Thursday, April 21, 2011

ದೇವರ ವ್ಯಾಪಾರ 2

ತಿರುಪತಿಯ ವ್ಯಾಪಾರದ ಬಗ್ಗೆ ಇನ್ನೊಂದು ಮಾತು. ಮೊನ್ನೆ ಇಸ್ರೋದ ಹೊಸ ಉಪಗ್ರಹ ಆಕಾಶವೆರಿದ್ದು ಗೊತ್ತಲ್ಲ! ಅದರ ಫಲ ಇಸ್ರೋಗೆ ಸಲ್ಲಬೇಕೋ, ತಿರುಪತಿಯ ತಿಮ್ಮಪ್ಪನಿಗೆ ಸಲ್ಲಬೇಕೋ ಗೊಂದಲವಾಗಿದೆ. ಏಕೆಂದರೆ ಈಟಿವಿ ವರದಿ ಮಾಡಿದಂತೆ ಇಸ್ರೋದ ಮುಖ್ಯಸ್ತರು ಉಪಗ್ರಹದ ಉಡಾವಣೆಗೆ ಮೊದಲು ತಿರುಪತಿಯ ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿದ್ದರು. ಉಪಗ್ರಹ ಉಡಾವಣೆ ಸುಗಮವಾಗಿ ಸಾಗಲಿ ಅಂತ. ಇತ್ತೀಚಿಗೆ ದೇಶದ ಪ್ರತಿಷ್ಟಿತ ಸಂಸ್ಥೆಯಾದ ಇಸ್ರೋಗೂ ಗರ ಬಡಿದಿದೆ. ಅಂತರಿಕ್ಸ್ ಹಾಗೂ ದೇವಾಸ್ ಸಂಸ್ಥೆಗಳ ಗುತ್ತಿಗೆ ವ್ಯವಹಾರ ಹಾಗೂ ಕಳೆದ ಎರಡು ಉಡಾವಣೆಗಳ ವಿಫಲತೆ ಮುಂದೆ ಈ ಸಂಸ್ಥೆಯ ಹಣಕಾಸು ಬೇಡಿಕೆಗಳಿಗೆ ಅಡ್ಡಿಯಾಗಬಹುದು. ಮತ್ತೊಂದು ಉಡಾವಣೆಯು ಸೋತಿದ್ದಾರೆ ಕಷ್ಟವೇ ಆಗುತ್ತಿತ್ತು. ತಿರುಪತಿಯ ತಿಮ್ಮಪ್ಪ ಸಂಕಟ ಹರನಲ್ಲವೇ? ಅದಕ್ಕೆ ಬಹುಷಃ ಇಸ್ರೋದ ಅಧಿಕಾರಿಗಳು ತಿಮ್ಮಪ್ಪನ ಮೊರೆ ಹೋಗಿದ್ದಾರೆ ಎನಿಸುತ್ತದೆ. ವಿಜ್ಞಾನ ಹಾಗೂ ವಿಶ್ವಾಸಗಳ ಗೊಂದಲಕ್ಕೆ ಇದೂ ಒಂದು ಉದಾಹರಣೆ. ಆದರೂ, ಇಸ್ರೋ ಗಾಬರಿಯಾಗಬೇಕಿರಲಿಲ್ಲ. ಸರಕಾರ ಹಣ ಕೊಡದಿದ್ದರೂ, ಹತ್ತು ಉಪಗ್ರಹಗಳ ಉಡಾವಣೆಗೆ ಅವಶ್ಯಕವಾದ ಹಣವನ್ನು ತಿರುಪತಿಯ ಯು ಎಸ್ ಪಿ ಆಗಿತ್ತುಕೊಂಡು ಲಾಭ ಪಡೆಯುವುದರಲ್ಲಿ ಧಾರ್ಮಿಕ ಸಂಸ್ಥೆಗಳು ಸಿದ್ಧ ಹಸ್ತ ಅಲ್ಲವೇ? ಇಸ್ರೋ ಸರಕಾರವನ್ನು ಬೇಡುವುದಕ್ಕಿಂತ ದೇವರಲ್ಲಿ ಬೇಡಿದ್ದೆ ಸರಿಯೇನೋ ಅಲ್ಲವೇ? :)

Monday, April 18, 2011

ದೇವರ ವ್ಯಾಪಾರ!

