Sunday, November 22, 2009

ಜಾಗತೀಕರಣ

ಮೊನ್ನೆ ಅಮೆರಿಕೆಯಲ್ಲಿ ಓದುತ್ತಿರುವ ಮಗಳ ಫೋನ್‌. ಅಪ್ಪಾ... "ಮುಂದಿನ ತಿಂಗಳು ಕ್ರಿಸ್‌ಮಸ್‌ಗಾಗಿ ಇಲ್ಲಿ ರಿಯಾಯಿತಿ ಮಾರಾಟ ಇರುತ್ತದೆ. ನಿನಗೆ ಏನಾದರೂ ಬೇಕಾದರೆ ಹೇಳು. ರಜೆಗೆ ಬರುವಾಗ ಕೊಂಡು ತರುತ್ತೇನೆ," ಅಂದಳು. ಹೇಳಿ, ಕೇಳಿ ಅಮೆರಿಕೆ. ಅಲ್ಲಿ ಪ್ರತಿ ಡಾಲರನ್ನೂ ರೂಪಾಯಿಗೆ ಪರಿವರ್ತಿಸಿಕೊಂಡು ಲೆಕ್ಕ ಹಾಕುವ ಮಗಳು ಹೀಗೆ ಹೇಳಿದಾಗ ಆಶ್ಚರ್ಯವೆನಿಸಿತು. "ಏನೂ ಬೇಡಮ್ಮ," ಎಂದೆ. ಆದರೆ ಅವಳು ಬಿಡಬೇಕಲ್ಲ. "ಏನು ಬೇಕು ಹೇಳು ತರ್ತೀನಿ" ಅಂತ ಹಠ ಹಿಡಿದಳು. ಎಲ್ಲ ಅಪ್ಪಂದಿರ ಹಾಗೇ ವಿನಾಕಾರಣ ಖರ್ಚು ಮಾಡಿ ತೊಂದರೆಗೆ ಮಗಳು ಸಿಕ್ಕಿಕೊಳ್ಳಬಹುದು ಎನ್ನಿಸಿ, ಮತ್ತೊಮ್ಮೆ ಏನೂ ಬೇಡ ಅಂದೆ. ಆದರೂ ಅವಳ ವರಾತ ಹೆಚ್ಚಾದಾಗ, "ಇಲ್ಲಿ ಸಿಗದ್ದು ಅಲ್ಲಿದ್ದರೆ ತೊಗೊಂಡು ಬಾ." ಎಂದೆ.

ನಾನು ಅಮೆರಿಕೆಗೆ ಹೋಗಿಲ್ಲ. ಹೋಗುವ ಹುಮ್ಮಸ್ಸೂ ಇಲ್ಲ. ಇಡೀ ಕರ್ನಾಟಕವನ್ನೇ ಸುತ್ತಿ ಬಂದರೂ ಎರಡು ಜನ್ಮ ಸಾಲದಷ್ಟು ನೋಡುವುದಿದೆ. ನೂರು ಜನ್ಮ ಕಳೆದರೂ ಭಾರತವನ್ನು ಪೂರ್ತಿ ಸುತ್ತಿ ನೋಡಲಾಗುವುದಿಲ್ಲ. ಇನ್ನು ಅಮೆರಿಕೆಗೋ, ಯುರೋಪಿಗೋ ಹೋಗಿ ಬಂದರೆ ಸಾಕೇ ಅನ್ನುವುದು ನನ್ನ ಅನಿಸಿಕೆ. ಅಮೆರಿಕೆಗೋ, ಯುರೋಪಿಗೋ ಹೋಗಿ ಬಂದವರನ್ನು ಕೈಲಾಸಕ್ಕೇ ಹೋಗಿ ಬಂದಂತೆ ಗೌರವಿಸುತ್ತಿದ್ದ ಕಾಲವಿತ್ತು. ಈಗ ಕಾಲ ಬದಲಾಗಿದೆ.

ಕಾಲ ಇನ್ನೊಂದು ಬದಲಾವಣೆಯನ್ನೂ ತಂದಿದೆ. ಹಿಂದೆ ಕಾಶಿಗೆ ಹೋಗಿ ಬಂದವರನ್ನು "ಕಾಶಿಯಲ್ಲಿ ಏನನ್ನು ಬಿಟ್ಟು ಬಂದೆ" ಅಂತ ಕೇಳ್ತಾ ಇದ್ದರಂತೆ. ಹಾಗೆಯೇ ಕಛೇರಿ ನಿಮಿತ್ತವಾಗಿಯೋ, ವಿರಾಮಕ್ಕೋ ಎಲ್ಲಿಗಾದರೂ ಪ್ರವಾಸ ಹೋದವರು ಮರಳಿದಾಗ ಅಲ್ಲಿಂದ ಏನು ತಂದೆ ಎನ್ನುವ ಪ್ರಶ್ನೆ ಎದುರಾಗುತ್ತಿತ್ತು. ರಾಮೇಶ್ವರ, ಕನ್ಯಾಕುಮಾರಿಯ ಪ್ರವಾಸಿಗಳು ಕಪ್ಪೆಚಿಪ್ಪುಗಳ ಸಾಮಾನುಗಳನ್ನು ಹೊತ್ತು ತರುತ್ತಿದ್ದರು. ದೆಹಲಿಗೆ ಹೋದವರು "ಡೆಲ್ಲಿ ಸೆಟ್‌" ರೇಡಿಯೋಗಳನ್ನೋ, ಟೇಪ್‌ರೆಕಾರ್ಡರ್‌ಗಳನ್ನೋ ತರುತ್ತಿದ್ದರು. ಮುಂಬಯಿಯಿಂದ ಬರುವವರ ಜೊತೆಗೆ ಉಡುಪಿನ ಉಡುಗೊರೆಯ ಕಂತೆ ಇರುತ್ತಿತ್ತು. ಚೆನ್ನೈನಿಂದ ಚರ್ಮದ ಸಾಮಾನುಗಳು, ಗೌಹಾತಿಯಿಂದ ಗುಡ್ಡಗಾಡು ಜನರ ದಿರಿಸುಗಳು, ಜಬಲ್‌ಪುರದಿಂದ ಅಮೃತಶಿಲೆಯ ಸಾಮಾನುಗಳು, ಲಕ್ನೋ-ಕಲ್ಕತ್ತಾದಿಂದ ಚಪ್ಪಲಿ, ಮೈಸೂರಿನಿಂದ ಗಂಧದ ಕೆತ್ತನೆ, ಜಯಪುರದ ರಜಾಯಿ... ಹೀಗೇ ಆಯಾ ಪ್ರದೇಶದ ಪ್ರಾದೇಶಿಕ ಸಿರಿಯನ್ನು ನೆನಪಿನ ಕಾಣಿಕೆಯಾಗಿ ತರುತ್ತಿದ್ದುದುಂಟು. ಕಳೆದ ವರ್ಷ ಶಿರಸಿಗೆ ಪ್ರವಾಸ ಹೋಗಿದ್ದಾಗ ಉತ್ತರಕರ್ನಾಟಕದ ವಿಶಿಷ್ಟತೆಯ ಪ್ರತಿನಿಧಿಗಾಗಿ ಹುಡುಕಿದೆ. ಏನೂ ಸಿಗಲಿಲ್ಲ. ಎಲ್ಲ ಅಂಗಡಿಗಳಲ್ಲೂ ಅದೇ ಪ್ಲಾಸ್ಟಿಕ್‌ ಬಿಂದಿಗೆ, ಪ್ಲಾಸ್ಟಿಕ್‌ ವಸ್ತುಗಳು, ಚೀನಾದ ಬೊಂಬೆಗಳು... ಕೊನೆಗೆ ಶಿರಸಿಯ ವಿಶಿಷ್ಟ ಕಷಾಯವನ್ನೇ ಎರಡು ಪ್ಯಾಕೆಟ್‌ ತಂದೆ. "ಅಯ್ಯೋ... ಇದನ್ನು ತರಕ್ಕೆ ಶಿರಸಿಗೆ ಹೋಗಬೇಕಿತ್ತಾ.. ಮನೆಯಲ್ಲೇ ಮಾಡಬಹುದಿತ್ತು," ಅನ್ನುವ ಟೀಕೆಯೂ ಸಿಕ್ಕಿತು ಅನ್ನಿ.

ಮಗಳು ಪ್ರಶ್ನೆ ಕೇಳಿದಾಗ ಇವೆಲ್ಲವೂ ನೆನಪಾಯಿತು. ನಾನು ಕಾಲೇಜು ಓದುತ್ತಿದ್ದಾಗ ಕ್ರಿಕೆಟ್‌ ವೀಕ್ಷಕ ವಿವರಣೆ ಕೇಳಲೆಂದು ಕಾಸು-ಕಾಸು ಕೂಡಿ ಹಾಕಿ ನ್ಯಾಶನಲ್‌ ಪ್ಯಾನಸೋನಿಕ್‌ನ ಒಂದು ಪಾಕೆಟ್‌ ರೇಡಿಯೋ ಕೊಂಡುಕೊಂಡಿದ್ದೆ. ಅದನ್ನು ಕೊಳ್ಳಲು ಬೆಂಗಳೂರಿಗೆ ಹೋಗಬೇಕಿತ್ತು. ಈಗ ನ್ಯಾಶನಲ್‌ ಪ್ಯಾನಸೋನಿಕ್‌ ಇರಲಿ, ಯುರೋಪು, ಅಮೆರಿಕ, ಜಪಾನ್‌ ಮತ್ತು ಚೀನಾದ ವಸ್ತುಗಳು ತಾಲೂಕು, ಹೋಬಳಿ ಕೇಂದ್ರಗಳಲ್ಲಿಯೂ "ಸೇಲ್‌"ನಲ್ಲಿ ಕಾಣಿಸುತ್ತವೆ. ಮೊಬೈಲ್‌ ಫೋನ್‌ಗಳನ್ನೇ ಗಮನಿಸಿ. ಪಾಕಿಸ್ತಾನದ ತೊಗರಿಬೇಳೆ, ಮಲೇಶಿಯಾದ ಪಾಮೆಣ್ಣೆ, ಇಟಲಿಯ ಕಾಪುಚಿನೊ ಕಾಫಿ ಎಲ್ಲವೂ ಭಾರತದಲ್ಲಿ ಲಭ್ಯ. ಕೊಳ್ಳಲು ಕಾಸಿರಬೇಕಷ್ಟೆ!

