Sunday, November 22, 2009

ಜಾಗತೀಕರಣ

ಮೊನ್ನೆ ಅಮೆರಿಕೆಯಲ್ಲಿ ಓದುತ್ತಿರುವ ಮಗಳ ಫೋನ್‌. ಅಪ್ಪಾ... "ಮುಂದಿನ ತಿಂಗಳು ಕ್ರಿಸ್‌ಮಸ್‌ಗಾಗಿ ಇಲ್ಲಿ ರಿಯಾಯಿತಿ ಮಾರಾಟ ಇರುತ್ತದೆ. ನಿನಗೆ ಏನಾದರೂ ಬೇಕಾದರೆ ಹೇಳು. ರಜೆಗೆ ಬರುವಾಗ ಕೊಂಡು ತರುತ್ತೇನೆ," ಅಂದಳು. ಹೇಳಿ, ಕೇಳಿ ಅಮೆರಿಕೆ. ಅಲ್ಲಿ ಪ್ರತಿ ಡಾಲರನ್ನೂ ರೂಪಾಯಿಗೆ ಪರಿವರ್ತಿಸಿಕೊಂಡು ಲೆಕ್ಕ ಹಾಕುವ ಮಗಳು ಹೀಗೆ ಹೇಳಿದಾಗ ಆಶ್ಚರ್ಯವೆನಿಸಿತು. "ಏನೂ ಬೇಡಮ್ಮ," ಎಂದೆ. ಆದರೆ ಅವಳು ಬಿಡಬೇಕಲ್ಲ. "ಏನು ಬೇಕು ಹೇಳು ತರ್ತೀನಿ" ಅಂತ ಹಠ ಹಿಡಿದಳು. ಎಲ್ಲ ಅಪ್ಪಂದಿರ ಹಾಗೇ ವಿನಾಕಾರಣ ಖರ್ಚು ಮಾಡಿ ತೊಂದರೆಗೆ ಮಗಳು ಸಿಕ್ಕಿಕೊಳ್ಳಬಹುದು ಎನ್ನಿಸಿ, ಮತ್ತೊಮ್ಮೆ ಏನೂ ಬೇಡ ಅಂದೆ. ಆದರೂ ಅವಳ ವರಾತ ಹೆಚ್ಚಾದಾಗ, "ಇಲ್ಲಿ ಸಿಗದ್ದು ಅಲ್ಲಿದ್ದರೆ ತೊಗೊಂಡು ಬಾ." ಎಂದೆ.

ನಾನು ಅಮೆರಿಕೆಗೆ ಹೋಗಿಲ್ಲ. ಹೋಗುವ ಹುಮ್ಮಸ್ಸೂ ಇಲ್ಲ. ಇಡೀ ಕರ್ನಾಟಕವನ್ನೇ ಸುತ್ತಿ ಬಂದರೂ ಎರಡು ಜನ್ಮ ಸಾಲದಷ್ಟು ನೋಡುವುದಿದೆ. ನೂರು ಜನ್ಮ ಕಳೆದರೂ ಭಾರತವನ್ನು ಪೂರ್ತಿ ಸುತ್ತಿ ನೋಡಲಾಗುವುದಿಲ್ಲ. ಇನ್ನು ಅಮೆರಿಕೆಗೋ, ಯುರೋಪಿಗೋ ಹೋಗಿ ಬಂದರೆ ಸಾಕೇ ಅನ್ನುವುದು ನನ್ನ ಅನಿಸಿಕೆ. ಅಮೆರಿಕೆಗೋ, ಯುರೋಪಿಗೋ ಹೋಗಿ ಬಂದವರನ್ನು ಕೈಲಾಸಕ್ಕೇ ಹೋಗಿ ಬಂದಂತೆ ಗೌರವಿಸುತ್ತಿದ್ದ ಕಾಲವಿತ್ತು. ಈಗ ಕಾಲ ಬದಲಾಗಿದೆ.

ಕಾಲ ಇನ್ನೊಂದು ಬದಲಾವಣೆಯನ್ನೂ ತಂದಿದೆ. ಹಿಂದೆ ಕಾಶಿಗೆ ಹೋಗಿ ಬಂದವರನ್ನು "ಕಾಶಿಯಲ್ಲಿ ಏನನ್ನು ಬಿಟ್ಟು ಬಂದೆ" ಅಂತ ಕೇಳ್ತಾ ಇದ್ದರಂತೆ. ಹಾಗೆಯೇ ಕಛೇರಿ ನಿಮಿತ್ತವಾಗಿಯೋ, ವಿರಾಮಕ್ಕೋ ಎಲ್ಲಿಗಾದರೂ ಪ್ರವಾಸ ಹೋದವರು ಮರಳಿದಾಗ ಅಲ್ಲಿಂದ ಏನು ತಂದೆ ಎನ್ನುವ ಪ್ರಶ್ನೆ ಎದುರಾಗುತ್ತಿತ್ತು. ರಾಮೇಶ್ವರ, ಕನ್ಯಾಕುಮಾರಿಯ ಪ್ರವಾಸಿಗಳು ಕಪ್ಪೆಚಿಪ್ಪುಗಳ ಸಾಮಾನುಗಳನ್ನು ಹೊತ್ತು ತರುತ್ತಿದ್ದರು. ದೆಹಲಿಗೆ ಹೋದವರು "ಡೆಲ್ಲಿ ಸೆಟ್‌" ರೇಡಿಯೋಗಳನ್ನೋ, ಟೇಪ್‌ರೆಕಾರ್ಡರ್‌ಗಳನ್ನೋ ತರುತ್ತಿದ್ದರು. ಮುಂಬಯಿಯಿಂದ ಬರುವವರ ಜೊತೆಗೆ ಉಡುಪಿನ ಉಡುಗೊರೆಯ ಕಂತೆ ಇರುತ್ತಿತ್ತು. ಚೆನ್ನೈನಿಂದ ಚರ್ಮದ ಸಾಮಾನುಗಳು, ಗೌಹಾತಿಯಿಂದ ಗುಡ್ಡಗಾಡು ಜನರ ದಿರಿಸುಗಳು, ಜಬಲ್‌ಪುರದಿಂದ ಅಮೃತಶಿಲೆಯ ಸಾಮಾನುಗಳು, ಲಕ್ನೋ-ಕಲ್ಕತ್ತಾದಿಂದ ಚಪ್ಪಲಿ, ಮೈಸೂರಿನಿಂದ ಗಂಧದ ಕೆತ್ತನೆ, ಜಯಪುರದ ರಜಾಯಿ... ಹೀಗೇ ಆಯಾ ಪ್ರದೇಶದ ಪ್ರಾದೇಶಿಕ ಸಿರಿಯನ್ನು ನೆನಪಿನ ಕಾಣಿಕೆಯಾಗಿ ತರುತ್ತಿದ್ದುದುಂಟು. ಕಳೆದ ವರ್ಷ ಶಿರಸಿಗೆ ಪ್ರವಾಸ ಹೋಗಿದ್ದಾಗ ಉತ್ತರಕರ್ನಾಟಕದ ವಿಶಿಷ್ಟತೆಯ ಪ್ರತಿನಿಧಿಗಾಗಿ ಹುಡುಕಿದೆ. ಏನೂ ಸಿಗಲಿಲ್ಲ. ಎಲ್ಲ ಅಂಗಡಿಗಳಲ್ಲೂ ಅದೇ ಪ್ಲಾಸ್ಟಿಕ್‌ ಬಿಂದಿಗೆ, ಪ್ಲಾಸ್ಟಿಕ್‌ ವಸ್ತುಗಳು, ಚೀನಾದ ಬೊಂಬೆಗಳು... ಕೊನೆಗೆ ಶಿರಸಿಯ ವಿಶಿಷ್ಟ ಕಷಾಯವನ್ನೇ ಎರಡು ಪ್ಯಾಕೆಟ್‌ ತಂದೆ. "ಅಯ್ಯೋ... ಇದನ್ನು ತರಕ್ಕೆ ಶಿರಸಿಗೆ ಹೋಗಬೇಕಿತ್ತಾ.. ಮನೆಯಲ್ಲೇ ಮಾಡಬಹುದಿತ್ತು," ಅನ್ನುವ ಟೀಕೆಯೂ ಸಿಕ್ಕಿತು ಅನ್ನಿ.

ಮಗಳು ಪ್ರಶ್ನೆ ಕೇಳಿದಾಗ ಇವೆಲ್ಲವೂ ನೆನಪಾಯಿತು. ನಾನು ಕಾಲೇಜು ಓದುತ್ತಿದ್ದಾಗ ಕ್ರಿಕೆಟ್‌ ವೀಕ್ಷಕ ವಿವರಣೆ ಕೇಳಲೆಂದು ಕಾಸು-ಕಾಸು ಕೂಡಿ ಹಾಕಿ ನ್ಯಾಶನಲ್‌ ಪ್ಯಾನಸೋನಿಕ್‌ನ ಒಂದು ಪಾಕೆಟ್‌ ರೇಡಿಯೋ ಕೊಂಡುಕೊಂಡಿದ್ದೆ. ಅದನ್ನು ಕೊಳ್ಳಲು ಬೆಂಗಳೂರಿಗೆ ಹೋಗಬೇಕಿತ್ತು. ಈಗ ನ್ಯಾಶನಲ್‌ ಪ್ಯಾನಸೋನಿಕ್‌ ಇರಲಿ, ಯುರೋಪು, ಅಮೆರಿಕ, ಜಪಾನ್‌ ಮತ್ತು ಚೀನಾದ ವಸ್ತುಗಳು ತಾಲೂಕು, ಹೋಬಳಿ ಕೇಂದ್ರಗಳಲ್ಲಿಯೂ "ಸೇಲ್‌"ನಲ್ಲಿ ಕಾಣಿಸುತ್ತವೆ. ಮೊಬೈಲ್‌ ಫೋನ್‌ಗಳನ್ನೇ ಗಮನಿಸಿ. ಪಾಕಿಸ್ತಾನದ ತೊಗರಿಬೇಳೆ, ಮಲೇಶಿಯಾದ ಪಾಮೆಣ್ಣೆ, ಇಟಲಿಯ ಕಾಪುಚಿನೊ ಕಾಫಿ ಎಲ್ಲವೂ ಭಾರತದಲ್ಲಿ ಲಭ್ಯ. ಕೊಳ್ಳಲು ಕಾಸಿರಬೇಕಷ್ಟೆ!

ದೇಶದ ವಿವಿಧ ಸ್ಥಳಗಳಲ್ಲಿ ದೊರಕುವ ವಸ್ತುಗಳಲ್ಲಿ ವಿಶೇಷತೆ ಕಾಣೆಯಾಗಿರುವುದನ್ನೆ ಜಾಗತೀಕರಣದ ಉದಾಹರಣೆ ಅನ್ನುವುದಾದರೆ ನಮ್ಮ ಮದುವೆ ಊಟದಲ್ಲಿ ಆಗಿರುವ ಬದಲಾವಣೆಗೆ ಏನು ಹೇಳೋಣ! ಸಭೆ, ಸಮ್ಮೇಳನಗಳಲ್ಲಿ ಮತ್ತು ಹೋಟೆಲುಗಳಲ್ಲಿ ದೊರೆಯುವ ಊಟವನ್ನ ನನ್ನ ಗೆಳೆಯರೊಬ್ಬರು’ಪ್ಯಾನ್‌ ಇಂಡಿಯನ್‌’ ಎನ್ನುತ್ತಿದ್ದರು. ಕಾರಣ ಇಷ್ಟೆ: ಎಲ್ಲಿ ಹೋದರೂ ಊಟದಲ್ಲಿ ಚಪಾತಿ, ರೊಟ್ಟಿ ಜೊತೆಗೆ ಒಂದಿಷ್ಟು ಅನ್ನ, ಮೊಸರನ್ನ, ಪಲ್ಯೆ, ಸಾಂಬಾರ್‌, ರಸಂ ದೊರೆತೇ ಇರುತ್ತಿತ್ತು. ದಕ್ಷಿಣಭಾರತದವ ಅನ್ನ, ಸಾಂಬಾರ್‌ ತಿಂದು ಕೈತೊಳೆದರೆ, ಉತ್ತರಭಾರತೀಯರು ರೊಟ್ಟಿ,ಪ ಲ್ಯೆ ತಿಂದು ನಡೆಯಬಹುದಿತ್ತು. ಎರಡನ್ನೂ ತಿಂದು ಹೊಟ್ಟೆ ಬೆಳೆಸಿಕೊಳ್ಳುವುದೂ ಸಾಧ್ಯವಿತ್ತು. ಜೊತೆಗೆ ಐಸ್‌ಕ್ರೀಂ ಖಂಡಿತ. ಈಗ ಮದುವೆಯ ಮನೆಗೆ ಹೋದರೆ ಇಂತಹುದೇ ಊಟ! ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಥಾಲಿ ಎಂದರೆ ಇದೇ!

ಜಾಗತೀಕರಣ ಊಟದ ಎಲೆಯನ್ನೂ ತಾಕದೆ ಬಿಟ್ಟಿಲ್ಲ. ಇದೀಗ ಕರ್ನಾಟಕದ ಮದುವೆಗಳಲ್ಲೂ ಒಂದು ಅಭ್ಯಾಸ ಆರಂಭವಾಗಿದೆ. ಮೊದಲು ಅಯ್ಯಂಗಾರರ ಮದುವೆ ಎಂದರೆ ಪುಳಿಯೋಗರೆ, ಅಯ್ಯರ್‌ರವರ ಮದುವೆಗಳಲ್ಲಿ ವಿಶೇಷ ಪಾಯಸ, ವೀರಶೈವರ ಮದುವೆಗಳಲ್ಲಿ ವಿಶೇಷ ಕಾಳಿನ ಸಾಂಬಾರ್‌, ಕೊಡಗಿನವರ ಮದುವೆಯ ಊಟದ ಮಜವೇ ಬೇರೆ... ಹೀಗೆ ಮದುವೆಯ ಊಟ ವೈವಿಧ್ಯಮಯವಾಗಿರುತ್ತಿತ್ತು. ಇಂದು ಹಾಗಿಲ್ಲ. ಊಟ ನೋಡಿ ಆತಿಥೇಯರು ಎಲ್ಲಿಯವರು ಎಂದು ಊಹಿಸುವುದು ಈಗ ಆಗದ ಮಾತು! ಕೋಸಂಬರಿಯ ಜಾಗದಲ್ಲಿ ಮೆಕ್ಕೆಜೋಳ, ದಾಳಿಂಬೆಯ ಸಲಾಡ್. ಚಿರೋಟಿ-ಫೇಣಿಯ ಜಾಗದಲ್ಲಿ ಬರ್ಫಿ, ಐಸ್‌ಕ್ರೀಂ. ರಾತ್ರಿ ಊಟವಾದರೋ ಪಾನಿಪುರಿ, ಗೋಬಿ ಮಂಚೂರಿ! ಪಿಜ್ಜಾ ಇನ್ನೂ ಮದುವೆಯ ಔತಣಕ್ಕೆ ಸೇರಿಕೊಂಡಿಲ್ಲ ಎನ್ನುವುದೊಂದೇ ಸಮಾಧಾನ. ಎಲೆಯ ತುಂಬಾ ವೈವಿಧ್ಯಮಯವಾದ ತಿನಿಸುಗಳಿದ್ದರೂ, ಅವೆಲ್ಲವೂ ಆಯಾ ಪ್ರದೇಶದ ವಿಶಿಷ್ಟ ಅನ್ನಿಸುವುದೇ ಇಲ್ಲ.

ಜಾಗತೀಕರಣದ ತೌರೂರಾದ ಅಮೆರಿಕೆಯಲ್ಲಿ ಇನ್ನು ಅಲ್ಲಿಗೇ ವಿಶಿಷ್ಟವಾದಂಥದ್ದು ಏನಾದರೂ ಉಳಿದಿರಬಹುದೇ! ಅದಕ್ಕೆ ಮಗಳಿಗೆ ಹೇಳಿದೆ. "ಭಾರತದಲ್ಲಿ ಸಿಗದಂಥದ್ದು ಅಮೆರಿಕೆಯಲ್ಲಿ ಏನಿದೆ ಮಗಳೇ! ಹಾಗೆ ಇರುವುದಾದರೆ ಒಂದೇ... ಅದು ಕುಟುಂಬ... ಅಮ್ಮ, ಅಪ್ಪ... ಅದನ್ನಂತೂ ಅಲ್ಲಿಂದ ಕೊಂಡು ತರಲು ಸಾಧ್ಯವಿಲ್ಲ... ಹಾಗೇ ಬರಿಗೈ ಬೀಸಿಕೊಂಡು ಹಾಯಾಗಿ ಬಾ.." ಎಂದೆ. ಅವಳಿಗೆ ಎಷ್ಟು ಅರ್ಥವಾಯಿತೋ ಗೊತ್ತಿಲ್ಲ. ಜನರೇಶನ್‌ ಗ್ಯಾಪ್‌ ಇರಲೇ ಬೇಕಲ್ಲ!

3 comments:

Manjunatha Kollegala said...

ಅತಿಯಾಗಿ ಬೆಳೆದ ವಾಣಿಜ್ಯ, ಸಾರಿಗೆ-ಸಂಪರ್ಕ, ಮುಕ್ತಮಾರುಕಟ್ಟೆ ಸ್ಥಳೀಯ ಸಂಸ್ಕೃತಿಯನ್ನು ನಾಶಮಾಡುತ್ತಿರುವುದು ನಿಜಕ್ಕೂ ಸಂಕಟ ತರುವ ವಿಷಯ. ತಿಳಿಹಾಸ್ಯದ ಲೇಪನವಿದ್ದರೂ ಅದರ ಹಿಂದಿನ ವಿಷಾದ ತಟ್ಟುವಂಥದ್ದು

prasca said...

ನಿಮ್ಮ ಕೊನೆಯ ಮಾತು ಸೂಪರ್ ಸರ್,
ಆದರೆ ಕುಟುಂಬ ಈಗ ಭಾರತದಲ್ಲೂ ಕಾಣೆಯಾಗುತ್ತಿದೆಯಲ್ಲ ಸರ್.

RADHAKRISHNA said...

ಮನ ತಟ್ಟಿದ ಬರಹ. ನಾಳೆ ನಮ್ಮದೂ ಅನುಭವ ಇದೇ ಆಗಬಹುದು. ನಮ್ಮಲ್ಲೂ ಇತ್ತೀಚೆಗೆ ಒಂಟಿ ಜೀವನ ಹೆಚ್ಚುತ್ತಿದೆ. ಕಾಲ ಎಲ್ಲರನ್ನು ಅವಾಹಿಸುವ ಬಗೆ ಇದು.
ರಾಧಾಕೃಷ್ಣ