ಮೊನ್ನೆ ಮಡದಿಯ ವರಾತ ತಾಳಲಾರದೆ ತಿಮ್ಮಪ್ಪನ ತಿರುಪತಿಗೆ ಪ್ರವಾಸ ಹೋಗಿದ್ದೆ. ನನ್ನ ಹೆಸರಿನಲ್ಲೇ ತಿಮ್ಮಪ್ಪನ ಹೆಸರಿದ್ದರೂ ಅರ್ಧ ಶತಮಾನದಿಂದಲೂ ತಿರುಪತಿಗೆ ಹೋಗಿರಲಿಲ್ಲ ಎನ್ನುವುದು ವಾಸ್ತವ. ಹೊಟ್ಟೆ ತಾಳ ಹಾಕುತ್ತಿದ್ದರೂ, ಫ್ಯಾಶನ್‌ಗೆ ಟೇಬಲ್‌ ಕುಟ್ಟಿಕೊಂಡು ಊಟಕ್ಕೆ ಕಾಯುತ್ತ ಕುಳಿತುಕೊಳ್ಳುವುದು ಹಾಗೂ ಭಕ್ತಿ ಎನ್ನುವ ಹೆಸರಿನಲ್ಲಿ ಗಂಟೆಗಟ್ಟಲೆ ಕ್ಯೂ ನಿಲ್ಲುವುದು ನನಗೆ ಒಗ್ಗಿಬಾರದ ಸಂಗತಿ. ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹತ್ತಾರು ಗಂಟೆಗಳ ಕಾಲ ಕಾಯಬೇಕು ಎನ್ನುವ ಅರಿವಿದ್ದರೂ ಈ ಬಾರಿ ಅದೇನಾಗುತ್ತದೋ ನೋಡಿಯೇ ಬಿಡೋಣ ಅಂತ ಹೋದೆ. ಜೊತೆಗೆ ಅಲ್ಲಿಗೆ ಪ್ರವಾಸ ಹೋಗಿ ಬಂದವರೆಲ್ಲರೂ ’ಮಾನವನಾಗಿ ಹುಟ್ಟಿದ ಮೇಲೆ ಒಮ್ಮೆಯಾದರೂ ತಿರುಪತಿ ನೋಡಲೇ ಬೇಕು,’ ಎನ್ನುವಂತೆ ವಿವರಿಸುತ್ತಿದ್ದದ್ದೂ ಪ್ರೇರಣೆಯಾಗಿರಬೇಕು. ತಿಂಗಳಿಗೊಮ್ಮೆಯಾದರೂ ತಿರುಪತಿಗೆ ಹೋಗುವ ಗೆಳೆಯರಿದ್ದಾರೆ. ನನಗೆ ತಿರುಪತಿಯಿಂದ ಏನೂ ಆಗಬೇಕಿರಲಿಲ್ಲವಾದ್ದರಿಂದ ಅಲ್ಲಿಗೆ ಹೋಗುತ್ತಿಲ್ಲ ಎಂದು ಅವರಿಗೆ ಸಮಜಾಯಿಷಿ ಕೊಡುತ್ತಿದ್ದೆ. ಆದರೆ ಮೊನ್ನೆಯ ನನ್ನ ಅನುಭವ - ಅನುಭವ ಅನ್ನುವುದಕ್ಕಿಂತಲೂ ಅವಲೋಕನ ಎನ್ನುವುದೇ ಸರಿ - ಈ ಬರೆಹಕ್ಕೆ ಹೂರಣ. ೧. ಪ್ರತಿ ದಿನವೂ ಲಕ್ಷಾಂತರ ಮಂದಿ ಪ್ರವಾಸಿಗರು ಬರುವ ಸ್ಥಳವಾದರೂ ಸ್ವಚ್ಛತೆಯನ್ನು ಕಾಯ್ದುಕೊಂಡಿರುವ ಪರಿ ನಿಜಕ್ಕೂ ಮಾದರಿಯೇ ಸರಿ. ಈ ವಿಷಯದಲ್ಲಿಯಾದರೂ ತಿರುಪತಿ ತಿರುಮಲ ದೇವಸ್ವಂನಿಂದ ಕಲಿಯುವುದು ಬಹಳ ಇದೆ. ರಾತ್ರಿ ಹನ್ನೆರಡು ಗಂಟೆಯಾಗುತ್ತಿದ್ದರೂ ಕಸಬರಲು ಹಿಡಿದು ರಸ್ತೆ ಗುಡಿಸುತ್ತಾ ಇರುವ ಮಹಿಳೆಯರನ್ನು ನೋಡಬಹುದು! ೨. ಭಾರತೀಯ ಬ್ಯುಸಿನೆಸ್‌ ಶಾಲೆಗಳಿಗೆ ವಿದೇಶೀಯರು ಮುಗಿ ಬೀಳುತ್ತಾರಂತೆ! ಬಹುಶಃ ತಿರುಪತಿಗಿಂತಲೂ ದೊಡ್ಡ ಬ್ಯುಸಿನೆಸ್‌ ಶಾಲೆ ಇನ್ನೊಂದು ಇರಲಾರದು. ನನಗೆ ಮಾರ್ಗದರ್ಶಿಯಾಗಿ ಬಂದಿದ್ದ ಮಿತ್ರರೊಬ್ಬರ ಮಾತುಗಳನ್ನು ಕೇಳಿ ನನಗೆ ಹೀಗನ್ನಿಸಿತು. ದೇವಸ್ತಾನಗಳ ನಿರ್ವಹಣೆಗೆ ತಿರುಪತಿಯ ತಿಮ್ಮಪ್ಪನ ಕೊಡುಗೆ ಅಷ್ಟಿಷ್ಟಲ್ಲ ಎನ್ನಿಸಿದೆ. ನಾನು ಚಿಕ್ಕವನಾಗಿದ್ದಾಗ ಊರಿನಲ್ಲಿದ್ದ ಶಿವ ಮಂದಿರಕ್ಕೆ ಹೋಗುತ್ತಿದ್ದುದಕ್ಕೂ, ತಿರುಪತಿಯ ತಿಮ್ಮಪ್ಪನ ದರ್ಶನಕ್ಕೂ ಅಜಗಜಾಂತರವಲ್ಲ, ಅಜ-ಡೈನೋಸಾರ್‌ ವ್ಯತ್ಯಾಸವಿದೆ. ಶಿವಮಂದಿರದ ದೀಕ್ಷಿತರು ನಿಧಾನವಾಗಿ ಮಂತ್ರ ಹೇಳುತ್ತಾ, ಮನೆವಾರ್ತೆಯನ್ನೂ ವಿಚಾರಿಸಿಕೊಂಡು ತೀರ್ಥ ಕೊಡುತ್ತಿದ್ದದ್ದು ಮನದಿಂದ ಮರೆಯಾಗಿಲ್ಲ. ಅಲ್ಲಿ ಕುಂಕುಮಾರ್ಚನೆಗೂ, ಸಹಸ್ರನಾಮಾರ್ಚನೆಗೂ ಯಾವುದೇ ನಿಗದಿತ ಶುಲ್ಕ ಇರಲಿಲ್ಲ. ಯಥಾಶಕ್ತಿ ಭಕ್ತರು ತಟ್ಟೆಗೆ ಹಾಕಿದ ದಕ್ಷಿಣೆಯೇ ದೀಕ್ಷಿತರಿಗೆ ಸಂಪಾದನೆ! ತಿರುಪತಿ ತಿಮ್ಮಪ್ಪನನ್ನೇ ನೋಡಿ!. ವ್ಯಾಲ್ಯೂ ಆಡೆಡ್‌ (ಮೌಲ್ಯವರ್ಧಿತ) ಭಕ್ತಿ ಎಂದರೆ ಇದೇ! ಕಲ್ಯಾಣೋತ್ಸವದಿಂದ ಆರಂಭಿಸಿ ಹಲವು ವಿಶೇಷ ಪೂಜೆಗಳಿವೆ. ಒಂದೊಂದಕ್ಕೂ ಅದಕ್ಕೆ ತಕ್ಕಂತೆ ಶುಲ್ಕ. ಭಕ್ತಿಯ ಈ ಮೌಲ್ಯವರ್ಧನೆ (ಮೌಢ್ಯವರ್ಧನೆ ಎಂದಿದ್ದಾರೆ) ಉಳಿದೆಲ್ಲ ದೇವಾಲಯಗಳಿಗಿಂತಲೂ ಮೊದಲು ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲೇ ಹುಟ್ಟಿರಬೇಕು ಎನ್ನುವುದು ನನ್ನ ವಾದ. ಚರಿತ್ರೆಯಲ್ಲಿ ನಾನು ತುಸು ಹಿಂದೆ ಆದ್ದರಿಂದ ಈ ಬಗ್ಗೆ ನಿಖರವಾಗಿ ಹೇಳಲಾರೆ. ಆದರೆ ಬ್ಯುಸಿನೆಸ್‌ ಮಾಡೆಲ್‌ ಆಗಿ ತಿಮ್ಮಪ್ಪನ ಸನ್ನಿಧಾನ ಅತ್ಯುತ್ತಮ ಎನ್ನುವುದು ನನ್ನ ವಾದ. ತಿರುಪತಿ ತಿಮ್ಮಪ್ಪ ಎನ್ನುವ ಬ್ರಾಂಡ್‌ ಯಾರಿಗೆ ಗೊತ್ತಿಲ್ಲ! ಬ್ರಾಂಡ್‌ ಕ್ರಿಯೇಷನ್‌ನಲ್ಲೂ ತಿಮ್ಮಪ್ಪ ಪಯನಿಯರ್‌ (ಮೊದಲಿಗ) ಇರಬೇಕು. ವಿವಿಧ ಮೌಲ್ಯಗಳ ದರ್ಶನವೂ ಇದೆ. ಮುಫತ್ತು ದರ್ಶನ ಎಲ್ಲರಿಗೂ ಲಭ್ಯ. ದುಡ್ಡಿದ್ದವರಿಗೆ ವಿಶೇಷ ದರ್ಶನ. ಅದಕ್ಕೂ ಹೆಚ್ಚಿನ ದುಡ್ಡು, ಪ್ರಭಾವ ಇದ್ದವರಿಗೆ ವಿಐಪಿ ದರ್ಶನ. ಒಂದೇ ಉತ್ಪನ್ನದಲ್ಲಿ ಡೈವರ್ಸಿಫಿಕೇಶನ್‌ ಸಾಧ್ಯ ಎಂದು ತೋರಿಸಿಕೊಟ್ಟಿದ್ದಾನೆ ತಿಮ್ಮಪ್ಪ. ೩. ಅಮೆರಿಕೆಯಲ್ಲಿರುವ ತಿಮ್ಮಪ್ಪ ಭಕ್ತರಿಗೆ ಆನ್‌ಲೈನ್‌ ದರ್ಶನವೂ ಲಭ್ಯವಂತೆ. ತಿಮ್ಮಪ್ಪನ ದರ್ಶನಕ್ಕೆಂದು ಕ್ಯೂನಲ್ಲಿ ನಿಂತಿದ್ದಾಗ ಅಮೆರಿಕೆಯಲ್ಲಿ ತಿಮ್ಮಪ್ಪನ ದೇವಸ್ಥಾನ ಇದ್ದಿದ್ದರೆ ಹೇಗಿರುತ್ತಿತ್ತು ಎನಿಸಿತು. ನಮ್ಮ ದೇಶದ ಜನದಟ್ಟಣೆಯ ಹತ್ತರಲ್ಲೊಂದಂಶದಷ್ಟು ವಿರಳ ಜನ ದಟ್ಟಣೆ ಇರುವ ಅಮೆರಿಕೆಯಲ್ಲಿ ತಿಮ್ಮಪ್ಪನ ದರ್ಶನಕ್ಕೆ ಇಷ್ಟೊಂದು ದೊಡ್ಡ ಕ್ಯೂ ಬಹುಶಃ ಇರುತ್ತಿರಲಿಲ್ಲ. ಹಾಗೆಯೇ, ಹತ್ತಾರು ಗಂಟೆಗಳ ಕಾಲ ಕ್ಯೂನಲ್ಲಿ "ಗೋವಿಂದ, ಗೋವಿಂದ’ ಎನ್ನುತ್ತಾ ನಡೆದು ಬಂದವರು, ಗರ್ಭಗುಡಿಯ ಸಮೀಪ ಬರುತ್ತಿದ್ದ ಹಾಗೆಯೇ ಆ ಎಲ್ಲ ಶಿಸ್ತನ್ನೂ ಮರೆತು ಮತ್ತೆ ಗುಂಪುಗೋವಿಂದರಾಗುವುದು ಏಕೋ ಅರ್ಥವಾಗಲಿಲ್ಲ. ೪. ಧರ್ಮ ಹಾಗೂ ವಿಜ್ಞಾನ ಒಂದಕ್ಕೊಂದು ವಿರೋಧ ಎನ್ನುತ್ತಾರಷ್ಟೆ! ವಿಜ್ಞಾನದ ಬಳುವಳಿಯಾದ ತಂತ್ರಜ್ಞಾನ ಮಾತ್ರ ಯಾಕೋ ಧರ್ಮಭೀರುಗಳಾದ ದೇವರಿಗೆ ಪ್ರಿಯ. ತಿರುಪತಿಯ ಪ್ರತಿಯೊಂದು ಚಟುವಟಿಕೆಯಲ್ಲಿಯೂ ವಿಜ್ಞಾನ ಹಾಗೂ ತಂತ್ರಜ್ಞಾನದ ಬಳಕೆಯನ್ನು ಕಂಡೆ. ಯಾವುದೇ ವಹಿವಾಟನ್ನು ನಡೆಸುವಾಗಲೂ ಅದಕ್ಕೆ ಅನುಕೂಲವಾಗುವಂತಹ, ಲಾಭ ಹೆಚ್ಚಿಸುವಂತಹ ತಂತ್ರಜ್ಞಾನ, ಕ್ರಮಗಳನ್ನು ಅಳವಡಿಸಿಕೊಳ್ಳುವುದು ಸಹಜವೇ! ಅಪ್ಪಟ ವಾಣಿಜ್ಯಮೂರ್ತಿ ತಿಮ್ಮಪ್ಪನ ತಿರುಪತಿ ಇದಕ್ಕೆ ಅಪವಾದ ಹೇಗಾದೀತು? ಲಕ್ಷಾಂತರ ಜನರ ಭಕ್ತಿಗೆ ಪ್ರಸಾದ ಒದಗಿಸುವ ಲಡ್ಡುವನ್ನು ಹೊತ್ತು ತರಲು ಕನ್ವೆಯರ್‌ ಬೆಲ್ಟ್‌ ವ್ಯವಸ್ಥೆ, ಬಯೋಡಿಗ್ರೇಡಬಲ್‌ (ಜೈವಿಕ ಶಿಥಿಲತೆಯ) ಪ್ಲಾಸ್ಟಿಕ್‌ ಚೀಲಗಳು, ಸದಾ ಜನತೆಯ ಕಣ್ಗಾವಲಾಗಿರುವ ದೇವರ ದೇವಾಲಯವನ್ನು ಕಾಯುವುದಕ್ಕೆ ಕ್ಲೋಸ್ಡ್‌ ಸರ್ಕೀಟ್‌ ಕಣ್ಗಾವಲು ವ್ಯವಸ್ಥೆ, ಮಂತ್ರ ಪಠಣಕ್ಕೆ, ಸಂಗೀತಕ್ಕೆ ಧ್ವನಿವರ್ಧಕ, ಭಕ್ತರ ಸಾಗಾಟಕ್ಕೆ ವಾಹನಗಳು ಇವೆಲ್ಲವೂ ವಿಜ್ಞಾನ ತಂತ್ರಜ್ಞಾನದ ಕೊಡುಗೆಗಳೇ! ಅದಷ್ಟೆ ಅಲ್ಲ. ಭಕ್ತರ ಜಂಗುಳಿಯನ್ನು ನಿಯಂತ್ರಿಸಲು ಪ್ರವಾಹ ನಿಯಂತ್ರಣ ವ್ಯವಸ್ಥೆಯಂತೆ ಅಲ್ಲಲ್ಲಿ ಅಡ್ಡಿಕೋಣೆ (ಇದನ್ನು ಕಂಪಾರ್ಟ್‌‌ಮೆಂಟ್‌ ಎನ್ನುತ್ತಾರೆ)ಗಳಿವೆ - ನೀರ ಹರಿವನ್ನು ನಿಯಂತ್ರಿಸುವ ಚೆಕ್‌ ಡ್ಯಾಮ್‌ಗಳಂತೆ. ವಿವಿಧ ಮೌಲ್ಯದ ದರ್ಶಕರ ಪ್ರವಾಹವನ್ನು ಬೇರೆ, ಬೇರೆ ದಿಕ್ಕಿನಿಂದ ಹರಿಯ ಬಿಟ್ಟು, ಒಂದೆಡೆಗೇ ಕೂಡಿಸುವ ಸೂಯರ್‌ ವ್ಯವಸ್ಥೆಯಂತಹ ಚಾಲಾಕಿತನವನ್ನೂ ಇಲ್ಲಿ ನೋಡಬಹುದು. ೫. ತಿರುಪತಿಯಲ್ಲಿ ನಾನು ಕಂಡ ಹೆಚ್ಚಿನವರು ಆಂಧ್ರ, ತಮಿಳುನಾಡು ಹಾಗೂ ಮಹಾರಾಷ್ಟ್ರದವರು. ಕೇರಳ ಹಾಗೂ ಇತರೆ ರಾಜ್ಯಗಳಿಂದ ಬಂದವರ ಸಂಖ್ಯೆ ಕಡಿಮೆ. ಭೌಗೋಳಿಕವಾಗಿ ಸಮೀಪವಿರುವುದರಿಂದ ಹೀಗೋ ಅಥವಾ ತಿಮ್ಮಪ್ಪನ ಜ್ಯೂರಿಸ್‌ಡಿಕ್ಷನ್‌ (ಮಾರ್ಕೆಟಿಂಗ್‌ ಏರಿಯಾ) ಹಾಗಿರಬಹುದೋ? ಏಕೆಂದರೆ ಧರ್ಮಸ್ಥಳಕ್ಕೆ ಭೇಟಿನೀಡುವವರಲ್ಲಿ ಹೆಚ್ಚಿನವರು ಉತ್ತರಕರ್ನಾಟಕದವರು, ಕೊಲ್ಲೂರಿಗೆ ಬರುವವರಲ್ಲಿ ಮಲ್ಲು ನಾಡಿನವರೇ ಹೆಚ್ಚು! ತಮಿಳುನಾಡಿನಲ್ಲಿ ಕೆಲವು ದೇವಸ್ಥಾನಗಳಿಗೆ ಹೋದರೆ ತಮಿಳರಿಗಿಂತಲೂ ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಾರೆ (ಕೆಲವೊಮ್ಮೆ ನಮ್ಮ ಮುಖ್ಯಮಂತ್ರಿಗಳೂ ಅಲ್ಲೇ ನಿಮ್ಮನ್ನು ಭೇಟಿಯಾಗಬಹುದು). ಭಕ್ತಿಗೂ ಒಂದು ನಿರ್ದಿಷ್ಟ ಪ್ರಭಾವವಲಯ ಇರಬಹುದೇ? ೬. ಯಾವುದೇ ಮೌಲ್ಯದ ದರ್ಶನವಾದರೂ ಕನಿಷ್ಠ ಎಂಟು ಗಂಟೆ ಕಾಯಲೇಬೇಕು ಎನ್ನುವುದು ಅರಿವಾದಾಗ ನನ್ನ ಮಿತ್ರರು ಅಪ್ಪಟ ಭಾರತೀಯ ಕೆಲಸ ಮಾಡಲು ಹೊರಟರು. ಅಲ್ಲೇ ಕಾವಲು ನಿಂತಿದ್ದ ಸೆಕ್ಯೂರಿಟಿಯವನಿಗೆ ಅಣ್ಣಾ-ತಮ್ಮಾ ಎಂದು ತಮ್ಮ ಸಂಕಷ್ಟಗಳನ್ನು ಹೇಳಿಕೊಂಡು, ಹೇಗಾದರೂ ಕ್ಯೂವಿನ ಒಳಗೆ ಬಿಡಲಾದೀತೇ ಎಂದು ಪುಸಲಾಯಿಸಿದರು. ವಿಶೇಷ ದರ್ಶನಕ್ಕೂ ವಿಶೇಷವಾದ ದರ್ಶನ ವ್ಯವಸ್ಥೆ ಇರಬಹುದು ಎನ್ನಿಸಿದ್ದು ಆಗಲೇ! ’ಏಮಾನಾ ಇಚ್ಚೇಸ್ತಾನು, ಚೂಡು ನಾಯನಾ,’ ಅಂತ ಅವರು ಪುಸಲಾಯಿಸಿದಾಗ ಅಣ್ಣಾ ಹಜಾರೆ ಯಾಕೆ ಗೆಲ್ಲುವುದಿಲ್ಲ ಅಂತ ಅರ್ಥವಾಯಿತು. ಆದರೆ ಆ ಸೆಕ್ಯೂರಿಟಿಯವ ಬಗ್ಗಲಿಲ್ಲ. ಅಪ್ಪಟ ತೆಲುಗುವಿನಲ್ಲಿ ಅವ ಹೇಳಿದ್ದು, "ಆಗಲ್ಲಣ್ಣ. ಮೊದಲಾಗಿದ್ರೆ ಏನಾದ್ರೂ ಮಾಡಬಹುದಿತ್ತು. ಆದ್ರೆ ಈಗ ಸಿಸಿಟೀವಿ ಹಾಕಿಬಿಟ್ಟಿದಾರೆ. ಯಾರನ್ನಾದರೂ ಬಿಟ್ರೆ ತಕ್ಷಣ ಅಲ್ಲಿ ಗೊತ್ತಾಗಿ ಬಿಡುತ್ತೆ." ತಿಮ್ಮಪ್ಪನೂ ತರಲಾಗದ ನೈತಿಕ ಭಯವನ್ನು ತಂತ್ರಜ್ಞಾನ ತಂದಿತೇ?