ದೇಶದ ವಿವಿಧ ಸ್ಥಳಗಳಲ್ಲಿ ದೊರಕುವ ವಸ್ತುಗಳಲ್ಲಿ ವಿಶೇಷತೆ ಕಾಣೆಯಾಗಿರುವುದನ್ನೆ ಜಾಗತೀಕರಣದ ಉದಾಹರಣೆ ಅನ್ನುವುದಾದರೆ ನಮ್ಮ ಮದುವೆ ಊಟದಲ್ಲಿ ಆಗಿರುವ ಬದಲಾವಣೆಗೆ ಏನು ಹೇಳೋಣ! ಸಭೆ, ಸಮ್ಮೇಳನಗಳಲ್ಲಿ ಮತ್ತು ಹೋಟೆಲುಗಳಲ್ಲಿ ದೊರೆಯುವ ಊಟವನ್ನ ನನ್ನ ಗೆಳೆಯರೊಬ್ಬರು’ಪ್ಯಾನ್‌ ಇಂಡಿಯನ್‌’ ಎನ್ನುತ್ತಿದ್ದರು. ಕಾರಣ ಇಷ್ಟೆ: ಎಲ್ಲಿ ಹೋದರೂ ಊಟದಲ್ಲಿ ಚಪಾತಿ, ರೊಟ್ಟಿ ಜೊತೆಗೆ ಒಂದಿಷ್ಟು ಅನ್ನ, ಮೊಸರನ್ನ, ಪಲ್ಯೆ, ಸಾಂಬಾರ್‌, ರಸಂ ದೊರೆತೇ ಇರುತ್ತಿತ್ತು. ದಕ್ಷಿಣಭಾರತದವ ಅನ್ನ, ಸಾಂಬಾರ್‌ ತಿಂದು ಕೈತೊಳೆದರೆ, ಉತ್ತರಭಾರತೀಯರು ರೊಟ್ಟಿ,ಪ ಲ್ಯೆ ತಿಂದು ನಡೆಯಬಹುದಿತ್ತು. ಎರಡನ್ನೂ ತಿಂದು ಹೊಟ್ಟೆ ಬೆಳೆಸಿಕೊಳ್ಳುವುದೂ ಸಾಧ್ಯವಿತ್ತು. ಜೊತೆಗೆ ಐಸ್‌ಕ್ರೀಂ ಖಂಡಿತ. ಈಗ ಮದುವೆಯ ಮನೆಗೆ ಹೋದರೆ ಇಂತಹುದೇ ಊಟ! ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಥಾಲಿ ಎಂದರೆ ಇದೇ!

ಜಾಗತೀಕರಣ ಊಟದ ಎಲೆಯನ್ನೂ ತಾಕದೆ ಬಿಟ್ಟಿಲ್ಲ. ಇದೀಗ ಕರ್ನಾಟಕದ ಮದುವೆಗಳಲ್ಲೂ ಒಂದು ಅಭ್ಯಾಸ ಆರಂಭವಾಗಿದೆ. ಮೊದಲು ಅಯ್ಯಂಗಾರರ ಮದುವೆ ಎಂದರೆ ಪುಳಿಯೋಗರೆ, ಅಯ್ಯರ್‌ರವರ ಮದುವೆಗಳಲ್ಲಿ ವಿಶೇಷ ಪಾಯಸ, ವೀರಶೈವರ ಮದುವೆಗಳಲ್ಲಿ ವಿಶೇಷ ಕಾಳಿನ ಸಾಂಬಾರ್‌, ಕೊಡಗಿನವರ ಮದುವೆಯ ಊಟದ ಮಜವೇ ಬೇರೆ... ಹೀಗೆ ಮದುವೆಯ ಊಟ ವೈವಿಧ್ಯಮಯವಾಗಿರುತ್ತಿತ್ತು. ಇಂದು ಹಾಗಿಲ್ಲ. ಊಟ ನೋಡಿ ಆತಿಥೇಯರು ಎಲ್ಲಿಯವರು ಎಂದು ಊಹಿಸುವುದು ಈಗ ಆಗದ ಮಾತು! ಕೋಸಂಬರಿಯ ಜಾಗದಲ್ಲಿ ಮೆಕ್ಕೆಜೋಳ, ದಾಳಿಂಬೆಯ ಸಲಾಡ್. ಚಿರೋಟಿ-ಫೇಣಿಯ ಜಾಗದಲ್ಲಿ ಬರ್ಫಿ, ಐಸ್‌ಕ್ರೀಂ. ರಾತ್ರಿ ಊಟವಾದರೋ ಪಾನಿಪುರಿ, ಗೋಬಿ ಮಂಚೂರಿ! ಪಿಜ್ಜಾ ಇನ್ನೂ ಮದುವೆಯ ಔತಣಕ್ಕೆ ಸೇರಿಕೊಂಡಿಲ್ಲ ಎನ್ನುವುದೊಂದೇ ಸಮಾಧಾನ. ಎಲೆಯ ತುಂಬಾ ವೈವಿಧ್ಯಮಯವಾದ ತಿನಿಸುಗಳಿದ್ದರೂ, ಅವೆಲ್ಲವೂ ಆಯಾ ಪ್ರದೇಶದ ವಿಶಿಷ್ಟ ಅನ್ನಿಸುವುದೇ ಇಲ್ಲ.

ಜಾಗತೀಕರಣದ ತೌರೂರಾದ ಅಮೆರಿಕೆಯಲ್ಲಿ ಇನ್ನು ಅಲ್ಲಿಗೇ ವಿಶಿಷ್ಟವಾದಂಥದ್ದು ಏನಾದರೂ ಉಳಿದಿರಬಹುದೇ! ಅದಕ್ಕೆ ಮಗಳಿಗೆ ಹೇಳಿದೆ. "ಭಾರತದಲ್ಲಿ ಸಿಗದಂಥದ್ದು ಅಮೆರಿಕೆಯಲ್ಲಿ ಏನಿದೆ ಮಗಳೇ! ಹಾಗೆ ಇರುವುದಾದರೆ ಒಂದೇ... ಅದು ಕುಟುಂಬ... ಅಮ್ಮ, ಅಪ್ಪ... ಅದನ್ನಂತೂ ಅಲ್ಲಿಂದ ಕೊಂಡು ತರಲು ಸಾಧ್ಯವಿಲ್ಲ... ಹಾಗೇ ಬರಿಗೈ ಬೀಸಿಕೊಂಡು ಹಾಯಾಗಿ ಬಾ.." ಎಂದೆ. ಅವಳಿಗೆ ಎಷ್ಟು ಅರ್ಥವಾಯಿತೋ ಗೊತ್ತಿಲ್ಲ. ಜನರೇಶನ್‌ ಗ್ಯಾಪ್‌ ಇರಲೇ ಬೇಕಲ್ಲ!

Wednesday, November 18, 2009

ಸಂಗೀತ

ಮೊನ್ನೆ ಮಗ ಇದ್ದಕ್ಕಿದ್ದ ಹಾಗೆ ಪಿಟೀಲು ಕಲಿಯಬೇಕು ಎಂದಾಗ ಆಶ್ಷರ್ಯವಾಯಿತು. ಏಕೆಂದರೆ ಎಲ್ಲ ಅಪ್ಪ-ಅಮ್ಮಂದಿರ ಹಾಗೇ ನನ್ನ ಮಗನೂ ಸರ್ವಕಲಾಸಂಪನ್ನನಾಗಬೇಕು ಎಂದು ಸಂಗೀತ ಪಾಠಕ್ಕೆ ಕಳಿಸುತ್ತಿದ್ದೆವು. ಒಂದು ವರ್ಷ ಹೋದವ ಮನೆಯಲ್ಲಿಯೂ ಎಂದೂ ’ಸಾಪಾಸಾ’ ಅಭ್ಯಾಸ ಮಾಡಲೇ ಇಲ್ಲ. ಆಮೇಲೆ ಎಂದೋ, ಏನೋ ಕಾರಣದಿಂದ ಪಾಠ ನಿಲ್ಲಿಸಿದವ, ಮತ್ತೆ ಅದರ ನೆನಪನ್ನೂ ಮಾಡಿಕೊಂಡಿರಲಿಲ್ಲ. ಹೀಗಾಗಿ ಪಿಟೀಲು ತರಗತಿಗೆ ಸೇರುತ್ತೇನೆ ಎಂದಾಗ ಅದು ಕ್ಷಣಿಕ ಮೋಹ ಅಂತಲೇ ಭಾವಿಸಿದೆ. ಆದರೆ ಅವ ಮತ್ತೆ ಮತ್ತೆ ಅದೇ ರಾಗ ಹಾಡಿದಾಗ ಪಾಠಕ್ಕೆ ಸೇರಿಸದೆ ವಿಧಿ ಇರಲಿಲ್ಲ. ಆದರೂ ನನ್ನ ಮಗನಲ್ಲವೇ! ನನ್ನ ಹಾಗೆಯೇ ಶ್ರುತಿಗಿವುಡ. ಕೆಲವೇ ದಿನಗಳಲ್ಲಿ ಮತ್ತೆ ಪಿಟೀಲನ್ನೂ ನಿಲ್ಲಿಸುತ್ತಾನೆ ಎಂದುಕೊಂಡೆ.

ಸಂಗೀತ ಅಂದರೆ ನನಗೆ ಅಷ್ಟಕ್ಕಷ್ಟೆ ಎಂದು ನೀವು ಭಾವಿಸಿದರೆ ಆಶ್ಚರ್ಯವೇನಿಲ್ಲ! ಶ್ರುತಿ, ಸ್ವರ, ನಾದ, ತಾಳ ಎಲ್ಲವೂ ಸಮಾನಾರ್ಥಕ ಪದಗಳು ಎಂಬುದು ನನ್ನ ಅನಿಸಿಕೆ. ಏಕತಾನ ಎನ್ನುವುದು ಬಾಟನಿ ಮೇಷ್ಟರ ಪಾಠವನ್ನು ವಿವರಿಸುವ ಪದವಾಗಿತ್ತು. ಪಿಟೀಲು, ಬೇಡದ ವಿಷಯವನ್ನು ಉದ್ದುದ್ದ ಎಳೆಯುವ ಗೆಳೆಯರ ಮಾತಿಗೆ ಇನ್ನೊಂದು ವಿವರಣೆ ಆಗಿತ್ತು. ರಾಗ ಅಳುವಿನ ಅನ್ವರ್ಥ ಎನಿಸಿತ್ತು. ಇನ್ನು ಸಂಗೀತ ಪಾಠ ಹೇಗೆ ಕಲಿತೇನು.

