Sunday, August 27, 2017
ಅಪ್ಪ ಅಪ್ಪನೇ!
Monday, August 14, 2017
ಮನೆಯಲ್ಲಿ ಶೆರ್ಲಾಕ್ ಹೋಮ್ಸ
Friday, August 11, 2017
ಹಕ್ಕಿ ಹಾರಿತು
'ನಿಮ್ಮ ಮನೆಗೆ ಕಳ್ಳರು ಹೊಕ್ಕಿದ್ದಾರೆ.' ಎಂದಳು. ಮನೆಯಲ್ಲಿ ಬೆಲೆ ಬಾಳುವ ವಸ್ತುಗಳು ಇಲ್ಲದಿದ್ದರೂ ತುಸು ಗಾಭರಿ ಆಯಿತು. 'ಪೋಲೀಸ್ ಗೆ ಹೇಳಿದಿರಾ?' ಎಂದೆ. ನಮ್ಮ ಅನುಪಸ್ಥಿತಿಯಲ್ಲಿ ಮನೆ ಕಾವಲಿನ ಜವಾಬುದಾರಿಯನ್ನು ಹೊರಿಸಿದ್ದೆನಲ್ಲ? ಎನ್ನುವ ದೂರು ನನ್ನ ದನಿಯಲ್ಲಿ ಇತ್ತು. ಉತ್ತರವಾಗಿ 'ರೆಕ್ಕೆ-ಪುಕ್ಕದ ಕಳ್ಳರು ಹೊಕ್ಕು ಗೂಡು ಕಟ್ಟಿದ್ದಾರೆ', ಅಂತ ಅಕ್ಕ ಜೋರಾಗಿ ನಕ್ಕಳು.
ನಾನು ನಗಲಿಲ್ಲ. ಹಕ್ಕಿ ಮನೆ ಹೊಕ್ಕು ಗೂಡು ಕಟ್ಟಿದೆ ಎಂದರೆ ಎರಡು ತಿಂಗಳ ದೂಳು, ಕಸದ ಜೊತೆಗೆ ರೆಕ್ಕೆ, ಹಿಕ್ಕೆಗಳನ್ನೂ ಸಾರಿಸುವ ಕೆಲಸ ಬಿತ್ತು ಅಂತ ಗೊಣಗಿಕೊಂಡೆ. ಬೀಗ ಹಾಕುವ ಮುನ್ನ ಎಲ್ಲ ಕಿಟಕಿ, ಬಾಗಿಲುಗಳನ್ನೂ ಸರಿಯಾಗಿ ಹಾಕಿದ್ದೆನೋ, ಇಲ್ಲವೋ ಅಂತ ಮಡದಿ ನಾಲ್ಕು ಬಾರಿ ಪರಿಶೀಲಿಸಿದ್ದಳಲ್ಲ? ಇನ್ನೆಲ್ಲಿಂದ ಹಕ್ಕಿ ಹೊಕ್ಕಿತೋ?
ಮನೆಗೆ ಬಂದು ಬೀಗ ತೆಗೆದವನಿಗೆ ಅಚ್ಚರಿ ಕಾದಿತ್ತು. ಮನೆಯಲ್ಲಿ ದೂಳು, ಕಸ ಇತ್ತು, ಆದರೆ ರೆಕ್ಕೆ, ಹಿಕ್ಕೆ ಇರಲಿಲ್ಲ. ಹಕ್ಕಿಗಳು ಹಾರಿ ಹೋಗಿರಬೇಕು ಎಂದುಕೊಂಡು ಮಲಗುವ ಕೋಣೆಯತ್ತ ನಡೆದೆ. ಬಾಗಿಲ ಕಡೆಗೆ ಸಾಗಿದೆನಷ್ಟೇ, ರಿಮೋಟ್ ಅಲಾರಂ ಹೊಡೆದ ಹಾಗೆ ಕೀಚ್, ಕೀಚ್ ಎಂದು ತಲೆ ಚಿಟ್ಟಾಗುವಷ್ಟು ಸದ್ದು ಮಾಡುತ್ತಾ ಎರಡು ಹಕ್ಕಿಗಳು ನನ್ನ ಸುತ್ತಲೂ ಹಾರಾಡಲು ಆರಂಭಿಸಿದವು. ಈ ರೆಕ್ಕೆ-ಪುಕ್ಕದ ಜೋಡಿಯೇ ಅಕ್ಕ ಹೇಳಿದ ಕಳ್ಳರು ಅಂತ ಅರ್ಥವಾಯಿತು.
ಮಲಗುವ ಕೋಣೆಯ ಬಾಗಿಲ ಮುಂಗಟ್ಟಿನ ಮೇಲೆ ಪುಟ್ಟ ಗೂಡು ಕಟ್ಟಿದ್ದುವು. ಮನೆಯ ಎದುರಿನ ವಿದ್ಯುತ್ ತಂತಿಯ ಮೇಲೆ ನಿತ್ಯವೂ ಈ ಹಕ್ಕಿಗಳು ಬಂದು ಕೂರುವುದನ್ನು ಕಂಡಿದ್ದೆ. ವ್ಯರ್ಥವಾಗಿ ಮನೆ ಖಾಲಿ ಇಡುವ ಮನುಷ್ಯರ ಸ್ವಾರ್ಥ ಅವಕ್ಕೆ ಅರ್ಥವಾಗಲಿಲ್ಲವೋ ಏನೋ? ಗವಾಕ್ಷಿಯಿಂದ ಬಂದು ಖಾಲಿ ಇದ್ದ ಮನೆ ತುಂಬಿದ್ದುವು. ಏಷ್ಟು ದಿನಗಳ ಹಿಂದೆ 'ಗೃಹ ಪ್ರವೇಶ' ನಡೆದಿತ್ತೋ ಗೊತ್ತಿಲ್ಲ. ಆದರೆ ಎಲ್ಲಿಯೂ ಒಂದಿಷ್ಟೂ ಹಿಕ್ಕೆ ಇರಲಿಲ್ಲ. ಬಾಡಿಗೆದಾರರಿಗಿಂತ ಪ್ರಜ್ಞಾವಂತ ಪಕ್ಷಿಗಳು, ಮನೆಯನ್ನು ಗಲೀಜು ಮಾಡಿರಲಿಲ್ಲ. ಗೂಡು ಕಟ್ಟಿ ಬಹಳ ದಿನಗಳಾಗಿರಲಿಲ್ಲ. ಕಿತ್ತು ಬಿಸಾಡಿದರೆ, ಬೇರೆಲ್ಲಿಯಾದರೂ ಹೋಗಿ ನೆಲೆಯಾದಾವು ಎಂದು ಗೂಡಿಗೆ ಕೈ ಹಾಕುವವನಿದ್ದೆ. ಅಷ್ಟರಲ್ಲಿ ಗೂಡಿನೊಳಗಿಂದ ಪುಟ್ಟ, ಗುಲಾಬಿ ಬಣ್ಣದ ಕೊಕ್ಕು ಕಾಣಿಸಿತು. ಮೊಟ್ಟೆ ಮರಿಯಾಗಿತ್ತು. ಗೂಡನ್ನು ಹಾಗೇ ಬಿಟ್ಟೆ. ಗೂಡಿನೊಳಗಿನ ಚಟುವಟಿಕೆಯನ್ನು ನೋಡುವುದು ನಿತ್ಯಕರ್ಮಗಳಲ್ಲಿ ಸೇರಿಕೊಂಡಿತು.
ಕೋಣೆಯ ಸಮೀಪ ಬಂದ ಕೂಡಲೇ ಮರಿಗೆ ಕಾವು ಕೊಡುತ್ತಿದ್ದ ಹಕ್ಕಿ ಸೂರು ಬಿದ್ದ ಹಾಗೆ ಬೆದರಿ ಗಲಾಟೆ ಮಾಡುತ್ತಿತ್ತು. ಅದರ ರಂಪಾಟ ನೋಡಲಾರದೆ ಆದಷ್ಟೂ ಆ ಜಾಗೆಯಿಂದ ದೂರ ಇರುವುದನ್ನ ಕಲಿತುಕೊಂಡೆವು. ರಾತಿ ಮಲಗಲು ಅಷ್ಟೇ ಕೋಣೆಗೆ ಪ್ರವೇಶ ಎನ್ನುವುದು ತೀರ್ಮಾನವಾಯಿತು. ಅದು ಯಾವ ಪಕ್ಷಿ ಅಂತಲೂ ಗೊತ್ತಿಲ್ಲ, ಕಾವು ಕೊಡುತ್ತಿದ್ದದ್ದು ಗಂಡೋ, ಹೆಣ್ಣೋ ತಿಳಿಯಲಿಲ್ಲ. ಅಂತೂ ಒಂದು ದಿನ ಹಕ್ಕಿಗಳ ಸದ್ದು ಕಡಿಮೆ ಆದಂತೆ ಕಂಡಿತು. ನೋಡಿದರೆ, ಪುಟ್ಟ ಮರಿಗಳು ಗೂಡಿಂದ ಹಾರಿ, ಕಿಟಕಿಗೆ ಮತ್ತೆ ಅಲ್ಲಿಂದ ಮರಳಿ ಗೂಡಿಗೆ ಹಾರುತ್ತಿದ್ದವು. ದೂರದಲ್ಲಿ ತಾಯಿ ಕುಳಿತು ಕಾಯುತ್ತಿತ್ತು. ನಾವು ಯಾರಾದರೂ ಬಳಿ ಸಾರಿದರೆ ಕೂಡಲೇ ಕಿರುಚಾಡಿ ಮಕ್ಕಳನ್ನು ಎಚ್ಚರಿಸುತ್ತಿತ್ತು.