Sunday, November 22, 2009

ಜಾಗತೀಕರಣ

ಮೊನ್ನೆ ಅಮೆರಿಕೆಯಲ್ಲಿ ಓದುತ್ತಿರುವ ಮಗಳ ಫೋನ್‌. ಅಪ್ಪಾ... "ಮುಂದಿನ ತಿಂಗಳು ಕ್ರಿಸ್‌ಮಸ್‌ಗಾಗಿ ಇಲ್ಲಿ ರಿಯಾಯಿತಿ ಮಾರಾಟ ಇರುತ್ತದೆ. ನಿನಗೆ ಏನಾದರೂ ಬೇಕಾದರೆ ಹೇಳು. ರಜೆಗೆ ಬರುವಾಗ ಕೊಂಡು ತರುತ್ತೇನೆ," ಅಂದಳು. ಹೇಳಿ, ಕೇಳಿ ಅಮೆರಿಕೆ. ಅಲ್ಲಿ ಪ್ರತಿ ಡಾಲರನ್ನೂ ರೂಪಾಯಿಗೆ ಪರಿವರ್ತಿಸಿಕೊಂಡು ಲೆಕ್ಕ ಹಾಕುವ ಮಗಳು ಹೀಗೆ ಹೇಳಿದಾಗ ಆಶ್ಚರ್ಯವೆನಿಸಿತು. "ಏನೂ ಬೇಡಮ್ಮ," ಎಂದೆ. ಆದರೆ ಅವಳು ಬಿಡಬೇಕಲ್ಲ. "ಏನು ಬೇಕು ಹೇಳು ತರ್ತೀನಿ" ಅಂತ ಹಠ ಹಿಡಿದಳು. ಎಲ್ಲ ಅಪ್ಪಂದಿರ ಹಾಗೇ ವಿನಾಕಾರಣ ಖರ್ಚು ಮಾಡಿ ತೊಂದರೆಗೆ ಮಗಳು ಸಿಕ್ಕಿಕೊಳ್ಳಬಹುದು ಎನ್ನಿಸಿ, ಮತ್ತೊಮ್ಮೆ ಏನೂ ಬೇಡ ಅಂದೆ. ಆದರೂ ಅವಳ ವರಾತ ಹೆಚ್ಚಾದಾಗ, "ಇಲ್ಲಿ ಸಿಗದ್ದು ಅಲ್ಲಿದ್ದರೆ ತೊಗೊಂಡು ಬಾ." ಎಂದೆ.

ನಾನು ಅಮೆರಿಕೆಗೆ ಹೋಗಿಲ್ಲ. ಹೋಗುವ ಹುಮ್ಮಸ್ಸೂ ಇಲ್ಲ. ಇಡೀ ಕರ್ನಾಟಕವನ್ನೇ ಸುತ್ತಿ ಬಂದರೂ ಎರಡು ಜನ್ಮ ಸಾಲದಷ್ಟು ನೋಡುವುದಿದೆ. ನೂರು ಜನ್ಮ ಕಳೆದರೂ ಭಾರತವನ್ನು ಪೂರ್ತಿ ಸುತ್ತಿ ನೋಡಲಾಗುವುದಿಲ್ಲ. ಇನ್ನು ಅಮೆರಿಕೆಗೋ, ಯುರೋಪಿಗೋ ಹೋಗಿ ಬಂದರೆ ಸಾಕೇ ಅನ್ನುವುದು ನನ್ನ ಅನಿಸಿಕೆ. ಅಮೆರಿಕೆಗೋ, ಯುರೋಪಿಗೋ ಹೋಗಿ ಬಂದವರನ್ನು ಕೈಲಾಸಕ್ಕೇ ಹೋಗಿ ಬಂದಂತೆ ಗೌರವಿಸುತ್ತಿದ್ದ ಕಾಲವಿತ್ತು. ಈಗ ಕಾಲ ಬದಲಾಗಿದೆ.