ಹಾಗಂತ ನಾನು ಸಂಗೀತವನ್ನು ಕೇಳಲೇ ಇಲ್ಲ ಅಂತಲ್ಲ. ಅಮ್ಮ ಸಾಕಷ್ಟು ಸಂಗೀತ ಕಲಿತಿದ್ದಳು ಎಂದು ತಿಳಿದಿತ್ತು. ಹೆತ್ತ ಏಳು ಮಕ್ಕಳಿಗೂ ಜೋಗುಳ ಹಾಡಿಯೇ ಕಲಿತಳೋ, ಪಾಠದಿಂದಲೇ ಕಲಿತಳೋ ಗೊತ್ತಿಲ್ಲ. ಆದರೆ ಸುಶ್ರಾವ್ಯವಾಗಿ ಹಾಡುತ್ತಿದ್ದುದಂತೂ ನೆನಪಿದೆ. ಅಪ್ಪನಿಗೂ ಸಂಗೀತದ ಮೋಹವಿತ್ತು. ವಿದ್ವಾನ್‌ ಪಿಟೀಲ್‌ ಚೌಡಯ್ಯನವರ ಡ್ರೈವರ್‌ ಆಗಿದ್ದರಂತೆ! ನನಗೂ ಸಂಗೀತ ಪಾಠ ಕಲಿಸಬೇಕೆಂದು ಅವರು ಎಷ್ಟೋ ಪ್ರಯತ್ನಿಸಿದ್ದು ನೆನಪಿದೆ. ಆದರೆ ಹೊಟ್ಟೆ ತಾಳ ಹಾಕುಾಗ ಗಂಟಲಲ್ಲಿ ಇನ್ಯಾವ ಸ್ವರವೂ ಹುಟ್ಟುವುದಿಲ್ಲವೇನೋ! ಅಂದಿನ ಪರಿಸ್ಥಿತಿಯಲ್ಲಿ ಶಾಲೆಗೆ ಹೋಗುವುದೇ ಕಷ್ಟವಾಗಿದ್ದಾಗ, ಸಂಗೀತ ಪಾಠಕ್ಕೂ ಫೀಸು ಕೊಡುವುದು ಸಾಧ್ಯವೇ ಇರಲಿಲ್ಲ.

ಅತ್ತೆಯ ಮಕ್ಕಳು ಪ್ರಸಿದ್ಧ ಹಾಡುಗಾರ್ತಿಯರು. ಮಗ ವಿಶ್ವಪ್ರಸಿದ್ಧ ಮೃದಂಗವಾದಕ. ಅವರ ಬಳಿಯಾದರೂ ಕಳಿಸಿ ಮೃದಂಗ ಕಲಿಸಬೇಕೆಂಬ ಇಚ್ಛೆ ಅಪ್ಪನಿಗೆ ಇತ್ತು. ಆದರೆ ಆ ಉತ್ಸಾಹ ನನಗೆ ಇರಲಿಲ್ಲ. ಬಹುಶಃ ಸಂಗೀತ ಎನ್ನುವುದಕ್ಕೆ ಬುದ್ಧಿ ಬೇಕಿಲ್ಲ ಅನ್ನುವ ಉಪೇಕ್ಷೆಯೋ, ಅಥವಾ ಇಂದಿನ ಹಾಗೆ ರಿಯಾಲಿಟಿ ಶೋಗಳ ಆಕರ್ಷಣೆ ಇಲ್ಲದಿದ್ದುದರಿಂದಲೋ ಒಟ್ಟಾರೆ ಸಂಗೀತ ಎಂದರೆ ನನಗೆ ಅಷ್ಟಕ್ಕಷ್ಟೆ ಆಗಿತ್ತು. ಕಲಿಯುವ ಉತ್ಸಾಹ ಇರಲಿಲ್ಲ. ಕೇಳುವುದು ಕೇವಲ ರಾಮನವಮಿಯ ಸಂಗೀತೋತ್ಸವಕ್ಕಷ್ಟೆ ಸೀಮಿತವಾಗಿತ್ತು. ಮಂಗಳಾರತಿ ಮುಗಿದ ಅನಂತರ ಕೊಡುತ್ತಿದ್ದ ಹೆಸರುಬೇಳೆ ಉಸಲಿಯ ಆಸೆಗಾಗಿ ಅಪ್ಪನ ಜೊತೆ ಸಂಗೀತೋತ್ಸವಕ್ಕೆ ಹೋಗಿ ಕೇಳುತ್ತಿದ್ದೆ. ಆಲಿಸುತ್ತಿರಲಿಲ್ಲ.

ಬಾತ್‌ರೂಮ್‌ನಲ್ಲೂ ಹಾಡು ಹಾಡಿದವನಲ್ಲ. ಪ್ರೀತಿಸಿದವಳಿಗೆ ಪ್ರೇಮಗೀತೆ ಹಾಡುವುದರ ಬದಲಿಗೆ, ಅಶ್ವತ್ಥ, ಅನಂತಸ್ವಾಮಿಯವರ ಗೀತೆಗಳನ್ನು ಕೇಳಿಸಿ ಮನವೊಲಿಸಿದ್ದೆ! ಇಂತಹ ಶ್ರುತಿಗಿವುಡನ ಮಗ ಸಂಗೀತ ಕಲಿಯುವುದುಂಟೇ?

ಆದರೂ ಮಗ ಹಠ ಹಿಡಿದಾಗ, ಮೇಷ್ಟರು ಹೇಳಿದ ಮೇಲೆ ಪಿಟೀಲು ಕೊಡಿಸಲು ಅಂಗಡಿಗೆ ಹೋದೆ. ಅಷ್ಟೆ. ಸಂಗೀತ ಎಂದರೆ ಏನೆಂಬುದರ ಪರಿಚಯ ಅಲ್ಲಿ ನನಗಾಯಿತು. ಕಂಜಿರಾದಿಂದ ಮೃದಂಗದವರೆಗೆ, ಪಿಟೀಲಿನಿಂದ ಇಲೆಕ್ಟ್ರಾನಿಕ್‌ ಗಿಟಾರ್‌ವರೆಗೆ, ಹಾರ್ಮೋನಿಯಂನಿಂದ ಆರ್ಕೆಸ್ಟ್ರಾದ ಡ್ರಂ, ಸ್ಕೂಲ್‌ ಬ್ಯಾಂಡ್‌ನ ಬ್ಯೂಗಲ್‌, ತರಹೇವಾರಿ ಇಲೆಕ್ಟ್ರಾನಿಕ್‌ ರಾಗಮಾಲ, ತಬಲಾ, ಇಲೆಕ್ಟ್ರಾನಿಕ್‌ ಕೀಬೋರ್ಡ್‌, ಪಿಯಾನೋ... ಒಂದೇ ಎರಡೇ... ಕಣ್ಣೆದುರಿಗೆ ಹೊಸ ಪ್ರಪಂಚವೇ ತೆರೆದುಕೊಂಡಿತು. ಮಗನಂತೂ ಪಿಟೀಲು ಮರೆತು ಅಲ್ಲಿದ್ದ ಎಲ್ಲ ಡ್ರಮ್‌, ತಂತಿವಾದ್ಯಗಳ ಮೇಲೂ ಕೈಯಾಡಿಸುತ್ತಿದ್ದ. ಬರೇ ವಿಜ್ಞಾನವಷ್ಟೆ ಪ್ರಪಂಚವಾಗಿದ್ದ ನನಗೆ ಸಂಗೀತ ಲೋಕದ ಪರಿಚಯ ಆಯಿತು.

ಐವತ್ತರ ಹೊಸ್ತಿಲಲ್ಲಿರುವಾಗ ಸಂಗೀತ ಕಲಿಯೋಣ ಎನ್ನುವ ಉತ್ಸಾಹ ಬಂದಿದೆ ಎಂದರೆ ನೀವು ನಂಬಲೇಬೇಕು. ಆದರೆ ಒಂದು ಪುಟ ಬರೆಯುವುದರೊಳಗೆ ಹಿಡಿದುಕೊಳ್ಳುವ ಟೆನಿಸ್‌ ಎಲ್ಬೋ, ಹತ್ತು ನಿಮಿಷ ಭಾಷಣ ಮಾಡುವುದರೊಳಗೆ ಒಣಗಿ ಹಿಡಿದುಕೊಳ್ಳುವ ಗಂಟಲು, ಹೆಂಡತಿ ಹತ್ತು ಬಾರಿ ಕರೆದರೂ ಗಮನಗೊಡದ ಕಿವಿ... ಇವು ನನ್ನ ಈ ಉತ್ಸಾಹಕ್ಕೆ ’ಸಾಥ್‌’ ಕೊಡುತ್ತವೆಯೇ? ’ಸಾಧನೆ’ ವಯಸ್ಸನ್ನೂ ಮೀರಬಹುದೇ? ಪ್ರಯತ್ನಿಸಿ ನೋಡಬೇಕಷ್ಟೆ!

ಛೀ! ಸೋಮಾರಿ!!!

ಈ ಬ್ಲಾಗ್‌ನಲ್ಲಿ ಹೊಸ ಅಕ್ಷರ ಮೂಡಿ ಒಂದು ವರ್ಷಕ್ಕೂ ಹೆಚ್ಚು ಕಾಲವಾಗಿದೆ. ಇದಕ್ಕೆ ಸೋಮಾರಿತನವೇ ಕಾರಣ ಅನ್ನೋಣ. ಸೋಮಾರಿ ತನಕ್ಕೆ ಸಮಜಾಯಿಷಿಯೂ ಇಲ್ಲ. ಕ್ಷಮೆಯೂ ಇಲ್ಲ. ಅದಕ್ಕೇ ಈ ಎರಡು ಸಾಲಿನ ಬ್ಲಾಗ್‌!

Thursday, June 26, 2008

ಹಾ! ಕಳ್ಳ!