ಪಕ್ಷಿ, ಪ್ರಾಣಿಗಳಲ್ಲಿ ಮಾನವ ಭಾವನೆಗಳನ್ನು ಕಾಣುವ ನಮ್ಮ ಪ್ರವೃತ್ತಿ ಸಹಜವಾದುದೇ. ಹೀಗಾಗಿ ಇದು ಇನ್ನು ಮುಂದೇನು ಮಾಡುತ್ತದೆ ಎಂದು ವೀಕ್ಷಿಸುವುದು ನಮ್ಮ ನಿತ್ಯ ಕರ್ಮ ವಾಯಿತು.
ಒಂದು ದಿನ ಬೆಳಗ್ಗೆ ಸೂರ್ಯೋದಯವಾದರೂ ಚಿಲಿಪಿಲಿ ಸದ್ದಿಲ್ಲ. ಬಂದು ನೋಡಿದರೆ ತಾಯಿಯೂ ಇಲ್ಲ, ಮಕ್ಕಳೂ ಇಲ್ಲ. ಮರುದಿನವೂ ಸುದ್ದಿ ಇಲ್ಲ. ದಿನವೂ ನಾವು ಕಾದದ್ದೇ ಬಂತು. ನಮ್ಮ ಮನೆಯ 'ಕಳ್ಳ ಬಾಡಿಗೆದಾರರು' ಮರಳಲೇ ಇಲ್ಲ.
ಇದಾಗಿ ಸುಮಾರು ಆರು ತಿಂಗಳು ಕಳೆದಿರಬಹುದು. ಪೋಸ್ಟ್ ಬಂದಿದೆಯಾ ಎಂದು ಅಂಚೆ ಪೆಟ್ಟಿಗೆ ತೆಗೆದರೆ, ಅಲ್ಲೊಂದು ಗೂಡು. ನಾಲ್ಕು ಮೊಟ್ಟೆಗಳು. ಅಂದಿನಿಂದ ಪೋಸ್ಟ್ ಮನ್ ಬರುವ ಹಾದಿ ಕಾಯುವುದು ಇನ್ನೊಂದು ಕೆಲಸ ಆಯಿತು. ನಾವು ತರಿಸುವ ದಪ್ಪ ಪುಸ್ತಕಗಳನ್ನ ಅಂಚೆಯವ ಜೋರಾಗಿ ಡಬ್ಬದೊಳಗೆ ತುರುಕಿದರೆ? ಮೊಟ್ಟೆಗಳಿಗೆ ಏಟು ಬಿದ್ದರೆ?
ಈಗ ನಮ್ಮ ಮನೆಯ ಪೋಸ್ಟ್ ಬಾಕ್ಸ್ ಖಾಯಂ ಹಕ್ಕಿ ಮನೆ. ಒಂದು ಹಾರಿ ಹೋಗಿ ಕೆಲವು ದಿನ ಕಳೆಯುವುದರೊಳಗೆ ಇನ್ನೊಂದು ಬಂದು ಮೊಟ್ಟೆ ಇಡುತ್ತದೆ. ಅವು ಒಂದೇ ವಂಶಜರೋ? ಬೇರೆ ಬೇರೆ ಕುಟುಂಬದವೋ? ಗೊತ್ತಿಲ್ಲ. ಒಟ್ಟಾರೆ ನಮ್ಮ ನೆರೆಯವರಿಗಿಂತಲೂ ಆತ್ಮೀಯವಾಗಿ ಇವೆ ಅನ್ನುವುದಷ್ಟೆ ನಮಗೆ ಗೊತ್ತು. ಅಂಚೆಯವನೂ ಈಗೀಗ ಹೊಸ್ತಿಲಿಗೆ ಪುಸ್ತಕ ಬಿಸಾಡಿ ಹೋಗುತ್ತಾನೆ. ನಮ್ಮ ಬಾಡಿಗೆದಾರರ ಭಯ ಇರಬೇಕು.
Saturday, June 17, 2017
ಅವನ ಹೆಸರು ಅದೇ ಇರಬೇಕು. ನೆನಪಾಗುತ್ತಿಲ್ಲ. ನೆನಪಿನಲ್ಲಿ ಉಳಿದಿರುವುದು ಕೆಂಪು ಅಥವಾ ನೀಲಿ ಮಫ್ಲರ್ ಸುತ್ತಿದ ಮುಖ, ಕುಂಟ ನಡೆ, 'ತ' ವೆಲ್ಲ ದವನ್ನಾಗಿಸಿದ ತೊದಲು ನುಡಿ. ನಾವೆಲ್ಲ ಅವನನ್ನು ಮ್ಯಾಗಜೀನ್ ಮ್ಯಾನ್ ಎನ್ನುತ್ತಿದ್ದೆವು.
ಎಲ್ಲ ಪತ್ರಿಕೆಗಳನ್ನೂ ಓದುವ ಹಂಬಲ, ಅವನ್ನು ಕೊಳ್ಳಲಾಗದ ಹತಾಶೆಯೇ ಜೇಬು ತುಂಬಿರುತ್ತಿದ್ದ ಕಾಲ ಅದು. ಕಛೇರಿಯಲ್ಲಿ ನಾವು ಕೆಲವರು ಒಟ್ಟಾಗಿ ಮ್ಯಾಗಜೀನ್ ಕ್ಲಬ್ ನಡೆಸುತ್ತಿದ್ದೆವು. ಎಲ್ಲರ ಚಂದಾವೂ ಒಟ್ಟಾಗಿ ಹತ್ತಾರು ದುಬಾರಿ ಬೆಲೆಯ ಪತ್ರಿಕೆಗಳನ್ನು ಕೊಳ್ಳುತ್ತಿದ್ದೆವು. ದಿನಕ್ಕೆ ಎರಡು ಮ್ಯಾಗಜೀನ್ ಕೊಂಡೊಯ್ದು ಓದಿ ವಾಪಸು ತರಬೇಕೆನ್ನುವುದು ನಿಯಮ. ನಾಲ್ಕು ಕಾಫಿಗೆ ಕೊಡುವ ಕಾಸಿನಲ್ಲಿ ಇಷ್ಟೊಂದು ಓದು ಸಿಗುವದು ಎಲ್ಲರಿಗೂ ಬೇಕಿತ್ತು. ಕೆಲಸಕ್ಕೆ ಆಗ ತಾನೇ ಸೇರಿದ್ದ ನಾನು ಕ್ಲಬ್ಬಿನ ಕಿರಿಯ ಸದಸ್ಯ.
ಕ್ಲಬ್ಬುನ ನಿರ್ವಾಹಕ ಸಾಯಿಬ್ ಸಿಂಗ್.
ಬಹುಶಃ ಅಷ್ಟಾವಕ್ರನ ರೂಪವನ್ನು ಸಾಯಿಬ್ ಸಿಂಗನನ್ನೇ ನೋಡಿ ವರ್ಣಿಸಿದ್ದಿರಬೇಕು. ಅಚ್ಚಗಪ್ಪು ಬಣ್ಣ, ಜೋಲು ತುಟಿಗಳು, ಅಡ್ಡಾದಿಡ್ಡಿ ಬೆಳೆದ ಹಲ್ಲುಗಳು, ಅಸ್ಪಷ್ಟ ಮಾತುಗಳು, ನಕ್ಕರೂ ಕ್ರೂರವಾಗಿ ಕಾಣುತ್ತಿದ್ದ ಚಹರೆ. ಜಾಠರ ಕುಲದವನಾಗಿದ್ದರೂ ಬಲು ಕುಳ್ಳು. ಕುಂಟು ನಡೆ ಬೇರೆ. ಮಕ್ಕಳನ್ನು ಬೆದರಿಸಿಡಲು ಅವನನ್ನು ತೋರಿಸಿದರೆ ಸಾಕಿತ್ತು.
ನಮ್ಮಲ್ಲಿ ಕೆಲವರು ಅವನನ್ನು ಡೈನೋಸಾರು ಎಂದೂ ಎನ್ನುತ್ತಿದ್ದೆವು. ಏಕೆಂದರೆ ನಾನೂರು ಜನರಿದ್ದ ಸಂಸ್ಥೆ ಯಲ್ಲಿ ಅತಿ ವಯಸ್ಸಾದವನೆಂದರೆ ಅವನೇ! ಅವನ ವಯಸ್ಸೆಷ್ಟು ಅಂತ ಸ್ವತಃ ಅವನಿಗೇ ತಿಳಿದಿರಲಿಲ್ಲ. ಸಂಸ್ಥೆಯಲ್ಲು ದಾಖಲೆಗಳಿರಲಿಲ್ಲ. ಸಂಸ್ಥೆ ಸ್ಥಾಪನೆಯಾದ ಅಲ್ಪ ಕಾಲದಲ್ಲೇ ಯಾರೋ ಕರುಣೆಯಿಂದ ಕೆಲಸ ನೀಡಿದ್ದರು. ಸೇರಿದ ಉದ್ಯೋಗದಲ್ಲೇ ಮೇಲೂ ಏರದೆ, ಕೆಳಗೂ ಇಳಿಯದೆ ಇದ್ದ.