ಕಾಲ ಇನ್ನೊಂದು ಬದಲಾವಣೆಯನ್ನೂ ತಂದಿದೆ. ಹಿಂದೆ ಕಾಶಿಗೆ ಹೋಗಿ ಬಂದವರನ್ನು "ಕಾಶಿಯಲ್ಲಿ ಏನನ್ನು ಬಿಟ್ಟು ಬಂದೆ" ಅಂತ ಕೇಳ್ತಾ ಇದ್ದರಂತೆ. ಹಾಗೆಯೇ ಕಛೇರಿ ನಿಮಿತ್ತವಾಗಿಯೋ, ವಿರಾಮಕ್ಕೋ ಎಲ್ಲಿಗಾದರೂ ಪ್ರವಾಸ ಹೋದವರು ಮರಳಿದಾಗ ಅಲ್ಲಿಂದ ಏನು ತಂದೆ ಎನ್ನುವ ಪ್ರಶ್ನೆ ಎದುರಾಗುತ್ತಿತ್ತು. ರಾಮೇಶ್ವರ, ಕನ್ಯಾಕುಮಾರಿಯ ಪ್ರವಾಸಿಗಳು ಕಪ್ಪೆಚಿಪ್ಪುಗಳ ಸಾಮಾನುಗಳನ್ನು ಹೊತ್ತು ತರುತ್ತಿದ್ದರು. ದೆಹಲಿಗೆ ಹೋದವರು "ಡೆಲ್ಲಿ ಸೆಟ್‌" ರೇಡಿಯೋಗಳನ್ನೋ, ಟೇಪ್‌ರೆಕಾರ್ಡರ್‌ಗಳನ್ನೋ ತರುತ್ತಿದ್ದರು. ಮುಂಬಯಿಯಿಂದ ಬರುವವರ ಜೊತೆಗೆ ಉಡುಪಿನ ಉಡುಗೊರೆಯ ಕಂತೆ ಇರುತ್ತಿತ್ತು. ಚೆನ್ನೈನಿಂದ ಚರ್ಮದ ಸಾಮಾನುಗಳು, ಗೌಹಾತಿಯಿಂದ ಗುಡ್ಡಗಾಡು ಜನರ ದಿರಿಸುಗಳು, ಜಬಲ್‌ಪುರದಿಂದ ಅಮೃತಶಿಲೆಯ ಸಾಮಾನುಗಳು, ಲಕ್ನೋ-ಕಲ್ಕತ್ತಾದಿಂದ ಚಪ್ಪಲಿ, ಮೈಸೂರಿನಿಂದ ಗಂಧದ ಕೆತ್ತನೆ, ಜಯಪುರದ ರಜಾಯಿ... ಹೀಗೇ ಆಯಾ ಪ್ರದೇಶದ ಪ್ರಾದೇಶಿಕ ಸಿರಿಯನ್ನು ನೆನಪಿನ ಕಾಣಿಕೆಯಾಗಿ ತರುತ್ತಿದ್ದುದುಂಟು. ಕಳೆದ ವರ್ಷ ಶಿರಸಿಗೆ ಪ್ರವಾಸ ಹೋಗಿದ್ದಾಗ ಉತ್ತರಕರ್ನಾಟಕದ ವಿಶಿಷ್ಟತೆಯ ಪ್ರತಿನಿಧಿಗಾಗಿ ಹುಡುಕಿದೆ. ಏನೂ ಸಿಗಲಿಲ್ಲ. ಎಲ್ಲ ಅಂಗಡಿಗಳಲ್ಲೂ ಅದೇ ಪ್ಲಾಸ್ಟಿಕ್‌ ಬಿಂದಿಗೆ, ಪ್ಲಾಸ್ಟಿಕ್‌ ವಸ್ತುಗಳು, ಚೀನಾದ ಬೊಂಬೆಗಳು... ಕೊನೆಗೆ ಶಿರಸಿಯ ವಿಶಿಷ್ಟ ಕಷಾಯವನ್ನೇ ಎರಡು ಪ್ಯಾಕೆಟ್‌ ತಂದೆ. "ಅಯ್ಯೋ... ಇದನ್ನು ತರಕ್ಕೆ ಶಿರಸಿಗೆ ಹೋಗಬೇಕಿತ್ತಾ.. ಮನೆಯಲ್ಲೇ ಮಾಡಬಹುದಿತ್ತು," ಅನ್ನುವ ಟೀಕೆಯೂ ಸಿಕ್ಕಿತು ಅನ್ನಿ.

ಮಗಳು ಪ್ರಶ್ನೆ ಕೇಳಿದಾಗ ಇವೆಲ್ಲವೂ ನೆನಪಾಯಿತು. ನಾನು ಕಾಲೇಜು ಓದುತ್ತಿದ್ದಾಗ ಕ್ರಿಕೆಟ್‌ ವೀಕ್ಷಕ ವಿವರಣೆ ಕೇಳಲೆಂದು ಕಾಸು-ಕಾಸು ಕೂಡಿ ಹಾಕಿ ನ್ಯಾಶನಲ್‌ ಪ್ಯಾನಸೋನಿಕ್‌ನ ಒಂದು ಪಾಕೆಟ್‌ ರೇಡಿಯೋ ಕೊಂಡುಕೊಂಡಿದ್ದೆ. ಅದನ್ನು ಕೊಳ್ಳಲು ಬೆಂಗಳೂರಿಗೆ ಹೋಗಬೇಕಿತ್ತು. ಈಗ ನ್ಯಾಶನಲ್‌ ಪ್ಯಾನಸೋನಿಕ್‌ ಇರಲಿ, ಯುರೋಪು, ಅಮೆರಿಕ, ಜಪಾನ್‌ ಮತ್ತು ಚೀನಾದ ವಸ್ತುಗಳು ತಾಲೂಕು, ಹೋಬಳಿ ಕೇಂದ್ರಗಳಲ್ಲಿಯೂ "ಸೇಲ್‌"ನಲ್ಲಿ ಕಾಣಿಸುತ್ತವೆ. ಮೊಬೈಲ್‌ ಫೋನ್‌ಗಳನ್ನೇ ಗಮನಿಸಿ. ಪಾಕಿಸ್ತಾನದ ತೊಗರಿಬೇಳೆ, ಮಲೇಶಿಯಾದ ಪಾಮೆಣ್ಣೆ, ಇಟಲಿಯ ಕಾಪುಚಿನೊ ಕಾಫಿ ಎಲ್ಲವೂ ಭಾರತದಲ್ಲಿ ಲಭ್ಯ. ಕೊಳ್ಳಲು ಕಾಸಿರಬೇಕಷ್ಟೆ!

ದೇಶದ ವಿವಿಧ ಸ್ಥಳಗಳಲ್ಲಿ ದೊರಕುವ ವಸ್ತುಗಳಲ್ಲಿ ವಿಶೇಷತೆ ಕಾಣೆಯಾಗಿರುವುದನ್ನೆ ಜಾಗತೀಕರಣದ ಉದಾಹರಣೆ ಅನ್ನುವುದಾದರೆ ನಮ್ಮ ಮದುವೆ ಊಟದಲ್ಲಿ ಆಗಿರುವ ಬದಲಾವಣೆಗೆ ಏನು ಹೇಳೋಣ! ಸಭೆ, ಸಮ್ಮೇಳನಗಳಲ್ಲಿ ಮತ್ತು ಹೋಟೆಲುಗಳಲ್ಲಿ ದೊರೆಯುವ ಊಟವನ್ನ ನನ್ನ ಗೆಳೆಯರೊಬ್ಬರು’ಪ್ಯಾನ್‌ ಇಂಡಿಯನ್‌’ ಎನ್ನುತ್ತಿದ್ದರು. ಕಾರಣ ಇಷ್ಟೆ: ಎಲ್ಲಿ ಹೋದರೂ ಊಟದಲ್ಲಿ ಚಪಾತಿ, ರೊಟ್ಟಿ ಜೊತೆಗೆ ಒಂದಿಷ್ಟು ಅನ್ನ, ಮೊಸರನ್ನ, ಪಲ್ಯೆ, ಸಾಂಬಾರ್‌, ರಸಂ ದೊರೆತೇ ಇರುತ್ತಿತ್ತು. ದಕ್ಷಿಣಭಾರತದವ ಅನ್ನ, ಸಾಂಬಾರ್‌ ತಿಂದು ಕೈತೊಳೆದರೆ, ಉತ್ತರಭಾರತೀಯರು ರೊಟ್ಟಿ,ಪ ಲ್ಯೆ ತಿಂದು ನಡೆಯಬಹುದಿತ್ತು. ಎರಡನ್ನೂ ತಿಂದು ಹೊಟ್ಟೆ ಬೆಳೆಸಿಕೊಳ್ಳುವುದೂ ಸಾಧ್ಯವಿತ್ತು. ಜೊತೆಗೆ ಐಸ್‌ಕ್ರೀಂ ಖಂಡಿತ. ಈಗ ಮದುವೆಯ ಮನೆಗೆ ಹೋದರೆ ಇಂತಹುದೇ ಊಟ! ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಥಾಲಿ ಎಂದರೆ ಇದೇ!