ಮೊನ್ನೆ ಎಕೆಬಿಯವರ (ಅಡ್ಯನಡ್ಕ ಕೃಷ್ಣಭಟ್ಟರ) ಮನೆಗೆ ಹೋಗಿದ್ದೆ. ಅವರು ಊರಿನಲ್ಲಿ ಇರಲಿಲ್ಲವಾದ್ದರಿಂದ, ಭೇಟಿ ನೀಡಿ ಬಹಳ ದಿನಗಳಾಗಿತ್ತು. ಕರೆಗಂಟೆ ಬಾರಿಸಿದಾಗ ಎಂದಿನಂತೆ "ಬನ್ನಿ, ಶರ್ಮರೆ" ಎನ್ನುವ ಆತ್ಮೀಯ ಕರೆ ಬರುವುದು ತುಸು ತಡವಾಯಿತು. ಸಂಜೆಯ ಇಳಿಹೊತ್ತಿನ ಮಸುಕಿನಲ್ಲಿ ನನ್ನ ಬಣ್ಣವೂ ಬೆರೆತು, ಕಳ್ಳನಂತೆ ಕಂಡೆನೋ ಎನಿಸಿತು. ಮತ್ತೆ ಎಂದಿನ ಪ್ರೀತಿಯ ಕರೆ. ಭಟ್ಟರೊಬ್ಬರೆ ಮನೆಯಲ್ಲಿದ್ದರು. ಸರಸಕ್ಕ ಇರಲಿಲ್ಲ. "ಅಕ್ಕ ಅಂಗಡಿಗೆ ಹೋಗಿದ್ದಾರೆ. ನೀವು ಈಗ ಬಂದದ್ದು ಒಳ್ಳೆಯದೇ ಆಯಿತು." ಎಂದ ಭಟ್ಟರ ಪೀಠಿಕೆ ಯಾವುದೋ ಮುಖ್ಯ ಸಮಾಚಾರ ಇದೆ ಎಂದು ಸೂಚಿಸಿತು. ಸಾಮಾನ್ಯವಾಗಿ ನಮ್ಮಿಬ್ಬರ ಸಂಭಾಷಣೆ ವಿಜ್ಞಾನ ಬರವಣಿಗೆ, ಪದಬಳಕೆಯ ದೋಷಗಳು, ಬರವಣಿಗೆ ತಂತ್ರಗಳು, ಇತಿಹಾಸ ಇತ್ಯಾದಿಯತ್ತಲೇ ಇರುವುದರಿಂದ, ಸರಸಕ್ಕ ನಮ್ಮ ಸಂಭಾಷಣೆಗೆ ಮೂಕ ಶ್ರೋತೃ. ಬಹುಶಃ ಅವರಿಗೆ ಅನಾವಶ್ಯ ಕಿರುಕುಳವಾಗದಿರಲಿ ಎಂದು ಹೀಗೆ ಹೇಳಿದರೇನೋ ಎಂದು ಕೊಂಡೆ. ಆದರೆ ಅನಂತರ ಭಟ್ಟರು ಹೇಳಿದ ಸಂಗತಿಗಿಂತಲೂ ಅವರು ಹೇಳಿದ ರೀತಿ ಮನ ತಟ್ಟಿತು. ವಿಷಯ ಇಷ್ಟೆ. ಅವರು ಊರಿಗೆ ಹೋಗಿದ್ದಾಗ ಅವರ ಮನೆಯ ಕಿಟಕಿಯ ಸರಳುಗಳನ್ನು ಬಾಗಿಸಿ, ಒಳನುಗ್ಗಿದವರು, ಮನೆಯಲ್ಲಿ ಜಾಲಾಡಿದ್ದರು. "ನೋಡಿ, ಈ ಕಬ್ಬಿಣದ ಕಂಬಿ ಎಷ್ಟು ಗಟ್ಟಿ. ಇದನ್ನು ಬಾಗಿಸಿದ್ದಾರೆ ಎಂದರೆ ಎಷ್ಟು ಬಲ ಬಳಸಿರಬೇಕು," ಭಟ್ಟರ ಒಳಗಿನ ಫಿಸಿಕ್ಸ್‌ ಶಿಕ್ಷಕ ಲೆಕ್ಕ ಹಾಕಿತು. "ಇದೇನು ವಿಚಿತ್ರ ಶರ್ಮರೆ, ನಾವು ಯಾವ ಕೋಣೆಯ ಬಾಗಿಲನ್ನೂ ಹಾಕಿರಲಿಲ್ಲ. ಎಲ್ಲವೂ ತೆರೆದಿತ್ತು. ಇದೊಂದು ಕೋಣೆಯ ಬಾಗಿಲನ್ನು ಹಾಕಿದ್ದೆವು. ಅದನ್ನೇ ಮುರಿದಿದ್ದಾರೆ. ಅಲಮಾರಿಯ ಬೀಗಗಳನ್ನೂ ಹಾಕಿರಲಿಲ್ಲ. ಒಟ್ಟು ಒಂದಿನ್ನೂರು ರೂಪಾಯಿಗಳು, ಒಂದು ಹಳೆಯ, ರಿಪೇರಿಗೆ ಇದ್ದ ಕ್ಯಾಮೆರಾ ಇವಷ್ಟೆ ತೆಗೆದುಕೊಂಡು ಹೋಗಿದ್ದಾರೆ." ಸಜ್ಜನಿಕೆಯ ಭಟ್ಟರ ವಿವರಣೆಯಲ್ಲಿ ಎಲ್ಲಿಯೂ ಕಳ್ಳ ಎನ್ನುವ ಪದ ಕಾಣಿಸಲಿಲ್ಲ. ಯಾರೋ ಕುಶಲಕಲೆಗಾರನ ಕಥೆ ಹೇಳುವಂತೆ ಹೇಳಿದರು. ತಮಗೆ ಅನ್ಯಾಯ ಮಾಡಿದವರನ್ನೂ ಹೀಗಳೆಯದ ಸಜ್ಜನಿಕೆ ಅವರಲ್ಲಿ ಕಂಡು ವಿಚಿತ್ರವೆನ್ನಿಸಿತು. ಅವರಲ್ಲಿ ಸಿಟ್ಟಿನ ಲೇಶವೂ ಇರಲಿಲ್ಲ.

"ಹಣ ಹೋದದ್ದಕ್ಕೆ ಬೇಸರವಿಲ್ಲ ಶರ್ಮರೆ. ಆದರೆ ಯಾರೋ ಅಪರಿಚಿತರು ನಮ್ಮ ಸೀಮೆಯೊಳಗೆ, ಅನುಮತಿ ಇಲ್ಲದೆ ಪ್ರವೇಶಿಸಿದರು ಅನ್ನುವ ಅನಿಸಿಕೆಯೇ ಎದೆಯನ್ನು ಭಾರವಾಗಿಸಿದೆ," ಎಂದ ಎಪ್ಪತ್ತರ ವೃದ್ಧರ ಮಾತು ಎದೆ ತಟ್ಟಿತು. ಅಷ್ಟರಲ್ಲಿ ಬಂದ ಸರಸಕ್ಕ, ಮೊಮ್ಮಗಳು ಕಳ್ಳನ ಬಗ್ಗೆ ಕೇಳಿದ ಪ್ರಶ್ನೆಗಳನ್ನು ನೆನಪಿಸಿಕೊಂಡರು. ಕಳ್ಳ ಯಾರು? ಅವನಿಗೆ ಮೀಸೆ ಇದೆಯಾ? ಕಳ್ಳನ ಬಣ್ಣ ಏನು? ನೋಡಿದರೆ ಹೆದರಿಕೆ ಆಗುತ್ತದೆಯಾ? ನಿಜ. ಕಳ್ಳ ಎನ್ನುವವರ ಸ್ವರೂಪ ಹೇಗಿದೆ ಎಂದು ಕಲ್ಪಿಸಿಕೊಳ್ಳುವುದು ಕಷ್ಟವೇ! ಹಳೆಯ ಸಿನಿಮಾದ ಸ್ಟೀರಿಯೊಟೈಪ್‌ ನೆನಪಿಗೆ ಬರುತ್ತದೆ. ಕಣ್ಣಷ್ಟೆ ತೋರುವಂತೆ ಮುಖವಾಡ. ಕೈಯಲ್ಲೊಂದು ಚಾಕು. ಇಂಗ್ಲೀಷ್‌ ಸಿನೆಮಾಗಳಲ್ಲಿಯಾದರೆ ಪಟ್ಟೆ ಅಂಗಿ. ಆದರೆ ನಿಜವಾಗಿ ಕಳ್ಳ ಎಂದರೆ ಏನು?

ಭಟ್ಟರು ಹೇಳಿದಂತೆ ನಮ್ಮ ಸೀಮೆಯೊಳಗೆ ಅನುಮತಿ ಇಲ್ಲದೆ ಪ್ರವೇಶಿಸಿ, ಅಪರಿಚಿತನಾಗಿ ಉಳಿವ, ನಷ್ಟ ಉಂಟು ಮಾಡುವವರನ್ನು ಕಳ್ಳರು ಎನ್ನಬಹುದೇ? ಅದುವೇ ಸರಿ ಎಂದು ಅನಿಸಿತು. ಹೀಗಾದರೆ ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಕಳ್ಳತನ ಮಾಡಿದವರೇ ಆಗಿರಬೇಕಲ್ಲವೇ? ಬಾಗಿಲು ಮುರಿಯದಿರಬಹುದು. ಆದರೆ ಯಾರದ್ದೋ ಮನದಲ್ಲಿನ ನೆನಪುಗಳಲ್ಲಿ, ನಮ್ಮ ಅರಿವಿಗೇ ಬಾರದೆ, ಅಪರಿಚಿತರಾಗಿ ನಡೆಸಿದ ಯಾವುದೋ ಕೃತ್ಯ, ಕಳ್ಳತನವಾಗಬಹುದಲ್ಲವೇ? ರೈಲು ನಿಲ್ದಾಣದಲ್ಲಿ ಟಿಕೇಟು ಕ್ಯೂನಲ್ಲಿ ಮೆಲ್ಲನೆ ಸರದಿ ತಪ್ಪಿಸಿ ಟಿಕೇಟು ಕೊಂಡು ಏನೋ ಗೆದ್ದವರಂತೆ ನಡೆಯುವಾಗಲೂ, ಯಾರ ಮನಸ್ಸಿನಲ್ಲಿಯೋ ನಾವು ಕಳ್ಳರಾಗಿ ಉಳಿಯಬಹುದಲ್ಲ! ಬಸ್ಸಿನಲ್ಲಿ ಕೈಗಳೆರಡರಲ್ಲೂ ಸಾಮಾನು ಇಟ್ಟುಕೊಂಡು ಸುಸ್ತಾಗಿ ನಿಂತವರು ಖಾಲಿಯಾದ ಸೀಟಿಗೆ ತಲುಪುವುದಕ್ಕೆ ಮುನ್ನವೇ ಓಡಿ, ಜಂಭದ ನಗು ನಗುತ್ತ ಕುಳಿತುಕೊಳ್ಳುವಾಗಲೂ ನಾವು ಕಳ್ಳತನ ಮಾಡಿರಬಹುದಲ್ಲವೇ? ಅಥವಾ ಅದು ಸ್ಪರ್ಧೆಯೋ? ಒಟ್ಟಾರೆ ಭಟ್ಟರ ಮೊಮ್ಮಗಳಿಗೆ ಕಳ್ಳನ ವಿವರಣೆ ಕೊಡುವುದು ಹೇಗೆಂದು ಆಲೋಚಿಸುತ್ತ ಮನೆಗೆ ಬಂದೆ.