ಸ್ವತಃ ಎರಡಕ್ಷರ ಓದಲು ಬಾರದ ಈ ಜೀವ ನಮ್ಮೆಲ್ಲರಿಗೂ ಓದಲು ಸಾಮಗ್ರಿಯನ್ನು ಬಡಿಸುತ್ತಿತ್ತೆಂದರೆ ಎಂತಹ ವಿಪರ್ಯಾಸ. ವಯಸ್ಸಾಗಿದ್ದರಿಂದಲೂ, ಓದು-ಬರೆಹ ಬಾರದ್ದರಿಂದಲೂ ಅವನಿಗೆ ತಿಂಡಿ ತಿನಿಸು ತರುವ, ಮ್ಯಾಗಜೀನ್ ಕ್ಲಬ್ಬಿನ ಪುಸ್ತಕಗಳನ್ನು ಹಂಚುವ ಕೆಲಸವಷ್ಟೆ ಹಚ್ಚಿದ್ದರು. ಕಾರ್ಪೊರೇಟು ಜಗತ್ತಿನಲ್ಲಿ ಇಂತಹ ವಿಚಿತ್ರಗಳು ಸಿಗಲಿಕ್ಕಿಲ್ಲ.
ಈ ಡೈನೊಸಾರು ಜೀವಿ ತನಗೊಪ್ಪಿಸಿದ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿದ್ದ ನೀಯತ್ತು ಕಂಡರೆ ಅಚ್ಚರಿಯಾಗುತ್ತಿತ್ತು. ಒಬ್ಬರಿಗೆ ಒಮ್ಮೆಗೆ ಎರಡೇ ಮ್ಯಾಗಜೀನು. ಜಪ್ಪಯ್ಯ ಎಂದರೂ ಇನ್ನೊಂದು ಹೆಚ್ಚಿಗೆ ಕೊಡುತ್ತಿರಲಿಲ್ಲ. ಎರಡು ದಿನ ಕಳೆದ ಕೂಡಲೆ ತಪ್ಪದೆ ಹಾಜರು. 'ಸಾಬ್ ಕಿತಾಬ್' ಎನ್ನುತ್ತಿದ್ದ. ಅಯ್ಯೋ ತರಲು ಮರೆತೆ ಎಂದರೆ ತಲೆ ಕೊಡವಿ ಹೊರಟು ಬಿಡುತ್ತಿದ್ದ. ಮರು ದಿನ ಮತ್ತೆ ಹಾಜರು. ತಂದು ಕೊಡುವವರೆಗೂ ಮತ್ತೊಂದು ಪತ್ರಿಕೆ ಕೊಡುತ್ತಿರಲಿಲ್ಲ. ಮುಂಜಾನೆ ಬಂದು ಎದುರು ನಿಲ್ಲುವುದನ್ನು ತಪ್ಪಿಸುತ್ತಿರಲಿಲ್ಲ.
ಯಾರ್ಯಾರಿಗೆ ಯಾವ್ಯಾವ ಮ್ಯಾಗಜೀನು ಇಷ್ಟ ಎನ್ನುವುದರ ಡಾಟಾದಲ್ಕು ಮಾತ್ರ ಪಕ್ಕ. ಮ್ಯಾಗಜೀನು ಹಿಂದಿರುಗಿಲ್ಲವಾದರೆ ಆ ಮೆಚ್ಚಿನ ಪತ್ರಿಕೆಯ ಹೊಸ ಸಂಚಿಕೆ ತಂದು ತೋರಿಸಿ ಪುಸಲಾಯಿಸುತ್ತಿದ್ದ. ಅತಿ ಕಿರಿಯವನು ಅಂತಲೋ, ಡೆಬೊನೇರ್, ಕಾಸ್ಮೊಪಾಲಿಟನ್ ನಂತಹ ಬೇಡಿಕೆ ಹೆಚ್ಚಿದ್ದ ಪತ್ರಿಕೆಗಳ ಬದಲಿಗೆ ಮಿರರ್, ಕ್ಯಾರಾವಾನ್, ಔಟ್ಲುಕ್ ಗಳನ್ನು ಓದುತ್ತಿದ್ದುದಕ್ಕೋ, ಅತಿ ಕಿರಿಯವನು ಎನ್ನುವ ಪ್ರೀತಿಗೋ ನನಗಿಷ್ಟವಾದ ಪತ್ರಿಕೆ ಬಂದ ಕೂಡಲೆ ಸೂಚನೆ ಕೊಟ್ಟು ಹೋಗುತ್ತಿದ್ದ. ಮೊದಲು ಓದಲು ನನಗೇ ಸಿಗುವಂತೆ ನೋಡಿಕೊಳ್ಳುತ್ತಿದ್ದ.
ಅವನ ಮಕ್ಕಳು ಬೆಳೆದು ಮೊಮ್ಮಕ್ಕಳೂ ಆಗಿದ್ದರೂ ಇವನ ಕಾಯಕಕ್ಕೆ ಕೊನೆ ಬಂದಿರಲಿಲ್ಲ. ಮನೆ ರಾಜಕೀಯದಲ್ಲಿ ಒಬ್ಬಂಟಿಯಾಗಿದ್ದ ಕಛೇರಿಯಲ್ಲಿಯೂ ಅವನ ಹುಟ್ಟಿದ ದಿನದ ದಾಖಲೆಗಳು ಇಲ್ಲದ ಕಾರಣ ನಿವೃತ್ತಿ ಮಾಡುವುದು ಹೇಗೆಂದು ಜಿಜ್ಞಾಸೆ ನಡೆದಿತ್ತು. ಏಳು ವರ್ಷ ನಮ್ಮ ಒಡನಾಟ. ಕೊನೆಗೆ ನಾನು ಕರ್ನಾಟಕಕ್ಕೆ ಮರಳುವ ದಿನಗಳು ಸನಿಹವಾದಾಗ "ಅಬ್ ಯೇ ಕೌನ್ ಪಡೇಗಾ ಸಾಬ್" ಎಂದು ನಿರಾಸೆಯಲ್ಲಿ ತೊದಲಿದ್ದ. ಅವನ ಹೊಣೆಯನ್ನು ಪೂರ್ಣವಾಗಿ ನಿರ್ವಹಿಸಲಾಗದ್ದರಿಂದಲೋ, ನನ್ನ ಮೇಲಿನ ಪ್ರೀತಿಯಿಂದಲೋ ಗೊತ್ತಿಲ್ಲ.
ಅಷ್ಟು ದೀರ್ಘ ಕಾಲದಲ್ಲಿ ನಮ್ಮ ನಡುವೆ ನಡೆದ ಸಂಭಾಷಣೆ ಬಹುಶಃ ಈ ಪೋಸ್ಟಿಗಿಂತಲೂ ಪುಟ್ಟದಾದೀತು. ಆದರೆ ಈ ಪ್ಲಾಸ್ಟಿಕ್ ಕವರಿನ ಹಾಗೆಯೇ ಸ್ವತಃ ಅನಕ್ಷರಸ್ಥ ನಾದರೂಬ ಅವರವರಿಗಿಷ್ಟವಾದ ಜ್ಞಾನವನ್ನು ಕೊಂಡೊಯ್ಯುತ್ತಿದ್ದ ಸಾಯಿಬ್ ಸಿಂಗ್.
ನಾನು ಬಂದ ಹತ್ತು ವರ್ಷಗಳ ನಂತರ ಅವನಿಗೆ ಕೊನೆಗೂ ನಲವತ್ತೊಂಬತ್ತು ವರ್ಷಗಳ ಸೇವೆಯಾಯಿತಾದ್ದರಿಂದ ವಯಸ್ಸಾಯಿತೆಂದು ಲೆಕ್ಕ ಹಾಕಿ ನಿವೃತ್ತಿ ಮಾಡಿದರಂತೆ!