ಜಾಗತೀಕರಣ ಊಟದ ಎಲೆಯನ್ನೂ ತಾಕದೆ ಬಿಟ್ಟಿಲ್ಲ. ಇದೀಗ ಕರ್ನಾಟಕದ ಮದುವೆಗಳಲ್ಲೂ ಒಂದು ಅಭ್ಯಾಸ ಆರಂಭವಾಗಿದೆ. ಮೊದಲು ಅಯ್ಯಂಗಾರರ ಮದುವೆ ಎಂದರೆ ಪುಳಿಯೋಗರೆ, ಅಯ್ಯರ್‌ರವರ ಮದುವೆಗಳಲ್ಲಿ ವಿಶೇಷ ಪಾಯಸ, ವೀರಶೈವರ ಮದುವೆಗಳಲ್ಲಿ ವಿಶೇಷ ಕಾಳಿನ ಸಾಂಬಾರ್‌, ಕೊಡಗಿನವರ ಮದುವೆಯ ಊಟದ ಮಜವೇ ಬೇರೆ... ಹೀಗೆ ಮದುವೆಯ ಊಟ ವೈವಿಧ್ಯಮಯವಾಗಿರುತ್ತಿತ್ತು. ಇಂದು ಹಾಗಿಲ್ಲ. ಊಟ ನೋಡಿ ಆತಿಥೇಯರು ಎಲ್ಲಿಯವರು ಎಂದು ಊಹಿಸುವುದು ಈಗ ಆಗದ ಮಾತು! ಕೋಸಂಬರಿಯ ಜಾಗದಲ್ಲಿ ಮೆಕ್ಕೆಜೋಳ, ದಾಳಿಂಬೆಯ ಸಲಾಡ್. ಚಿರೋಟಿ-ಫೇಣಿಯ ಜಾಗದಲ್ಲಿ ಬರ್ಫಿ, ಐಸ್‌ಕ್ರೀಂ. ರಾತ್ರಿ ಊಟವಾದರೋ ಪಾನಿಪುರಿ, ಗೋಬಿ ಮಂಚೂರಿ! ಪಿಜ್ಜಾ ಇನ್ನೂ ಮದುವೆಯ ಔತಣಕ್ಕೆ ಸೇರಿಕೊಂಡಿಲ್ಲ ಎನ್ನುವುದೊಂದೇ ಸಮಾಧಾನ. ಎಲೆಯ ತುಂಬಾ ವೈವಿಧ್ಯಮಯವಾದ ತಿನಿಸುಗಳಿದ್ದರೂ, ಅವೆಲ್ಲವೂ ಆಯಾ ಪ್ರದೇಶದ ವಿಶಿಷ್ಟ ಅನ್ನಿಸುವುದೇ ಇಲ್ಲ.

ಜಾಗತೀಕರಣದ ತೌರೂರಾದ ಅಮೆರಿಕೆಯಲ್ಲಿ ಇನ್ನು ಅಲ್ಲಿಗೇ ವಿಶಿಷ್ಟವಾದಂಥದ್ದು ಏನಾದರೂ ಉಳಿದಿರಬಹುದೇ! ಅದಕ್ಕೆ ಮಗಳಿಗೆ ಹೇಳಿದೆ. "ಭಾರತದಲ್ಲಿ ಸಿಗದಂಥದ್ದು ಅಮೆರಿಕೆಯಲ್ಲಿ ಏನಿದೆ ಮಗಳೇ! ಹಾಗೆ ಇರುವುದಾದರೆ ಒಂದೇ... ಅದು ಕುಟುಂಬ... ಅಮ್ಮ, ಅಪ್ಪ... ಅದನ್ನಂತೂ ಅಲ್ಲಿಂದ ಕೊಂಡು ತರಲು ಸಾಧ್ಯವಿಲ್ಲ... ಹಾಗೇ ಬರಿಗೈ ಬೀಸಿಕೊಂಡು ಹಾಯಾಗಿ ಬಾ.." ಎಂದೆ. ಅವಳಿಗೆ ಎಷ್ಟು ಅರ್ಥವಾಯಿತೋ ಗೊತ್ತಿಲ್ಲ. ಜನರೇಶನ್‌ ಗ್ಯಾಪ್‌ ಇರಲೇ ಬೇಕಲ್ಲ!

Wednesday, November 18, 2009

ಸಂಗೀತ

ಮೊನ್ನೆ ಮಗ ಇದ್ದಕ್ಕಿದ್ದ ಹಾಗೆ ಪಿಟೀಲು ಕಲಿಯಬೇಕು ಎಂದಾಗ ಆಶ್ಷರ್ಯವಾಯಿತು. ಏಕೆಂದರೆ ಎಲ್ಲ ಅಪ್ಪ-ಅಮ್ಮಂದಿರ ಹಾಗೇ ನನ್ನ ಮಗನೂ ಸರ್ವಕಲಾಸಂಪನ್ನನಾಗಬೇಕು ಎಂದು ಸಂಗೀತ ಪಾಠಕ್ಕೆ ಕಳಿಸುತ್ತಿದ್ದೆವು. ಒಂದು ವರ್ಷ ಹೋದವ ಮನೆಯಲ್ಲಿಯೂ ಎಂದೂ ’ಸಾಪಾಸಾ’ ಅಭ್ಯಾಸ ಮಾಡಲೇ ಇಲ್ಲ. ಆಮೇಲೆ ಎಂದೋ, ಏನೋ ಕಾರಣದಿಂದ ಪಾಠ ನಿಲ್ಲಿಸಿದವ, ಮತ್ತೆ ಅದರ ನೆನಪನ್ನೂ ಮಾಡಿಕೊಂಡಿರಲಿಲ್ಲ. ಹೀಗಾಗಿ ಪಿಟೀಲು ತರಗತಿಗೆ ಸೇರುತ್ತೇನೆ ಎಂದಾಗ ಅದು ಕ್ಷಣಿಕ ಮೋಹ ಅಂತಲೇ ಭಾವಿಸಿದೆ. ಆದರೆ ಅವ ಮತ್ತೆ ಮತ್ತೆ ಅದೇ ರಾಗ ಹಾಡಿದಾಗ ಪಾಠಕ್ಕೆ ಸೇರಿಸದೆ ವಿಧಿ ಇರಲಿಲ್ಲ. ಆದರೂ ನನ್ನ ಮಗನಲ್ಲವೇ! ನನ್ನ ಹಾಗೆಯೇ ಶ್ರುತಿಗಿವುಡ. ಕೆಲವೇ ದಿನಗಳಲ್ಲಿ ಮತ್ತೆ ಪಿಟೀಲನ್ನೂ ನಿಲ್ಲಿಸುತ್ತಾನೆ ಎಂದುಕೊಂಡೆ.

ಸಂಗೀತ ಅಂದರೆ ನನಗೆ ಅಷ್ಟಕ್ಕಷ್ಟೆ ಎಂದು ನೀವು ಭಾವಿಸಿದರೆ ಆಶ್ಚರ್ಯವೇನಿಲ್ಲ! ಶ್ರುತಿ, ಸ್ವರ, ನಾದ, ತಾಳ ಎಲ್ಲವೂ ಸಮಾನಾರ್ಥಕ ಪದಗಳು ಎಂಬುದು ನನ್ನ ಅನಿಸಿಕೆ. ಏಕತಾನ ಎನ್ನುವುದು ಬಾಟನಿ ಮೇಷ್ಟರ ಪಾಠವನ್ನು ವಿವರಿಸುವ ಪದವಾಗಿತ್ತು. ಪಿಟೀಲು, ಬೇಡದ ವಿಷಯವನ್ನು ಉದ್ದುದ್ದ ಎಳೆಯುವ ಗೆಳೆಯರ ಮಾತಿಗೆ ಇನ್ನೊಂದು ವಿವರಣೆ ಆಗಿತ್ತು. ರಾಗ ಅಳುವಿನ ಅನ್ವರ್ಥ ಎನಿಸಿತ್ತು. ಇನ್ನು ಸಂಗೀತ ಪಾಠ ಹೇಗೆ ಕಲಿತೇನು.

ಹಾಗಂತ ನಾನು ಸಂಗೀತವನ್ನು ಕೇಳಲೇ ಇಲ್ಲ ಅಂತಲ್ಲ. ಅಮ್ಮ ಸಾಕಷ್ಟು ಸಂಗೀತ ಕಲಿತಿದ್ದಳು ಎಂದು ತಿಳಿದಿತ್ತು. ಹೆತ್ತ ಏಳು ಮಕ್ಕಳಿಗೂ ಜೋಗುಳ ಹಾಡಿಯೇ ಕಲಿತಳೋ, ಪಾಠದಿಂದಲೇ ಕಲಿತಳೋ ಗೊತ್ತಿಲ್ಲ. ಆದರೆ ಸುಶ್ರಾವ್ಯವಾಗಿ ಹಾಡುತ್ತಿದ್ದುದಂತೂ ನೆನಪಿದೆ. ಅಪ್ಪನಿಗೂ ಸಂಗೀತದ ಮೋಹವಿತ್ತು. ವಿದ್ವಾನ್‌ ಪಿಟೀಲ್‌ ಚೌಡಯ್ಯನವರ ಡ್ರೈವರ್‌ ಆಗಿದ್ದರಂತೆ! ನನಗೂ ಸಂಗೀತ ಪಾಠ ಕಲಿಸಬೇಕೆಂದು ಅವರು ಎಷ್ಟೋ ಪ್ರಯತ್ನಿಸಿದ್ದು ನೆನಪಿದೆ. ಆದರೆ ಹೊಟ್ಟೆ ತಾಳ ಹಾಕುಾಗ ಗಂಟಲಲ್ಲಿ ಇನ್ಯಾವ ಸ್ವರವೂ ಹುಟ್ಟುವುದಿಲ್ಲವೇನೋ! ಅಂದಿನ ಪರಿಸ್ಥಿತಿಯಲ್ಲಿ ಶಾಲೆಗೆ ಹೋಗುವುದೇ ಕಷ್ಟವಾಗಿದ್ದಾಗ, ಸಂಗೀತ ಪಾಠಕ್ಕೂ ಫೀಸು ಕೊಡುವುದು ಸಾಧ್ಯವೇ ಇರಲಿಲ್ಲ.