ಹಾಂ. ಈ ಬ್ಲಾಗ್‌ನಲ್ಲಿ ಭಟ್ಟರ ಬದುಕಿನ ಈ ಖಾಸಗಿ ಘಟನೆಯನ್ನು ಬರೆಯುವುದೂ ಕಳ್ಳತನವೇ! ಸದ್ಯ. ಭಟ್ಟರು ಇದಕ್ಕೆ ಅನುಮತಿ ನೀಡಿದ್ದಾರೆ ಎನ್ನುವ ಸಮಾಧಾನ ಹೇಳಿಕೊಳ್ಳಬೇಕಷ್ಟೆ.

Saturday, March 1, 2008

ಒಂದು ಸಾವಿನ ನೆನಪು!

ಇನ್ನೇನು ಮೂರು ತಿಂಗಳು ಕಳೆದರೆ ನಾಲ್ಕು ವರ್ಷಗಳಾಗುತ್ತವೆ. ಆದರೆ ಅಂದು ಎದೆ ನಡುಗಿಸಿದ ಭೀತಿ ಇನ್ನೂ ಮರೆಯಾಗಿಲ್ಲ. ಬೇರೆ ಇನ್ನೇನು ಕಾರಣ ಹೇಳಬಹುದು? ಆ ದಿನ ಬೆಳ್ಳಂಬೆಳಗ್ಗೆ, ವಿಜಯನಗರದ ಸಮೀಪ, ರಸ್ತೆಯಿಂದ ಜಾರಿ ಬದಿಯ ಹಳ್ಳಕ್ಕೆ ಬಿದ್ದ ಕಾರಿನ ಪುಕ್ಕದ ದೀಪ ಹೊಳೆಯುತ್ತಲೇ ಇತ್ತು. ಆದರೆ ನಾನು ಅಲ್ಲಿ ನಿಲ್ಲದೇ ಓಡಿಬಿಟ್ಟೆ. ಕಾರಿನಲ್ಲಿ ಯಾರಾರೂ ಇದ್ದಾರೋ ಇಲ್ಲವೋ ಗಮನಿಸಲೂ ಇಳಿಯಲಿಲ್ಲ. ಅನಾಗರೀಕನಾಗಿಬಿಟ್ಟೆ. ಇನ್ನೊಂದು ದಿನ ಕೆಡಿ ವೃತ್ತದ ಬಳಿ, ಮಟ-ಮಟ ಮಧ್ಯಾಹ್ನ ಎರಡು ಬೈಕ್‌ಗಳ ಢಿಕ್ಕಿಯಾಗಿ, ಒಬ್ಬ ಅಂಗಾತ ಬಾಯಿ ಬಿಟ್ಟು ರಸ್ತೆಯಲ್ಲಿಯೇ ಬಿದ್ದಿದ್ದರೂ, ನಾನು ಕೆಲಸಕ್ಕೆ ತಡವಾದೀತು ಎಂದು ಕಾರಣ ಹೇಳಿಕೊಂಡು ಓಡಿ ಬಿಟ್ಟೆ. ಬೇರೆ ದಿನಗಳಲ್ಲಿ ಕೆಲಸಕ್ಕೆ ತಡವಾದರೆ, ರಜೆ ಹಾಕಿದರಾಯಿತು ಬಿಡು ಎನ್ನುವ ಧಾರ್ಷ್ಟ್ಯ ತೋರುವವ, ಅಂದು ಬಹಳ ಪ್ರಾಮಾಣಿಕನಂತೆ ಓಡಿ ಬಿಟ್ಟೆ.

ಒಂದಲ್ಲ ಎರಡಲ್ಲ, ಕಳೆದ ನಾಲ್ಕು ವರ್ಷಗಳಲ್ಲಿ ಹತ್ತಾರು ಅಪಘಾತಗಳನ್ನು ನೇರವಾಗಿ ನೋಡಿದ್ದೇನೆ. ಎಲ್ಲಿಯೂ ನಾಗರೀಕನಂತೆ ವರ್ತಿಸಲಿಲ್ಲ. ಯಾಕೋ, ಎದೆ ಢವಗುಟ್ಟುತ್ತದೆ. ನಾಲ್ಕು ವರ್ಷಗಳ ಹಿಂದೆ, ಬಾಗಿಲ ಎತ್ತರಕ್ಕೂ ನಿಂತು, "ಅಂಕಲ್‌, ಎರಡೇ ನಿಮಿಷ. ಹೀಗೆ ಹೋಗಿ ಹಾಗೆ ಬಂದು ಬಿಡುತ್ತೀನಿ. ನೀವು ರೆಸ್ಟ್‌ ತೆಗೆದುಕೊಳ್ಳಿ," ಎಂದು ಹೋದವ ಮತ್ತೆ ಬರಲೇ ಇಲ್ಲ. ನಾನು ಕಾದದ್ದೇ ಆಯಿತು. ಬಂದದ್ದು ಪಕ್ಕದ ಮನೆಯಾಕೆ. "ಮೂಲೆಯಲ್ಲಿ ಒಂದು ಆಕ್ಸಿಡೆಂಟ್‌ ಆಗಿದೆ. ಸ್ಪಾಟ್‌. ಹುಡುಗ ಯಾರು ಅಂತ ಹುಡುಕುತ್ತಿದ್ದಾರೆ. ನಿಮಗೇನಾದರೂ ಗುರುತು ಸಿಗುತ್ತದೆಯೋ," ಎಂದು ಕೇಳಲು ಬಂದಿದ್ದರು. ಓಡಿದೆ. ನನ್ನ ಅನುಮಾನ ನಿಜವಾಗಿತ್ತು.ಅಲ್ಲಿ ಇದ್ದದ್ದು ಅವನದ್ದೇ ಬೈಕ್‌. ಅವನಿರಲಿಲ್ಲ."ಓಹ್‌, ದೇವರೇ!" ಅಪ್ಪಟ ನಾಸ್ತಿಕನ ಬಾಯಿ ಅಯಾಚಿತವಾಗಿ ನುಡಿದಿತ್ತು. ಬಳಿಯಲ್ಲೇ ಇದ್ದ ಪೋಲೀಸನ್ನು ವಿಚಾರಿಸಿದ್ದೆ. "ಎಲ್ಲಿ ಹುಡುಗ?" "ಶವಾಗಾರದಲ್ಲಿ," ಎಂದು ನಿರ್ಲಿಪ್ತನಾಗಿ ನುಡಿದಿದ್ದ. ಡಾಕ್ಟರುಗಳು, ಪೋಲೀಸರು ಸಾವನ್ನು ವರದಿ ಮಾಡುವಷ್ಟು ನಿರ್ಭಾವುಕರಾಗಿ ಇನ್ಯಾರೂ ಮಾಡಲು ಸಾಧ್ಯವಿಲ್ಲ. ಅದಕ್ಕೂ ಬಹುಶಃ ತರಬೇತಿ ಬೇಕಾಗಬಹುದು.

ಹೌದು. ತೇಜ ಇನ್ನಿಲ್ಲ ಎನ್ನುವ ವಿಷಯ ಎದೆಗೆ ಒದ್ದಿತು. ತೊಡೆ ಥರ,ಥರ ನಡುಗಿತು. ಮನೆಗೆ ಓಡಿ ಬಂದೆ. ನನ್ನ ಮುಖ ನೋಡಿಯೇ ಮಡದಿಗೆ ವಿಷಯ ತಿಳಿದಿತ್ತು ಎನ್ನಿಸುತ್ತೆ. ಪಕ್ಕದಲ್ಲಿ ಅತೀವ ಜ್ವರದಲ್ಲಿ ಮಲಗಿದ್ದ ಮಗನನ್ನೂ ಮರೆದು ಓ ಎಂದು ಅಳತೊಡಗಿದಳು. ನಿಜ. ಸಾವು ಯಾರಿಗೂ ಹೇಳಿ ಬರುವುದಿಲ್ಲ. ಯಾರನ್ನೂ ಅದು ಅಪಾಯಿಂಟ್‌ಮೆಂಟ್‌ ಕೇಳುವುದಿಲ್ಲ. ಆದರೆ, ಹೀಗೇ ಏಕೆ? ಕೆಲವೇ ನಿಮಿಷಗಳ ಹಿಂದೆ ನಗುವಾಗಿದ್ದವ, ಶವವಾಗಿದ್ದ. ತಲೆಯೊಡೆದು ಬಿದ್ದು ಶವಾಗಾರದ ಒಂದು ಪೆಟ್ಟಿಗೆಯ ನಂಬರ್‌ ಆಗಿದ್ದ. ಬರೇ ಬಾಡಿ. ಯಾರಾದರೂ ನೀರು ಕುಡಿಸಿದರೋ ಇಲ್ಲವೋ? ಸಾಯುವ ಮೊದಲು ಏನು ಹೇಳಿರಬಹುದು? ಅಂಕಲ್‌ ಎಂದನೇ? ಅಥವಾ ನನಗಿಂತಲೂ ಆಪ್ತಳಾಗಿದ್ದ ಮಡದಿಯನ್ನು ನೆನಪಿಸಿಕೊಂಡನೇ? ಇಲ್ಲ, ಮನೆಯಲ್ಲಿ ಜ್ವರದಿಂದ ಮಲಗಿದ್ದ ಮಗನಿಗಾಗಿ ಔಷಧಿ ತರಲು ಹೋಗಿದ್ದನಲ್ಲ? ಅವನನ್ನು ಕರೆದನೇ? ಸಾವನ್ನು ಎದುರಿಸಿದಾಗ ಏನು ಮಾತನಾಡಿರಬಹುದು? ಏನೇನು ಭಾವನೆಗಳು ಬಂದಿರಬಹುದು? ನೋವಾಯಿತೋ? ಅಥವಾ ಏನೂ ಗೊತ್ತೇ ಆಗಲಿಲ್ಲವೋ?

ಅಂದಿನಿಂದ ಇಂದಿನವರೆವಿಗೂ ಅಪಘಾತಗಳನ್ನು ಎದುರಿಸಲು ಭಯವಾಗುತ್ತದೆ. ಪರಿಚಿತ ಮುಖದ ಮೇಲೆ ಘಾಯ, ರಕ್ತದ ಕಲೆಗಳು ಇರುವುದನ್ನು ಸಹಿಸಲಾಗುವುದಿಲ್ಲ. ಸಾವು ನನ್ನನ್ನೂ ಹಿಡಿದು ಬಿಟ್ಟೀತೇನೋ ಎನ್ನುವ ಆತಂಕವಿರುವವನಂತೆ ಅಪಘಾತಗಳಿಂದ ದೂರ ಓಡುತ್ತೇನೆ. ರಸ್ತೆಯಲ್ಲಿ ಚಲಿಸುವಾಗ, ಬದಿಯಿಂದ ಯಾವುದೇ ವಾಹನ ವೇಗದಿಂದ ಚಲಿಸಿದರೂ "ಆ ಕ್ಷಣ" ನೆನಪಾಗುತ್ತದೆ. "ಅಂಕಲ್‌, ಎರಡೇ ನಿಮಿಷ. ಹೀಗೆ ಹೋಗಿ ಹಾಗೆ ಬರುತ್ತೇನೆ," ಎಂದದ್ದು ಧ್ವನಿಸುತ್ತದೆ. ಆ ಕೊನೆಯ ಶಬ್ದಗಳು ಎಲ್ಲಿಯಾದರೂ ಕೇಳಿಸಿಬಿಟ್ಟರೆ ಎನಿಸುತ್ತದೆ. ಸಾಯುವವರ ಸನಿಹದಲ್ಲಿ ಇರುವುದಕ್ಕಿಂತಲೂ ಸತ್ತವರನ್ನು ಮಣ್ಣು ಮಾಡುವುದು ಸುಲಭವೇನೋ ಎನಿಸುತ್ತದೆ. ರೊಯ್ಯನೆ ಬದಿಯಿಂದ ಬೈಕ್‌ ಮುಂದೋಡಿದರೆ, ಈ ಎಲ್ಲ ಭಾವನೆಗಳೂ ಒಂದು ಕ್ಷಣ ಎದುರಾಗಿ, ಸ್ಟೀರಿಂಗ್‌ ನಡುಗುತ್ತದೆ. ನಾನು ಮತ್ತೆಂದು ನಾಗರೀಕನಾಗುವೆನೋ?

Saturday, February 23, 2008

ಕೃತಿಚೌರ್ಯ

ನಿನ್ನೆ (೨೩.೧.೨೦೦೮) ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಯಲ್ಲಿ ತಿರುಪತಿ ವಿಶ್ವವಿದ್ಯಾನಿಲಯ ಅಲ್ಲಿನ ಪ್ರೊಫೆಸರ್‌ ಒಬ್ಬರಿಗೆ ಶಿಕ್ಷೆ ವಿಧಿಸಿದ್ದು ಓದಿದೆ. ಅಪರಾಧ: ಕೃತಿಚೌರ್ಯ. ವಿಜ್ಞಾನ ಮತ್ತು ಶೈಕ್ಷಣಿಕ ಜಗತ್ತಿನಲ್ಲಿ ಕೃತಿಚೌರ್ಯದಷ್ಟು ಹೀನ ಕೃತ್ಯ ಇನ್ನೊಂದಿಲ್ಲ. ಇವೆರಡೂ ಕ್ಷೇತ್ರಗಳೂ ಬೌದ್ಧಿಕ ಚಟುವಟಿಕೆಗೆ ಮೀಸಲು. ಇಲ್ಲಿ ನಿಮ್ಮ ಚಿಂತನೆಗಳು ಮೂರ್ತ ರೂಪ ಪಡೆಯುತ್ತವೆ. ವಿಜ್ಞಾನ ಕ್ಷೇತ್ರದಲ್ಲಂತೂ, ವೈಯಕ್ತಿಕ ಚಿಂತನೆಗಳು ಪ್ರಯೋಗ, ಪರಾಮರ್ಶೆಗಳ ಒರೆಯಲ್ಲಿ ಪುಟವಿಟ್ಟು ಬರುತ್ತವೆ. ಈ ದಿನಗಳಲ್ಲಿ ನಿತ್ಯವೂ ಲಕ್ಷಾಂತರ ಸಂಶೋಧನಾ ಪ್ರಬಂಧಗಳು ಪ್ರಕಟವಾಗುತ್ತಿವೆ. ಇವುಗಳೆಲ್ಲವನ್ನೂ ಕೃತಿಚೌರ್ಯವಲ್ಲ ಎಂದು ವೈಜ್ಞಾನಿಕ ಜಗತ್ತು ನಂಬುತ್ತದೆ. ಏಕೆಂದರೆ, ಪ್ರಕಟಣೆಯಾಗುವ ಮುನ್ನ ಈ ಎಲ್ಲ ಪ್ರಬಂಧಗಳೂ ವಿಜ್ಞಾನ ಜಗತ್ತಿಗೇ ವಿಶಿಷ್ಟವೆನ್ನಿಸಿದ ಪೀರ್‌ ರಿವ್ಯೂ (ಸೋದರ ಪರಾಮರ್ಶೆ)ಯ ಶೋಧಕದಿಂದ ಹೊರ ಬರಬೇಕು. ಪ್ರಬಂಧಗಳನ್ನು ಅವುಗಳಲ್ಲಿನ ವೈಜ್ಞಾನಿಕ ಅಡಕಗಳ ಸತ್ಯಾಸತ್ಯತೆಯ ಪರಿಶೀಲನೆಗೆಂದು ಅದೇ ಕ್ಷೇತ್ರದಲ್ಲಿ ಸಂಶೋಧನೆಗೈಯುತ್ತಿರುವ ಇನ್ನೂ ಹಲವರಿಗೆ ತಲುಪಿಸಲಾಗುತ್ತದೆ. ಲೇಖಕ ಯಾರೆಂಬುದು ಈ ಪರಾಮರ್ಶಕರಿಗೆ ತಿಳಿದಿದ್ದರೂ, ಪರಾಮರ್ಶಕರು ಯಾರೆಂಬುದು ಲೇಖಕರಿಗೆ ತಿಳಿದಿರುವುದಿಲ್ಲ. ಪರಾಮರ್ಶಕರು, ಲೇಖನದಲ್ಲಿರುವ ಪ್ರಯೋಗಗಳು,ಫಲಿತಾಂಶಗಳು ಹಾಗೂ ಅವುಗಳಿಂದ ಪಡೆದ ತೀರ್ಮಾನವೆಲ್ಲವೂ ಸತ್ಯ ಎಂದು ಮನವರಿಕೆ ಮಾಡಿಕೊಂಡು, ಪ್ರಕಟಣೆಗೆ ಯೋಗ್ಯವೆಂದು ತೀರ್ಮಾನಿಸುತ್ತಾರೆ. ಇಲ್ಲಿ ಭಾಷೆ ಮುಖ್ಯವಾಗುವುದಿಲ್ಲ. ಅದಾದ ಅನಂತರ ಕೃತಿ ಪ್ರಕಟವಾಗುತ್ತದೆ. ವೈಜ್ಞಾನಿಕ ಜಗತ್ತಿನಲ್ಲಿ ತನ್ನ ನೆಲೆ ಕಂಡುಕೊಳ್ಳುತ್ತದೆ.

ತಿರುಪತಿಯ ಪ್ರೊಫೆಸರ್‌ರವರು ಇದುವರೆವಿಗೂ ಪ್ರಕಟಿಸಿರುವ ೭೫ ಪ್ರಬಂಧಗಳೂ ಕೃತಿಚೌರ್ಯವಿರಬಹುದು ಎಂದು ಗುಮಾನಿಸಲಾಗಿದೆ. ಗುಮಾನಿಗೆ ಕಾರಣ: ಅವರು ಪ್ರಬಂಧಗಳಲ್ಲಿ ನಮೂದಿಸಿರುವ ಪ್ರಯೋಗಗಳನ್ನು ನಡೆಸುವ ಸವಲತ್ತು ಅವರ ವಿಶ್ವವಿದ್ಯಾನಿಲಯದಲ್ಲಿ ಇರಲೇ ಇಲ್ಲ! ವಿಜ್ಞಾನ ಜಗತ್ತಿನಲ್ಲಿ ಸಂಶೋಧನೆಗಳನ್ನು ಸತ್ಯಾಸತ್ಯತೆಯ ಪರೀಕ್ಷೆ ಎನ್ನಲಾಗುತ್ತದೆ. ಇಲ್ಲಿ ಭಾವುಕತೆಗೆ, ಕಲ್ಪನಾವಿಹಾರಕ್ಕೆ ಎಡೆ ಇಲ್ಲ. ಆದರೂ, ಕೇವಲ ಕಾಲ್ಪನಿಕ ಸಂಶೋಧನೆಗಳನ್ನು ನಡೆಸಿಯೇ ಇಷ್ಟು ವರುಷ ವಿದ್ವತ್‌ ಜಗತ್ತಿನಲ್ಲಿ ಬದುಕುಳಿದ ಈ ಚಾಣಾಕ್ಷ ಮತಿಯನ್ನು ಹೊಗಳಬೇಕೇ, ತೆಗಳಬೇಕೇ?

ಭಾರತದಲ್ಲಿ ಕೃತಿಚೌರ್ಯದ ಸಂಗತಿ ಬಯಲಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರುಷ ಚೆನ್ನೈನಲ್ಲಿರುವ ಅಣ್ಣಾಮಲೈ ವಿಶ್ವವಿದ್ಯಾನಿಲಯದ ಫಿಸಿಕ್ಸ್‌ ಸಂಶೋಧಕನೊಬ್ಬ, ಹತ್ತು ತಿಂಗಳ ಹಿಂದೆ ಸುಪ್ರಸಿದ್ಧ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಸಂಶೋಧನಾ ಪ್ರಬಂಧವೊಂದನ್ನು ಸಾರಾಸಗಟು (ಪದಕ್ಕೆ ಪದ) ನಕಲು ಮಾಡಿ, ಅದರ ಶೀರ್ಷಿಕೆ ಬದಲಿಸಿ ಪ್ರಕಟಿಸಿದ್ದ. ವಿಷಯ ಬಯಲಾದಾಗ, ಅದು ತನ್ನದೇ ಎಂದು ವಾದಿಸಿಯೂ ಇದ್ದ.