Monday, November 28, 2016
ಅರೆ ಘಂಟೆಯ ಕುರುಡು
ದಾರಿಯಲ್ಲಿ ಯಾರಾದರೂ ದೃಷ್ಟಿಹೀನರು ಬಂದರೆ ಬಹುಶಃ ಹಾಗೇ ಕನಿಕರದಿಂದ ನೋಡಿ ದಾರಿ ಬಿಟ್ಟು ನಿಲ್ಲುತ್ತಿದ್ದೆ. ಜಗತ್ತನ್ನು ಕಾಣಲಾಗದವರ ಸಹವಾಸ ನನಗೆ ಇಲ್ಲವೆಂದೇನಲ್ಲ. ನನಗೆ ಸಂಗೀತ ಹೇಳಿಕೊಡಲು ಪ್ರಯತ್ನಿಸಿದ ಮಾಸ್ಟರಿಗೆ ಕಣ್ಣು ಕಾಣುತ್ತಿರಲಿಲ್ಲ. ಪಂಚಾಕ್ಷರಿ ಗವಾಯಿಗಳ ಹಾಗೆ ಕಂಠ ಮಾತ್ರ ಮಧುರವಾಗಿತ್ತು. ಹಾಡುವುದಿರಲಿ, ಪಿಟೀಲನ್ನು ಲೀಲಾಜಾಲವಾಗಿ ಶ್ರುತಿ ಹಿಡಿದು ಅವರು ನುಡಿಸುವಾಗ ನಾನು ಕಣ್ಣು, ಬಾಯಿ ಬಿಟ್ಟು ಕೂರುತ್ತಿದ್ದೆ. ಏಕೆಂದರೆ ಕಣ್ಣು ಇದ್ದರೂ ನನಗೆ ಅವರಂತೆ ಕೀ ಬೋರ್ಡಿನಲ್ಲಿ ಸಂಗೀತ ನುಡಿಸಲಾಗುತ್ತಿರಲಿಲ್ಲ. ಕೀ ಗಳನ್ನು ಹುಡುಕಿ, ಹುಡುಕಿ ಒತ್ತುತ್ತಿದ್ದೆ.
ಮೊನ್ನೆ ಕಣ್ಣು ಪರೀಕ್ಷೆಗೆಂದು ಆಸ್ಪತ್ರೆಗೆ ಹೋದಾಗಲೇ ಅದೆಂತಹ ಅದ್ಭುತ ಅನ್ನುವುದು ಗೊತ್ತಾಗಿದ್ದು. ರಾತ್ರಿ ಪ್ರಖರವಾದ ಬೆಳಕಿಗೆದುರಾದಾಗ ಕಣ್ಣು ಸ್ವಲ್ಪ ಹೆಚ್ಚು ಕಾಲವೇ ಕತ್ತಲೆಗಟ್ಟಿಕೊಳ್ಳುತ್ತಿತ್ತು. ವಯೋಸಹಜವಾಗಿ ಪೊರೆ ಕಟ್ಟುತ್ತಿರಬಹುದು ಅಂತ ಪರೀಕ್ಷೆಗೆ ಹೋದೆ. ಅ, ಆ, ಇ. ಈ ಓದಿಸಿದ ಮೇಲೆ ಕಣ್ಣಿಗೆ ಏನೋ ದ್ರವ ಹಾಕಿ ಕಣ್ಣು ಮುಚ್ಚಿಕೊಂಡಿರಿ ಅಂದಳು ನರ್ಸಮ್ಮ. ಎಷ್ಟು ಹೊತ್ತು ಎಂದೆ. ನಲವತ್ತೈದು ನಿಮಿಷವಾದರೂ ಬೇಕಾಗುತ್ತದೆ ಎಂದಳು.
ಕಾಯುವ ಕೆಲಸವೇ ಬೇಜಾರು. ಮದುವೆಯಲ್ಲೋ, ದೇವಸ್ಥಾನದಲ್ಲೋ, ಬಿಲ್ಲು ಕಟ್ಟುವ ಕ್ಯೂನಲ್ಲೋ (ಈಗೀಗ ಎಟಿಎಂ ಮುಂದೆಯೂ) ಕಾಯಬೇಕಾದ ಸಂದರ್ಭ ಬಂದಾಗ ಸ್ಮಾರ್ಟ್ ಫೋನ್ ಹಿಡಿದು ಗೆಳೆಯರ ಜೊತೆ ಚಾಟಿಸುತ್ತೇನೆ. ಅಥವಾ ಅದರಲ್ಲಿರುವ ಯಾವುದಾದರೂ ಪುಸಗತಕ ಓದುತ್ತಿರುತ್ತೇನೆ. ಇದೆಲ್ಲ ತೋರಿಕೆ ಅಂತಾಳೆ ನನ್ನವಳು. ಆದರೂ ಸ್ಮಾರ್ಟ್ ಫೋನ್ ಇದ್ದರೆ ಟೈಂ ಪಾಸ್ ಸುಲಭ ಅಂತ ನನ್ನ ಅನಿಸಿಕೆ.
ಇದು ಸಾರ್ವಕಾಲಿಕ ಸತ್ಯವಲ್ಲ ಅಂತ ಕಣ್ಣಾಸ್ಪತ್ರೆಯ ಅನುಭವ ಕಣ್ತೆರೆಸಿತು. ಕಣ್ಣಿಗೆ ಹಾಕಿದ ದ್ರವ ಮೂಗಿನಿಂದ ಗಂಟಲಿಗೆ ಇಳಿದು ಕಿರಿಕಿರಿಯಾದಾಗ ಸುಮ್ಮನಿರಲಾಗಲಿಲ್ಲ. ಕಣ್ಣು ಮುಚ್ಚಿದ ಮಾತ್ರಕ್ಕೆ ನಿದ್ರೆ ಬಂತೆಂದೇನಾಗುವುದಿಲ್ಲವಷ್ಟೆ. ಚಡಪಡಿಸಿದೆ. ಹಾಗೇ ಚಾಟಿಸಲು ಪ್ರಯತ್ನಿಸಿದೆ. ಸ್ಮಾರ್ಟ್ ಫೋನ್ ಬದಲಿಗೆ ಹಳೆಯ ಕೀ ಫೋನು ಇದ್ದಿದ್ದರೆ ಯಾವ ಕೀ ಎಲ್ಲಿದೆ ಎಂದು ತಡಕಾಡಬಹುದಿತ್ತು. ಲಲನೆಯ ಕೆನ್ನೆಯಂತೆ ನಯವಾದ ಸ್ಮಾರ್ಟ್ ಫೋನಿನಲ್ಲಿ ಯಾವ ಅಕ್ಷರ ಎಲ್ಲಿದೆ ಎಂದು ತಿಳಿಯುವುದೂ ಕಷ್ಟ.
ಕೀ ಒತ್ತಿದಾಗ ಶಬ್ದ ಮಾಡುತ್ತದೆ ನಿಜ. ಆದರೆ ಎಲ್ಲ ಕೀಗಳ ಶಬ್ದವೂ ನನ್ನ ಸಂಗೀತದಂತೆಯೇ ಒಂದೇ ಶ್ರುತಿ. ಸದ್ದು. ಹೇಗೆ ಉಪಯೋಗಕ್ಕೆ ಬಂದೀತು? ಆಗಲೇ ನನಗೆ ನಮ್ಮ ಮೇಸ್ಟರ ಅದ್ಭುತ ಸಿದ್ಧಿಯ ಅರಿವಾಗಿದ್ದು. ಕೀ ಬೋರ್ಡಿನಲ್ಲಿ ಕೀಗಳಿರುವ ಸ್ಥಾನವನ್ನು ನೆನಪಿಟ್ಟುಕೊಂಡು ಶ್ರುತಿ ತಪ್ಪದಂತೆ ನುಡಿಸುವುದು ಸುಲಭವಲ್ಲ.
ಅರ್ಧ ಗಂಟೆ ಕತ್ತಲಲ್ಲಿ ಬದುಕುವುದೇ ಅಸಹನೀಯವೆನ್ನಿಸಿದಾಗ ಕತ್ತಲೇ ಬದುಕಾದವರ ಕಥೆ ಹೇಗಿದ್ದಿರಬೇಕು? ಕಣ್ಣು ಮುಚ್ಚಿಕೊಂಡು ಹೀಗೆಲ್ಲ ತಲೆ ಕೆಡಿಸಿಕೊಳ್ಳುವಾಗ ಮೇಸ್ಟರು ಒಮ್ಮೆ ಮಾಡಿದ್ದ ವಿನಂತಿ ನೆನಪಿಗೆ ಬಂತು. ಅವರ ಮನೆಯಲ್ಲಿ ಒಂದು ವರ್ಲ್ಡ್ ಸ್ಪೇಸ್ (ರೇಡಿಯೊ) ಇತ್ತು. ಉಪಗ್ರಹಗಳ ಮೂಲಕ ಸಂಗೀತ ಪ್ರಸಾರ ಮಾಡುವ ಚಾನೆಲ್ಗಳನ್ನು ಈ ರೇಡಿಯೋ ಮೂಲಕ ಕೇಳಬಹುದಿತ್ತು. ದಿನದ ಇಪ್ಪತ್ತನಾಲ್ಕು ಗಂಟೆಯೂ ಅದು ಲಭ್ಯವಿತ್ತು.
ಮೇಸ್ಟರಿಗೆ ಬಲು ಅನುಕೂಲವಾಗಿತ್ತು. ರಿಮೋಟಿನ ಎರಡು ಬಟನುಗಳನ್ನು ಬಳಸಿದರೆ ರೇಡಿಯೋ ಕೇಳಬಹುದಿತ್ತು. ಬೇಕೆಂದ ಚಾನೆಲ್ ಹುಡುಕಬಹುದಿತ್ತು. ಆದರೆ ಅದು ತುಸು ದುಬಾರಿಯಾಗಿತ್ತು ಅನ್ನುವುದೂ ನಿಜ. ತಿಂಗಳ ಚಂದಾ ಜೊತೆಗೆ ಉಪಗ್ರಹ ಸಂಪರ್ಕಕ್ಕೆ ದುಬಾರಿ ಆಂಟೆನಾ ಬೇಕಿತ್ತು.