ಅತ್ತೆಯ ಮಕ್ಕಳು ಪ್ರಸಿದ್ಧ ಹಾಡುಗಾರ್ತಿಯರು. ಮಗ ವಿಶ್ವಪ್ರಸಿದ್ಧ ಮೃದಂಗವಾದಕ. ಅವರ ಬಳಿಯಾದರೂ ಕಳಿಸಿ ಮೃದಂಗ ಕಲಿಸಬೇಕೆಂಬ ಇಚ್ಛೆ ಅಪ್ಪನಿಗೆ ಇತ್ತು. ಆದರೆ ಆ ಉತ್ಸಾಹ ನನಗೆ ಇರಲಿಲ್ಲ. ಬಹುಶಃ ಸಂಗೀತ ಎನ್ನುವುದಕ್ಕೆ ಬುದ್ಧಿ ಬೇಕಿಲ್ಲ ಅನ್ನುವ ಉಪೇಕ್ಷೆಯೋ, ಅಥವಾ ಇಂದಿನ ಹಾಗೆ ರಿಯಾಲಿಟಿ ಶೋಗಳ ಆಕರ್ಷಣೆ ಇಲ್ಲದಿದ್ದುದರಿಂದಲೋ ಒಟ್ಟಾರೆ ಸಂಗೀತ ಎಂದರೆ ನನಗೆ ಅಷ್ಟಕ್ಕಷ್ಟೆ ಆಗಿತ್ತು. ಕಲಿಯುವ ಉತ್ಸಾಹ ಇರಲಿಲ್ಲ. ಕೇಳುವುದು ಕೇವಲ ರಾಮನವಮಿಯ ಸಂಗೀತೋತ್ಸವಕ್ಕಷ್ಟೆ ಸೀಮಿತವಾಗಿತ್ತು. ಮಂಗಳಾರತಿ ಮುಗಿದ ಅನಂತರ ಕೊಡುತ್ತಿದ್ದ ಹೆಸರುಬೇಳೆ ಉಸಲಿಯ ಆಸೆಗಾಗಿ ಅಪ್ಪನ ಜೊತೆ ಸಂಗೀತೋತ್ಸವಕ್ಕೆ ಹೋಗಿ ಕೇಳುತ್ತಿದ್ದೆ. ಆಲಿಸುತ್ತಿರಲಿಲ್ಲ.

ಬಾತ್‌ರೂಮ್‌ನಲ್ಲೂ ಹಾಡು ಹಾಡಿದವನಲ್ಲ. ಪ್ರೀತಿಸಿದವಳಿಗೆ ಪ್ರೇಮಗೀತೆ ಹಾಡುವುದರ ಬದಲಿಗೆ, ಅಶ್ವತ್ಥ, ಅನಂತಸ್ವಾಮಿಯವರ ಗೀತೆಗಳನ್ನು ಕೇಳಿಸಿ ಮನವೊಲಿಸಿದ್ದೆ! ಇಂತಹ ಶ್ರುತಿಗಿವುಡನ ಮಗ ಸಂಗೀತ ಕಲಿಯುವುದುಂಟೇ?

ಆದರೂ ಮಗ ಹಠ ಹಿಡಿದಾಗ, ಮೇಷ್ಟರು ಹೇಳಿದ ಮೇಲೆ ಪಿಟೀಲು ಕೊಡಿಸಲು ಅಂಗಡಿಗೆ ಹೋದೆ. ಅಷ್ಟೆ. ಸಂಗೀತ ಎಂದರೆ ಏನೆಂಬುದರ ಪರಿಚಯ ಅಲ್ಲಿ ನನಗಾಯಿತು. ಕಂಜಿರಾದಿಂದ ಮೃದಂಗದವರೆಗೆ, ಪಿಟೀಲಿನಿಂದ ಇಲೆಕ್ಟ್ರಾನಿಕ್‌ ಗಿಟಾರ್‌ವರೆಗೆ, ಹಾರ್ಮೋನಿಯಂನಿಂದ ಆರ್ಕೆಸ್ಟ್ರಾದ ಡ್ರಂ, ಸ್ಕೂಲ್‌ ಬ್ಯಾಂಡ್‌ನ ಬ್ಯೂಗಲ್‌, ತರಹೇವಾರಿ ಇಲೆಕ್ಟ್ರಾನಿಕ್‌ ರಾಗಮಾಲ, ತಬಲಾ, ಇಲೆಕ್ಟ್ರಾನಿಕ್‌ ಕೀಬೋರ್ಡ್‌, ಪಿಯಾನೋ... ಒಂದೇ ಎರಡೇ... ಕಣ್ಣೆದುರಿಗೆ ಹೊಸ ಪ್ರಪಂಚವೇ ತೆರೆದುಕೊಂಡಿತು. ಮಗನಂತೂ ಪಿಟೀಲು ಮರೆತು ಅಲ್ಲಿದ್ದ ಎಲ್ಲ ಡ್ರಮ್‌, ತಂತಿವಾದ್ಯಗಳ ಮೇಲೂ ಕೈಯಾಡಿಸುತ್ತಿದ್ದ. ಬರೇ ವಿಜ್ಞಾನವಷ್ಟೆ ಪ್ರಪಂಚವಾಗಿದ್ದ ನನಗೆ ಸಂಗೀತ ಲೋಕದ ಪರಿಚಯ ಆಯಿತು.

ಐವತ್ತರ ಹೊಸ್ತಿಲಲ್ಲಿರುವಾಗ ಸಂಗೀತ ಕಲಿಯೋಣ ಎನ್ನುವ ಉತ್ಸಾಹ ಬಂದಿದೆ ಎಂದರೆ ನೀವು ನಂಬಲೇಬೇಕು. ಆದರೆ ಒಂದು ಪುಟ ಬರೆಯುವುದರೊಳಗೆ ಹಿಡಿದುಕೊಳ್ಳುವ ಟೆನಿಸ್‌ ಎಲ್ಬೋ, ಹತ್ತು ನಿಮಿಷ ಭಾಷಣ ಮಾಡುವುದರೊಳಗೆ ಒಣಗಿ ಹಿಡಿದುಕೊಳ್ಳುವ ಗಂಟಲು, ಹೆಂಡತಿ ಹತ್ತು ಬಾರಿ ಕರೆದರೂ ಗಮನಗೊಡದ ಕಿವಿ... ಇವು ನನ್ನ ಈ ಉತ್ಸಾಹಕ್ಕೆ ’ಸಾಥ್‌’ ಕೊಡುತ್ತವೆಯೇ? ’ಸಾಧನೆ’ ವಯಸ್ಸನ್ನೂ ಮೀರಬಹುದೇ? ಪ್ರಯತ್ನಿಸಿ ನೋಡಬೇಕಷ್ಟೆ!

ಛೀ! ಸೋಮಾರಿ!!!

ಈ ಬ್ಲಾಗ್‌ನಲ್ಲಿ ಹೊಸ ಅಕ್ಷರ ಮೂಡಿ ಒಂದು ವರ್ಷಕ್ಕೂ ಹೆಚ್ಚು ಕಾಲವಾಗಿದೆ. ಇದಕ್ಕೆ ಸೋಮಾರಿತನವೇ ಕಾರಣ ಅನ್ನೋಣ. ಸೋಮಾರಿ ತನಕ್ಕೆ ಸಮಜಾಯಿಷಿಯೂ ಇಲ್ಲ. ಕ್ಷಮೆಯೂ ಇಲ್ಲ. ಅದಕ್ಕೇ ಈ ಎರಡು ಸಾಲಿನ ಬ್ಲಾಗ್‌!

Thursday, June 26, 2008

ಹಾ! ಕಳ್ಳ!

ಮೊನ್ನೆ ಎಕೆಬಿಯವರ (ಅಡ್ಯನಡ್ಕ ಕೃಷ್ಣಭಟ್ಟರ) ಮನೆಗೆ ಹೋಗಿದ್ದೆ. ಅವರು ಊರಿನಲ್ಲಿ ಇರಲಿಲ್ಲವಾದ್ದರಿಂದ, ಭೇಟಿ ನೀಡಿ ಬಹಳ ದಿನಗಳಾಗಿತ್ತು. ಕರೆಗಂಟೆ ಬಾರಿಸಿದಾಗ ಎಂದಿನಂತೆ "ಬನ್ನಿ, ಶರ್ಮರೆ" ಎನ್ನುವ ಆತ್ಮೀಯ ಕರೆ ಬರುವುದು ತುಸು ತಡವಾಯಿತು. ಸಂಜೆಯ ಇಳಿಹೊತ್ತಿನ ಮಸುಕಿನಲ್ಲಿ ನನ್ನ ಬಣ್ಣವೂ ಬೆರೆತು, ಕಳ್ಳನಂತೆ ಕಂಡೆನೋ ಎನಿಸಿತು. ಮತ್ತೆ ಎಂದಿನ ಪ್ರೀತಿಯ ಕರೆ. ಭಟ್ಟರೊಬ್ಬರೆ ಮನೆಯಲ್ಲಿದ್ದರು. ಸರಸಕ್ಕ ಇರಲಿಲ್ಲ. "ಅಕ್ಕ ಅಂಗಡಿಗೆ ಹೋಗಿದ್ದಾರೆ. ನೀವು ಈಗ ಬಂದದ್ದು ಒಳ್ಳೆಯದೇ ಆಯಿತು." ಎಂದ ಭಟ್ಟರ ಪೀಠಿಕೆ ಯಾವುದೋ ಮುಖ್ಯ ಸಮಾಚಾರ ಇದೆ ಎಂದು ಸೂಚಿಸಿತು. ಸಾಮಾನ್ಯವಾಗಿ ನಮ್ಮಿಬ್ಬರ ಸಂಭಾಷಣೆ ವಿಜ್ಞಾನ ಬರವಣಿಗೆ, ಪದಬಳಕೆಯ ದೋಷಗಳು, ಬರವಣಿಗೆ ತಂತ್ರಗಳು, ಇತಿಹಾಸ ಇತ್ಯಾದಿಯತ್ತಲೇ ಇರುವುದರಿಂದ, ಸರಸಕ್ಕ ನಮ್ಮ ಸಂಭಾಷಣೆಗೆ ಮೂಕ ಶ್ರೋತೃ. ಬಹುಶಃ ಅವರಿಗೆ ಅನಾವಶ್ಯ ಕಿರುಕುಳವಾಗದಿರಲಿ ಎಂದು ಹೀಗೆ ಹೇಳಿದರೇನೋ ಎಂದು ಕೊಂಡೆ. ಆದರೆ ಅನಂತರ ಭಟ್ಟರು ಹೇಳಿದ ಸಂಗತಿಗಿಂತಲೂ ಅವರು ಹೇಳಿದ ರೀತಿ ಮನ ತಟ್ಟಿತು. ವಿಷಯ ಇಷ್ಟೆ. ಅವರು ಊರಿಗೆ ಹೋಗಿದ್ದಾಗ ಅವರ ಮನೆಯ ಕಿಟಕಿಯ ಸರಳುಗಳನ್ನು ಬಾಗಿಸಿ, ಒಳನುಗ್ಗಿದವರು, ಮನೆಯಲ್ಲಿ ಜಾಲಾಡಿದ್ದರು. "ನೋಡಿ, ಈ ಕಬ್ಬಿಣದ ಕಂಬಿ ಎಷ್ಟು ಗಟ್ಟಿ. ಇದನ್ನು ಬಾಗಿಸಿದ್ದಾರೆ ಎಂದರೆ ಎಷ್ಟು ಬಲ ಬಳಸಿರಬೇಕು," ಭಟ್ಟರ ಒಳಗಿನ ಫಿಸಿಕ್ಸ್‌ ಶಿಕ್ಷಕ ಲೆಕ್ಕ ಹಾಕಿತು. "ಇದೇನು ವಿಚಿತ್ರ ಶರ್ಮರೆ, ನಾವು ಯಾವ ಕೋಣೆಯ ಬಾಗಿಲನ್ನೂ ಹಾಕಿರಲಿಲ್ಲ. ಎಲ್ಲವೂ ತೆರೆದಿತ್ತು. ಇದೊಂದು ಕೋಣೆಯ ಬಾಗಿಲನ್ನು ಹಾಕಿದ್ದೆವು. ಅದನ್ನೇ ಮುರಿದಿದ್ದಾರೆ. ಅಲಮಾರಿಯ ಬೀಗಗಳನ್ನೂ ಹಾಕಿರಲಿಲ್ಲ. ಒಟ್ಟು ಒಂದಿನ್ನೂರು ರೂಪಾಯಿಗಳು, ಒಂದು ಹಳೆಯ, ರಿಪೇರಿಗೆ ಇದ್ದ ಕ್ಯಾಮೆರಾ ಇವಷ್ಟೆ ತೆಗೆದುಕೊಂಡು ಹೋಗಿದ್ದಾರೆ." ಸಜ್ಜನಿಕೆಯ ಭಟ್ಟರ ವಿವರಣೆಯಲ್ಲಿ ಎಲ್ಲಿಯೂ ಕಳ್ಳ ಎನ್ನುವ ಪದ ಕಾಣಿಸಲಿಲ್ಲ. ಯಾರೋ ಕುಶಲಕಲೆಗಾರನ ಕಥೆ ಹೇಳುವಂತೆ ಹೇಳಿದರು. ತಮಗೆ ಅನ್ಯಾಯ ಮಾಡಿದವರನ್ನೂ ಹೀಗಳೆಯದ ಸಜ್ಜನಿಕೆ ಅವರಲ್ಲಿ ಕಂಡು ವಿಚಿತ್ರವೆನ್ನಿಸಿತು. ಅವರಲ್ಲಿ ಸಿಟ್ಟಿನ ಲೇಶವೂ ಇರಲಿಲ್ಲ.