ಹೀಗೆ ವೈಜ್ಞಾನಿಕ ಜಗತ್ತಿನ ಆಧಾರಸ್ತಂಭವೆನ್ನಿಸಿದ ವಿಶ್ವಾಸದ ಬುಡಕ್ಕೇ ಕೊಡಲಿಯೇಟು ನೀಡುವವರಿಗೆ ನೀಡುವ ಶಿಕ್ಷೆಯಾದರೂ ಏನು? ಇನ್ನು ಮುಂದೆ ಅವರು ಸಂಶೋಧನೆ ನಡೆಸಬಾರದು, ಅಷ್ಟೆ. ಎಂದಿನಂತೆ ಪಾಠ ಹೇಳಬಹುದು. ಕಲಿಸುವರೋ, ಕದಿಯಲು ತಿಳಿಸುವರೋ ಯಾರು ಬಲ್ಲರು.

Thursday, May 10, 2007

ಗಂಡ-ಹೆಂಡತಿ

ಈ ಬಗ್ಗೆ ನಾನು ಎಂದೂ ಗಂಭೀರವಾಗಿ ಚಿಂತಿಸಿರಲಿಲ್ಲ. ಈಗಲೂ ಅಷ್ಟು ಗಹನವಾಗಿ ಚಿಂತಿಸುತ್ತಿಲ್ಲವೇನೋ? ಆದರೆ ಈ ಬ್ಲಾಗ್‌ ಬರೆಯಲು ಕಾರಣ, ಮೊನ್ನೆ ಮಂಜುವಿನ ಜೊತೆಗೆ ನಡೆದ ಸಂವಾದ ಹಾಗೂ ಸಂಜೆ ರಜೆಗೆಂದು ಊರಿಗೆ ತೆರಳಿರುವ ಮಡದಿ ಫೋನಾಯಿಸಿ, "ಐ ಮಿಸ್‌ ಯು" ಎಂದದ್ದು.

ಹಾಗಂತ ನಮ್ಮ ದಾಂಪತ್ಯವೇನೂ ಇತ್ತೀಚಿನದಲ್ಲ. ೨೩ ವರುಷಗಳ ಹಿಂದೆಯೇ ಒಬ್ಬರಿನ್ನೊಬ್ಬರ ಜೊತೆ ಇಡೀ ಜೀವನ ಸವೆಸೋಣ ಎಂದು ತೀರ್ಮಾನಿಸಿದ್ದೆವು. ಆಗ ಈ ಬಗ್ಗೆ ಏನೋ ಹೊಸ ಖುಷಿ ಇತ್ತು. ಕಛೇರಿ ರಾಜಕೀಯ, ಸೈಟ್‌ ಬೆಲೆ ಅತಿ ಹೆಚ್ಚಾಗಿ ಹೋದ ಚಿಂತೆ, ಮಕ್ಕಳು ಶಾಲೆಯಿಂದ ಬಂದ ಅನಂತರ ಸರಿಯಾಗ ಊಟ ಮಾಡದ ಬಗ್ಗೆ ಆತಂಕ, ಪ್ರತಿದಿನವೂ ನೀರು ಸರಬರಾಜು ಆಗುತ್ತದೆ ಎಂದು ನಿತ್ಯ ಪತ್ರಿಕೆಯಲ್ಲಿ ಓದಿದ ಮೇಲೂ ನಲ್ಲಿಯ ಮುಂದೆ ತಪಸ್ಸು ಮಾಡಬೇಕಾದ ಅನಿವಾರ್ಯತೆ, ಇನ್‌ಕಂಟ್ಯಾಕ್ಸ್ ಹೆಚ್ಚಾದ ಗತಿಯಲ್ಲಿಯೇ ಇಂಕ್ರಿಮೆಂಟೂ ಏಕೆ ಹೆಚ್ಚಾಗುವುದಿಲ್ಲವೋ? ಇಂಕ್ರಿಮೆಂಟು ಹೆಚ್ಚಾದ ಗತಿಗಿಂತ ತರಕಾರಿಯ ಬೆಲೆ ಹೆಚ್ಚುವುದು ಯಾವಾಗಲೂ ತೀವ್ರವೇಕೋ? ಎಂಬ ಉತ್ತರವೇ ಇರದ ಪ್ರಶ್ನೆಗಳು,ಇತ್ಯಾದಿಗಳ ನಡುವೆ ನಾನು-ನೀನು ಎನ್ನುವ ಸಂಬಂಧವನ್ನು ಕುರಿತು ಮಾತನಾಡುವುದೇ ಮರೆತು ಹೋಗಿತ್ತೆನ್ನಿಸಿತು, ಮೊನ್ನೆ ನನ್ನವಳ ಕರೆ ಬರುವವರೆಗೆ.

ಇಪ್ಪತ್ತನಾಲ್ಕು ವರುಷಗಳ ಹಿಂದೆ ಸಾವಿರ ಮೈಲು ದೂರದಲ್ಲಿದ್ದಾಗ ಇದ್ದಷ್ಟು ಆತ್ಮೀಯತೆ ಈಗ ಕಡಿಮೆ ಆಗಿದೆಯೇನೋ? Familiarity breeds contempt ಅಂತಾರಲ್ಲ. ಸಹವಾಸದಿಂದ ಸಂಬಂಧಗಳು ಕೊಳೆಯುತ್ತವೆಯೋ? ಸಣ್ಣ ಪುಟ್ಟ ಸಂಗತಿಗಳ ಬಗ್ಗೆ ಉಂಟಾಗುತ್ತಿದ್ದ ವಿರಸ, ಸರಸವನ್ನು ಮರೆಸುತ್ತಿತ್ತೇನೋ?

ಇಪ್ಪತ್ತು ವರುಷದ ಸಹವಾಸದ ಬಗ್ಗೆಯೇ ಇಷ್ಟು ತೀವ್ರವಾಗಿ ಆಲೋಚಿಸುವವನಿಗೆ ಎಪ್ಪತ್ತು ವರುಷದ ಸಹವಾಸ ಮಾಡಿದವರ ಬಗ್ಗೆ ಆಲೋಚಿಸುವುದು ತಿಳಿದೀತೇ? ನಮ್ಮ ದಾಂಪತ್ಯದ ಬಗ್ಗೆಯೇ ಯೋಚಿಸುತ್ತಿದ್ದವನಿಗೆ ಅಪ್ಪನ ಮರಣ, ಎದ್ದು ಎದೆಗೊದೆದದ್ದು ನಿಜ. ಎಪ್ಪತ್ತು ವರುಷಗಳ ಕಾಲ ತನ್ನ ಜೊತೆಗಿದ್ದ ಒಂದು ಜೀವ ಮರೆಯಾಗಿ, ಮಣ್ಣಾಗಿ ಹೋಗಿದ್ದನ್ನು ತಾಯಿ ತಡೆದುಕೊಳ್ಳಬಹುದೇ? ಇಷ್ಟು ದೀರ್ಘ ಕಾಲ ಜೊತೆಗಿದ್ದ ಆಕೆಯ ಮನಸ್ಸಿನಲ್ಲಿ ಎಂತಹ ಭಾವನೆಗಳು ಇರಬಹುದು ಎನ್ನುವ ಪ್ರಶ್ನೆಗಳು ಅಪ್ಪನ ಚಿತೆಗೆ ಬೆಂಕಿಯಿಡುವಾಗಲೂ ಕಾಡುತ್ತಿತ್ತು.

ಉತ್ತರಕ್ಕೆ ಬಹಳ ದಿನ ಕಾಯಬೇಕಾಗಲಿಲ್ಲ. ನಿತ್ಯವೂ ಊಟ ಮಾಡುವಾಗ, ಅಥವಾ ಮಗ ಆಟವಾಡುವಾಗಲೂ ಅದರಲ್ಲಿ ತಂದೆಯ ಛಾಪನ್ನು ಅಮ್ಮ ಕಾಣುತ್ತಿದ್ದಳು. ನಿಜ. ಮೊಮ್ಮಗನಲ್ಲಿ ತಾತನ ಕಾಲು ಭಾಗ ವಂಶವಾಹಿಗಳು ಇರುತ್ತವೆ ಎನ್ನುವುದು ವಿಜ್ಞಾನ ಕಲಿತ ನನಗೆ ತಿಳಿಯದ್ದಲ್ಲ. ಆದರೆ ಅಪ್ಪ ಇರುವವರೆವಿಗೂ ಅಮ್ಮನಿಗೆ ಕಾಣದ ಈ ಸಾಮ್ಯ ಈಗ ಆ ಒಂಟಿತನದ ಕಾರಣವಾಗಿ ಎದ್ದು ತೋರುತ್ತಿತ್ತು. ನಾವೆಲ್ಲ ಬೆಳೆಯುತ್ತಿದ್ದಂತೆ ಅಪ್ಪ-ಅಮ್ಮನ ನಡುವೆ ತೀವ್ರವಾಗಿ ಕಾಣುತ್ತಿದ್ದ ವಿರಸ ಎಲ್ಲಿ ಹೋಯಿತೋ ತಿಳಿಯಲಿಲ್ಲ. ಇಡ್ಲಿಯ ಹಿಟ್ಟಿನ ಹದದಲ್ಲಿ, ದೇವರ ಪೂಜೆಗೆ ಹತ್ತಿಸಿದ ಗಂಧದ ಕಡ್ಡಿಯ ಪರಿಮಳದಲ್ಲಿ, ಕೊನೆಗೆ ಉಪ್ಪು ಕಟ್ಟಿ ಸೋರುತ್ತಿದ್ದ ನಲ್ಲಿಯಲ್ಲೂ ಅಪ್ಪನ ನೆನಪು ಅಮ್ಮನಿಗೆ ಕಾಡುತ್ತಿತ್ತು. ಅಸಹನೆಯಿಂದ ಮಕ್ಕಳ ಎದುರಿಗೇ ಅಪ್ಪನನ್ನು ಗದರಿಸುತ್ತಿದ್ದ ಅಮ್ಮ ಎಲ್ಲಿ, ಈಗ ಕಾಣಲು ಎದುರಿಗಿಲ್ಲದ ಜೀವದ ಬಗ್ಗೆ ಹಳಹಳಿಸುವವಳೆಲ್ಲಿ? ಇದೆಂತಹ ವಿಚಿತ್ರ ಎನ್ನಿಸಿತು.

ಕೆಲವು ವರುಷಗಳ ಹಿಂದೆ ಅಮೆರಿಕೆಯ ಮನಶ್ಶಾಸ್ತ್ರಜ್ಞರೊಬ್ಬರು ಸುದೀರ್ಘ ದಾಂಪತ್ಯ ನಡೆಸಿದ (ಅಮೆರಿಕೆಯ ಮುಕ್ತ ಸಮಾಜದಲ್ಲಿ ಇದು ಬಲು ಅಪರೂಪದ ವಿಷಯವಷ್ಟೆ!) ದಂಪತಿಗಳನ್ನು ಅಧ್ಯಯನ ಮಾಡಿ, ಇಂತಹ ಗಂಡ-ಹೆಂಡತಿ ಇಬ್ಬರ ಮನೋಭಾವ ಹಾಗೂ ಮುಖಭಾವಗಳಲ್ಲಿ ಕಾಲ ಕಳೆದಂತೆಲ್ಲ ಸಾಮ್ಯ ತೋರಿಬರುತ್ತದೆ ಎಂದು ಗುರುತಿಸಿದ್ದರು. ಮನೋಭಾವದಲ್ಲಿ ಇರಬಹುದು. ಯಾರೊಬ್ಬರ ಜೊತೆಗಿನ ಹೊಂದಾಣಿಕೆಗಾಗಿ ತಮ್ಮ ಅನಿಸಿಕೆಗಳನ್ನು ಬದಲಿಸಿಕೊಂಡೋ, ಹತ್ತಿಕ್ಕಿಕೊಂಡೋ ನಡೆದಾಗ ಇಬ್ಬರ ಮನೋಭಾವವೂ ಒಂದೇ ಆದಂತೆ ಕಾಣಬಹುದು ಎಂದು ಸಮಾಧಾನ ಹೇಳಿಕೊಂಡಿದ್ದೆ. ಮುಖಭಾವ ಒಂದೇ ಆಗಿರುತ್ತದೆ ಎನ್ನುವುದು ತುಸು ಅತಿರೇಕದ ತೀರ್ಮಾನ ಎನ್ನಿಸಿತ್ತು. ನಮ್ಮ ಜೋಡಿಯನ್ನೇ ನೋಡಿದವರು ನನ್ನ ತೀರ್ಮಾನವನ್ನು ಖಂಡಿತ ಒಪ್ಪುತ್ತಾರೆ! ನನ್ನವಳು ಇಪ್ಪತ್ತು ವರುಷಗಳ ಹಿಂದೆ ಹೇಗಿದ್ದಳೋ ಹಾಗೆಯೇ ಕಾಣಿಸುತ್ತಾಳೆ. ಆದರೆ ಕನ್ನಡಿ ನನ್ನ ನರೆತ ಕೂದಲನ್ನು ಬಿಚ್ಚುಮನಸ್ಸಿನಿಂದ ಪ್ರತಿಬಿಂಬಿಸುತ್ತದೆ.

ಮೊನ್ನೆ ಮಡದಿ ಊರಿನಲ್ಲಿರುವಾಗ ಇದ್ದಕ್ಕಿದ್ದ ಹಾಗೆ ಬಂದೆರಗಿದ ಮೈಗ್ರೇನ್‌ ಇಷ್ಟೆಲ್ಲ ಆಲೋಚನೆಗೆ ಕಾರಣ. ಅವಳಿದ್ದಿದ್ದರೆ, ನನ್ನ ಮೌನವನ್ನು ಅಥವಾ ನಾನು ಕುಳಿತ ಭಂಗಿಯನ್ನು ಗಮನಿಸಿಯೇ ತಲೆನೋವೇ ಎಂದು ಕೇಳಿಬಿಡುತ್ತಿದ್ದಳು. ಕೆಲವೊಮ್ಮೆ ಹೀಗಾಗಿ ಇಲ್ಲ ಎಂದು ಮರೆಮಾಚುತ್ತಿದ್ದೆ. ಆದರೂ ನಾನು ಹೇಳುವುದು ಸುಳ್ಳು ಎನ್ನುತ್ತಿದ್ದಳು. ನನ್ನ ತಲನೋವು ಅವಳಿಗೆ ಹೇಗೆ ತಟ್ಟುತ್ತದೆಯೋ ತಿಳಿಯುವುದಿಲ್ಲ! ಹೀಗೇ ಏನಾದರೂ ಬರೆಯುವಾಗ 'ಅಯ್ಯೋ, ಒಂದು ಗುಟುಕು ಚಹಾ ಇದ್ದಿದ್ದರೆ,' ಎನಿಸುವಷ್ಟರಲ್ಲಿ ಚಹಾ ಟೇಬಲಿಗೆ ಬರುತ್ತಿತ್ತು. ನನಗೆ ಚಹಾ ಬೇಕೆನಿಸುವ ಸಮಯದಲ್ಲಿಯೇ ಅದು ದೊರೆಯುತ್ತಿತ್ತು. ರಜೆಯಲ್ಲಿ ಊರಿಗೆ ಹೋದಾಗ, ಇದ್ದಕ್ಕಿದ್ದ ಹಾಗೆ 'ಚಹಾ ಬೇಕೆ?' ಎನ್ನುವ ಪ್ರಶ್ನೆ ಬರುತ್ತಿತ್ತು. ಹಾಗೆ ಬೇಕೆನ್ನಿಸಿದ ಸಮಯದಲ್ಲಿಯೇ ಈ ಪ್ರಶ್ನೆ ಬರುತ್ತಿದ್ದದ್ದು ಸಖತ್‌ ಅಚ್ಚರಿಯ ವಿಷಯ. ಹೇಗೆ ತಿಳಿಯಿತು ಎಂದರೆ ಒಂದು ಮುಗುಳ್ನಗೆಯೇ ಉತ್ತರವಾಗಿರುತ್ತಿತ್ತು.

ಆದರೆ ಈ ಬಗೆಯ ಚಿಂತೆಗಳು ನನಗೇಕೆ ಬರುವುದಿಲ್ಲವೋ, ಗೊತ್ತಿಲ್ಲ. ಜವಳಿ ಅಂಗಡಿಯ ಮುಂದೆ ಹೋದಾಗಲೂ ಸೀರೆ ಬೇಕೆ ಎಂದು ಕೇಳುವುದಿಲ್ಲ. ಅಕ್ಷಯ ತ್ರಿತೀಯದಂದು ಊರಿಗೆ ಊರೇ ಚಿನಿವಾರರ ಅಂಗಡಿಗೆ ದಾಳಿ ಹಾಕಿದ್ದರೂ ಮಡದಿಯನ್ನು ಕರೆದೊಯ್ಯಬೇಕೆನ್ನಿಸಿರಲಿಲ್ಲ! ಹಾಗಿದ್ದರೂ, "ಐ ಮಿಸ್‌ ಯು" ಎಂದಳಲ್ಲ! ಏನು ಉತ್ತರ ಕೊಡಲಿ?

(ಇದನ್ನು ಬರೆದ ಮೇಲೆ, ನನ್ನ ಮೆಚ್ಚಿನ ಬ್ಲಾಗ್‌ (ಬೆಂಗಳೂರಿನ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸ್‌ ನಲ್ಲಿ ಪ್ರೊಫೆಸರ್‌ ಆಗಿರುವ ಡಾ. ಅಭಿರಾಮನ್‌ರವರ ಬ್ಲಾಗ್‌) ನಾನೊಪಾಲಿಟನ್‌ ನಲ್ಲಿ ಈ ಒಂದು ಸಂವಾದವನ್ನು ಕಂಡೆ: ನ್ಯೂ ಯಾರ್ಕ್‌ ಟೈಂಸ್‌ನ ಸಾರಾ ಡೇವಿಡ್‌ಸನ್‌ ಅಮೆರಿಕೆಯ ನ್ಯಾಶನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಏಜಿಂಗ್‌ನ ಪ್ರೊಫೆಸರ್‌ ರಾಬರ್ಟ್‌ ಬಟ್ಲರ್‌ರವರ ಜೊತೆ ನಡೆಸಿದ ಸಂವಾದ ಇದು.

ಸಾರಾ: What about the institution of marriage? If you’re going to live to 100 and get married at 22 or 25. ... (ಮದುವೆಯ ಬಗ್ಗೆ ಏನು ಹೇಳುವಿರಿ? ನೀವು ನೂರು ವರುಷ ಬದುಕುವವರಾಗಿದ್ದು, ೨೨-೨೫ ವಯಸ್ಸಿನಲ್ಲಿ ಮದುವೆಯಾದರೆ...)

ಬಟ್ಲರ್‌: BUTLER: Oh, you are evil. (ಓಹ್‌.. ನೀನು ಬಲು ಕಿಲಾಡಿ..)

ಸಾರಾ: Are you still going to vow “till death do us part”? (ಆಗಲೂ ಸಾಯುವವರೆವಿಗೂ ಜೊತೆಗಿರೋಣ ಎಂದು ಶಪಥ ಮಾಡುವಿರಾ?)

ಬಟ್ಲರ್‌ BUTLER: There’s a demographer, Peter Uhlenberg, who said that divorce is a substitute for death, because in the old days there was enough death, unfortunately, particularly of women in childbirth, that the men would remarry. Someone even calculated that marriage now lasts about as long as it did then, it was ended by death rather than by divorce. (ಪೀಟರ್‌ ಉಲೆನ್‌ಬರ್ಗ್ ಎನ್ನುವ ಸಮುದಾಯ ವಿಜ್ಞಾನಿ ವಿಚ್ಛೇದನ ಸಾವಿಗೆ ಪರ್ಯಾಯ ಎಂದು ಹೇಳಿದ್ದಾನೆ. ಏಕೆಂದರೆ ಹಿಂದೆ ಸಾವು ಸಾಕಷ್ಟು ಇರುತ್ತಿತ್ತು. ದುರದೃಷ್ಟವಶಾತ್‌, ಮಗುವಿನ ಹುಟ್ಟಿನ ಸಂದರ್ಭದಲ್ಲಿ ಮಹಿಳೆಯರು ಸಾವಿಗೀಡಾಗಿ,ಗಂಡಂದಿರು ಮರುಮದುವೆಯಾಗಬಹುದಿತ್ತು. ಈಗಲೂ ಮದುವೆಯ ಬಂಧ ಅಂದಿನಷ್ಟೇ ದೀರ್ಘವಾಗಿದೆ ಎಂದು ಯಾರೋ ಲೆಕ್ಕ ಹಾಕಿದ್ದಾರೆ. ಆಗ ಅದು ವಿಚ್ಛೇದನದ ಬದಲಿಗೆ ಸಾವಿನಿಂದ ಕೊನೆಗೊಳ್ಳುತ್ತಿತ್ತು.)


ಈ ಲೆಕ್ಕಾಚಾರದಲ್ಲಿ ನಮ್ಮಲ್ಲಿ ಈಗ ವಿವಾಹ ಎಂಬ ವ್ಯವಸ್ಥೆ ಇನ್ನಷ್ಟು ದೀರ್ಘವಾಗಿದೆ ಎನ್ನೋಣವೇ?