ಮೇಸ್ಟರು ಅದನ್ನು ಕೊಂಡು ಏಳೆಂಟು ತಿಂಗಳಾಗಿರಬಹುದು. ತಂತ್ರಜ್ಞಾನ ಬದಲಾಯಿತು. ಎಫ್ ಎಮ್ ರೇಡಿಯೋ ನಿಲಯಗಳು ಊರಿಗೆ ಹತ್ತರಂತೆ ತಲೆಯೆತ್ತಿದುವು. ಅದಕ್ಕೆ ತಕ್ಕಂತೆ ಪುಟ್ಟ, ಅಗ್ಗದ ರೇಡಿಯೊ ಬಂತು. ಇಂಟರ್ನೆಟ್ ಎಲ್ಲೆಡೆ ತನ್ನ ಜಾಲ ಹರಡಿತು. ವರ್ಲ್ಡ್ ಸ್ಪೇಸ್ ಗೆ ಚಂದಾ ಕೊಡುವವರು ಕಡಿಮೆಯಾದರು. ಕಂಪೆನಿ ಮುಚ್ಚಿತು.
ತೊಂದರೆಯಾಗಿದ್ದು ಮೇಸ್ಟರಿಗೆ. ಎಫ್ ಎಮ್ ನಲ್ಲಿ ಅವರಿಗೆ ಹಿತವಾಗಿದ್ದ ಕರ್ನಾಟಕ ಸಂಗೀತ ಆಗೊಮ್ಮೆ ಈಗೊಮ್ಮೆ ಪ್ರಸಾರವಾಗುತ್ತಿತ್ತೇ ಹೊರತು ವರ್ಲ್ಡ ಸ್ಪೇಸ್ ನಲ್ಲಿ ಆಗುತ್ತಿದ್ದಂತೆ ದಿನಪೂರ್ತಿಯಲ್ಲ. ಟೀವಿ ಅವರಿಗೆ ಒಗ್ಗದ ಮನರಂಜನೆ. ಹೀಗಾಗಿ ನಿಮಗೆ ಗೊತ್ತಿರುವವರು ಯಾರಾದರೂ ಇದ್ದರೆ ಅವರಿಗೆ ಹೇಳಿ ಆ ಕಂಪೆನಿ ಮುಚ್ಚದಂತೆ ನೋಡಿ ಎನ್ನುವುದು ಅವರ ವಿನಂತಿ.
ನಾನೂ ನನ್ನ ಟೆಕ್ ಜ಼್ಾನದ ಸಲಹೆಗಳನ್ನು ಕೊಟ್ಟಿದ್ದೆ. ಇಂಟರ್ನೆಟ್ ರೇಡಿಯೊ ಬಳಸಿ. ಐ-ಪಾಡ್ ತೆಗೆದುಕೊಳ್ಳಿ ಅಂತೆಲ್ಲ. ಅವೆಲ್ಲ ಆಗಲ್ ಬಿಡಿ ಎಂದು ಹೇಳಿಬಿಟ್ಟಿದ್ದರು.
ಯಾಕೆ ಅಂತ ಅರ್ಥವಾಗಿದ್ದು ಕಣ್ಣು ಮುಚ್ಚಿ ಕುಳಿತುಕೊಳ್ಳಬೇಕಾದಾಗ. ಸ್ಮಾರ್ಟ್ ಫೋನ್ ಅಸ್ಭುತ ಸಾಧನವೇ ಆಗಿದ್ದರೂ ಅದನ್ನು ಬಳಸಲು ಬೇರೊಬ್ಬರ ನೆರವು ಬೇಕಿತ್ತು. ಬಹುಶಃ ಸ್ವಾವಲಂಬನೆಯಿಂದ ಪರಾವಕಂಬನೆಗೆ ಮರಳಬೇಕಾಗಬಹುದು ಎಂದು ಅವರು ಹೊಸ ತಂತ್ರಜ್ಞಾನವನ್ನು ನಿರಾಕರಿಸಿದರೆ?
ಏನೇ ಇರಲಿ. ಜಾಗತೀಕರಣ ತಂದ ಸವಲತ್ತುಗಳು ಇಂತಹ ಎಷ್ಟು ಜೀವಗಳ ಖುಷಿಗೆ ಅಡ್ಡಿಯಾಗಿವೆಯೋ ಯಾರಿಗೆ ಗೊತ್ತು? ಎಲ್ಲವೂ ಡಿಜಿಟಲೀಕರಣಗೊಳ್ಳಲಿ ಎನ್ನುವಾಗ ನಮ್ಮ ಮೇಸ್ಟರಂತವರನ್ನು ನಾವು ನೆನಪಿಸಿಕೊಳ್ಳುವುದು ಒಳ್ಳೆಯದು.
Friday, November 11, 2016
ಅಪಮೌಲ್ಯದ ದಿನ
ತಕ್ಷಣ ಮಡದಿಗೆ ಕೇಳಿದೆ. "ನಿನ್ನ ಪರ್ಸಿನಲ್ಲಿ ಇರೋ ದುಡ್ಡೆಲ್ಲ ತೆಗೆದಿಡು."
ಈ ಪ್ರಶ್ನೆ ಕೇಳುವುದಕ್ಕೆ ಕಾರಣವಿದೆ. ವ್ಯಾಪಾರಕ್ಕೆ ಇಬ್ಬರೂ ಒಟ್ಟಿಗೆ ಹೋಗುವುದು ಸಾಮಾನ್ಯ. ಆಗೆಲ್ಲ ಬಿಲ್ ಪಾವತಿಯ ಹೊಣೆ ನನ್ನದೇ ಆಗಿರುತ್ತೆ. ಆದರೂ ಕೆಲವೊಮ್ಮೆ ಅವಳು ತವರಿಗೆ ಹೋದಾಗಲೋ, ನಾನು ಪ್ರವಾಸ ಹೋದಾಗಲೋ, ಅಥವಾ ಅವಳೇ ಗೆಳತಿ/ನಾದಿನಿಯರ ಜೊತೆ ಷಾಪಿಂಗ್ ಹೋದಾಗಲೋ ಒಂದಿಷ್ಟು ಹಣ ತೆಗೆದುಕೊಂಡು ಹೋಗುವುದು ವಾಡಿಕೆ. ವ್ಯಾಪಾರ ಮುಗಿಸಿ ಬಂದ ಮೇಲೆ ಖರ್ಚೆಷ್ಟಾಯಿತು ಎಂದು ನಾನು ಕೇಳುವುದಾಗಲಿ, ಅವಳು ಒಪ್ಪಿಸುವುದಾಗಲಿ ವಾಡಿಕೆಯಲ್ಲ. ಹಾಗೆ ಏನಾದರೂ ಉಳಿದಿದ್ದರೆ ಅದು ಅವಳ ಪರ್ಸಿನಲ್ಲಿಯೇ ಇರುತ್ತದೆ. ಹೀಗೆ ಎಷ್ಟೋ ಬಾರಿ ಮನೆಯಲ್ಲಿ ಯಾವ್ಯಾವುದೋ ಪರ್ಸಿನಲ್ಲಿ ಅಷ್ಟಿಷ್ಟು ದುಡ್ಡು ಸಿಗುವುದುಂಟು. ಇದೊಂದು ರೀತಿಯಲ್ಲಿ ನಮ್ಮ ಮನೆಯಲ್ಲಿನ ಕಾಳಧನ. ಆದರೆ ಬಲು ಉಪಯುಕ್ತ ಧನ. ಆಪತ್ಕಾಲಕ್ಕೆ ಒದಗುವಂಥದ್ದು.
"ಒಂದೆರಡು ಸಾವಿರ ಇರಬಹುದು", ಎಂದಳು. ಹಾಗಿದ್ದರೆ ಪರವಾಗಿಲ್ಲ. ಒಂದು ವಾರ ಚಿಂತೆಯಿಲ್ಲದೆ ಕಳೆಯಬಹುದು ಎಂದು ಕೊಂಡೆ. ತಿಂಗಳ ಮೊದಲ ವಾರದಲ್ಲಿಯೇ ಪೇಪರು, ವಿದ್ಯುತ್ ಬಿಲ್ಲು ಮುಂತಾದ ನಗದು ವ್ಯವಹಾರಗಳಿಗೆ ಅಂತ ಹತ್ತಿಪ್ಪತ್ತು ಸಾವಿರ ತಂದಿಡುವುದುಂಟು. ಈ ತಿಂಗಳು ದೂರದೂರಿನಿಂದ ಬರುವ ಮಗನ ಟಿಕೆಟ್ಟು ಖರ್ಚು, ಮದುವೆ ಸೀಸನ್ನಿನ ಖರ್ಚು ಅಂತ ಸ್ವಲ್ಪ ಜಾಸ್ತಿಯೇ ತಂದಿದ್ದೆ. ಎಲ್ಲವನ್ನೂ ಲೆಕ್ಕ ಹಾಕಿದಾಗ, ಮಡದಿಯ ಪರ್ಸಿನಲ್ಲಿ ಒಂದು ನೂರು ನೋಟು, ನನ್ನ ಬಳಿ ಎರಡು ನೂರು ನೋಟುಗಳ ಹೊರತಾಗಿ ಉಳಿದವೆಲ್ಲವೂ 500, 1000ದ ನೋಟುಗಳೇ ಉಳಿದಿದ್ದವು. ಒಟ್ಟು ಹದಿನಾರು ಸಾವಿರ ಇತ್ತು. ಹೇಗೋ ಮೂರು ದಿನ ಕಳೆದ ಮೇಲೆ ಬ್ಯಾಂಕಿನಲ್ಲಿ ಕಟ್ಟಿ ಬಿಡಬಹುದು. ನಾಳೆ, ನಾಳಿದ್ದಿಗೆ ಹಾಲು, ತರಕಾರಿ ಖರ್ಚಾದರೆ ಸಾಕಲ್ಲ ಎಂದು ಲೆಕ್ಕ ಹಾಕಿದೆ.
ಬೆಳಗ್ಗೆ ಕೈಯಲ್ಲಿದ್ದ ನೂರು ರೂಪಾಯಿ ಹಿಡಿದು ಹಾಲು ತರಲು ಹೊರಟೆ. ಒಂದು ಲೀಟರು ಹಾಲು, ಅರ್ಧ ಕಿಲೋ ಬೀನ್ಸು, ಅರ್ಧ ಕ್ಯಾರಟ್ ಗೆ ಅದು ಸಾಕಾಯಿತು. ಕೊತ್ತಂಬರಿ ಸೊಪ್ಪಿಗೆ ಚಿಲ್ಲರೆ ಇಲ್ಲ ಅಂತ ವಾಪಸು ಬಂದೆ. ಟೀ ಕುಡಿಯುವಾಗ ಹೆಂಡತಿಯ "ರೀ" ಕೇಳಿಸಿತು. ಅಂದರೆ ಮರಳಿ ಅಂಗಡಿಗೆ ಹೋಗಿ ಅಂತಲೇ. ಏನು ಎಂದೆ. ತೊಗರಿ ಬೇಳೆ ಮುಗಿದಿದೆ. ಮಂಗಳ್ ಸ್ಟೋರಿಗೆ ಹೋಗಿ ಎರಡು ಕೇಜಿ ತೊಗೊಂಡು ಬನ್ನಿ ಅಂದಳು.
ಕೇಜಿ ಬೇಳೆಗೆ 140 ರೂಪಾಯಿ. ನನ್ನ ಬಳಿ ಇರುವುದು ಕೇವಲ ಎರಡು ನೂರು. "ಆಗಲ್ಲ. ಈವತ್ತಿಗೆ ಅರ್ಧ ಕೇಜಿ ತರುತ್ತೀನಿ. ನಾಳೆ, ನಾಡಿದ್ದು ಎಟಿಎಮ್ಮೋ, ಬ್ಯಾಂಕೋ ದುಡ್ಡು ಕೊಟ್ಟಾಗ ಬೇರೆ ತರೋಣ," ಅಂತ ಅಂಗಡಿಗೆ ಹೋದೆ. ಅಲ್ಲಿ ರಾಜಕುಮಾರನನ್ನ (ಮಂಗಳ ಸ್ಟೋರಿನ ರಾಜಾಸ್ತಾನಿ ಮಾಲೀಕ) ಹತ್ತಿರ ಐಷಾರಾಮ ಮಾತನಾಡುತ್ತ ಅರ್ಧ ಕಿಲೊ ಬೇಳೆ ಕೊಡು. ನಾಳೆ ಇನ್ನೆರಡು ಕಿಲೊ ತೊಗೊಳ್ತೀನಿ ಎಂದೆ. "ಅಯ್ಯೋ ಅಂಕಲ್. ದುಡ್ಡಿಗೆ ಯಾಕೆ ಯೋಚನೆ ಮಾಡ್ತೀರಾ? ತೊಗೊಳ್ಳಿ. ಲೆಕ್ಕ ಬರೆದುಕೊಳ್ಳುತ್ತೇನೆ. ಆಮೇಲೆ ಕೊಡಿ." ಎಂದ. ಐದು ದಶಕಗಳ ಹಿಂದೆ ಬೇಡ ಎಂದು ಮರೆತು ಬಿಟ್ಟಿದ್ದ ಅಭ್ಯಾಸವನ್ನು ಈ ಮಾತು ನೆನಪಿಸಿತು.
ಐದು ದಶಕಗಳ ಹಿಂದೆ ನಾನು ಶಾಲೆಯಲ್ಲಿ ಓದುತ್ತಿದ್ದೆ. ಆಗ ರೇಶನ್ ಯುಗ. ದಿನಸಿಯನ್ನು ಕಾಗದದಲ್ಲಿ ಪೊಟ್ಟಣ ಕಟ್ಟಿ ತರುತ್ತಿದ್ದ ಕಾಲ. ಊರಿನಲ್ಲಿ ನಮ್ಮ ಮನೆಯ ಸಾಲಿನ ಕೊನೆಯಲ್ಲಿದ್ದ ಮೂಲೆ ಅಂಗಡಿ ರಾಜಪ್ಪನ ಬಳಿ ಅಮ್ಮ ತಿಂಗಳ ಲೆಕ್ಕ ಇಟ್ಟಿದ್ದಳು. ಕಾಸು ಕೊಡದೆಯೇ ಸಾಮಾನು ತರುತ್ತಿದ್ದೆವು. ತಿಂಗಳ ಮೊದಲ ವಾರದಲ್ಲಿ ಅಪ್ಪನಿಗೆ ಸಂಬಳ ಬಂದಾಗ ಅದನ್ನು ಹಿಂತಿರುಗಿಸುವುದು ಪರಿಪಾಠ. ಆ ಕಾಲದಲ್ಲಿ ಸಾಲ ಪಡೆದದ್ದನ್ನು ಕಾಲಕ್ಕೆ ಸರಿಯಾಗಿ ಮರೆಯದೆ ವಾಪಸು ಹಿಂತಿರುಗಿಸು ಅಂತ ಅಮ್ಮ ಆಗಾಗ ಪಾಠ ಹೇಳುತ್ತಿದ್ದಳು.( ಬಹುಶಃ ಮಲ್ಯನಿಗೆ ಈ ಪರಿಸ್ಥಿತಿ ಇರಲಿಲ್ಲವೇನೋ? )
ನಾನು ದೊಡ್ಡವನಾಗಿ ಸಂಪಾದನೆಗೆ ತೊಡಗಿದಾಗ, ಏನೇ ಕಷ್ಟವಿದ್ದರೂ ಅಂಗಡಿಯಲ್ಲಿ ಸಾಲ ಕೊಳ್ಳಬಾರದು ಎಂದು ತೀರ್ಮಾನಿಸಿ ಬಿಟ್ಟಿದ್ದೆ. ನನ್ನ ಹೆಂಡತಿಯೂ ಇದಕ್ಕೆ ಸಾಥ್ ಕೊಡುತ್ತಿದ್ದಳು. ಬಾಡಿಗೆ, ವಿದ್ಯುತ್ ಬಿಲ್ಲು, ನೀರಿನ ಬಿಲ್ಲು, ಹಾಲು, ತರಕಾರಿ, ಪೇಪರು ಹೀಗೆ ತಿಂಗಳ ಬಾಕಿಯನ್ನು ಸಂಬಳ ಬಂದ ಮರುದಿನವೇ ಚುಕ್ತಾ ಮಾಡಿಬಿಡುವುದು ಅಭ್ಯಾಸ. ಕ್ರಮೇಣ ಇವನ್ನೂ ನಗದು ಕೊಟ್ಟೇ ತರುವ ಅಭ್ಯಾಸ ಬೆಳೆಯಿತು. ಸಾಲದ ಪುಸ್ತಕ ಎನ್ನುವುದು ಚರಿತ್ರೆಯಾಗಿತ್ತು.
"ಅಂಕಲ್. ಪೇಜ್ 94 ನೆನಪಿಟ್ಟುಕೊಳ್ಳಿ," ಎಂದ ರಾಜಕುಮಾರ. ಅಂತೂ ಸಾಲ ಬೇಡವೆಂದಿದ್ದವನ ಮೌಲ್ಯ ಹೀಗೆ ದಿಢೀರನೆ ಕುಸಿಯಿತು.
ಮನೆಗೆ ಬಂದು ತಿಂಡಿ ತಿನ್ನುವಷ್ಟರಲ್ಲಿ ಊರಿನಿಂದ ಅಕ್ಕನ ಫೋನು. ಮನೆಯಲ್ಲಿ ದುಡ್ಡು ಇದ್ದರೆ ಬ್ಯಾಂಕಿಗೆ ಕಟ್ಟಿಬಿಡು ಅಂತ ಉಪದೇಶ. ಏಕೆ ಎಂದೆ. ಪುಟ್ಟಮ್ಮನ ಕಥೆ ಹೇಳಿದಳು. ಪುಟ್ಟಮ್ಮ ನಮ್ಮ ಮನೆಯಲ್ಲಿ ಸುಮಾರು ಮೂವತ್ತು ವರ್ಷಗಳಿಂದ ಬಟ್ಟೆ ಒಗೆಯಲು ಮನೆ ಗುಡಿಸಿ ಸಾರಿಸಲು ಬರುತ್ತಿದ್ದಾಳೆ. ರೇಶನ್ ಯುಗ ಕಳೆದು ನಾವೆಲ್ಲ ಉದ್ಯೋಗವಂತರಾದಾಗ ಅಮ್ಮನಿಗೆ ನೆರವಾಗಲಿ ಎಂತ ನೇಮಿಸಿದ್ದೆವು. ಅವಳೂ ನಮ್ಮ ಮನೆಯವಳೇ ಆಗಿಬಿಟ್ಟಿದ್ದಳು. ಅವಳ ಮಗಳಿಗೆ ಈಗ ಮದುವೆ. ಮದುವೆಗೆ ಬೇಕಾಗುತ್ತದೆ ಎಂದು ಪ್ರತಿ ತಿಂಗಳೂ ಒಂದಿಷ್ಟು ಹಣವನ್ನು ಕೂಡಿಸಿ ಅಕ್ಕನ ಬಳಿ ಕೊಡುತ್ತಿದ್ದಳಂತೆ. ಅಕ್ಕ ಅದನ್ನು ಹಾಗೆಯೇ ಪ್ರತ್ಯೇಕವಾಗಿ ಒಂದು ಬ್ಯಾಂಕ್ ಅಕೌಂಟಿನಲ್ಲಿ ಹಾಕಿಡುತ್ತಿದ್ದಳು. ಮೂರು ದಶಕದ ಉಳಿತಾಯ ಸುಮಾರು 60000 ಆಗಿತ್ತಂತೆ. ಮದುವೆ ನಿಶ್ಚಯವಾಗಿದೆ ಬೇಕು ಅಂತ ಹೇಳಿದ್ದಳು ಅಂತ ಮೊನ್ನೆ ಅಕ್ಕ ಅದನ್ನು ಬ್ಯಾಂಕಿನಿಂದ ತಂದಿದ್ದಳಂತೆ. ಈಗ ಅದನ್ನು ಏನು ಮಾಡುವುದು? ಅಷ್ಟು ಹಣವನ್ನು ತಕ್ಷಣಕ್ಕೆ ಬದಲಾಯಿಸಲು ಬರುವುದಿಲ್ಲವಲ್ಲ ಎಂದು ಸಲಹೆ ಕೇಳಲು ಫೋನ್ ಮಾಡಿದ್ದಳು.
ನಮ್ಮ ಪುಣ್ಯ. ಆ ಕಾಲದಲ್ಲಿ ನಮ್ಮ ಬೀದಿಯಲ್ಲಿದ್ದವರೆಲ್ಲರದ್ದೂ ದೊಡ್ಡ ಕುಟುಂಬಗಳು. ಒಬ್ಬೊಬ್ಬರಿಗೂ ಐದಾರು ಸಹೋದರ, ಸಹೋದರಿಯರು. ನನಗೂ ಅಷ್ಟೆ. ಆರು ಅಕ್ಕ ತಂಗಿಯರು. ಎಲ್ಲರೂ ಊರಲ್ಲೇ ಇರುವುದರಿಂದ, ಎಲ್ಲರೂ ಒಟ್ಟಿಗೆ ಬ್ಯಾಂಕಿಗೆ ಹೋಗಿ ನಿಮ್ಮ, ನಿಮ್ಮ ಅಕೌಂಟಿನಿಂದ ತಂದು ಕೊಡಿ ಎಂದು ಸಲಹೆ ನೀಡಿದೆ. ಕಳ್ಳತನ ಮಾಡುತ್ತದ್ದೇವೆಯೋ ಎನ್ನಿಸಿತು.
ಸಂಜೆ ಆಫೀಸಿನಿಂದ ಬಂದಾಗ ಮಡದಿ ನೆನಪು ಮಾಡಿದಳು. ನಾಳೆ ಗಿರೀಶನ ಮಗಳ ಮದುವೆ. ಮುಂದಿನ ವಾರ ಶಶಿಯ ಮದುವೆ. ಇಬ್ಬರಿಗೂ ಗಿಫ್ಟ್ ಏನಾದರೂ ತರಬೇಕಲ್ಲವಾ? ಅದು ನನಗೂ ನೆನಪಿತ್ತು. ಅದಕ್ಕೇ ಬರುವಾಗ ಅಂಗಡಿಗಳು ತೆಗೆದಿವೆಯೋ ಎಂದು ನೋಡಿಕೊಂಡೇ ಬಂದಿದ್ದೆ ಒಡವೆಯ ಅಂಗಡಿಯಿಂದ ಬೆಳ್ಳಿಯ ಪದಾರ್ಥವನ್ನು ತರುವ ಮನಸ್ಸಿತ್ತು. ಕಾರ್ಡು ಕೊಟ್ಟು ತರಬಹುದು ಎಂದು ತೀರ್ಮಾನಿಸಿದ್ದೆ. ಆದರೆ ಆಭರಣದ ಅಂಗಡಿಯವ ಕಾರ್ಡು ಕೊಟ್ಟರೆ ಅದಕ್ಕೆ ಮೂರು ಪರ್ಸೆಂಟ್ ಹೆಚ್ಚು ಸೇರಿಸುತ್ತಾನೆ ಎಂದಾಗ ಯೋಚನೆ ಬದಲಾಯಿತು.
ಅಲ್ಲೇ ಪಕ್ಕದಲ್ಲಿದ್ದ ಗಿಫ್ಟ ಅಂಗಡಿಗೆ ಹೋಗಿ ಮಿಕ್ಸಿ, ಗ್ರೈಂಡರ್ ಗಳನ್ನು ಹುಡುಕಿದೆವು. ಬೆಲೆಯೆಲ್ಲವನ್ನೂ ನೋಡಿದ ಮೇಲೆ ಅಂಗಡಿಯವನನ್ನು ಹಾಗೇ ಸುಮ್ಮನೆ ಕೇಳಿದೆ. ನಗದು ಕೊಡಲೋ? ಕಾರ್ಡು ಕೊಡಲೋ? "ಸಾರ್. ಕಾರ್ಡು ಕೆಲಸ ಮಾಡುತ್ತೋ ಇಲ್ಲವೋ ಗೊತ್ತಿಲ್ಲ. ನಗದಿದ್ದರೆ ಕೊಡಿ. ಆದರೆ ಸದ್ಯಕ್ಕೆ ನಾನು ಬಿಲ್ಲು ಕೊಡುವುದಿಲ್ಲ," ಎಂದ. ಬಿಲ್ಲು ಇಲ್ಲದಿದ್ದರೆ ಅದು ಭ್ರಷ್ಟ ವ್ಯಾಪಾರ ಅಲ್ಲವೇ ಎನ್ನಿಸಿತು. ಆದರೆ ನಿರ್ವಾಹವಿಲ್ಲ. ಕೈಯಲ್ಲಿರುವ ನಗದನ್ನು ಬ್ಯಾಂಕಿಗೆ ಹೋಗದೆಯೇ ಬದಲಾಯಿಸಿಕೊಳ್ಳುವ ಅವಕಾಶ ಇದು ಎಂದುಕೊಂಡೆ. ನನ್ನ ಹಿಂಜರಿತ ಕಂಡ ಅವನೇ ಸಮಜಾಯಿಷಿಯನ್ನೂ ಹೇಳಿದ. "ಹೇಗೂ ಗಿಫ್ಟ ಕೊಡೋದಲ್ಲವಾ ಸರ್. ಬಿಲ್ಲು ಯಾಕೆ?" ಇದುವೂ ತರ್ಕ ಸರಿಯೇ ಎಂದು ಕೊಂಡೆ. ನಿನಗೆ ತೊಂದರೆ ಆಗುವುದಿಲ್ಲವೇ ಎಂದೆ. "ನಾವೆಲ್ಲ ವ್ಯವಸ್ಥೆ ಮಾಡಿಕೊಳ್ತೇವೆ ಬಿಡಿ ಸಾರ. ಬಿಸಿನೆಸ್ ಅಂದ ಮೇಲೆ ಇವೆಲ್ಲವನ್ನು ನಿಭಾಯಿಸದಿದ್ದರೆ ಹೇಗೆ?" ಎಂದ. ಹೇಗೆ? ಅಂತ ಮಾತ್ರ ಹೇಳಲಿಲ್ಲ. ಅಂತೂ ಗಿರೀಶನ ಮಗಳ ಮದುವೆಗೆ ಗಿಫ್ಟ್ ಸಿದ್ಧವಾಯಿತು.
