಡಲಾಗುತ್ತದೆ. ಇದು ಒಂದು ಶಿಷ್ಟಾಚಾರ. ಹೀಗಾಗಿ ಇದರಲ್ಲಿ ನನಗೆ ಅಷ್ಟೇನೂ ವಿಶೇಷ ತೋರಿರಲಿಲ್ಲ. ಗುರುಮಲ್ಲಯ್ಯ (ನಿಜ ನಾಮವಲ್ಲ) ಎನ್ನುವವರು ನಿವೃತ್ತಿಯಾಗುವವರೆಗೆ. ಈತ ನಮ್ಮ ಸಂಸ್ಥೆಯ ತೋಟಗಾರಿಕೆ ವಿಭಾಗದಲ್ಲಿದ್ದವ. ಗುರುಮಲ್ಲಯ್ಯ ಎನ್ನುವುದೇ ಈತನ ಹೆಸರು ಎನ್ನುವುದು ನನಗೆ ತಿಳಿದದ್ದೂ ಆತನ ನಿವೃತ್ತಿ ದಿನದಂದೇ ಎನ್ನುವುದು ಒಂದು ಐರನಿ. ಈ ಸಮಾರಂಭದಂತೆಯೇ ಸಂಸ್ಥೆಯಲ್ಲಿ ಜರುಗುವ ಹಲವಾರು ಸಮಾರಂಭಗಳ ಸಂದರ್ಭದಲ್ಲಿ ಸಭಾಲಂಕಾರಕ್ಕಾಗಿ ಈತ ಹೂಗಿಡಗಳನ್ನು ತಂದು ಒಪ್ಪವಿಡುತ್ತಿದ್ದುದನ್ನು ನೋಡಿದ್ದೆ. ಕೆಲವೊಮ್ಮೆ ಇಂತಹ ಗಿಡವೇ ಬೇಕು ಎಂದು ಆದೇಶ ನೀಡಿದ್ದೂ ಉಂಟು. ಆದರೆ ಆತನ ಹೆಸರು ತಿಳಿದುಕೊಳ್ಳುವ ಗೋಜಿಗೆ ಹೋಗಿರಲಿಲ್ಲ. ನಿವೃತ್ತಿಯ ದಿನದಂದು ಆತ ಹೆಚ್ಚು ಮಾತನಾಡಲಿಲ್ಲ. ಹೇಳಿದ್ದೇ ಎರಡು ವಾಕ್ಯ. "ನಾನು ಈ ಸಂಸ್ಥೆಗೆ ಆಭಾರಿ. ಇಂದು ನನ್ನನ್ನು ಮನೆಗೆ ಕಳಿಸಲು ವಾಹನದ ವ್ಯವಸ್ಥೆಯನ್ನೂ ಮಾಡಿರುವವರಿಗೆ ಧನ್ಯವಾದಗಳು.”

ಸರ್ಕಾರಿ ವಾಹನವನ್ನು ಯಾವ್ಯಾವುದೋ ಕೆಲಸಗಳಿಗೆ ಬಳಸಿಕೊಳ್ಳುವವರಿಗೆ ಈ ವಾಕ್ಯದ ಅರ್ಥವಾಗಿರಲಿಕ್ಕಿಲ್ಲ. ಸುಮಾರು ೩೭ ವರುಷ ಸಂಸ್ಥೆಯ ಆವರಣ ಹಸಿರಾಗಿರಲು ಶ್ರಮಿಸಿದ ವ್ಯಕ್ತಿ ಸಂಸ್ಥೆಗೆ ಸಂಬಂಧಿಸಿದ ವಾಹನದಲ್ಲಿ ಸಂಚರಿಸಿದ್ದು ಅದೇ ಪ್ರಥಮ. ಗುರುಮಲ್ಲಯ್ಯನ ಮಾತು ನೇರವಾಗಿ ಎದೆ ತಟ್ಟಿತು. ಸಾವಿನ ಅನಂತರವಷ್ಟೆ ನಾವು ಶವವಾಹನ ಏರುತ್ಥೇವೆ ಅಲ್ಲವೆ? ಪ್ರಥಮ ಹಾಗೂ ಕೊನೆಯ ಬಾರಿಗೆ! (ಎಲ್ಲ ನಿವೃತ್ತರ ಬದುಕೂ ನಿವೃತ್ತಿಯ ಜೊತೆಗೇ ಕೊನೆಗಾಣುವುದಿಲ್ಲ ಎನ್ನುವ ಅರಿವು ಇದೆ. ಆದರೆ ಇಂತಹವರ ಸಂಖ್ಯೆ ಎಷ್ಟು?)

ಇಂದಿನ ಪಿಂಕ್‌ ಸ್ಲಿಪ್‌ ಪ್ರಪಂಚದಲ್ಲಿ ಒಂದೇ ಸಂಸ್ಥೆಯಲ್ಲಿ ಇಷ್ಟು ದೀರ್ಘಾವಧಿಯ ಸೇವೆ ಮಾಡುವುದು inefficiency ಎಂದು ಅನ್ನಿಸಬಹುದು. ಆದರೆ ಅನ್ನ ಕೊಟ್ಟ ಸಂಸ್ಥೆ ಎನ್ನುವ ಅವಿರ್ಭಾವ ಇಷ್ಟು ದೀರ್ಘ ಸೇವೆಯ ಅನಂತರವಷ್ಟೆ ಸಾಧ್ಯ. ಅದರಲ್ಲೂ ಗುರುಮಲ್ಲಯ್ಯನಂತಹವರಿಗೆ. ಬಡ್ತಿ, ಅಧಿಕಾರದ ಬೆನ್ನು ಹತ್ತಿದವರಿಗೆ ಬಹುಶಃ ಹೀಗನ್ನಿಸಲಿಕ್ಕಿಲ್ಲ!

ಕೆಲವರಿಗಂತೂ ನಿವೃತ್ತಿಯ ದಿನವೇ ಅವರ ಬದುಕಿನ ಕೊನೆಯ ದಿನ ಎಂದು ಅನ್ನಿಸುವುದೂ ಸಹಜ. ವೃತ್ತಿಜೀವನ ನಮ್ಮನ್ನು ಅಷ್ಟು ತಾಕುತ್ತದೆ. ನನಗೆ ತಿಳಿದವರೊಬ್ಬರು ತಮ್ಮ ಹಲವಾರು ದೈಹಿಕ ವಿಕಲಾಂಗತೆಯ ನಡುವೆಯೂ ತೃಪ್ತಿಯಿಂದ ಕಛೇರಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ನಿವೃತ್ತಿಯಾದ ಒಂದೇ ತಿಂಗಳು, ಕಾಲ ಅವರನ್ನು ಕರೆದೊಯ್ದಿತು.

No comments: