Thursday, June 26, 2008

ಹಾ! ಕಳ್ಳ!

ಮೊನ್ನೆ ಎಕೆಬಿಯವರ (ಅಡ್ಯನಡ್ಕ ಕೃಷ್ಣಭಟ್ಟರ) ಮನೆಗೆ ಹೋಗಿದ್ದೆ. ಅವರು ಊರಿನಲ್ಲಿ ಇರಲಿಲ್ಲವಾದ್ದರಿಂದ, ಭೇಟಿ ನೀಡಿ ಬಹಳ ದಿನಗಳಾಗಿತ್ತು. ಕರೆಗಂಟೆ ಬಾರಿಸಿದಾಗ ಎಂದಿನಂತೆ "ಬನ್ನಿ, ಶರ್ಮರೆ" ಎನ್ನುವ ಆತ್ಮೀಯ ಕರೆ ಬರುವುದು ತುಸು ತಡವಾಯಿತು. ಸಂಜೆಯ ಇಳಿಹೊತ್ತಿನ ಮಸುಕಿನಲ್ಲಿ ನನ್ನ ಬಣ್ಣವೂ ಬೆರೆತು, ಕಳ್ಳನಂತೆ ಕಂಡೆನೋ ಎನಿಸಿತು. ಮತ್ತೆ ಎಂದಿನ ಪ್ರೀತಿಯ ಕರೆ. ಭಟ್ಟರೊಬ್ಬರೆ ಮನೆಯಲ್ಲಿದ್ದರು. ಸರಸಕ್ಕ ಇರಲಿಲ್ಲ. "ಅಕ್ಕ ಅಂಗಡಿಗೆ ಹೋಗಿದ್ದಾರೆ. ನೀವು ಈಗ ಬಂದದ್ದು ಒಳ್ಳೆಯದೇ ಆಯಿತು." ಎಂದ ಭಟ್ಟರ ಪೀಠಿಕೆ ಯಾವುದೋ ಮುಖ್ಯ ಸಮಾಚಾರ ಇದೆ ಎಂದು ಸೂಚಿಸಿತು. ಸಾಮಾನ್ಯವಾಗಿ ನಮ್ಮಿಬ್ಬರ ಸಂಭಾಷಣೆ ವಿಜ್ಞಾನ ಬರವಣಿಗೆ, ಪದಬಳಕೆಯ ದೋಷಗಳು, ಬರವಣಿಗೆ ತಂತ್ರಗಳು, ಇತಿಹಾಸ ಇತ್ಯಾದಿಯತ್ತಲೇ ಇರುವುದರಿಂದ, ಸರಸಕ್ಕ ನಮ್ಮ ಸಂಭಾಷಣೆಗೆ ಮೂಕ ಶ್ರೋತೃ. ಬಹುಶಃ ಅವರಿಗೆ ಅನಾವಶ್ಯ ಕಿರುಕುಳವಾಗದಿರಲಿ ಎಂದು ಹೀಗೆ ಹೇಳಿದರೇನೋ ಎಂದು ಕೊಂಡೆ. ಆದರೆ ಅನಂತರ ಭಟ್ಟರು ಹೇಳಿದ ಸಂಗತಿಗಿಂತಲೂ ಅವರು ಹೇಳಿದ ರೀತಿ ಮನ ತಟ್ಟಿತು. ವಿಷಯ ಇಷ್ಟೆ. ಅವರು ಊರಿಗೆ ಹೋಗಿದ್ದಾಗ ಅವರ ಮನೆಯ ಕಿಟಕಿಯ ಸರಳುಗಳನ್ನು ಬಾಗಿಸಿ, ಒಳನುಗ್ಗಿದವರು, ಮನೆಯಲ್ಲಿ ಜಾಲಾಡಿದ್ದರು. "ನೋಡಿ, ಈ ಕಬ್ಬಿಣದ ಕಂಬಿ ಎಷ್ಟು ಗಟ್ಟಿ. ಇದನ್ನು ಬಾಗಿಸಿದ್ದಾರೆ ಎಂದರೆ ಎಷ್ಟು ಬಲ ಬಳಸಿರಬೇಕು," ಭಟ್ಟರ ಒಳಗಿನ ಫಿಸಿಕ್ಸ್‌ ಶಿಕ್ಷಕ ಲೆಕ್ಕ ಹಾಕಿತು. "ಇದೇನು ವಿಚಿತ್ರ ಶರ್ಮರೆ, ನಾವು ಯಾವ ಕೋಣೆಯ ಬಾಗಿಲನ್ನೂ ಹಾಕಿರಲಿಲ್ಲ. ಎಲ್ಲವೂ ತೆರೆದಿತ್ತು. ಇದೊಂದು ಕೋಣೆಯ ಬಾಗಿಲನ್ನು ಹಾಕಿದ್ದೆವು. ಅದನ್ನೇ ಮುರಿದಿದ್ದಾರೆ. ಅಲಮಾರಿಯ ಬೀಗಗಳನ್ನೂ ಹಾಕಿರಲಿಲ್ಲ. ಒಟ್ಟು ಒಂದಿನ್ನೂರು ರೂಪಾಯಿಗಳು, ಒಂದು ಹಳೆಯ, ರಿಪೇರಿಗೆ ಇದ್ದ ಕ್ಯಾಮೆರಾ ಇವಷ್ಟೆ ತೆಗೆದುಕೊಂಡು ಹೋಗಿದ್ದಾರೆ." ಸಜ್ಜನಿಕೆಯ ಭಟ್ಟರ ವಿವರಣೆಯಲ್ಲಿ ಎಲ್ಲಿಯೂ ಕಳ್ಳ ಎನ್ನುವ ಪದ ಕಾಣಿಸಲಿಲ್ಲ. ಯಾರೋ ಕುಶಲಕಲೆಗಾರನ ಕಥೆ ಹೇಳುವಂತೆ ಹೇಳಿದರು. ತಮಗೆ ಅನ್ಯಾಯ ಮಾಡಿದವರನ್ನೂ ಹೀಗಳೆಯದ ಸಜ್ಜನಿಕೆ ಅವರಲ್ಲಿ ಕಂಡು ವಿಚಿತ್ರವೆನ್ನಿಸಿತು. ಅವರಲ್ಲಿ ಸಿಟ್ಟಿನ ಲೇಶವೂ ಇರಲಿಲ್ಲ.

"ಹಣ ಹೋದದ್ದಕ್ಕೆ ಬೇಸರವಿಲ್ಲ ಶರ್ಮರೆ. ಆದರೆ ಯಾರೋ ಅಪರಿಚಿತರು ನಮ್ಮ ಸೀಮೆಯೊಳಗೆ, ಅನುಮತಿ ಇಲ್ಲದೆ ಪ್ರವೇಶಿಸಿದರು ಅನ್ನುವ ಅನಿಸಿಕೆಯೇ ಎದೆಯನ್ನು ಭಾರವಾಗಿಸಿದೆ," ಎಂದ ಎಪ್ಪತ್ತರ ವೃದ್ಧರ ಮಾತು ಎದೆ ತಟ್ಟಿತು. ಅಷ್ಟರಲ್ಲಿ ಬಂದ ಸರಸಕ್ಕ, ಮೊಮ್ಮಗಳು ಕಳ್ಳನ ಬಗ್ಗೆ ಕೇಳಿದ ಪ್ರಶ್ನೆಗಳನ್ನು ನೆನಪಿಸಿಕೊಂಡರು. ಕಳ್ಳ ಯಾರು? ಅವನಿಗೆ ಮೀಸೆ ಇದೆಯಾ? ಕಳ್ಳನ ಬಣ್ಣ ಏನು? ನೋಡಿದರೆ ಹೆದರಿಕೆ ಆಗುತ್ತದೆಯಾ? ನಿಜ. ಕಳ್ಳ ಎನ್ನುವವರ ಸ್ವರೂಪ ಹೇಗಿದೆ ಎಂದು ಕಲ್ಪಿಸಿಕೊಳ್ಳುವುದು ಕಷ್ಟವೇ! ಹಳೆಯ ಸಿನಿಮಾದ ಸ್ಟೀರಿಯೊಟೈಪ್‌ ನೆನಪಿಗೆ ಬರುತ್ತದೆ. ಕಣ್ಣಷ್ಟೆ ತೋರುವಂತೆ ಮುಖವಾಡ. ಕೈಯಲ್ಲೊಂದು ಚಾಕು. ಇಂಗ್ಲೀಷ್‌ ಸಿನೆಮಾಗಳಲ್ಲಿಯಾದರೆ ಪಟ್ಟೆ ಅಂಗಿ. ಆದರೆ ನಿಜವಾಗಿ ಕಳ್ಳ ಎಂದರೆ ಏನು?

ಭಟ್ಟರು ಹೇಳಿದಂತೆ ನಮ್ಮ ಸೀಮೆಯೊಳಗೆ ಅನುಮತಿ ಇಲ್ಲದೆ ಪ್ರವೇಶಿಸಿ, ಅಪರಿಚಿತನಾಗಿ ಉಳಿವ, ನಷ್ಟ ಉಂಟು ಮಾಡುವವರನ್ನು ಕಳ್ಳರು ಎನ್ನಬಹುದೇ? ಅದುವೇ ಸರಿ ಎಂದು ಅನಿಸಿತು. ಹೀಗಾದರೆ ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಕಳ್ಳತನ ಮಾಡಿದವರೇ ಆಗಿರಬೇಕಲ್ಲವೇ? ಬಾಗಿಲು ಮುರಿಯದಿರಬಹುದು. ಆದರೆ ಯಾರದ್ದೋ ಮನದಲ್ಲಿನ ನೆನಪುಗಳಲ್ಲಿ, ನಮ್ಮ ಅರಿವಿಗೇ ಬಾರದೆ, ಅಪರಿಚಿತರಾಗಿ ನಡೆಸಿದ ಯಾವುದೋ ಕೃತ್ಯ, ಕಳ್ಳತನವಾಗಬಹುದಲ್ಲವೇ? ರೈಲು ನಿಲ್ದಾಣದಲ್ಲಿ ಟಿಕೇಟು ಕ್ಯೂನಲ್ಲಿ ಮೆಲ್ಲನೆ ಸರದಿ ತಪ್ಪಿಸಿ ಟಿಕೇಟು ಕೊಂಡು ಏನೋ ಗೆದ್ದವರಂತೆ ನಡೆಯುವಾಗಲೂ, ಯಾರ ಮನಸ್ಸಿನಲ್ಲಿಯೋ ನಾವು ಕಳ್ಳರಾಗಿ ಉಳಿಯಬಹುದಲ್ಲ! ಬಸ್ಸಿನಲ್ಲಿ ಕೈಗಳೆರಡರಲ್ಲೂ ಸಾಮಾನು ಇಟ್ಟುಕೊಂಡು ಸುಸ್ತಾಗಿ ನಿಂತವರು ಖಾಲಿಯಾದ ಸೀಟಿಗೆ ತಲುಪುವುದಕ್ಕೆ ಮುನ್ನವೇ ಓಡಿ, ಜಂಭದ ನಗು ನಗುತ್ತ ಕುಳಿತುಕೊಳ್ಳುವಾಗಲೂ ನಾವು ಕಳ್ಳತನ ಮಾಡಿರಬಹುದಲ್ಲವೇ? ಅಥವಾ ಅದು ಸ್ಪರ್ಧೆಯೋ? ಒಟ್ಟಾರೆ ಭಟ್ಟರ ಮೊಮ್ಮಗಳಿಗೆ ಕಳ್ಳನ ವಿವರಣೆ ಕೊಡುವುದು ಹೇಗೆಂದು ಆಲೋಚಿಸುತ್ತ ಮನೆಗೆ ಬಂದೆ.

ಹಾಂ. ಈ ಬ್ಲಾಗ್‌ನಲ್ಲಿ ಭಟ್ಟರ ಬದುಕಿನ ಈ ಖಾಸಗಿ ಘಟನೆಯನ್ನು ಬರೆಯುವುದೂ ಕಳ್ಳತನವೇ! ಸದ್ಯ. ಭಟ್ಟರು ಇದಕ್ಕೆ ಅನುಮತಿ ನೀಡಿದ್ದಾರೆ ಎನ್ನುವ ಸಮಾಧಾನ ಹೇಳಿಕೊಳ್ಳಬೇಕಷ್ಟೆ.

Saturday, March 1, 2008

ಒಂದು ಸಾವಿನ ನೆನಪು!

ಇನ್ನೇನು ಮೂರು ತಿಂಗಳು ಕಳೆದರೆ ನಾಲ್ಕು ವರ್ಷಗಳಾಗುತ್ತವೆ. ಆದರೆ ಅಂದು ಎದೆ ನಡುಗಿಸಿದ ಭೀತಿ ಇನ್ನೂ ಮರೆಯಾಗಿಲ್ಲ. ಬೇರೆ ಇನ್ನೇನು ಕಾರಣ ಹೇಳಬಹುದು? ಆ ದಿನ ಬೆಳ್ಳಂಬೆಳಗ್ಗೆ, ವಿಜಯನಗರದ ಸಮೀಪ, ರಸ್ತೆಯಿಂದ ಜಾರಿ ಬದಿಯ ಹಳ್ಳಕ್ಕೆ ಬಿದ್ದ ಕಾರಿನ ಪುಕ್ಕದ ದೀಪ ಹೊಳೆಯುತ್ತಲೇ ಇತ್ತು. ಆದರೆ ನಾನು ಅಲ್ಲಿ ನಿಲ್ಲದೇ ಓಡಿಬಿಟ್ಟೆ. ಕಾರಿನಲ್ಲಿ ಯಾರಾರೂ ಇದ್ದಾರೋ ಇಲ್ಲವೋ ಗಮನಿಸಲೂ ಇಳಿಯಲಿಲ್ಲ. ಅನಾಗರೀಕನಾಗಿಬಿಟ್ಟೆ. ಇನ್ನೊಂದು ದಿನ ಕೆಡಿ ವೃತ್ತದ ಬಳಿ, ಮಟ-ಮಟ ಮಧ್ಯಾಹ್ನ ಎರಡು ಬೈಕ್‌ಗಳ ಢಿಕ್ಕಿಯಾಗಿ, ಒಬ್ಬ ಅಂಗಾತ ಬಾಯಿ ಬಿಟ್ಟು ರಸ್ತೆಯಲ್ಲಿಯೇ ಬಿದ್ದಿದ್ದರೂ, ನಾನು ಕೆಲಸಕ್ಕೆ ತಡವಾದೀತು ಎಂದು ಕಾರಣ ಹೇಳಿಕೊಂಡು ಓಡಿ ಬಿಟ್ಟೆ. ಬೇರೆ ದಿನಗಳಲ್ಲಿ ಕೆಲಸಕ್ಕೆ ತಡವಾದರೆ, ರಜೆ ಹಾಕಿದರಾಯಿತು ಬಿಡು ಎನ್ನುವ ಧಾರ್ಷ್ಟ್ಯ ತೋರುವವ, ಅಂದು ಬಹಳ ಪ್ರಾಮಾಣಿಕನಂತೆ ಓಡಿ ಬಿಟ್ಟೆ.

ಒಂದಲ್ಲ ಎರಡಲ್ಲ, ಕಳೆದ ನಾಲ್ಕು ವರ್ಷಗಳಲ್ಲಿ ಹತ್ತಾರು ಅಪಘಾತಗಳನ್ನು ನೇರವಾಗಿ ನೋಡಿದ್ದೇನೆ. ಎಲ್ಲಿಯೂ ನಾಗರೀಕನಂತೆ ವರ್ತಿಸಲಿಲ್ಲ. ಯಾಕೋ, ಎದೆ ಢವಗುಟ್ಟುತ್ತದೆ. ನಾಲ್ಕು ವರ್ಷಗಳ ಹಿಂದೆ, ಬಾಗಿಲ ಎತ್ತರಕ್ಕೂ ನಿಂತು, "ಅಂಕಲ್‌, ಎರಡೇ ನಿಮಿಷ. ಹೀಗೆ ಹೋಗಿ ಹಾಗೆ ಬಂದು ಬಿಡುತ್ತೀನಿ. ನೀವು ರೆಸ್ಟ್‌ ತೆಗೆದುಕೊಳ್ಳಿ," ಎಂದು ಹೋದವ ಮತ್ತೆ ಬರಲೇ ಇಲ್ಲ. ನಾನು ಕಾದದ್ದೇ ಆಯಿತು. ಬಂದದ್ದು ಪಕ್ಕದ ಮನೆಯಾಕೆ. "ಮೂಲೆಯಲ್ಲಿ ಒಂದು ಆಕ್ಸಿಡೆಂಟ್‌ ಆಗಿದೆ. ಸ್ಪಾಟ್‌. ಹುಡುಗ ಯಾರು ಅಂತ ಹುಡುಕುತ್ತಿದ್ದಾರೆ. ನಿಮಗೇನಾದರೂ ಗುರುತು ಸಿಗುತ್ತದೆಯೋ," ಎಂದು ಕೇಳಲು ಬಂದಿದ್ದರು. ಓಡಿದೆ. ನನ್ನ ಅನುಮಾನ ನಿಜವಾಗಿತ್ತು.ಅಲ್ಲಿ ಇದ್ದದ್ದು ಅವನದ್ದೇ ಬೈಕ್‌. ಅವನಿರಲಿಲ್ಲ."ಓಹ್‌, ದೇವರೇ!" ಅಪ್ಪಟ ನಾಸ್ತಿಕನ ಬಾಯಿ ಅಯಾಚಿತವಾಗಿ ನುಡಿದಿತ್ತು. ಬಳಿಯಲ್ಲೇ ಇದ್ದ ಪೋಲೀಸನ್ನು ವಿಚಾರಿಸಿದ್ದೆ. "ಎಲ್ಲಿ ಹುಡುಗ?" "ಶವಾಗಾರದಲ್ಲಿ," ಎಂದು ನಿರ್ಲಿಪ್ತನಾಗಿ ನುಡಿದಿದ್ದ. ಡಾಕ್ಟರುಗಳು, ಪೋಲೀಸರು ಸಾವನ್ನು ವರದಿ ಮಾಡುವಷ್ಟು ನಿರ್ಭಾವುಕರಾಗಿ ಇನ್ಯಾರೂ ಮಾಡಲು ಸಾಧ್ಯವಿಲ್ಲ. ಅದಕ್ಕೂ ಬಹುಶಃ ತರಬೇತಿ ಬೇಕಾಗಬಹುದು.

ಹೌದು. ತೇಜ ಇನ್ನಿಲ್ಲ ಎನ್ನುವ ವಿಷಯ ಎದೆಗೆ ಒದ್ದಿತು. ತೊಡೆ ಥರ,ಥರ ನಡುಗಿತು. ಮನೆಗೆ ಓಡಿ ಬಂದೆ. ನನ್ನ ಮುಖ ನೋಡಿಯೇ ಮಡದಿಗೆ ವಿಷಯ ತಿಳಿದಿತ್ತು ಎನ್ನಿಸುತ್ತೆ. ಪಕ್ಕದಲ್ಲಿ ಅತೀವ ಜ್ವರದಲ್ಲಿ ಮಲಗಿದ್ದ ಮಗನನ್ನೂ ಮರೆದು ಓ ಎಂದು ಅಳತೊಡಗಿದಳು. ನಿಜ. ಸಾವು ಯಾರಿಗೂ ಹೇಳಿ ಬರುವುದಿಲ್ಲ. ಯಾರನ್ನೂ ಅದು ಅಪಾಯಿಂಟ್‌ಮೆಂಟ್‌ ಕೇಳುವುದಿಲ್ಲ. ಆದರೆ, ಹೀಗೇ ಏಕೆ? ಕೆಲವೇ ನಿಮಿಷಗಳ ಹಿಂದೆ ನಗುವಾಗಿದ್ದವ, ಶವವಾಗಿದ್ದ. ತಲೆಯೊಡೆದು ಬಿದ್ದು ಶವಾಗಾರದ ಒಂದು ಪೆಟ್ಟಿಗೆಯ ನಂಬರ್‌ ಆಗಿದ್ದ. ಬರೇ ಬಾಡಿ. ಯಾರಾದರೂ ನೀರು ಕುಡಿಸಿದರೋ ಇಲ್ಲವೋ? ಸಾಯುವ ಮೊದಲು ಏನು ಹೇಳಿರಬಹುದು? ಅಂಕಲ್‌ ಎಂದನೇ? ಅಥವಾ ನನಗಿಂತಲೂ ಆಪ್ತಳಾಗಿದ್ದ ಮಡದಿಯನ್ನು ನೆನಪಿಸಿಕೊಂಡನೇ? ಇಲ್ಲ, ಮನೆಯಲ್ಲಿ ಜ್ವರದಿಂದ ಮಲಗಿದ್ದ ಮಗನಿಗಾಗಿ ಔಷಧಿ ತರಲು ಹೋಗಿದ್ದನಲ್ಲ? ಅವನನ್ನು ಕರೆದನೇ? ಸಾವನ್ನು ಎದುರಿಸಿದಾಗ ಏನು ಮಾತನಾಡಿರಬಹುದು? ಏನೇನು ಭಾವನೆಗಳು ಬಂದಿರಬಹುದು? ನೋವಾಯಿತೋ? ಅಥವಾ ಏನೂ ಗೊತ್ತೇ ಆಗಲಿಲ್ಲವೋ?

ಅಂದಿನಿಂದ ಇಂದಿನವರೆವಿಗೂ ಅಪಘಾತಗಳನ್ನು ಎದುರಿಸಲು ಭಯವಾಗುತ್ತದೆ. ಪರಿಚಿತ ಮುಖದ ಮೇಲೆ ಘಾಯ, ರಕ್ತದ ಕಲೆಗಳು ಇರುವುದನ್ನು ಸಹಿಸಲಾಗುವುದಿಲ್ಲ. ಸಾವು ನನ್ನನ್ನೂ ಹಿಡಿದು ಬಿಟ್ಟೀತೇನೋ ಎನ್ನುವ ಆತಂಕವಿರುವವನಂತೆ ಅಪಘಾತಗಳಿಂದ ದೂರ ಓಡುತ್ತೇನೆ. ರಸ್ತೆಯಲ್ಲಿ ಚಲಿಸುವಾಗ, ಬದಿಯಿಂದ ಯಾವುದೇ ವಾಹನ ವೇಗದಿಂದ ಚಲಿಸಿದರೂ "ಆ ಕ್ಷಣ" ನೆನಪಾಗುತ್ತದೆ. "ಅಂಕಲ್‌, ಎರಡೇ ನಿಮಿಷ. ಹೀಗೆ ಹೋಗಿ ಹಾಗೆ ಬರುತ್ತೇನೆ," ಎಂದದ್ದು ಧ್ವನಿಸುತ್ತದೆ. ಆ ಕೊನೆಯ ಶಬ್ದಗಳು ಎಲ್ಲಿಯಾದರೂ ಕೇಳಿಸಿಬಿಟ್ಟರೆ ಎನಿಸುತ್ತದೆ. ಸಾಯುವವರ ಸನಿಹದಲ್ಲಿ ಇರುವುದಕ್ಕಿಂತಲೂ ಸತ್ತವರನ್ನು ಮಣ್ಣು ಮಾಡುವುದು ಸುಲಭವೇನೋ ಎನಿಸುತ್ತದೆ. ರೊಯ್ಯನೆ ಬದಿಯಿಂದ ಬೈಕ್‌ ಮುಂದೋಡಿದರೆ, ಈ ಎಲ್ಲ ಭಾವನೆಗಳೂ ಒಂದು ಕ್ಷಣ ಎದುರಾಗಿ, ಸ್ಟೀರಿಂಗ್‌ ನಡುಗುತ್ತದೆ. ನಾನು ಮತ್ತೆಂದು ನಾಗರೀಕನಾಗುವೆನೋ?

Saturday, February 23, 2008

ಕೃತಿಚೌರ್ಯ

ನಿನ್ನೆ (೨೩.೧.೨೦೦೮) ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಯಲ್ಲಿ ತಿರುಪತಿ ವಿಶ್ವವಿದ್ಯಾನಿಲಯ ಅಲ್ಲಿನ ಪ್ರೊಫೆಸರ್‌ ಒಬ್ಬರಿಗೆ ಶಿಕ್ಷೆ ವಿಧಿಸಿದ್ದು ಓದಿದೆ. ಅಪರಾಧ: ಕೃತಿಚೌರ್ಯ. ವಿಜ್ಞಾನ ಮತ್ತು ಶೈಕ್ಷಣಿಕ ಜಗತ್ತಿನಲ್ಲಿ ಕೃತಿಚೌರ್ಯದಷ್ಟು ಹೀನ ಕೃತ್ಯ ಇನ್ನೊಂದಿಲ್ಲ. ಇವೆರಡೂ ಕ್ಷೇತ್ರಗಳೂ ಬೌದ್ಧಿಕ ಚಟುವಟಿಕೆಗೆ ಮೀಸಲು. ಇಲ್ಲಿ ನಿಮ್ಮ ಚಿಂತನೆಗಳು ಮೂರ್ತ ರೂಪ ಪಡೆಯುತ್ತವೆ. ವಿಜ್ಞಾನ ಕ್ಷೇತ್ರದಲ್ಲಂತೂ, ವೈಯಕ್ತಿಕ ಚಿಂತನೆಗಳು ಪ್ರಯೋಗ, ಪರಾಮರ್ಶೆಗಳ ಒರೆಯಲ್ಲಿ ಪುಟವಿಟ್ಟು ಬರುತ್ತವೆ. ಈ ದಿನಗಳಲ್ಲಿ ನಿತ್ಯವೂ ಲಕ್ಷಾಂತರ ಸಂಶೋಧನಾ ಪ್ರಬಂಧಗಳು ಪ್ರಕಟವಾಗುತ್ತಿವೆ. ಇವುಗಳೆಲ್ಲವನ್ನೂ ಕೃತಿಚೌರ್ಯವಲ್ಲ ಎಂದು ವೈಜ್ಞಾನಿಕ ಜಗತ್ತು ನಂಬುತ್ತದೆ. ಏಕೆಂದರೆ, ಪ್ರಕಟಣೆಯಾಗುವ ಮುನ್ನ ಈ ಎಲ್ಲ ಪ್ರಬಂಧಗಳೂ ವಿಜ್ಞಾನ ಜಗತ್ತಿಗೇ ವಿಶಿಷ್ಟವೆನ್ನಿಸಿದ ಪೀರ್‌ ರಿವ್ಯೂ (ಸೋದರ ಪರಾಮರ್ಶೆ)ಯ ಶೋಧಕದಿಂದ ಹೊರ ಬರಬೇಕು. ಪ್ರಬಂಧಗಳನ್ನು ಅವುಗಳಲ್ಲಿನ ವೈಜ್ಞಾನಿಕ ಅಡಕಗಳ ಸತ್ಯಾಸತ್ಯತೆಯ ಪರಿಶೀಲನೆಗೆಂದು ಅದೇ ಕ್ಷೇತ್ರದಲ್ಲಿ ಸಂಶೋಧನೆಗೈಯುತ್ತಿರುವ ಇನ್ನೂ ಹಲವರಿಗೆ ತಲುಪಿಸಲಾಗುತ್ತದೆ. ಲೇಖಕ ಯಾರೆಂಬುದು ಈ ಪರಾಮರ್ಶಕರಿಗೆ ತಿಳಿದಿದ್ದರೂ, ಪರಾಮರ್ಶಕರು ಯಾರೆಂಬುದು ಲೇಖಕರಿಗೆ ತಿಳಿದಿರುವುದಿಲ್ಲ. ಪರಾಮರ್ಶಕರು, ಲೇಖನದಲ್ಲಿರುವ ಪ್ರಯೋಗಗಳು,ಫಲಿತಾಂಶಗಳು ಹಾಗೂ ಅವುಗಳಿಂದ ಪಡೆದ ತೀರ್ಮಾನವೆಲ್ಲವೂ ಸತ್ಯ ಎಂದು ಮನವರಿಕೆ ಮಾಡಿಕೊಂಡು, ಪ್ರಕಟಣೆಗೆ ಯೋಗ್ಯವೆಂದು ತೀರ್ಮಾನಿಸುತ್ತಾರೆ. ಇಲ್ಲಿ ಭಾಷೆ ಮುಖ್ಯವಾಗುವುದಿಲ್ಲ. ಅದಾದ ಅನಂತರ ಕೃತಿ ಪ್ರಕಟವಾಗುತ್ತದೆ. ವೈಜ್ಞಾನಿಕ ಜಗತ್ತಿನಲ್ಲಿ ತನ್ನ ನೆಲೆ ಕಂಡುಕೊಳ್ಳುತ್ತದೆ.

ತಿರುಪತಿಯ ಪ್ರೊಫೆಸರ್‌ರವರು ಇದುವರೆವಿಗೂ ಪ್ರಕಟಿಸಿರುವ ೭೫ ಪ್ರಬಂಧಗಳೂ ಕೃತಿಚೌರ್ಯವಿರಬಹುದು ಎಂದು ಗುಮಾನಿಸಲಾಗಿದೆ. ಗುಮಾನಿಗೆ ಕಾರಣ: ಅವರು ಪ್ರಬಂಧಗಳಲ್ಲಿ ನಮೂದಿಸಿರುವ ಪ್ರಯೋಗಗಳನ್ನು ನಡೆಸುವ ಸವಲತ್ತು ಅವರ ವಿಶ್ವವಿದ್ಯಾನಿಲಯದಲ್ಲಿ ಇರಲೇ ಇಲ್ಲ! ವಿಜ್ಞಾನ ಜಗತ್ತಿನಲ್ಲಿ ಸಂಶೋಧನೆಗಳನ್ನು ಸತ್ಯಾಸತ್ಯತೆಯ ಪರೀಕ್ಷೆ ಎನ್ನಲಾಗುತ್ತದೆ. ಇಲ್ಲಿ ಭಾವುಕತೆಗೆ, ಕಲ್ಪನಾವಿಹಾರಕ್ಕೆ ಎಡೆ ಇಲ್ಲ. ಆದರೂ, ಕೇವಲ ಕಾಲ್ಪನಿಕ ಸಂಶೋಧನೆಗಳನ್ನು ನಡೆಸಿಯೇ ಇಷ್ಟು ವರುಷ ವಿದ್ವತ್‌ ಜಗತ್ತಿನಲ್ಲಿ ಬದುಕುಳಿದ ಈ ಚಾಣಾಕ್ಷ ಮತಿಯನ್ನು ಹೊಗಳಬೇಕೇ, ತೆಗಳಬೇಕೇ?

ಭಾರತದಲ್ಲಿ ಕೃತಿಚೌರ್ಯದ ಸಂಗತಿ ಬಯಲಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರುಷ ಚೆನ್ನೈನಲ್ಲಿರುವ ಅಣ್ಣಾಮಲೈ ವಿಶ್ವವಿದ್ಯಾನಿಲಯದ ಫಿಸಿಕ್ಸ್‌ ಸಂಶೋಧಕನೊಬ್ಬ, ಹತ್ತು ತಿಂಗಳ ಹಿಂದೆ ಸುಪ್ರಸಿದ್ಧ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಸಂಶೋಧನಾ ಪ್ರಬಂಧವೊಂದನ್ನು ಸಾರಾಸಗಟು (ಪದಕ್ಕೆ ಪದ) ನಕಲು ಮಾಡಿ, ಅದರ ಶೀರ್ಷಿಕೆ ಬದಲಿಸಿ ಪ್ರಕಟಿಸಿದ್ದ. ವಿಷಯ ಬಯಲಾದಾಗ, ಅದು ತನ್ನದೇ ಎಂದು ವಾದಿಸಿಯೂ ಇದ್ದ.

ಹೀಗೆ ವೈಜ್ಞಾನಿಕ ಜಗತ್ತಿನ ಆಧಾರಸ್ತಂಭವೆನ್ನಿಸಿದ ವಿಶ್ವಾಸದ ಬುಡಕ್ಕೇ ಕೊಡಲಿಯೇಟು ನೀಡುವವರಿಗೆ ನೀಡುವ ಶಿಕ್ಷೆಯಾದರೂ ಏನು? ಇನ್ನು ಮುಂದೆ ಅವರು ಸಂಶೋಧನೆ ನಡೆಸಬಾರದು, ಅಷ್ಟೆ. ಎಂದಿನಂತೆ ಪಾಠ ಹೇಳಬಹುದು. ಕಲಿಸುವರೋ, ಕದಿಯಲು ತಿಳಿಸುವರೋ ಯಾರು ಬಲ್ಲರು.