ನಾಳೆ ಬ್ಯಾಂಕು ತೆಗೆದ ಕೂಡಲೇ ಇರುವ ಹನ್ನೆರಡು ಸಾವಿರವನ್ನಾದರೂ ಅಕೌಂಟಿಗೆ ಹಾಕಿ ನಗದು ಬದಲಾಯಿಸಿಕೊಂಡು ಬಿಡಬೇಕು ಎಂದು ತೀರ್ಮಾನಿಸಿದೆ. ಕಪ್ಪುಧನ ಇದ್ದವರಿಗೆ ನಿದ್ರೆ ಬಂದಿತ್ತೋ, ಇಲ್ಲವೋ ನನಗಂತೂ ನಿದ್ರೆ ಸರಿಯಾಗಿ ಬರಲಿಲ್ಲ ಅನ್ನುವುದು ನಿಜ.
ಮರುದಿನ ಕಛೇರಿಯ ಆವರಣದಲ್ಲೇ ಇರುವ ಬ್ಯಾಂಕಿಗೆ ಹೋದೆ. ಸಾಧಾರಣವಾಬಿ ಭಣಗುಡುತ್ತಿದ್ದ ಬ್ಯಾಂಕು ಸಿಬ್ಬಂದಿ ಬಂದು ಬಾಗಿಲು ತೆಗೆಯುವ ಮುನ್ನವೇ ಭರ್ತಿಯಾದಂತಿತ್ತು. ಕ್ಯೂ ನಲ್ಲಿ ನಿಂತೆ. ಚಲನ್ ಬರೆದಾಗ ನಿತ್ಯವೂ ನಮಸ್ಕಾರ ಎನ್ನುತ್ತಿದ್ದ ಬ್ಯಾಂಕಿನ ಸಿಬ್ಬಂದಿ, ಸರ್, ಹಿಂದೆ ಬನ್ನಿ. ನಿಮ್ಮ ಖಾತೆ ಚೆಕ್ ಮಾಡಿದ ಮೇಲೆ ಡೆಪಾಸಿಟ್ ಮಾಡುವಿರಂತೆ ಎಂದರು. ಪ್ರತಿ ಚಲನ್ನಿನಲ್ಲಿಯೂ ಅವರು ದಾಖಲಿಸಬೇಕಂತೆ. ಅತಿ ಪರಿಚಿತವಾದ ಸಿಬ್ಬಂದಿಗೂ ಮತ್ತೆ ಪರಿಚಯ ಹೇಳಿಕೊಳ್ಳುವಂತಿತ್ತು. ಕ್ಯೂನಲ್ಲಿ ನಿಂತು ಚಲನ್ನಿಗೆ ಸಹಿ ಹಾಕಿಸಿಕೊಂಡು ಮತ್ತೊಂದು ಕ್ಯೂ ಸೇರಿದೆ.
ಸಾಮಾನ್ಯವಾಗಿ ಬ್ಯಾಂಕಿಗೆ ಕಾಲಿಡದ ವ್ಯಕ್ತಿಗಳೆಲ್ಲಿ ಹಲವರು ಕಣ್ಣಿಗೆ ಕಂಡರು. ಓಹೋ. ಸಮಾನತೆ ಎಂದರೆ ಇದೇ ಎಂದು ನಮ್ಮ ರಾಷ್ಟ್ರದ ಪ್ರಜಾಪ್ರಭುತ್ವದ ಬಗ್ಗೆ ಗರ್ವಿಸುತ್ತ ಕ್ಯೂನಲ್ಲಿ ನಿಂತೆ. ನನ್ನ ಮುಂದೆ ಆಫೀಸಿನ ಗ್ರೂಪ್ 1ರ ಸಿಬ್ಬಂದಿಯೊಬ್ಬನಿದ್ದ. ಕ್ಯೂ ಸ್ವಲ್ಪ ಮುಂದುವರೆಯುತ್ತಿದ್ದಂತೆಯೇ, ಅವನ ಪಕ್ಕದಲ್ಲಿ ಅವನ ಹೆಂಡತಿಯೂ, ಮಗ ಮತ್ತು ಮಗಳೂ ಬಂದು ನಿಂತರು. ಹುಳಿ ನಗೆ ನಗುತ್ತಾ, "ಸಾರ್ ಇವರದ್ದೂ ಕಟ್ಟಿ ಬಿಡುತ್ತೇನೆ" ಎಂದ. ಆಫೀಸರರ ಮರ್ಯಾದೆಯಲ್ಲವೇ? ಔದಾರ್ಯ ತೋರಿ ಸರಿ ಎಂದು ಸರಿದೆ.
ಹಾಗೆಯೇ ಮುಂದಿರುವವರು ಕೊಟ್ಟ ಹಣವನ್ನು ಕ್ಯಾಶಿಯರ್ ಲೆಕ್ಕ ಹಾಕುವುದನ್ನು ನೋಡುತ್ತ ನಿಂತೆ. ಕಾಲ ಕಳೆಯಬೇಕಲ್ಲ. ಒಂದೆರಡು ಜನರ ಡೆಪಾಸಿಟ್ಟು ನೋಡಿದ ಮೇಲೆ, ನನ್ನ ಪರ್ಸು ಮುಟ್ಟಿಕೊಂಡೆ. ಪರ್ಸಿನಿಂದ ಕೈಗೆ ತೆಗೆದಿಟ್ಟುಕೊಂಡಿದ್ದ ಹಣವನ್ನು, ಹಿಡಿಯಾಗಿ ಮುಚ್ಚಿಟ್ಟುಕೊಂಡೆ. ಬೇರೆ ಯಾರೂ ನೋಡಬಾರದಲ್ಲ. ಅಲ್ಲಿ ಬಹುಶಃ ಹನ್ನೆರಡೇ ಸಾವಿರವನ್ನು ಡೆಪಾಸಿಟ್ಟು ಮಾಡಲು ಬಂದಿದ್ದವ ನಾನೊಬ್ಬನೇ ಇರಬೇಕು. ನನ್ನ ಮುಂದಿದ್ದ ಇಡೀ ಕುಟುಂಬ ಒಟ್ಟು ಒಂದೂಕಾಲು ಲಕ್ಷ ನಗದನ್ನು ಅಕೌಂಟಿಗೆ (ನಾಲಕ್ಕು ಅಕೌಂಟಿಗೆ ಎನ್ನಿ) ವರ್ಗಾಯಿಸಿತು. ಇದೆಲ್ಲದರ ಮುಂದೆ ನಾನು ಜಮಾಯಿಸಬೇಕಿದ್ದ ಮೊತ್ತ ತೃಣವೆನ್ನಿಸಿತು. ನನ್ನ ಬಗ್ಗೆಯೇ ಅಳುಕುಂಟಾಯಿತು. ಆಫೀಸರನೆಂಬ ಗರ್ವವನ್ನು ಹೀಗೆ ಕಳೆದುಕೊಂಡೆ.
ಅದಾದ ಮೇಲೆ ನೇರವಾಗಿ ರಜೆ ಹಾಕಿ ಮನೆಗೆ ಬಂದೆ. ಮಡದಿಗೆ ಒಂದು ಕಾಫಿ ಕೊಡು ಎಂದೆ. ನಗದು ಅಪಮೌಲ್ಯದ ನಡುವೆ ನನ್ನ ಬೆಲೆಯೆಷ್ಟು ಎಂಬುದರ ಅರಿವಾಗಿತ್ತು. "ಕಾಫಿ ಪುಡಿ ತರಬೇಕು," ಎಂದಳು. ಸರಿ ನೀರು ಕೊಡು ಎಂದು ಅದನ್ನೇ ಕುಡಿದು ನಿರಾಳ ನಿದ್ರೆ ಮಾಡಿದೆ.
Friday, March 25, 2016
ದೇವರು, ಧರ್ಮ ಮತ್ತು ಮೌಢ್ಯ
ಮೂಲ ಫ್ರೆಂಚ್ ಪುಸ್ತಕವನ್ನು ಇಂಗ್ಲೀಷಿಗೆ ಆನಾ ನೂಪ್ ಅನುವಾದಿಸಿದ್ದು, ಈ ಆಂಗ್ಲ ಅನುವಾದದ ಇ-ಪ್ರತಿಗಳು ಪ್ರಾಜೆಕ್ಟ್ ಗುಟೆನ್ ಬರ್ಗ್ ನಲ್ಲಿ ಲಭ್ಯ.
ಪುಸ್ತಕದಲ್ಲಿರುವ ವಿವಿಧ ಟಿಪ್ಪಣಿಗಳ ಶೀರ್ಷಿಕೆಯೇ ಮೆಸ್ಲಿಯೆ ಯ ವಿಚಾರಗಳ ಗತಿಯನ್ನು ವಿವರಿಸುತ್ತವೆ. ಕೆಲವು ಉದಾಹರಣೆಗಳು:
MAN BORN NEITHER RELIGIOUS NOR DEISTICAL. ಹುಟ್ಟಿನಿಂದಲೇ ಮನುಷ್ಯ ಆಸ್ತಿಕನೂ ಅಲ್ಲ ಧಾರ್ಮಿಕನೂ ಅಲ್ಲ