"ಹಣ ಹೋದದ್ದಕ್ಕೆ ಬೇಸರವಿಲ್ಲ ಶರ್ಮರೆ. ಆದರೆ ಯಾರೋ ಅಪರಿಚಿತರು ನಮ್ಮ ಸೀಮೆಯೊಳಗೆ, ಅನುಮತಿ ಇಲ್ಲದೆ ಪ್ರವೇಶಿಸಿದರು ಅನ್ನುವ ಅನಿಸಿಕೆಯೇ ಎದೆಯನ್ನು ಭಾರವಾಗಿಸಿದೆ," ಎಂದ ಎಪ್ಪತ್ತರ ವೃದ್ಧರ ಮಾತು ಎದೆ ತಟ್ಟಿತು. ಅಷ್ಟರಲ್ಲಿ ಬಂದ ಸರಸಕ್ಕ, ಮೊಮ್ಮಗಳು ಕಳ್ಳನ ಬಗ್ಗೆ ಕೇಳಿದ ಪ್ರಶ್ನೆಗಳನ್ನು ನೆನಪಿಸಿಕೊಂಡರು. ಕಳ್ಳ ಯಾರು? ಅವನಿಗೆ ಮೀಸೆ ಇದೆಯಾ? ಕಳ್ಳನ ಬಣ್ಣ ಏನು? ನೋಡಿದರೆ ಹೆದರಿಕೆ ಆಗುತ್ತದೆಯಾ? ನಿಜ. ಕಳ್ಳ ಎನ್ನುವವರ ಸ್ವರೂಪ ಹೇಗಿದೆ ಎಂದು ಕಲ್ಪಿಸಿಕೊಳ್ಳುವುದು ಕಷ್ಟವೇ! ಹಳೆಯ ಸಿನಿಮಾದ ಸ್ಟೀರಿಯೊಟೈಪ್‌ ನೆನಪಿಗೆ ಬರುತ್ತದೆ. ಕಣ್ಣಷ್ಟೆ ತೋರುವಂತೆ ಮುಖವಾಡ. ಕೈಯಲ್ಲೊಂದು ಚಾಕು. ಇಂಗ್ಲೀಷ್‌ ಸಿನೆಮಾಗಳಲ್ಲಿಯಾದರೆ ಪಟ್ಟೆ ಅಂಗಿ. ಆದರೆ ನಿಜವಾಗಿ ಕಳ್ಳ ಎಂದರೆ ಏನು?

ಭಟ್ಟರು ಹೇಳಿದಂತೆ ನಮ್ಮ ಸೀಮೆಯೊಳಗೆ ಅನುಮತಿ ಇಲ್ಲದೆ ಪ್ರವೇಶಿಸಿ, ಅಪರಿಚಿತನಾಗಿ ಉಳಿವ, ನಷ್ಟ ಉಂಟು ಮಾಡುವವರನ್ನು ಕಳ್ಳರು ಎನ್ನಬಹುದೇ? ಅದುವೇ ಸರಿ ಎಂದು ಅನಿಸಿತು. ಹೀಗಾದರೆ ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಕಳ್ಳತನ ಮಾಡಿದವರೇ ಆಗಿರಬೇಕಲ್ಲವೇ? ಬಾಗಿಲು ಮುರಿಯದಿರಬಹುದು. ಆದರೆ ಯಾರದ್ದೋ ಮನದಲ್ಲಿನ ನೆನಪುಗಳಲ್ಲಿ, ನಮ್ಮ ಅರಿವಿಗೇ ಬಾರದೆ, ಅಪರಿಚಿತರಾಗಿ ನಡೆಸಿದ ಯಾವುದೋ ಕೃತ್ಯ, ಕಳ್ಳತನವಾಗಬಹುದಲ್ಲವೇ? ರೈಲು ನಿಲ್ದಾಣದಲ್ಲಿ ಟಿಕೇಟು ಕ್ಯೂನಲ್ಲಿ ಮೆಲ್ಲನೆ ಸರದಿ ತಪ್ಪಿಸಿ ಟಿಕೇಟು ಕೊಂಡು ಏನೋ ಗೆದ್ದವರಂತೆ ನಡೆಯುವಾಗಲೂ, ಯಾರ ಮನಸ್ಸಿನಲ್ಲಿಯೋ ನಾವು ಕಳ್ಳರಾಗಿ ಉಳಿಯಬಹುದಲ್ಲ! ಬಸ್ಸಿನಲ್ಲಿ ಕೈಗಳೆರಡರಲ್ಲೂ ಸಾಮಾನು ಇಟ್ಟುಕೊಂಡು ಸುಸ್ತಾಗಿ ನಿಂತವರು ಖಾಲಿಯಾದ ಸೀಟಿಗೆ ತಲುಪುವುದಕ್ಕೆ ಮುನ್ನವೇ ಓಡಿ, ಜಂಭದ ನಗು ನಗುತ್ತ ಕುಳಿತುಕೊಳ್ಳುವಾಗಲೂ ನಾವು ಕಳ್ಳತನ ಮಾಡಿರಬಹುದಲ್ಲವೇ? ಅಥವಾ ಅದು ಸ್ಪರ್ಧೆಯೋ? ಒಟ್ಟಾರೆ ಭಟ್ಟರ ಮೊಮ್ಮಗಳಿಗೆ ಕಳ್ಳನ ವಿವರಣೆ ಕೊಡುವುದು ಹೇಗೆಂದು ಆಲೋಚಿಸುತ್ತ ಮನೆಗೆ ಬಂದೆ.

ಹಾಂ. ಈ ಬ್ಲಾಗ್‌ನಲ್ಲಿ ಭಟ್ಟರ ಬದುಕಿನ ಈ ಖಾಸಗಿ ಘಟನೆಯನ್ನು ಬರೆಯುವುದೂ ಕಳ್ಳತನವೇ! ಸದ್ಯ. ಭಟ್ಟರು ಇದಕ್ಕೆ ಅನುಮತಿ ನೀಡಿದ್ದಾರೆ ಎನ್ನುವ ಸಮಾಧಾನ ಹೇಳಿಕೊಳ್ಳಬೇಕಷ್ಟೆ.

Saturday, March 1, 2008

ಒಂದು ಸಾವಿನ ನೆನಪು!

ಇನ್ನೇನು ಮೂರು ತಿಂಗಳು ಕಳೆದರೆ ನಾಲ್ಕು ವರ್ಷಗಳಾಗುತ್ತವೆ. ಆದರೆ ಅಂದು ಎದೆ ನಡುಗಿಸಿದ ಭೀತಿ ಇನ್ನೂ ಮರೆಯಾಗಿಲ್ಲ. ಬೇರೆ ಇನ್ನೇನು ಕಾರಣ ಹೇಳಬಹುದು? ಆ ದಿನ ಬೆಳ್ಳಂಬೆಳಗ್ಗೆ, ವಿಜಯನಗರದ ಸಮೀಪ, ರಸ್ತೆಯಿಂದ ಜಾರಿ ಬದಿಯ ಹಳ್ಳಕ್ಕೆ ಬಿದ್ದ ಕಾರಿನ ಪುಕ್ಕದ ದೀಪ ಹೊಳೆಯುತ್ತಲೇ ಇತ್ತು. ಆದರೆ ನಾನು ಅಲ್ಲಿ ನಿಲ್ಲದೇ ಓಡಿಬಿಟ್ಟೆ. ಕಾರಿನಲ್ಲಿ ಯಾರಾರೂ ಇದ್ದಾರೋ ಇಲ್ಲವೋ ಗಮನಿಸಲೂ ಇಳಿಯಲಿಲ್ಲ. ಅನಾಗರೀಕನಾಗಿಬಿಟ್ಟೆ. ಇನ್ನೊಂದು ದಿನ ಕೆಡಿ ವೃತ್ತದ ಬಳಿ, ಮಟ-ಮಟ ಮಧ್ಯಾಹ್ನ ಎರಡು ಬೈಕ್‌ಗಳ ಢಿಕ್ಕಿಯಾಗಿ, ಒಬ್ಬ ಅಂಗಾತ ಬಾಯಿ ಬಿಟ್ಟು ರಸ್ತೆಯಲ್ಲಿಯೇ ಬಿದ್ದಿದ್ದರೂ, ನಾನು ಕೆಲಸಕ್ಕೆ ತಡವಾದೀತು ಎಂದು ಕಾರಣ ಹೇಳಿಕೊಂಡು ಓಡಿ ಬಿಟ್ಟೆ. ಬೇರೆ ದಿನಗಳಲ್ಲಿ ಕೆಲಸಕ್ಕೆ ತಡವಾದರೆ, ರಜೆ ಹಾಕಿದರಾಯಿತು ಬಿಡು ಎನ್ನುವ ಧಾರ್ಷ್ಟ್ಯ ತೋರುವವ, ಅಂದು ಬಹಳ ಪ್ರಾಮಾಣಿಕನಂತೆ ಓಡಿ ಬಿಟ್ಟೆ.

ಒಂದಲ್ಲ ಎರಡಲ್ಲ, ಕಳೆದ ನಾಲ್ಕು ವರ್ಷಗಳಲ್ಲಿ ಹತ್ತಾರು ಅಪಘಾತಗಳನ್ನು ನೇರವಾಗಿ ನೋಡಿದ್ದೇನೆ. ಎಲ್ಲಿಯೂ ನಾಗರೀಕನಂತೆ ವರ್ತಿಸಲಿಲ್ಲ. ಯಾಕೋ, ಎದೆ ಢವಗುಟ್ಟುತ್ತದೆ. ನಾಲ್ಕು ವರ್ಷಗಳ ಹಿಂದೆ, ಬಾಗಿಲ ಎತ್ತರಕ್ಕೂ ನಿಂತು, "ಅಂಕಲ್‌, ಎರಡೇ ನಿಮಿಷ. ಹೀಗೆ ಹೋಗಿ ಹಾಗೆ ಬಂದು ಬಿಡುತ್ತೀನಿ. ನೀವು ರೆಸ್ಟ್‌ ತೆಗೆದುಕೊಳ್ಳಿ," ಎಂದು ಹೋದವ ಮತ್ತೆ ಬರಲೇ ಇಲ್ಲ. ನಾನು ಕಾದದ್ದೇ ಆಯಿತು. ಬಂದದ್ದು ಪಕ್ಕದ ಮನೆಯಾಕೆ. "ಮೂಲೆಯಲ್ಲಿ ಒಂದು ಆಕ್ಸಿಡೆಂಟ್‌ ಆಗಿದೆ. ಸ್ಪಾಟ್‌. ಹುಡುಗ ಯಾರು ಅಂತ ಹುಡುಕುತ್ತಿದ್ದಾರೆ. ನಿಮಗೇನಾದರೂ ಗುರುತು ಸಿಗುತ್ತದೆಯೋ," ಎಂದು ಕೇಳಲು ಬಂದಿದ್ದರು. ಓಡಿದೆ. ನನ್ನ ಅನುಮಾನ ನಿಜವಾಗಿತ್ತು.ಅಲ್ಲಿ ಇದ್ದದ್ದು ಅವನದ್ದೇ ಬೈಕ್‌. ಅವನಿರಲಿಲ್ಲ."ಓಹ್‌, ದೇವರೇ!" ಅಪ್ಪಟ ನಾಸ್ತಿಕನ ಬಾಯಿ ಅಯಾಚಿತವಾಗಿ ನುಡಿದಿತ್ತು. ಬಳಿಯಲ್ಲೇ ಇದ್ದ ಪೋಲೀಸನ್ನು ವಿಚಾರಿಸಿದ್ದೆ. "ಎಲ್ಲಿ ಹುಡುಗ?" "ಶವಾಗಾರದಲ್ಲಿ," ಎಂದು ನಿರ್ಲಿಪ್ತನಾಗಿ ನುಡಿದಿದ್ದ. ಡಾಕ್ಟರುಗಳು, ಪೋಲೀಸರು ಸಾವನ್ನು ವರದಿ ಮಾಡುವಷ್ಟು ನಿರ್ಭಾವುಕರಾಗಿ ಇನ್ಯಾರೂ ಮಾಡಲು ಸಾಧ್ಯವಿಲ್ಲ. ಅದಕ್ಕೂ ಬಹುಶಃ ತರಬೇತಿ ಬೇಕಾಗಬಹುದು.

ಹೌದು. ತೇಜ ಇನ್ನಿಲ್ಲ ಎನ್ನುವ ವಿಷಯ ಎದೆಗೆ ಒದ್ದಿತು. ತೊಡೆ ಥರ,ಥರ ನಡುಗಿತು. ಮನೆಗೆ ಓಡಿ ಬಂದೆ. ನನ್ನ ಮುಖ ನೋಡಿಯೇ ಮಡದಿಗೆ ವಿಷಯ ತಿಳಿದಿತ್ತು ಎನ್ನಿಸುತ್ತೆ. ಪಕ್ಕದಲ್ಲಿ ಅತೀವ ಜ್ವರದಲ್ಲಿ ಮಲಗಿದ್ದ ಮಗನನ್ನೂ ಮರೆದು ಓ ಎಂದು ಅಳತೊಡಗಿದಳು. ನಿಜ. ಸಾವು ಯಾರಿಗೂ ಹೇಳಿ ಬರುವುದಿಲ್ಲ. ಯಾರನ್ನೂ ಅದು ಅಪಾಯಿಂಟ್‌ಮೆಂಟ್‌ ಕೇಳುವುದಿಲ್ಲ. ಆದರೆ, ಹೀಗೇ ಏಕೆ? ಕೆಲವೇ ನಿಮಿಷಗಳ ಹಿಂದೆ ನಗುವಾಗಿದ್ದವ, ಶವವಾಗಿದ್ದ. ತಲೆಯೊಡೆದು ಬಿದ್ದು ಶವಾಗಾರದ ಒಂದು ಪೆಟ್ಟಿಗೆಯ ನಂಬರ್‌ ಆಗಿದ್ದ. ಬರೇ ಬಾಡಿ. ಯಾರಾದರೂ ನೀರು ಕುಡಿಸಿದರೋ ಇಲ್ಲವೋ? ಸಾಯುವ ಮೊದಲು ಏನು ಹೇಳಿರಬಹುದು? ಅಂಕಲ್‌ ಎಂದನೇ? ಅಥವಾ ನನಗಿಂತಲೂ ಆಪ್ತಳಾಗಿದ್ದ ಮಡದಿಯನ್ನು ನೆನಪಿಸಿಕೊಂಡನೇ? ಇಲ್ಲ, ಮನೆಯಲ್ಲಿ ಜ್ವರದಿಂದ ಮಲಗಿದ್ದ ಮಗನಿಗಾಗಿ ಔಷಧಿ ತರಲು ಹೋಗಿದ್ದನಲ್ಲ? ಅವನನ್ನು ಕರೆದನೇ? ಸಾವನ್ನು ಎದುರಿಸಿದಾಗ ಏನು ಮಾತನಾಡಿರಬಹುದು? ಏನೇನು ಭಾವನೆಗಳು ಬಂದಿರಬಹುದು? ನೋವಾಯಿತೋ? ಅಥವಾ ಏನೂ ಗೊತ್ತೇ ಆಗಲಿಲ್ಲವೋ?

ಅಂದಿನಿಂದ ಇಂದಿನವರೆವಿಗೂ ಅಪಘಾತಗಳನ್ನು ಎದುರಿಸಲು ಭಯವಾಗುತ್ತದೆ. ಪರಿಚಿತ ಮುಖದ ಮೇಲೆ ಘಾಯ, ರಕ್ತದ ಕಲೆಗಳು ಇರುವುದನ್ನು ಸಹಿಸಲಾಗುವುದಿಲ್ಲ. ಸಾವು ನನ್ನನ್ನೂ ಹಿಡಿದು ಬಿಟ್ಟೀತೇನೋ ಎನ್ನುವ ಆತಂಕವಿರುವವನಂತೆ ಅಪಘಾತಗಳಿಂದ ದೂರ ಓಡುತ್ತೇನೆ. ರಸ್ತೆಯಲ್ಲಿ ಚಲಿಸುವಾಗ, ಬದಿಯಿಂದ ಯಾವುದೇ ವಾಹನ ವೇಗದಿಂದ ಚಲಿಸಿದರೂ "ಆ ಕ್ಷಣ" ನೆನಪಾಗುತ್ತದೆ. "ಅಂಕಲ್‌, ಎರಡೇ ನಿಮಿಷ. ಹೀಗೆ ಹೋಗಿ ಹಾಗೆ ಬರುತ್ತೇನೆ," ಎಂದದ್ದು ಧ್ವನಿಸುತ್ತದೆ. ಆ ಕೊನೆಯ ಶಬ್ದಗಳು ಎಲ್ಲಿಯಾದರೂ ಕೇಳಿಸಿಬಿಟ್ಟರೆ ಎನಿಸುತ್ತದೆ. ಸಾಯುವವರ ಸನಿಹದಲ್ಲಿ ಇರುವುದಕ್ಕಿಂತಲೂ ಸತ್ತವರನ್ನು ಮಣ್ಣು ಮಾಡುವುದು ಸುಲಭವೇನೋ ಎನಿಸುತ್ತದೆ. ರೊಯ್ಯನೆ ಬದಿಯಿಂದ ಬೈಕ್‌ ಮುಂದೋಡಿದರೆ, ಈ ಎಲ್ಲ ಭಾವನೆಗಳೂ ಒಂದು ಕ್ಷಣ ಎದುರಾಗಿ, ಸ್ಟೀರಿಂಗ್‌ ನಡುಗುತ್ತದೆ. ನಾನು ಮತ್ತೆಂದು ನಾಗರೀಕನಾಗುವೆನೋ?